
ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಅಡ್ಡಿ: ದೂರು ದಾಖಲು
ಸಂಚಾರದಲ್ಲಿನ ವಿಳಂಬವನ್ನು ಸರಿಪಡಿಸಲು, BMRCL ಒಂದು ರೈಲಿನ ಸಂಚಾರವನ್ನು ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಲ್ದಾಣದವರೆಗೆ ಸೀಮಿತಗೊಳಿಸಿ, 'ಶಾರ್ಟ್-ಲೂಪ್' ಸೇವೆ ಒದಗಿಸಬೇಕಾಯಿತು.
ನಮ್ಮ ಮೆಟ್ರೋದ ನೂತನ ಹಳದಿ ಮಾರ್ಗದಲ್ಲಿ (ಆರ್.ವಿ. ರಸ್ತೆ - ಬೊಮ್ಮಸಂದ್ರ) ಸೋಮವಾರ ಮುಂಜಾನೆ ಕೆಲವು ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ರೈಲು ಸಂಚಾರಕ್ಕೆ ಅಡ್ಡಿಪಡಿಸಿದ ಘಟನೆ ನಡೆದಿದ್ದು, ಈ ಸಂಬಂಧ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಪೊಲೀಸರಿಗೆ ದೂರು ನೀಡಿದೆ. ಈ ಘಟನೆಯಿಂದಾಗಿ ಮೆಟ್ರೋ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿ, ಸಾವಿರಾರು ಪ್ರಯಾಣಿಕರು ತೊಂದರೆ ಅನುಭವಿಸುವಂತಾಯಿತು.
ನವೆಂಬರ್ 17ರ ಸೋಮವಾರ ಮುಂಜಾನೆ, ಹಳದಿ ಮಾರ್ಗದ ಮೊದಲ ರೈಲು ಆರ್.ವಿ. ರಸ್ತೆ ಮೆಟ್ರೋ ನಿಲ್ದಾಣದಿಂದ 6 ಗಂಟೆಗೆ ಹೊರಡಬೇಕಿತ್ತು. ಆದರೆ, ಕೆಲವು ವ್ಯಕ್ತಿಗಳ ಗುಂಪೊಂದು ರೈಲು ಹೊರಡುವುದಕ್ಕೆ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸಿದೆ. ಇದರ ಪರಿಣಾಮವಾಗಿ, ರೈಲು 35 ನಿಮಿಷ ತಡವಾಗಿ, ಅಂದರೆ 6.35ಕ್ಕೆ ನಿಲ್ದಾಣದಿಂದ ಹೊರಟಿತು. ಈ ವಿಳಂಬದಿಂದಾಗಿ, ದಿನದ ಆರಂಭದ ಎಲ್ಲಾ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿ, ಪ್ರಯಾಣಿಕರು ಪರದಾಡುವಂತಾಯಿತು.
ಸಂಚಾರದಲ್ಲಿನ ವಿಳಂಬವನ್ನು ಸರಿಪಡಿಸಲು, ಬಿಎಂಆರ್ಸಿಎಲ್ ಒಂದು ರೈಲಿನ ಸಂಚಾರವನ್ನು ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಲ್ದಾಣದವರೆಗೆ ಸೀಮಿತಗೊಳಿಸಿ, 'ಶಾರ್ಟ್-ಲೂಪ್' ಸೇವೆ ಒದಗಿಸಬೇಕಾಯಿತು. ಇಂತಹ ಕೃತ್ಯಗಳು ಕೇವಲ ಸಹ ಪ್ರಯಾಣಿಕರಿಗೆ ಅನಾನುಕೂಲತೆ ಉಂಟುಮಾಡುವುದಲ್ಲದೆ, ಮೆಟ್ರೋದ ಸುರಕ್ಷತೆ ಮತ್ತು ದಕ್ಷ ಕಾರ್ಯಾಚರಣೆಯ ಮೇಲೂ ಗಂಭೀರ ಪರಿಣಾಮ ಬೀರುತ್ತವೆ ಎಂದು ನಿಗಮವು ತಿಳಿಸಿದೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಎಂಆರ್ಸಿಎಲ್ , 'ಮೆಟ್ರೋ ರೈಲು (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆ, 2002'ರ ಅಡಿಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಅಧಿಕೃತ ದೂರು ಸಲ್ಲಿಸಿದೆ. ಈ ಕಾಯ್ದೆಯ ಪ್ರಕಾರ, ರೈಲು ಸಂಚಾರಕ್ಕೆ ಅಡ್ಡಿಪಡಿಸುವುದು ಶಿಕ್ಷಾರ್ಹ ಅಪರಾಧವಾಗಿದ್ದು, ದಂಡ ಅಥವಾ ಜೈಲು ಶಿಕ್ಷೆ ಅಥವಾ ಎರಡನ್ನೂ ವಿಧಿಸಬಹುದಾಗಿದೆ.
