
Bangalore stampede|ಬಿಜೆಪಿ ಹೋರಾಟಕ್ಕೆ ಎಚ್ಡಿಕೆ ಬಲ: ಬಂದಿದೆಯೇ ಅಮಿತ್ ಶಾ ಸೂಚನೆ?
ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವಲ್ಲಿ ಬಿಜೆಪಿ ವಿಫಲವಾಗುತ್ತಿರುವುದಕ್ಕೆ ಹೈಕಮಾಂಡ್ ಅಸಮಾಧಾನ ವ್ಯಕ್ತಪಡಿಸಿದೆ. ಕಾಲ್ತುಳಿತ ದುರಂತದಲ್ಲಿ ಪ್ರಬಲ ಹೋರಾಟ ನಡೆಸಲು ನಿರ್ದೇಶನ ನೀಡಿದೆ.
ಐಪಿಎಲ್ನಲ್ಲಿ ಚೊಚ್ಚಲ ಕಪ್ ಗಳಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಭ್ರಮೋತ್ಸವ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣ ಇದೀಗ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಲು ಪ್ರತಿಪಕ್ಷ ಬಿಜೆಪಿ-ಜೆಡಿಎಸ್ ಮಿತ್ರಪಕ್ಷಗಳಿಗೆ ಪ್ರಮುಖ ಅಸ್ತ್ರವಾಗಿ ಸಿಕ್ಕಿದೆ. ಆದರೆ, ಅದನ್ನು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಲಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ.
ಈ ಹಿಂದೆಯೂ ಕಾಂಗ್ರೆಸ್ ಸರ್ಕಾರ ವಿರುದ್ಧ ಪ್ರಬಲ ಹೋರಾಟ ನಡೆಸಲು ಮಿತ್ರಪಕ್ಷಗಳಿಗೆ ಅಸ್ತ್ರ ಸಿಕ್ಕಿತ್ತು. ಮುಡಾ ಹಗರಣ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಹಗರಣ, ಗುತ್ತಿಗೆದಾರರ ಆತ್ಮಹತ್ಯೆ ಪ್ರಕರಣಗಳು, ಜನಪ್ರತಿನಿಧಿಗಳ ವಿರುದ್ಧದ ವಿಡಿಯೋಗಳ ಬಹಿರಂಗ ಸೇರಿದಂತೆ ಹಲವು ವೈಫಲ್ಯಗಳನ್ನು ಇಟ್ಟುಕೊಂಡು ಹೋರಾಟ ನಡೆಸಲು ಸರ್ಕಾರವೇ ನೀಡಿತ್ತು. ಇವುಗಳ ವಿರುದ್ಧ ಪ್ರತಿಪಕ್ಷ ಹೋರಾಟ ನಡೆಸಿದರೂ ಪರಿಣಾಮಕಾರಿಯಾಗಿ ಪ್ರತಿಭಟಿಸಲು ಸಾಧ್ಯವಾಗಲಿಲ್ಲ. ಇದು ಬಿಜೆಪಿ ಹೈಕಮಾಂಡ್ಗೆ ತೀವ್ರ ಅಸಮಾಧಾನ ಮೂಡಿಸಿತು.
