Cabinet Meeting | ಅಭಿವೃದ್ಧಿಗೆ ನಿರಾಸಕ್ತಿ ; ನಂದಿ ಬೆಟ್ಟದ ವಿಶೇಷ ಸಂಪುಟ ಸಭೆ ರದ್ದಾಗಿದ್ದಕ್ಕೆ ಬಯಲು ಸೀಮೆ ಜನರ ಆಕ್ರೋಶ
x

Cabinet Meeting | ಅಭಿವೃದ್ಧಿಗೆ ನಿರಾಸಕ್ತಿ ; ನಂದಿ ಬೆಟ್ಟದ ವಿಶೇಷ ಸಂಪುಟ ಸಭೆ ರದ್ದಾಗಿದ್ದಕ್ಕೆ ಬಯಲು ಸೀಮೆ ಜನರ ಆಕ್ರೋಶ

ಅವಿಭಜಿತ ಕೋಲಾರ ಜಿಲ್ಲೆಯಿಂದ ಚಿಕ್ಕಬಳ್ಳಾಪುರ ಬೇರ್ಪಟ್ಟು ದಶಕಗಳೇ ಕಳೆದರೂ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ. ನೀರಾವರಿ ಯೋಜನೆಗಳಿಂದ ವಂಚಿತವಾಗಿರುವ ಬಯಲು ಸೀಮೆ ಜಿಲ್ಲೆಗಳು ವಂಚಿತವಾಗಿವೆ.


ಬಯಲು ಸೀಮೆ ಜಿಲ್ಲೆಗಳ ಅಭಿವೃದ್ಧಿ ಕುರಿತ ಚರ್ಚೆಗಷ್ಟೇ ಮೀಸಲಿರಿಸಿ ನಂದಿಬೆಟ್ಟದಲ್ಲಿ ನಡೆಸಲು ಉದ್ದೇಶಿಸಿದ್ದ ವಿಶೇಷ ಸಚಿವ ಸಂಪುಟ ಸಭೆಯನ್ನು ಕೊನೆ ಕ್ಷಣದಲ್ಲಿ ರದ್ದುಪಡಿಸಿ, ಬೆಂಗಳೂರಿಗೆ ಸ್ಥಳಾಂತರಿಸುವ ಮೂಲಕ ರಾಜ್ಯ ಸರ್ಕಾರ ಈ ಭಾಗದ ಜಿಲ್ಲೆಗಳ ಜನರ ನಿರೀಕ್ಷೆಗಳಿಗೆ ತಣ್ಣೀರು ಎರಚಿದೆ.

ಅವಿಭಜಿತ ಕೋಲಾರ ಜಿಲ್ಲೆಯಿಂದ ಚಿಕ್ಕಬಳ್ಳಾಪುರ ಬೇರ್ಪಟ್ಟು ದಶಕಗಳೇ ಕಳೆದರೂ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ. ನೀರಾವರಿ ಯೋಜನೆಗಳಿಂದ ವಂಚಿತವಾಗಿರುವ ಬಯಲು ಸೀಮೆ ಜಿಲ್ಲೆಗಳು ವಂಚಿತವಾಗಿವೆ. ಕೈಗಾರಿಕೆಗಳಿಗಾಗಿ ಎಗ್ಗಿಲ್ಲದೇ ನಡೆಯುತ್ತಿರುವ ಭೂಸ್ವಾಧೀನಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಸರ್ಕಾರದ ಈ ಎಲ್ಲ ಪ್ರತಿಕೂಲ ಕ್ರಮಗಳ ಫಲವಾಗಿ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಯಲ್ಲಿ ರೈತರ ಬದುಕು ಮೂರಾಬಟ್ಟೆಯಾಗಿದೆ.

ಕಾಂಗ್ರೆಸ್‌ ನೇತೃತ್ವದ ಸರ್ಕಾರ ಪ್ರಾದೇಶಿಕ ಅಸಮಾನತೆ ನಿವಾರಿಸುವ ಉದ್ದೇಶದಿಂದ ನಂದಿ ಬೆಟ್ಟದಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆಸಲು ಉದ್ದೇಶಿಸಿದ್ದ ಬಳಿಕ ಜಿಲ್ಲೆಗಳ ಅಭಿವೃದ್ಧಿಯ ಕನಸು ಚಿಗುರೊಡೆದಿತ್ತು. ಆದರೆ, ಕೊನೆ ಕ್ಷಣದಲ್ಲಿ ಸಂಪುಟ ಸಭೆ ರದ್ದುಪಡಿಸಿ ರೈತರ ಸಮಸ್ಯೆಗಳಿಗೆ ಬೆನ್ನು ತೋರಿಸಿರುವುದು ಟೀಕೆಗೆ ಗುರಿಯಾಗಿದೆ.

