ಜಾರಕಿಹೊಳಿ ಸಹೋದರರ ಕಾರುಬಾರು: ಮೇಲ್ಮನೆಯಲ್ಲಿ ಕಾಂಗ್ರೆಸ್‌ ಸಂಖ್ಯೆ ಏರಿಕೆ;  ಸಭಾಪತಿ ಬದಲಿಸಲು ಬೇಕು ಲಖನ್‌ !
x

ಜಾರಕಿಹೊಳಿ ಸಹೋದರರ ಕಾರುಬಾರು: ಮೇಲ್ಮನೆಯಲ್ಲಿ ಕಾಂಗ್ರೆಸ್‌ ಸಂಖ್ಯೆ ಏರಿಕೆ; ಸಭಾಪತಿ ಬದಲಿಸಲು ಬೇಕು ಲಖನ್‌ !

ಸಭಾಪತಿ ಹುದ್ದೆಗಾಗಿ ಕಾಂಗ್ರೆಸ್‌ ಅವಿಶ್ವಾಸ ನಿರ್ಣಯ ಮಂಡಿಸಿದರೆ ಪಕ್ಷೇತರ ಅಭ್ಯರ್ಥಿ ಲಖನ್‌ ಜಾರಕಿಹೊಳಿ ಮತವು ಪ್ರಮುಖ ಪಾತ್ರವಹಿಸಲಿದೆ. ಲಖನ್‌ ಜಾರಕಿಹೊಳಿ ಅವರು ಲೋಕೋಪಯೋಗಿ ಸತೀಶ್‌ ಜಾರಕಿಹೊಳಿ ಮತ್ತು ಬಿಜೆಪಿ ಮುಖಂಡ ರಮೇಶ್‌ ಜಾರಕಿಹೊಳಿ ಸಹೋದರರಾಗಿದ್ದಾರೆ.


ವಿಧಾನಪರಿಷತ್‌ನಲ್ಲಿ ಖಾಲಿ ಇದ್ದ ನಾಲ್ಕು ಸ್ಥಾನಗಳನ್ನು ರಾಜ್ಯ ಕಾಂಗ್ರೆಸ್‌ ಸರ್ಕಾರ ಕೊನೆಗೂ ಭರ್ತಿ ಮಾಡುವುದರೊಂದಿಗೆ 75 ಸದಸ್ಯರ ಬಲದಲ್ಲಿ ಕಾಂಗ್ರೆಸ್‌ 37ಕ್ಕೆ ಹೆಚ್ಚಿಸಿಕೊಂಡಿದೆ. ಮೇಲ್ಮನೆಯಲ್ಲಿ ಸದಸ್ಯರ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಿದ್ದಂತೆ ಸಭಾಪತಿ ಅವರನ್ನು ಬದಲಿಸಬಹುದೇ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಪ್ರಾರಂಭವಾಗಿದೆ.

ಹಾಗಾಗಿಯೇ ಮತ್ತೆ ಜಾರಕಿಹೊಳಿ ಸೋದರರ ಕಾರಬಾರು ಶುರವಾಗಿದೆ. ಸಂಖ್ಯಾಬಲ ಹೆಚ್ಚುತ್ತಿದ್ದಂತೆ, ಬಿಜೆಪಿ-ಜೆಡಿಎಸ್‌ ಕೂಟವನ್ನು ಸೋಲಿಸಿ, ಕಾಂಗ್ರೆಸ್‌ ಅಭ್ಯರ್ಥಿಯನ್ನೇ ಈಗಿನ ಸಭಾಪತಿ ಬಸವರಾಜ ಹೊರಟ್ಟಿ ಜಾಗಕ್ಕೆ ತರಬೇಕಾದರೆ ಜಾರಕಿಹೊಳಿ ಸೋದರರ ಒಪ್ಪಿಗೆ ಬೇಕಾಗಿರುವ ಸಂದರ್ಭ ಎದುರಾಗಲಿದೆ. ಮೇಲ್ಮನೆಯಲ್ಲಿ ಬಹುಮತಕ್ಕೆ ಕೇವಲ ಒಂದು ಸ್ಥಾನ ಕೊರತೆ ಅನುಭವಿಸಲಿರುವ ಕಾಂಗ್ರೆಸ್‌ ಪಕ್ಷೇತರ ಸದಸ್ಯ ಲಖನ್‌ ಜಾರಕಿಹೊಳಿ ಬೆಂಬಲ ಪಡೆಯಬೇಕಾಗುತ್ತದೆ. ಒಬ್ಬ ಸೋದರ ಸತೀಶ್‌ ಜಾರಕಿಹೊಳಿ ಕಾಂಗ್ರೆಸ್‌ ಸಚಿವರಾಗಿ, ಇನ್ನೊಬ್ಬ ಸೋದರ ರಮೇಶ್‌ ಜಾರಕಿಹೊಳಿ ಬಿಜೆಪಿ ಮುಖಂಡರಾಗಿರುವುದು ಲಖನ್‌ ಯಾರ ಮಾತಿಗೆ ಮನ್ನಣೆ ನೀಡುತ್ತಾರೆ ಎಂಬುದರ ಮೇಲೆ ಸಭಾಪತಿ ಭವಿಷ್ಯ ಇರಲಿದೆ.

