Bomb Threat | ಕಲಬುರಗಿ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್‌ ಬೆದರಿಕೆ!
x

Bomb Threat | ಕಲಬುರಗಿ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್‌ ಬೆದರಿಕೆ!


ಕಲಬುರಗಿ ವಿಮಾನ ನಿಲ್ದಾಣವನ್ನು ಸ್ಫೋಟಿಸುವುದಾಗಿ ಅನಾಮಧೇಯ ವ್ಯಕ್ತಿಯಿಂದ ಬಾಂಬ್​ ಬೆದರಿಕೆ ಇ-ಮೇಲ್ ಬಂದಿದೆ. ​ವಿಚಾರ ತಿಳಿದು ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ, ಪೊಲೀಸರು ತೆರಳಿ ತಪಾಸಣೆ ನಡೆಸಿದರು. ವಿಮಾನ ನಿಲ್ದಾಣದ ಎಲ್ಲ ಸ್ಥಳಗಳಲ್ಲಿ ಮತ್ತು ಪ್ರಯಾಣಿಕರ ಬ್ಯಾಗ್‌ಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದರು.

ವಿಮಾನ ನಿಲ್ದಾಣದ ಕಟ್ಟಡದಲ್ಲಿ ಬಾಂಬ್ ಇರಿಸಲಾಗಿದೆ ಎಂದು ವಿಮಾನ ನಿಲ್ದಾಣದ ನಿರ್ದೇಶಕ ಚಿಲಕಾ ಮಹೇಶ್ ಅವರಿಗೆ ಇ-ಮೇಲ್ ಬಂದಿದೆ. ಇದೇ ವೇಳೆ ಬೆಂಗಳೂರಿನಿಂದ ವಿಮಾನದಲ್ಲಿ ಬಂದಿದ್ದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹಾಗೂ ಇತರೆ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ವಿಮಾನದಿಂದ ಕೆಳಗೆ ಇಳಿಸದೆ ತಪಾಸಣೆ ಮಾಡಲಾಯಿತು. ಆ ಬಳಿಕ ಪ್ರಯಾಣಿಕರು ಕೆಳಗೆ ಇಳಿದರು. ಶ್ವಾನದಳ, ಹೆಚ್ಚಿನ ಪೊಲೀಸರ ನಿಯೋಜನೆ, ಬ್ಯಾಗ್‌ಗಳ ತಪಾಸಣೆಯಿಂದಾಗಿ ನಿಲ್ದಾಣದಲ್ಲಿನ ಪ್ರಯಾಣಿಕರಲ್ಲಿ ಆತಂಕ ಕಂಡುಬಂದಿತು. ಬಳಿಕ ಅದೊಂದು ಹುಸಿ ಬಾಂಬ್‌ ಕರೆ ಎಂದು ತಿಳಿದುಬಂದಿತು.

ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಕೃಷ್ಣ ಭೈರೇಗೌಡ ಅವರು, ʻʻಬಾಂಬ್ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಸಿಬ್ಬಂದಿ ಪ್ರಯಾಣಿಕರನ್ನು ಹೊರಗೆ ಬಿಡಲಿಲ್ಲ. ನನಗೂ ಅರ್ಧ ಗಂಟೆ ಸಮಯ ವಿಳಂಬವಾಯಿತು. ಈ ರೀತಿಯ ಕರೆಗಳು ಬರುತ್ತಿರುತ್ತವೆ, ಕೆಲವರು ಸುಮ್ಮನೆ ಅನಾಮಧೇಯ ಕರೆ ಮಾಡುತ್ತಿರುತ್ತಾರೆ‌. ವಿಮಾನ ನಿಲ್ದಾಣದ ಸಿಬ್ಬಂದಿ ತಪಾಸಣೆ ನಡೆಸಿದರು. ಇದರಿಂದ ನನಗೆ ಅಧಿಕಾರಿಗಳ ಜೊತೆ ಸಭೆ ನಡೆಸಲು ನಿಗದಿಗಿಂತ ಸಮಯಕ್ಕಿಂತ ಅರ್ಧಗಂಟೆ ವಿಳಂಬವಾಗಿದ್ದು ಬಿಟ್ಟರೆ ಮತ್ತೇನಾಗಿಲ್ಲ. ಅಲ್ಲಿ ಯಾವುದೇ ರೀತಿಯ ಆತಂಕ ಇರಲಿಲ್ಲ. ಅದೊಂದು ಹುಸಿ ಬಾಂಬ್ ಕರೆ ಅನ್ನಿಸುತ್ತೆʼʼ ಎಂದು ಹೇಳಿದರು.

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದ ಬಳಿಕ ಬೆಂಗಳೂರಿನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಆದಾದ ಬಳಿಕವೂ ಕೆಲವು ಬಾರಿ ಹುಸಿ ಬಾಂಬ್ ದಾಳಿ ಕರೆ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಇದೇ ವರ್ಷ(2024) ಏ.29 ರಂದು ಬೆಂಗಳೂರಿನ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್​ ಬೆದರಿಕೆ ಮೇಲ್​ ಬಂದಿತ್ತು. ವಿಮಾನ ನಿಲ್ದಾಣದ ಮ್ಯಾನೇಜರ್​​ ಅವರ ಮೇಲ್‌ಗೆ “ವಿಮಾನದಲ್ಲಿ ಟೈಂ ಬಾಂಬ್​ ಇಡಲಾಗಿದೆ. ಯಾವುದೇ ಸಮಯದಲ್ಲಿ ಸ್ಫೋಟಗೊಳ್ಳಬಹುದು. ಜೊತೆಗೆ, ಟರ್ಮಿನಲ್ 1 ರ ಒಳಗೆ ವಿವಿಧ ಸ್ಥಳಗಳಲ್ಲಿ ಸ್ಫೋಟಕ ವಸ್ತುಗಳನ್ನು ಇರಿಸಲಾಗಿದೆ” ಎಂದು ಸಂದೇಶ ಬಂದಿತ್ತು.

ಅದೇ ದಿನ(ಏ.29) ಮಂಗಳೂರು ವಿಮಾನ ನಿಲ್ದಾಣಕ್ಕೂ ಬಾಂಬ್​ ಬೆದರಿಕೆ ಮೇಲ್​ ಬಂದಿತ್ತು. ಅಲ್ಲದೆ ದೇಶದ ಇತರ ಕೆಲವು ಖಾಸಗಿ ವಿಮಾನ ನಿಲ್ದಾಣಗಳಿಗೂ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿತ್ತು. ದೆಹಲಿ ಮತ್ತು ಎನ್‌ಸಿಆರ್‌ನ ಶಾಲೆಗಳಿಗೆ ಮೇ 1 ರಂದು ಇದೇ ರೀತಿಯ ಬೆದರಿಕೆಗಳು ಬಂದಿದ್ದರೆ, ಅಹಮದಾಬಾದ್‌ನ ಶಾಲೆಗಳಿಗೆ ಮೇ 6 ರಂದು ಬೆದರಿಕೆ ಸಂದೇಶ ಬಂದಿತ್ತು.

Read More
Next Story