ರಾಜ್ಯ ಸರ್ಕಾರ ಕೊನೆ ಕ್ಷಣದಲ್ಲಿ ಸಂಪುಟ ಸಭೆಯ ಸ್ಥಳ ಬದಲಾವಣೆ ಮಾಡಲು ಕಾರಣಗಳೇನು, ರೈತರ ಹೋರಾಟಕ್ಕೆ ಸರ್ಕಾರ ಬೆದರಿತೇ ಎಂಬ ಪ್ರಶ್ನೆಗಳು ಮೂಡಿವೆ.

ರೈತರ ಹೋರಾಟದ ಬಿಸಿ

ದೇವನಹಳ್ಳಿ ತಾಲೂಕಿ‌ನ ಚನ್ನರಾಯಪಟ್ಟಣ ಹೋಬಳಿಯಲ್ಲಿ ಕೆಐಎಡಿಬಿ ಭೂ ಸ್ವಾಧೀನ ವಿರೋಧಿಸಿ ರೈತರು 1181 ದಿನಗಳಿಂದ ನಿರಂತರ ಸತ್ಯಾಗ್ರಹ ನಡೆಸುತ್ತಿದ್ದಾರೆ.‌ 13 ಗ್ರಾಮಗಳ ಸಾವಿರಾರು ಎಕರೆ ಫಲವತ್ತಾದ ಭೂಮಿ ಬಿಟ್ಟುಕೊಡಲು ಸಿದ್ದಲಿಲ್ಲದ ರೈತರು ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ.

ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೂಸ್ವಾಧೀನ ಪ್ರಕ್ರಿಯೆ ಕೈ ಬಿಡುವುದಾಗಿ ಹೋರಾಟಗಾರರಿಗೆ ಭರವಸೆ ನೀಡಿದ್ದರು. ಆದರೆ, ಅದು ಭರವಸೆಯಾಗಿಯೇ ಉಳಿದ ಹಿನ್ನೆಲೆಯಲ್ಲಿ ರೈತರು ಸಂಪುಟ‌ ಸಭೆಗೆ ಅಡ್ಡಿಪಡಿಸುವ ಆತಂಕವೂ ಸರ್ಕಾರಕ್ಕಿತ್ತು.

ದೇವನಹಳ್ಳಿ ರೈತರ ಜೊತೆಗೆ ದೊಡ್ಡಬಳ್ಳಾಪುರ ತಾಲೂಕಿನ ನಾಗದೇನಹಳ್ಳಿ, ಆದಿನಾರಾಯಣ ಹೊಸಹಳ್ಳಿ ಕೊನಘಟ್ಟ ಸೇರಿದಂತೆ ಹಲವು ಗ್ರಾಮಗಳ ರೈತರು ಕೂಡ ಕೆಐಎಡಿಬಿ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಇದರಿಂದ ಆತಂಕಗೊಂಡ ಸರ್ಕಾರ ಸಚಿವ ಸಂಪುಟ ಸಭೆ ರದ್ದು ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಬಯಲುಸೀಮೆಯ ಸಮಸ್ಯೆಗಳಿಗೆ ಸರ್ಕಾರ ಒತ್ತು ನೀಡುತ್ತಿಲ್ಲ. ಬೆಂಗಳೂರಿನ ಜನತೆಗೆ ರೈತರು ಬೆಳೆಯುವ ತರಕಾರಿ, ಹಣ್ಣು, ಹಾಲು ಸರಬರಾಜು ಆಗುತ್ತಿದೆ. ಸರ್ಕಾರ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನ ಮಾಡಿಕೊಂಡು ರೈತರನ್ನು ಸರ್ಕಾರ ಬೀದಿಗೆ ತಳ್ಳುತ್ತಿದೆ. ನೆಲಮಂಗಲದಿಂದ ದಾಬಸ್ ಪೇಟೆವರೆಗೆ, ಯಲಹಂಕದಿಂದ ದೊಡ್ಡಬಳ್ಳಾಪುರ, ಹೊಸಕೋಟೆ, ದೇವನಹಳ್ಳಿ ಸೇರಿದಂತೆ ಜಿಲ್ಲೆಯ ಎಲ್ಲಾ ಭಾಗಗಳಲ್ಲೂ ಸರ್ಕಾರ ರೈತರಿಂದ ಕೃಷಿ ಭೂಮಿ ಕಸಿದುಕೊಳ್ಳುತ್ತಿದೆ. ಇದನ್ನು ಕೂಡಲೇ ಕೈಬಿಡಬೇಕು ಎಂದು ರಾಜ್ಯ ರೈತ ಸಂಘದ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಸತೀಶ್ ಆಗ್ರಹಿಸಿದ್ದಾರೆ.