ಸಂಖ್ಯಾಬಲ

ಆರತಿ ಕೃಷ್ಣ, ರಮೇಶ್ ಬಾಬು, ದಿನೇಶ್ ಅಮೀನ್‌ಮಟ್ಟು ಹಾಗೂ ಡಿ.ಜಿ. ಸಾಗರ್ ಅವರನ್ನು ಮೇಲ್ಮನೆಗೆ ನೂತನ ಸದಸ್ಯರನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ರಾಜ್ಯಪಾಲರ ಒಪ್ಪಿಗೆಗಾಗಿ ಸರ್ಕಾರ ಕಳುಹಿಸಿಕೊಟ್ಟಿದೆ. ಇಂದು (ಸೋಮವಾರ) ರಾಜ್ಯಪಾಲರು ಸಹಿ ಹಾಕಿ ಒಪ್ಪಿಗೆ ನೀಡುವ ನಿರೀಕ್ಷೆ ಇದೆ. ರಾಜ್ಯಪಾಲರಿಂದ ಒಪ್ಪಿಗೆ ಸಿಕ್ಕ ಬಳಿಕ ನಾಲ್ವರು ವಿಧಾನಪರಿಷತ್‌ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬಳಿಕ ಸಂಖ್ಯಾಬಲ ಅಧಿಕೃತವಾಗಿ ಹೆಚ್ಚಳವಾಗಲಿದೆ.

ಪರಿಷತ್‌ನಲ್ಲಿ75 ಸಂಖ್ಯಾಬಲ ಪೈಕಿ ಪ್ರಸ್ತುತ ಆಡಳಿತರೂಢ ಕಾಂಗ್ರೆಸ್‌ 33, ಪ್ರತಿಪಕ್ಷ ಬಿಜೆಪಿ 29, ಜೆಡಿಎಸ್‌ 7, ಪಕ್ಷೇತರ 1 ಮತ್ತು ಸಭಾಪತಿ 1 ಸ್ಥಾನ ಇತ್ತು. ನಾಲ್ವರು ಆಯ್ಕೆ ಬಳಿಕ ಕಾಂಗ್ರೆಸ್‌ 37ಕ್ಕೆ ಹೆಚ್ಚಳವಾಗಿದೆ. ಆದರೂ ಕಾಂಗ್ರೆಸ್‌ಗೆ ಸಂಪೂರ್ಣ ಬಹುಮತ ಇಲ್ಲವಾಗಿದೆ. ಬಹುಮತ ಪಡೆದುಕೊಳ್ಳಲು ಇನ್ನು ಒಂದು ಸ್ಥಾನದ ಅಗತ್ಯ ಇದೆ. ಪಕ್ಷೇತರ ಅಭ್ಯರ್ಥಿ ಲಖನ್‌ ಜಾರಕಿಹೊಳಿ ತಮ್ಮ ಕಡೆ ಇದ್ದಾರೆ ಎಂಬುದಾಗಿ ಕಾಂಗ್ರೆಸ್‌ ಭಾವಿಸಿದೆ. ಒಂದು ವೇಳೆ ಲಖನ್‌ ಜಾರಕಿಹೊಳಿ ಕಾಂಗ್ರೆಸ್‌ನತ್ತ ಒಲವು ಇದ್ದರೆ ಕಾಂಗ್ರೆಸ್‌ನ ಬಹುತಮ 38ಕ್ಕೆ ತಲುಪಲಿದೆ.