ಹಳದಿ ಮಾರ್ಗದಲ್ಲಿ ಸೇವೆಗಳ ಸುಧಾರಣೆ
ನವೆಂಬರ್ 1 ರಿಂದ, ಹಳದಿ ಮಾರ್ಗದಲ್ಲಿ 5ನೇ ರೈಲನ್ನು ಪರಿಚಯಿಸುವುದರೊಂದಿಗೆ, ಮೆಟ್ರೋ ಸೇವೆಯನ್ನು ಬೆಳಿಗ್ಗೆ 6.30ರ ಬದಲು 6.00 ಗಂಟೆಗೆ ವಿಸ್ತರಿಸಲಾಗಿದೆ. ಅಲ್ಲದೆ, ಪೀಕ್ ಅವರ್ಗಳಲ್ಲಿ (ಅತಿ ಹೆಚ್ಚು ಪ್ರಯಾಣಿಕರಿರುವ ಸಮಯ) ಎರಡು ರೈಲುಗಳ ನಡುವಿನ ಅಂತರವನ್ನು 19 ನಿಮಿಷದಿಂದ 15 ನಿಮಿಷಕ್ಕೆ ಇಳಿಸಲಾಗಿದೆ. ಮುಂಬರುವ ತಿಂಗಳುಗಳಲ್ಲಿ ಇನ್ನಷ್ಟು ಹೆಚ್ಚುವರಿ ರೈಲುಗಳನ್ನು ಸೇವೆಗೆ ಸೇರಿಸುವುದರಿಂದ, ಹಳದಿ ಮಾರ್ಗದ ಸೇವೆ ಇನ್ನಷ್ಟು ಉತ್ತಮಗೊಳ್ಳಲಿದೆ ಎಂದು ನಿಗಮವು ಭರವಸೆ ನೀಡಿದೆ.
ಪೀಕ್ ಅವರ್ಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಎಲ್ಲಾ ರೈಲುಗಳನ್ನು ಶೇ. 100ರಷ್ಟು ಬಳಸಲಾಗುತ್ತಿದ್ದು, ನಿರ್ವಹಣೆಗಾಗಿ ಮೀಸಲಿಡಬೇಕಾದ ಬಿಡಿ ರೈಲನ್ನೂ ಸಹ ತಾತ್ಕಾಲಿಕವಾಗಿ ಸೇವೆಗೆ ಬಳಸಿಕೊಳ್ಳಲಾಗುತ್ತಿದೆ. ಪ್ರಯಾಣಿಕರ ಅನುಭವವನ್ನು ಸುಧಾರಿಸಲು ಮತ್ತು ವಿಶ್ವಾಸಾರ್ಹ ಸೇವೆ ನೀಡಲು ನಿಗಮವು ಬದ್ಧವಾಗಿದೆ ಎಂದು ಬಿಎಂಆರ್ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.