ಎತ್ತಿನ ಹೊಳೆ ಯೋಜನೆ ದಿಕ್ಕು ತಪ್ಪಿದೆ

ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿಗಾಗಿ ದಶಕಗಳಿಂದ ಹಲವು ಹೋರಾಟಗಳು ನಡೆದಿವೆ. ಆದರೆ ಸರ್ಕಾರಗಳು ಸ್ಪಂದಿಸುತ್ತಿಲ್ಲ. ಎತ್ತಿನಹೊಳೆ ಯೋಜನೆ ಕುಂಟುತ್ತಾ ಸಾಗಿದ್ದು, ಹೊರೆಯಾಗಿ ಪರಿಣಮಿಸಿದೆ. ಯೋಜನೆಯ ಪ್ರಗತಿ ನೋಡಿದರೆ ಜಿಲ್ಲೆಗಳಿಗೆ ನೀರು ಸಿಗುವ ನಿರೀಕ್ಷೆ ಇಲ್ಲ. ಇದು ಕೇವಲ ಹಣ ಮಾಡುವ ಯೋಜನೆಯಾಗಿದೆ. ತಾಲ್ಲೂಕಿನ ಬೈರಗೊಂಡ್ಲು ಭಾಗದಲ್ಲಿ 10 ಟಿಎಂಸಿ ಡ್ಯಾಂ ನಿರ್ಮಿಸಲು ಈ ಹಿಂದೆ ತೀರ್ಮಾನಿಸಲಾಗಿತ್ತು. ಈಗ 2 ಟಿಎಂಸಿ ಸಾಮರ್ಥ್ಯದ ಡ್ಯಾಂ ನಿರ್ಮಾಣ ಮಾಡಲಾಗುತ್ತಿದೆ ಎಂದು ಸತೀಶ್‌ ಆರೋಪಿಸಿದ್ದಾರೆ.

ಕಾಂಗ್ರೆಸ್ ಶಾಸಕರ ಅಸಮಾಧಾನ

ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಆ ಭಾಗದ ಜಿಲ್ಲೆಗಳ ಅಭಿವೃದ್ಧಿಗೆ ಅನುದಾನ ಘೋಷಿಸಿದಂತೆ ಹಿಂದುಳಿದ ಬಯಲು ಸೀಮೆ ಜಿಲ್ಲೆಗಳ ಅಭಿವೃದ್ದಿಗೆ ಅನುದಾನ ಘೋಷಿಸಬೇಕು ಎಂದು ಈ ಭಾಗದ ಜನಪ್ರತಿನಿಧಿಗಳ ಒಕ್ಕೊರಲ ಆಗ್ರಹವಾಗಿತ್ತು. ಆದರೆ, ಅನುದಾನ ಘೋಷಣೆ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ಭರವಸೆ ನೀಡಿರಲಿಲ್ಲ. ಸಂಪುಟ ಸಭೆ ನಡೆಸಿದರೆ ಶಾಸಕರು ಹಕ್ಕೊತ್ತಾಯ ಮಂಡಿಸಲಿದ್ದಾರೆ ಎಂಬ ಆತಂಕದಲ್ಲಿ ದಿಢೀರ್ ಸ್ಥಳಾಂತರ ಮಾಡಲಾಯಿತು ಎಂಬ ಮಾತುಗಳು ಕೇಳಿಬರುತ್ತಿವೆ.