ಮಳೆಗಾಲದ ಅಧಿವೇಶನದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಕೆಳಗಿಸುವ ಪ್ರಯತ್ನ ನಡೆಯುವ ಸಾಧ್ಯತೆ ಇದೆ. ಕಾಂಗ್ರೆಸ್‌ನದ್ದು 37 ಸ್ಥಾನಕ್ಕೆ ಏರಿಕೆಯಾದರೆ, ಮೈತ್ರಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ನ ಒಟ್ಟು ಸಂಖ್ಯೆಯು 36 ಇದೆ. ಪರಿಷತ್‌ನ ಬಲಾಬಲ ವಿಚಾರದಲ್ಲಿ ಕಾಂಗ್ರೆಸ್‌ ಪಕ್ಷವು ಮಿತ್ರಪಕ್ಷಗಳಿಗಿಂತ ಒಂದು ಸ್ಥಾನ ಹೆಚ್ಚಿದೆ. ಸಭಾಪತಿ ಸ್ಥಾನಕ್ಕಾಗಿ ಹೋರಾಟ ನಡೆದರೆ ಪಕ್ಷೇತರ ಅಭ್ಯರ್ಥಿ ಲಖನ್‌ ಜಾರಕಿಹೊಳಿ ನಡೆಯು ಬಹಳ ಮುಖ್ಯವಾಗಿರುತ್ತದೆ.

ಲಖನ್‌ ಜಾರಕಿಹೊಳಿ ಪ್ರಮುಖ ಪಾತ್ರ

ಸಭಾಪತಿ ಹುದ್ದೆಗಾಗಿ ಕಾಂಗ್ರೆಸ್‌ ಅವಿಶ್ವಾಸ ನಿರ್ಣಯ ಮಂಡಿಸಿದರೆ ಪಕ್ಷೇತರ ಅಭ್ಯರ್ಥಿ ಲಖನ್‌ ಜಾರಕಿಹೊಳಿ ಮತವು ಪ್ರಮುಖ ಪಾತ್ರವಹಿಸಲಿದೆ. ಲಖನ್‌ ಜಾರಕಿಹೊಳಿ ಅವರು ಲೋಕೋಪಯೋಗಿ ಸತೀಶ್‌ ಜಾರಕಿಹೊಳಿ ಮತ್ತು ರಮೇಶ್‌ ಜಾರಕಿಹೊಳಿ ಸಹೋದರರಾಗಿದ್ದಾರೆ. ಒಬ್ಬರು ಕಾಂಗ್ರೆಸ್‌ ಮತ್ತು ಮತ್ತೊಬ್ಬರು ಬಿಜೆಪಿಯಲ್ಲಿದ್ದಾರೆ. ಹೀಗಾಗಿ ಅವಿಶ್ವಾಸ ನಿರ್ಣಯ ಮಂಡನೆಯಾದರೆ ಅವರ ಮತ ಯಾರಿಗೆ ಎಂಬುದು ಕೂತೂಹಲ ಮೂಡಿಸಿದೆ.

