
ಬೆಂಗಳೂರಿಗರಿಗೆ ಬಂಪರ್ ಕೊಡುಗೆ: ನೀರಿನ ಬಿಲ್ ಬಾಕಿ 'ಒನ್ ಟೈಮ್ ಸೆಟಲ್ಮೆಂಟ್ʼ ಗೆ ಸಂಪುಟ ಅಸ್ತು
ನೀರಿನ ಬಿಲ್ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಗ್ರಾಹಕರಿಗೆ ಅನುಕೂಲವಾಗುವಂತೆ "ಒಂದು ಅವಧಿ"ಗೆ ಪಾವತಿಸುವ ಯೋಜನೆಯನ್ನು ಜಾರಿಗೆ ತರಲು ರಾಜ್ಯ ಸಚಿವ ಸಂಪುಟ ಮಹತ್ವದ ನಿರ್ಧಾರ ಕೈಗೊಂಡಿದೆ.
ಬೆಂಗಳೂರು ಜನತೆಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ (ಬಿಡಬ್ಲೂಎಸ್ಎಸ್ಬಿ) ನೀರಿನ ಬಿಲ್ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಗ್ರಾಹಕರಿಗೆ ಅನುಕೂಲವಾಗುವಂತೆ "ಒನ್ ಟೈಮ್ ಸೆಟಲ್ಮೆಂಟ್" ಯೋಜನೆ ಜಾರಿಗೆ ತರಲು ರಾಜ್ಯ ಸಚಿವ ಸಂಪುಟ ಮಹತ್ವದ ನಿರ್ಧಾರ ಕೈಗೊಂಡಿದೆ.
ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಪ್ರವಾಸೋದ್ಯಮ ಸಚಿವರು ಈ ವಿಷಯವನ್ನು ತಿಳಿಸಿದ್ದು, ದೀರ್ಘಕಾಲದ ಬಾಕಿ ಉಳಿಸಿಕೊಂಡಿರುವ ಗ್ರಾಹಕರಿಗೆ ಬಡ್ಡಿ ಹೊರೆಯಿಂದ ಮುಕ್ತಿ ನೀಡಲು 'ಬೆಂಗಳೂರು ನೀರು ಸರಬರಾಜು ನಿಯಮಾವಳಿಗಳು-1965'ನ್ನು ಸಡಿಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಗ್ರಾಹಕರು ತಾವು ಪಾವತಿಸಬೇಕಿರುವ ಬಾಕಿ ನೀರಿನ ಬಿಲ್ನ 'ಅಸಲು ಮೊತ್ತ'ವನ್ನು ಒಂದೇ ಬಾರಿಗೆ ಪಾವತಿಸಿದರೆ, ಆ ಮೊತ್ತದ ಮೇಲೆ ಇದುವರೆಗೂ ಆಗಿರುವ ಬಡ್ಡಿ, ದಂಡ ಮತ್ತು ಇತರೆ ಶುಲ್ಕಗಳನ್ನು ಶೇ. 100 ರಷ್ಟು ಸಂಪೂರ್ಣವಾಗಿ ಮನ್ನಾ ಮಾಡಲಾಗುತ್ತದೆ. ಇದು 3 ತಿಂಗಳ ಅವಧಿಗೆ ಮಾತ್ರ ಚಾಲ್ತಿಯಲ್ಲಿರುತ್ತದೆ. ಜಲಮಂಡಳಿಯ ಅಂಕಿಅಂಶಗಳ ಪ್ರಕಾರ, 2025ರ ಫೆಬ್ರವರಿ ಅಂತ್ಯದವರೆಗೆ ಗ್ರಾಹಕರಿಂದ ಮಂಡಳಿಗೆ ಬರಬೇಕಿರುವ ಒಟ್ಟು ಬಾಕಿ ಮೊತ್ತ ಬರೋಬ್ಬರಿ 701.71 ಕೋಟಿ ರೂ.ಗಳಷ್ಟಿದೆ. 439.03 ಕೋಟಿ ರೂ. ಇದರಲ್ಲಿ ಗ್ರಾಹಕರು ಬಳಸಿದ ನೀರಿಗೆ ಪಾವತಿಸಬೇಕಾದ ಅಸಲು ಮೊತ್ತವಾಗಿದೆ. 262.68 ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದಕ್ಕೆ ವಿಧಿಸಲಾದ ಬಡ್ಡಿ ಮೊತ್ತವಾಗಿದೆ ಎಂದು ಹೇಳಿದರು.
ಒಟಿಎಸ್( ಒನ್ ಟೈಮ್ ಸೆಟಲ್ಮೆಂಟ್) ಯೋಜನೆಯ ಮೂಲಕ ಬಡ್ಡಿ ಮೊತ್ತವಾದ 262.68 ಕೋಟಿ ರೂ.ಗಳನ್ನು ಮನ್ನಾ ಮಾಡಿ, ಅಸಲು ಮೊತ್ತವಾದ 439.03 ಕೋಟಿ ರೂ.ಗಳನ್ನು ವಸೂಲಿ ಮಾಡಲು ಮಂಡಳಿ ತೀರ್ಮಾನಿಸಿದೆ. ಕೇವಲ ಸಾರ್ವಜನಿಕ ಗ್ರಾಹಕರು ಮಾತ್ರವಲ್ಲದೆ ಸರ್ಕಾರದ ವಿವಿಧ ಇಲಾಖೆಗಳೂ ಜಲಮಂಡಳಿಗೆ ನೀರಿನ ಬಿಲ್ ಪಾವತಿಸುವುದು ಬಾಕಿಯಿದೆ. ಈ ಯೋಜನೆಯಡಿಯಲ್ಲಿ ಸರ್ಕಾರಿ ಇಲಾಖೆಗಳ ಬಾಕಿ ಮೊತ್ತವನ್ನೂ ಲೆಕ್ಕಪತ್ರದಲ್ಲಿ ಸಮನ್ವಯಗೊಳಿಸಲು ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಈ ಯೋಜನೆಯನ್ನು ಜಾರಿಗೊಳಿಸುವುದರಿಂದ ಜಲಮಂಡಳಿಗೆ ತುರ್ತಾಗಿ ಅಗತ್ಯವಿರುವ ಆರ್ಥಿಕ ಸಂಪನ್ಮೂಲ ಕ್ರೋಢೀಕರಣವಾಗಲಿದೆ ಎಂದರು.