ರಾಜ್ಯ ಕಾಂಗ್ರೆಸ್ ಸರ್ಕಾರವೇ ಹೋರಾಟ ನಡೆಸಲು ವಿಷಯಗಳನ್ನು ಒದಗಿಸುತ್ತಿದ್ದರೂ ರಾಜ್ಯ ಬಿಜೆಪಿ ಸದ್ಬಳಕೆ ಮಾಡಿಕೊಳ್ಳದಿರುವುದಕ್ಕೆ ಬಿಜೆಪಿ ಹೈಕಮಾಂಡ್ನಲ್ಲಿ ಬೇಸರ ಮೂಡಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯದಲ್ಲಿನ ಸಂಭವಿಸುತ್ತಿದ್ದ ಆಗು-ಹೋಗುಗಳನ್ನು ಗಮನಿಸುತ್ತಿದ್ದರು. ರಾಜ್ಯ ಬಿಜೆಪಿಯಲ್ಲಿಯೇ ಸಮನ್ವಯದ ಕೊರತೆ ಗಮನಿಸಿ ಆಗಾಗ್ಗೆ ಒಟ್ಟಿಗೆ ಹೋರಾಟ ನಡೆಸುವ ಸೂಚನೆಗಳನ್ನು ನೀಡುತ್ತಿದ್ದರು. ಆದರೂ ರಾಜ್ಯ ಬಿಜೆಪಿಯಲ್ಲಿ ಸಮನ್ವಯ ಸಮಸ್ಯೆ ಹಾಗೆಯೇ ಮುಂದುವರಿದಿದೆ. ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವಲ್ಲಿ ಬಿಜೆಪಿ ವಿಫಲವಾಗುತ್ತಿರುವುದಕ್ಕೆ ಬಿಜೆಪಿ ಹೈಕಮಾಂಡ್ ತರಾಟೆಗೆ ತೆಗೆದುಕೊಂಡಿರುವ ಘಟನೆಗಳೂ ನಡೆದಿವೆ ಎಂದು ಬಿಜೆಪಿ ಮೂಲಗಳು ಹೇಳಿವೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೂ ಸೂಚನೆ?
ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್ ಮತ್ತು ಕರ್ನಾಟಕದವರೇ ಆದ ಕೇಂದ್ರ ಸಚಿವರೊಬ್ಬರ ಮೂಲಕವೂ ಸೂಕ್ಷ್ಮವಾಗಿ ಸಂದೇಶಗಳನ್ನು ಹೈಕಮಾಂಡ್ ಕಳುಹಿಸಿವೆ. ಕಾಂಗ್ರೆಸ್ ಸರ್ಕಾರದಲ್ಲಿ ಒಳಬೇಗುದಿ ಹೆಚ್ಚಾಗಿರುವುದನ್ನು ಲಾಭ ಪಡೆದುಕೊಳ್ಳುವಂತೆಯೂ ಹೇಳಿದರೂ ರಾಜ್ಯ ನಾಯಕರು ಕಿವಿಗೊಡಲಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೂ ಸಹ ಹಲವು ಬಾರಿ ಹೈಕಮಾಂಡ್ ಸೂಚನೆ ನೀಡಿ ಸರ್ಕಾರ ವಿರುದ್ಧ ಹೋರಾಟವನ್ನು ಪ್ರಬಲವಾಗಿ ನಡೆಸಬೇಕು ಎಂದು ನಿರ್ದೇಶನ ನೀಡಿದೆ. ಆದರೆ, ರಾಜ್ಯ ಬಿಜೆಪಿಯಲ್ಲಿ ಸಹಕಾರದ ಕೊರತೆಯಿಂದಾಗಿ ಪರಿಣಾಮಕಾರಿ ಹೋರಾಟ ನಡೆಸಲಾಗುವುದಿರುವುದನ್ನು ಬಿ.ವೈ.ವಿಜಯೇಂದ್ರ ಹೈಕಮಾಂಡ್ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ.
ಸರ್ಕಾರದ ಕೆಲವು ಸಚಿವರ ಜತೆ ಬಿಜೆಪಿಯ ರಾಜ್ಯ ಮುಖಂಡರು ಒಳಒಪ್ಪಂದ ಮಾಡಿಕೊಂಡಿರುವ ಕಾರಣ ಪ್ರಬಲ ಹೋರಾಟ ಸಾಧ್ಯವಾಗುತ್ತಿಲ್ಲ ಎಂಬುದನ್ನು ಹೈಕಮಾಂಡ್ ಮನಗಂಡಿದೆ. ಜಾತಿ, ಭವಿಷ್ಯದಲ್ಲಿನ ಗೆಲುವಿನ ಕಾರಣಕ್ಕಾಗಿ ಒಳಒಪ್ಪಂದ ಮಾಡಿಕೊಳ್ಳದೆ ಸರ್ಕಾರದ ವೈಫಲ್ಯಗಳನ್ನು ಅಸ್ತ್ರವಾಗಿ ಬಳಸಿಕೊಂಡು ಹೋರಾಟ ನಡೆಸುವಂತೆ ಸೂಚನೆ ನೀಡಿದೆ. ರಾಜ್ಯ ಬಿಜೆಪಿಯಲ್ಲಿನ ಬೆಳವಣಿಗೆಗಳ ಮೇಲೆ ನಿಗಾ ಇಡಲು ಹೈಕಮಾಂಡ್ ಕೆಲವು ನಾಯಕರಿಗೆ ತಿಳಿಸಿದೆ. ಅವರು ರಾಜ್ಯದಲ್ಲಿನ ಒಳಜಗಳ ಸೇರಿದಂತೆ ಬಿಜೆಪಿಯ ನಾಯಕರ ನಡೆಯ ಬಗ್ಗೆ ಕಾಲಕಾಲಕ್ಕೆ ಮಾಹಿತಿಯನ್ನು ಒದಗಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಕಾಲ್ತುಳಿತ ಪ್ರಕರಣ: ಬಿಜೆಪಿಗೆ ಸಿಕ್ಕಿದೆ ಪ್ರಬಲ ಅಸ್ತ್ರ?