ಸಹಜವಾಗಿ ಲಖನ್‌ ಜಾರಕಿಹೊಳಿ ಮತದತ್ತ ಎಲ್ಲರ ಕಣ್ಣು ನೆಟ್ಟಿದೆ. ಅವರ ಮತವು ಸಭಾಪತಿ ಆಯ್ಕೆಯಲ್ಲಿ ನಿರ್ಣಯವಾಗಲಿದೆ. ಕಾಂಗ್ರೆಸ್‌ಗೆ ಮತ ಚಲಾಯಿಸಿದರೆ ಸುಲಭವಾಗಿ ಸಭಾಪತಿ ಹುದ್ದೆ ಕೈ ಪಾಲಾಗಿದೆ. ಒಂದು ವೇಳೆ ಬಿಜೆಪಿ ಪರ ಮತ ಹಾಕಿದರೂ ಮಿತ್ರಪಕ್ಷಕ್ಕೆ ಮತ್ತೊಂದು ಮತದ ಅಗತ್ಯ ಇದೆ. ಯಾಕಂದರೆ ಮಿತ್ರ ಪಕ್ಷವು 36 ಸ್ಥಾನಗಳನ್ನು ಹೊಂದಿದ್ದು, ಲಖನ್‌ ಜಾರಕಿಹೊಳಿ ಮತ ಸೇರಿದರೆ 37 ಆಗಲಿದೆ. ಮಿತ್ರ ಪಕ್ಷಗಳಿಗೆ ಮತಹಾಕಿದರೂ ಯಾವುದೇ ಪ್ರಯೋಜನವಾಗದ ಕಾರಣಕ್ಕಾಗಿ ಲಖನ್‌ ಜಾರಕಿಹೊಳಿ ಕಾಂಗ್ರೆಸ್‌ಗೆ ಮತ ಚಲಾಯಿಸುವ ಸಾಧ್ಯತೆ ಹೆಚ್ಚಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಕಾಂಗ್ರೆಸ್‌ ಪಕ್ಷವು ಹೆಚ್ಚಿನ ಸ್ಥಾನಗಳನ್ನು ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಭಾಪತಿ, ಉಪಸಭಾಪತಿ ಸ್ಥಾನಗಳನ್ನು ವಶಪಡಿಸಿಕೊಳ್ಳಲಿದೆ. ಕಾಂಗ್ರೆಸ್‌ ಮತ್ತು ಮಿತ್ರ ಪಕ್ಷದಲ್ಲಿ ಲಖನ್‌ ಜಾರಕಿಹೊಳಿ ಸಹೋದರರು ಇರುವ ಕಾರಣ ಇಬ್ಬರು ಸಹ ಅವರ ಮನವೊಲಿಕೆ ಮಾಡಲಿದ್ದಾರೆ. ಇದೆಲ್ಲವೂ ಅವಿಶ್ವಾಸ ನಿರ್ಣಯ ಮಂಡನೆಯ ಮೇಲೆ ಆಧಾರವಾಗಲಿದೆ.

ಬಸವರಾಜ ಹೊರಟ್ಟಿ ರಾಜೀನಾಮೆ?

ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್‌ ಸ್ಥಾನ ಹೆಚ್ಚಿಸಿಕೊಳ್ಳುತ್ತಿದ್ದಂತೆ ಸಭಾಪತಿ ಹುದ್ದೆ ಬಗ್ಗೆ ಚರ್ಚೆಗಳು ಪ್ರಾರಂಭವಾಗಿದ್ದು, ಮೇಲ್ಮನೆಯ ಹಿರಿಯ ನಾಯಕರಾಗಿರುವ ಬಸವರಾಜ ಹೊರಟ್ಟಿ ಅವರು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಕಾಂಗ್ರೆಸ್‌ ಅವಿಶ್ವಾಸ ನಿರ್ಣಯ ಮಂಡಿಸಿ ಸೋತು ಮುಖಭಂಗ ಅನುಭವಿಸುವುದಕ್ಕಿಂತ ಸ್ವಯಂಪ್ರೇರಿತರಾಗಿ ರಾಜೀನಾಮೆ ನೀಡುವುದು ಸೂಕ್ತ ಎಂಬುದು ಬಸವರಾಜ ಹೊರಟ್ಟಿಯವರ ಅನಿಸಿಕೆಯಾಗಿದೆ.

ಈ ಹಿಂದೆಯೂ ಬಸವರಾಜ ಹೊರಟ್ಟಿ ಅವರು ಈ ಬಗ್ಗೆ ಸ್ವತಃ ಹೇಳಿದ್ದರು. ಕಾಂಗ್ರೆಸ್‌ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾದರೆ ಅದಕ್ಕೆ ಕಾರಣ ಕೇಳಿ ತಾವೇ ರಾಜೀನಾಮೆ ನೀಡುವುದಾಗಿ ತಿಳಿಸಿದ್ದರು. ಬಹುಶಃ ಇದೀಗ ಮೇಲ್ಮನೆಯಲ್ಲಿ ಕಾಂಗ್ರೆಸ್‌ ಸ್ಥಾನ ಹೆಚ್ಚಿಸಿಕೊಂಡಿರುವ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗಿದೆ.

