Brahmarathotsavam will begin with Ankurarpan in Tirupati
x

ತಿರುಪತಿ

ತಿರುಪತಿಯಲ್ಲಿ 'ಅಂಕುರಾರ್ಪಣ'ದೊಂದಿಗೆ ಬ್ರಹ್ಮೋತ್ಸವ ಆರಂಭ

ತಿರುಪತಿ ತಿರುಮಲ ದೇವಸ್ಥಾನದಲ್ಲಿ ಶ್ರೀನಿವಾಸ ಸ್ವಾಮಿಯ ವಾರ್ಷಿಕ ಬ್ರಹ್ಮೋತ್ಸವಗಳು ಸೆ.24ರಿಂದ ಪ್ರಾರಂಭವಾಗಲಿವೆ.


Click the Play button to hear this message in audio format

ತಿರುಪತಿ ತಿರುಮಲ ದೇವಸ್ಥಾನದಲ್ಲಿ ಶ್ರೀನಿವಾಸ ಸ್ವಾಮಿಯ ವಾರ್ಷಿಕ ಬ್ರಹ್ಮೋತ್ಸವ ಕಾರ್ಯಕ್ರಮಗಳು ಸೆ.24ರಿಂದ ಪ್ರಾರಂಭವಾಗಲಿವೆ. ವೈಖಾನಸ ಆಗಮ ಸಂಪ್ರದಾಯದ ಪ್ರಕಾರ, ಈ ಬ್ರಹ್ಮೋತ್ಸವಗಳ ಭಾಗವಾಗಿ ನವ ಧಾನ್ಯಗಳನ್ನು ಸೆ.23ರಂದು ಸಂಜೆ 7ರಿಂದ 8 ಗಂಟೆಯವರೆಗೆ ನಡೆಯಲಿರುವ ''ಅಂಕುರಾರ್ಪಣ'' ಸಮಾರಂಭದ ವೇಳೆ ಬಿತ್ತಲಾಗುತ್ತದೆ.

ದೇವಾಲಯದ ಯಾಗಶಾಲೆಯಲ್ಲಿ ಶಾಸ್ತ್ರಗಳ ಪ್ರಕಾರ ಅಂಕುರಾರ್ಪಣ ಸಮಾರಂಭವನ್ನು ನಡೆಸಲಾಗುತ್ತದೆ. ಆಗಮ ಶಾಸ್ತ್ರದ ಪ್ರಕಾರ, ಪ್ರತೀ ವೈದಿಕ ಉತ್ಸವದ ಮೊದಲು ಅಂಕುರಾರ್ಪಣ ನಡೆಸಲಾಗುತ್ತದೆ. ಈ ವೇಳೆ, ಬಿತ್ತಲಾದ ಈ ನವಧಾನ್ಯಗಳು ಇಡೀ ಭೂಮಂಡಲದಾದ್ಯಂತ ಮೊಳಕೆಯೊಡೆಯಲಿ, ಹಾಗೆ ಬೆಳೆದ ಬೆಳೆಗಳು ಜಾನುವಾರು ಮತ್ತು ಪಕ್ಷಿಗಳಿಗೆ ಸಮೃದ್ಧವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಗುತ್ತದೆ.

ಸೇನಾಧಿಪತಿ ಉತ್ಸವ

ಈ ಸಂದರ್ಭದಲ್ಲಿ ಬಾಲಾಜಿಯ ಸರ್ವ ಸೈನ್ಯದ ಅಧ್ಯಕ್ಷನಾಗಿದ್ದ ವಿಶ್ವಕ್ಸೇನನನ್ನು ದೇವಾಲಯದ ನಾಲ್ಕೂ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಕರೆದೊಯ್ಯಲಾಗುತ್ತದೆ. ಲೋಕ ರಕ್ಷಕ ಬಾಲಾಜಿಯೇ ಆಯೋಜಿಸುವ ಬ್ರಹ್ಮೋತ್ಸವಗಳ ವ್ಯವಸ್ಥೆಗಳನ್ನು ಮೇಲ್ವಿಚಾರಣೆ ಮಾಡಲು ವಿಶ್ವಕ್ಸೇನರನ್ನು ಈ ರೀತಿ ಮುಖ್ಯ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಕರೆದೊಯ್ಯಲಾಗುತ್ತದೆ ಎಂದು ಹೇಳಲಾಗುತ್ತದೆ.