ಇದೀಗ ರಾಜ್ಯ ಸರ್ಕಾರ ವಿರುದ್ಧ ಕಾಲ್ತುಳಿತ ಪ್ರಕರಣ ಪ್ರಬಲ ಅಸ್ತ್ರವಾಗಿ ಸಿಕ್ಕಿದೆ. ಇದನ್ನು ಯಾವುದೇ ಕಾರಣಕ್ಕೂ ಕೈಬಿಡಬಾರದು. ಕಾಲ್ತುಳಿತ ದುರಂತವನ್ನು ರಾಜಕೀಯವಾಗಿ ಬಳಸಿಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕು ಎಂಬ ಸಂದೇಶವನ್ನು ಖಡಕ್ಕಾಗಿ ಸೂಚನೆ ನೀಡಿದೆ.
ಇದರ ಜೊತೆಗೆ ರಾಜ್ಯ ಬಿಜೆಪಿಗೆ ಕೆಲವೊಂದು ಸೂಚನೆ ನೀಡಲು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಹೇಳಿದೆ. ಕೇಂದ್ರದ ಸೂಚನೆ ಮೇರೆಗೆ ರಾಜ್ಯಕ್ಕೆ ದಿಢೀರ್ ಆಗಮಿಸಿದ ಕುಮಾರಸ್ವಾಮಿ, ಬಿಜೆಪಿ ಹೈಕಮಾಂಡ್ನ ಸೂಚನೆಗಳನ್ನು ರಾಜ್ಯ ನಾಯಕರಿಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆರ್ಸಿಬಿ ವಿಜಯೋತ್ಸವ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣವು ದೇಶ-ವಿದೇಶದಲ್ಲಿ ಸುದ್ದಿ ಮಾಡಿದೆ. ಅಲ್ಲದೇ, ಕಾಲ್ತುಳಿತ ಪ್ರಕರಣ ಮತ್ತು ನಂತರದಲ್ಲಿ ನಡೆದ ಬೆಳವಣಿಗೆಗಳು ಸಹ ಸರ್ಕಾರಕ್ಕೆ ಇರುಸು ಮುರುಸು ತಂದೊಡ್ಡಿದೆ. ಮುಂದಿನ ಮಳೆಗಾಲದ ಅಧಿವೇಶನದವರೆಗೆ ಪ್ರಕರಣವನ್ನು ಜೀವಂತವಾಗಿಟ್ಟುಕೊಂಡು ಹೋರಾಟ ನಡೆಸಬೇಕು. ಜೊತೆಗೆ ಅಧಿವೇಶನದಲ್ಲಿಯೂ ಹೋರಾಟ ನಡೆಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಲುಕಿಸಬೇಕು ಎಂಬ ಸಂದೇಶವನ್ನು ನೀಡಿದೆ. ಮುಂದಿನ ದಿನಗಳಲ್ಲಿ ನಡೆಯುವ ರಾಜಕೀಯ ಬೆಳವಣಿಗೆಯನ್ನಿಟ್ಟುಕೊಂಡು ಹೋರಾಟ ನಡೆಸುವಂತೆ ನಿರ್ದೇಶನ ನೀಡಿದೆ ಎಂದು ಹೇಳಲಾಗಿದೆ.