ಅವಿಶ್ವಾಸ ನಿರ್ಣಯ ಮಂಡಿಸಲು ಸಿಎಂ ಬಿಡುವುದಿಲ್ಲ:

ಸಭಾಪತಿ ಬಸವರಾಜ ಹೊರಟ್ಟಿ ವಿರುದ್ಧ ಅವಿಶ್ವಾಸ ಮಂಡನೆ ಕಾಂಗ್ರೆಸ್‌ ಸದಸ್ಯರು ಮುಂದಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವಕಾಶ ನೀಡುವುದಿಲ್ಲ. ಸಿದ್ದರಾಮಯ್ಯ ಮತ್ತು ಬಸವರಾಜ ಹೊರಟ್ಟಿ ಪ್ರಸ್ತುತ ಬೇರೆ ಪಕ್ಷದಲ್ಲಿದ್ದರೂ ರಾಜಕೀಯವಾಗಿ ಒಂದೇ ಪಕ್ಷದಿಂದ ಬೆಳೆದವರು. ಜನತಾ ಪರಿವಾರದಿಂದಲೂ ಒಟ್ಟಿಗೆ ರಾಜಕಾರಣ ಮಾಡಿದವರು. ಬಸರಾಜ ಹೊರಟ್ಟಿ ಬಿಜೆಪಿಗೆ ಹೋದರೂ ಇಬ್ಬರ ನಡುವೆ ಒಂದೊಳ್ಳೆ ಸ್ನೇಹ ಇದೆ. ಅಲ್ಲದೇ, ಪರಸ್ಪರ ಗೌರವ ಇದೆ. ರಾಜಕೀಯವಾಗಿ ಇದಕ್ಕೆ ಚ್ಯುತಿ ತಂದುಕೊಳ್ಳಲು ಸಿದ್ದರಾಮಯ್ಯ ಅವರಿಗೆ ಇಷ್ಟವಿಲ್ಲ. ಅಷ್ಟೇ ಅಲ್ಲ, ಬಸವರಾಜ ಹೊರಟ್ಟಿ ಅವರಿಗೆ ಮುಖಭಂಗವಾಗುವುದು ಸಿದ್ದರಾಮಯ್ಯ ಅವರಿಗೆ ವೈಯಕ್ತಿಕವಾಗಿ ಇಷ್ಟವಿಲ್ಲ. ಈ ಕಾರಣಕ್ಕಾಗಿ ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶ ನೀಡುವುದಿಲ್ಲ. ಬದಲಿಗೆ ಗೌರವಯುತವಾಗಿ ರಾಜೀನಾಮೆ ಪಡೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಬೇರೆ ಪಕ್ಷದವರು ಸಭಾಪತಿಯಾಗಿರುವ ನಿದರ್ಶನ

ರಾಜ್ಯದ ಇತಿಹಾಸ ಪುಟಗಳನ್ನು ತಿರುವಿ ಹಾಕಿದರೆ ಸರ್ಕಾರ ಒಂದು ಪಕ್ಷವಿದ್ದರೆ, ಸಭಾಪತಿ ಬೇರೆ ಪಕ್ಷದವರು ಇದ್ದ ನಿದರ್ಶನ ಇದೆ. ಈ ಹಿಂದೆ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಆಡಳಿತದ ಸಮಯದಲ್ಲಿ ಕಾಂಗ್ರೆಸ್‌ನ ರೆಹಮಾನ್‌ ಖಾನ್‌ ಅವರು ಸಭಾಪತಿಯಾಗಿ ಕಾರ್ಯನಿರ್ವಹಿಸಿದ್ದರು. ಸುಮಾರು ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಇದೀಗ ರಾಜ್ಯದಲ್ಲಿಯೂ ಇಂತಹದ್ದೇ ವಾತಾವರಣ ಇದೆ. ಕಾಂಗ್ರೆಸ್‌ ಸರ್ಕಾರ ಆಡಳಿತದಲ್ಲಿದ್ದರೂ ಬಿಜೆಪಿಯ ಬಸವರಾಜ ಹೊರಟ್ಟಿ ಸಭಾಪತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Read More
Next Story