ಮೇದಿನಿ ಪೂಜೆ

ಹೊಸ ಧಾನ್ಯಗಳು ಮೊಳಕೆಯೊಡೆಯಲು ಅಗತ್ಯವಾದ ಮಣ್ಣನ್ನು ಪಡೆಯುವ ಸಲುವಾಗಿ ಮೊದಲು ಭೂದೇವಿಯನ್ನು ಸಮಾಧಾನಪಡಿಸಿ ಮೇದಿನಿ ಪೂಜೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ, ಪುರೋಹಿತರು ಭೂಸೂಕ್ತ ಮಂತ್ರಗಳನ್ನು ಪಠಿಸುತ್ತಾರೆ.

ಅಂಕುರಾರ್ಪಣ

ವೈಖಾನಸ ಆಗಮದಲ್ಲಿ ಅತ್ಯಂತ ಮುಖ್ಯವಾದ ಆಚರಣೆಯೆಂದರೆ ಬಿತ್ತನೆ ಬೀಜಗಳ ಮೊಳಕೆ ಒಡೆಯುವಿಕೆಯಾಗಿದೆ. ಮೊದಲು ನೆಲದ ಮೇಲೆ ಮಣ್ಣಿನ ಮಡಿಕೆಗಳನ್ನು ಇರಿಸಲಾಗುತ್ತದೆ. ಇವುಗಳಿಗೆ ನವಗ್ರಹಗಳ ಪ್ರತೀಕವಾಗಿ ನವ ಧಾನ್ಯಗಳನ್ನು ಹಾಕಲಾಗುತ್ತದೆ. ಈ ಬೀಜಗಳು ಉತ್ತಮವಾಗಿ ಮೊಳಕೆ ಒಡೆಯಲೆಂದು ಪ್ರಾರ್ಥಿಸಲು ಓಷಧಿ ಮಂತ್ರಗಳನ್ನು ಪಠಿಸಲಾಗುತ್ತದೆ. ಈ ಧಾನ್ಯಗಳಲ್ಲಿ ಗೋಧಿಯು ಸೂರ್ಯನನ್ನು ಪ್ರತಿನಿಧಿಸಿದರೆ, ಅಕ್ಕಿ - ಚಂದ್ರ, ಬೇಳೆ - ಮಂಗಳ, ಬಟಾಣಿ - ಬುಧ, ಕಡಲೆ - ಗುರು, ಅಲಸಂದಿ - ಶುಕ್ರ, ಎಳ್ಳು - ಶನಿ, ಹೆಸರುಕಾಳು - ರಾಹು ಮತ್ತು ಉರುಳಿ ಕಾಳು ಕೇತುವನ್ನು ಪ್ರತಿನಿಧಿಸುತ್ತವೆ. ಅಲ್ಲದೆ, ಯಾಗಶಾಲೆಯಲ್ಲಿ ಎಂಟು ದಿಕ್ಕುಗಳ ರಕ್ಷಕರಾದ ಇಂದ್ರ, ಅಗ್ನಿ, ಯಮ, ನಿರಿತಿ, ವರುಣ, ವಾಯುದೇವ, ಕುಬೇರ ಮತ್ತು ಈಶಾನ ಸೇರಿದಂತೆ ಒಟ್ಟು 49 ದೇವತೆಗಳನ್ನು ಈ ಮಡಿಕೆಗಳ ಸುತ್ತಲೂ ಆವಾಹಿಸಲಾಗುತ್ತದೆ.

ಅಕ್ಷತಾರೋಪಣ

ಈ ಮಣ್ಣಿನ ಮಡಿಕೆಗಳಲ್ಲಿನ ನವಧಾನ್ಯಗಳನ್ನು ಬ್ರಹ್ಮೋತ್ಸವದ 9 ದಿನಗಳವರೆಗೆ ಬೆಳೆಸಲಾಗುತ್ತದೆ. ಕೊನೆಯ ದಿನದಂದು ಈ ಮೊಳಕೆಗಳನ್ನು ಬೇರ್ಪಡಿಸಿ ಭಗವಂತನಿಗೆ ಅರ್ಪಿಸಲಾಗುತ್ತದೆ. ಈ ಮೊಳಕೆಗಳು ಹೆಚ್ಚು ಮೊಳಕೆಯೊಡೆದಷ್ಟೂ ಬ್ರಹ್ಮೋತ್ಸವವು ಹೆಚ್ಚು ಭವ್ಯವಾಗಿ ನಡೆಯುತ್ತದೆ ಎಂದು ಭಕ್ತರು ನಂಬುತ್ತಾರೆ.

Read More
Next Story