ಜೆಡಿಎಸ್ನಿಂದ ಅಂತರ ಕಾಯ್ದುಕೊಂಡ ಬಿಜೆಪಿ?
ಈ ಎಲ್ಲದರ ನಡುವೆ, ಜೆಡಿಎಸ್ನಿಂದ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದೆ. ಯಾವುದೇ ಹೋರಾಟಗಳಲ್ಲಿಯೂ ಜೆಡಿಎಸ್ನೊಂದಿಗೆ ಸೇರಿಕೊಂಡು ಪ್ರತಿಭಟನೆ ನಡೆಸುತ್ತಿಲ್ಲ. ಮೈತ್ರಿಯಾಗಿದ್ದರೂ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಹೋರಾಟ ನಡೆಸುತ್ತಿವೆ. ಇದು ಮಿತ್ರಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಸಂದೇಶವನ್ನು ರವಾನಿಸಿದಂತಾಗುತ್ತದೆ.
ಇದಕ್ಕೆ ಕಡಿವಾಣ ಹಾಕಿ ಎರಡು ಪಕ್ಷಗಳು ಒಟ್ಟಾಗಿ ಹೋರಾಟ ನಡೆಸಬೇಕಾಗಿದೆ. ಹಾಗಿದ್ದಲ್ಲಿ ಮಾತ್ರ ಕಾಂಗ್ರೆಸ್ ವಿರುದ್ಧ ಪರಿಣಾಮಕಾರಿ ಹೋರಾಟ ನಡೆಸಬಹುದು. ಇಲ್ಲದಿದ್ದರೆ ಎರಡು ಪಕ್ಷಗಳ ಒಗ್ಗಟ್ಟನ್ನು ಕಾಂಗ್ರೆಸ್ ಪ್ರಶ್ನಿಸಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಈ ಕಾರಣಕ್ಕಾಗಿ ಒಟ್ಟಾಗಿ ಹೋರಾಟ ನಡೆಸಬೇಕು ಎಂಬ ಸೂಚನೆಯನ್ನೂ ಬಿಜೆಪಿ ಹೈಕಮಾಂಡ್ ನೀಡಿದೆ. ಅದೇ ಕಾರಣಕ್ಕೆ ಕಾಲ್ತುಳಿತ ಪ್ರಕರಣದ ಸಂಬಂಧ ಎಚ್.ಡಿ. ಕುಮಾರಸ್ವಾಮಿ ಮತ್ತು ಬಿ.ವೈ. ವಿಜಯೇಂದ್ರ ಜಂಟಿ ಪತ್ರಿಕಾಗೋಷ್ಠಿ ನಡೆಸಲೂ ಸೂಚನೆ ಬಂದಿತ್ತು ಎಂದು ತಿಳಿದುಬಂದಿದೆ.
ಕಾಲ್ತುಳಿತ ಪ್ರಕರಣ ಸಂಬಂಧ ರಾಜ್ಯ ಸರ್ಕಾರದ ವಿರುದ್ಧ ಹೋರಾಟದ ಸಂಬಂಧ ಪತ್ರಿಕಾಗೋಷ್ಠಿ ನಡೆಸಲು ಬಿಜೆಪಿ ನಾಯಕರಾದ ವಿಜಯೇಂದ್ರ ಮತ್ತು ಆರ್. ಅಶೋಕ್ ಗುರುವಾರವೇ ಪ್ರಕಟಣೆ ಹೊರಡಿಸಿದ್ದರು. ಮತ್ತು ವಿಧಾನಸೌಧದ ವಿರೋಧ ಪಕ್ಷದ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ಆದರೆ, ಶುಕ್ರವಾರ ಬೆಳಿಗ್ಗೆ ದಿಢೀರನೆ ಯೋಚನೆ ಬದಲಿಸಿ, ಎಚ್.ಡಿ. ಕುಮಾರಸ್ವಾಮಿ ಜತೆಗೂಡಿ ಪತ್ರಿಕಾಗೋಷ್ಠಿ ನಡೆಸುವ ನಿರ್ಧಾರದ ಹಿಂದೆ ಹೈಕಮಾಂಡ್ ಸೂಚನೆ ಇದೆ ಎಂದು ಹೇಳಲಾಗಿದೆ.