ಬಯಲು ಸೀಮೆ ಜಿಲ್ಲೆಗಳ ಅಭಿವೃದ್ಧಿಗೆ ಯಾವುದೇ ವಿಶೇಷ ಕೊಡುಗೆ ಘೋಷಿಸದೇ ಹೋದರೆ ನಂದಿಬೆಟ್ಟದಲ್ಲಿ ನಡೆಸಲು ಉದ್ದೇಶಿಸಿದ್ದ ಸಂಪುಟ ಸಭೆಯಿಂದ ಪ್ರಯೋಜನವೇನು ಎಂಬುದು ಈ ಭಾಗದ ಶಾಸಕರ ಆಕ್ಷೇಪವಾಗಿತ್ತು. ವಿಶೇಷ ಅನುದಾನ ನೀಡಲು ಸಾಧ್ಯವಾಗದಿದ್ದರೆ ಜನರ ನಿರೀಕ್ಷೆ ಹುಸಿಯಾಗಲಿದೆ. ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಬಹುದು. ಇದರಿಂದಾಗಿ ಸಂಪುಟ ಸಭೆ ರದ್ದು ಮಾಡುವುದೇ ಒಳಿತು ಎಂಬ ಅಭಿಪ್ರಾಯವನ್ನು ಕಾಂಗ್ರೆಸ್ ಶಾಸಕರು ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಸರ್ಕಾರದ ಪಲಾಯನವಾದ

ನಂದಿ ಬೆಟ್ಟದಲ್ಲಿ ನಡೆಸಲು ಉದ್ದೇಶಿಸಿದ್ದ ರಾಜ್ಯ ಸಚಿವ ಸಂಪುಟದ ಸಭೆಯನ್ನು ದಿಢೀರ್ ರದ್ದುಗೊಳಿಸಿ ಬಯಲು ಸೀಮೆಯ ಜನರ ಭಾವನೆಯನ್ನು ರಾಜ್ಯ ಸರ್ಕಾರ ಧಿಕ್ಕರಿಸಿದೆ ಎಂದು ನೀರಾವರಿ ಹೋರಾಟ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.

ಸಂಪುಟ ಸಭೆಯನ್ನು ಕೊನೆಕ್ಷಣದಲ್ಲಿ ವಿಧಾನಸೌಧಕ್ಕೆ ಸ್ಥಳಾಂತರ ಮಾಡಿದ್ದು ತೀವ್ರ ನಿರಾಸೆ ತಂದಿದೆ. ಬಯಲು ಸೀಮೆ ಜನರ ಆಶೋತ್ತರಗಳಿಗೆ ಸ್ಪಂದಿಸಬೇಕಾಗಿದ್ದ ಸರ್ಕಾರವು ಶಾಶ್ವತ ನೀರಾವರಿ ಹೋರಾಟಗಾರರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಪಲಾಯನ ಮಾಡಿದೆ. ಬರಪೀಡಿತ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ನೀರಾವರಿ ಬಿಕ್ಕಟ್ಟು, ಸಮಸ್ಯೆಗಳ ಕುರಿತು ವಿಸ್ತೃತವಾಗಿ ಚರ್ಚಿಸಲು "ಸಚಿವ ಸಂಪುಟ ಸಭೆಯ ಕಾರ್ಯಕಲಾಪಗಳ" ಪಟ್ಟಿಯಲ್ಲಿ ವಿಷಯ ಸೇರಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಕೋರಲಾಗಿದೆ ಎಂದು ಹೋರಾಟ‌ ಸಮಿತಿ‌ ಆಧ್ಯಕ್ಷ ಆಂಜನೇಯ ರೆಡ್ಡಿ ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ನಕ್ಷೆಯಲ್ಲಿ ಬಯಲು ಸೀಮೆ‌ ಇಲ್ಲ

ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ 15 ವಿಧಾನಸಭಾ ಕ್ಷೇತ್ರಗಳಲ್ಲಿ 12ರಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರದ್ದಾರೆ. ತಮ್ಮ ಶಾಸಕರನ್ನು ನೋಡಿಯಾದರೂ ನಂದಿ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಸಬೇಕಾಗಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ದಿಢೀರ್ ಸಚಿವ ಸಂಪುಟ ಸಭೆ ರದ್ದು ಮಾಡಿರುವುದು ಸರಿಯಲ್ಲ. ಬಯಲು ಸೀಮೆಯ ಮೂರು ಜಿಲ್ಲೆಗಳು ಕಾಂಗ್ರೆಸ್ ಪಕ್ಷದ ನಕ್ಷೆಯಲ್ಲಿ ಇಲ್ಲ ಎನಿಸುತ್ತದೆ. ಅವರ ನಕ್ಷೆಯಲ್ಲಿ ಈ ಜಿಲ್ಲೆಗಳು ಬೇರೆ ರಾಜ್ಯಗಳಿಗೆ ಸೇರಿರಬೇಕು ಎಂದು ಸಂಸದ ಡಾ.ಕೆ.ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read More
Next Story