
ಬೆಂಗಳೂರು ಹೊರವಲಯದಲ್ಲಿ ಬಸ್ ಅವಘಡ : ಮುಂಜಾವಿನ ನಿದ್ದೆ ಮಾಡುತ್ತಿದ್ದ 4 ಜೀವಗಳು ಬಲಿ
ತಿರುಪತಿಯಿಂದ ಹೊರಟಿದ್ದ ಬಸ್ಸು, ಓವರ್ಟೇಕ್ ಮಾಡುವ ಭರದಲ್ಲಿ ಮುಂದೆ ಸಾಗುತ್ತಿದ್ದ ಲಾರಿಗೆ ಅಪ್ಪಳಿಸಿದೆ. ಡಿಕ್ಕಿಯ ಹೊಡೆತಕ್ಕೆ ಬಸ್ಸು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಅವಶೇಷಗಳ ರಾಶಿಯಂತೆ ಮಾರ್ಪಟ್ಟಿದೆ.
ಶುಕ್ರವಾರದ ಮುಂಜಾವು, ತಿರುಪತಿಯಿಂದ ಬೆಂಗಳೂರಿನತ್ತ ಧಾವಿಸುತ್ತಿದ್ದ ಹಲವು ಭಕ್ತರಿಗೆ ದುಃಸ್ವಪ್ನವಾಗಿ ಪರಿಣಮಿಸಿತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಗೊಟ್ಟಿಪುರ ಗೇಟ್ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮುದ್ದು ಮಕ್ಕಳು ಸೇರಿ ನಾಲ್ವರು ಅಮಾಯಕರು ಪ್ರಾಣ ಕಳೆದುಕೊಂಡರು.. ಕೋಲಾರ-ಹೊಸಕೋಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಂಧ್ರ ಸಾರಿಗೆ ಬಸ್ (APSRTC Bus) ಹಾಗೂ ಬೃಹತ್ ಲಾರಿ ಮಧ್ಯೆ ನಡೆದ ಈ ಡಿಕ್ಕಿ, ಕ್ಷಣಾರ್ಧದಲ್ಲಿ ಜೀವಗಳನ್ನು ಬಲಿ ತೆಗೆದುಕೊಂಡಿತು.
ತಿರುಪತಿಯಿಂದ ಹೊರಟಿದ್ದ ಬಸ್ಸು, ಓವರ್ಟೇಕ್ ಮಾಡುವ ಭರದಲ್ಲಿ ಮುಂದೆ ಸಾಗುತ್ತಿದ್ದ ಲಾರಿಗೆ ಅಪ್ಪಳಿಸಿದೆ. ಡಿಕ್ಕಿಯ ಹೊಡೆತಕ್ಕೆ ಬಸ್ಸು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಅವಶೇಷಗಳ ರಾಶಿಯಂತೆ ಮಾರ್ಪಟ್ಟಿದೆ. ದುರಂತಕ್ಕೆ ಪ್ರಾಥಮಿಕ ಕಾರಣವೆಂದರೆ ಚಾಲಕನ ನಿದ್ದೆ ಮಂಪರು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ನಿದ್ದೆಯಲ್ಲೇ ಆತ ಓವರ್ಟೇಕ್ ಮಾಡಲು ಮುಂದಾಗಿ ಈ ದೊಡ್ಡ ದುರಂತಕ್ಕೆ ಕಾರಣವಾಗಿದ್ದಾನೆ.
ಅಪಘಾತದಲ್ಲಿ ಬಸ್ಸಿನಲ್ಲಿದ್ದ ಕೇಶವರೆಡ್ಡಿ (44), ತುಳಸಿ (21), ಪ್ರಣತಿ (4) ಹಾಗೂ 1 ವರ್ಷದ ಮಗು ಸಾವಿಗೀಡಾಗಿದ್ದಾರೆ. ಬಸ್ಸಿನಲ್ಲಿ 16 ಮಂದಿ ಪ್ರಯಾಣಿಕರು ಗಾಯಗೊಂಡಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಗಾಯಗೊಂಡವರನ್ನು ಹೊಸಕೋಟೆಯ ಸಿಲಿಕಾನ್ ಸಿಟಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹೊಸಕೋಟೆ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹೃದಯವಿದ್ರಾವಕ ಘಟನೆ ದಾಖಲಾಗಿದೆ.