ಬೈಕ್‌ ಟ್ಯಾಕ್ಸಿಗಳು ಆಡಂಬರವಲ್ಲ, ಅಗತ್ಯ ವ್ಯವಸ್ಥೆ: ಬೈಕ್‌ ಟ್ಯಾಕ್ಸಿ ಸಂಘಟನೆ ಹೈಕೋರ್ಟ್‌ನಲ್ಲಿ ವಾದ
x

ಬೈಕ್‌ ಟ್ಯಾಕ್ಸಿಗಳು ಆಡಂಬರವಲ್ಲ, ಅಗತ್ಯ ವ್ಯವಸ್ಥೆ: ಬೈಕ್‌ ಟ್ಯಾಕ್ಸಿ ಸಂಘಟನೆ ಹೈಕೋರ್ಟ್‌ನಲ್ಲಿ ವಾದ

ಬೈಕ್‌ ಟ್ಯಾಕ್ಸಿ ಸೇವೆ ಮುಂದುವರಿಸಲು ಅನುಮತಿಗೆ ನಿರ್ದೇಶನ ಕೋರಿ ಸಲ್ಲಿಸಿರುವ ಮೇಲ್ಮನವಿಗಳ ವಿಚಾರಣೆ ಹೈಕೋರ್ಟ್‌ ನಡೆಸಿದ್ದು, ಮುಂದಿನ ವಿಚಾರಣೆಯನ್ನು ಜುಲೈ 2ಕ್ಕೆ ಮುಂದೂಡಿದೆ.


ಬೈಕ್‌ ಟ್ಯಾಕ್ಸಿಗಳು ಆಡಂಬರವಲ್ಲ, ಬದಲಿಗೆ ಅಗತ್ಯ ವ್ಯವಸ್ಥೆಯಾಗಿದೆ ಎಂದು ಬೈಕ್‌ ಟ್ಯಾಕ್ಸಿ ಕಲ್ಯಾಣ ಸಂಸ್ಥೆಯು ಹೈಕೋರ್ಟ್‌ನಲ್ಲಿಸಮರ್ಥಿಸಿಕೊಂಡಿದೆ.

ಬೈಕ್‌ ಟ್ಯಾಕ್ಸಿ ಸೇವೆ ಮುಂದುವರಿಸಲು ಅನುಮತಿಗೆ ನಿರ್ದೇಶನ ಕೋರಿ ಓಲಾ, ಉಬರ್‌ ಮತ್ತು ರ‍್ಯಾಪಿಡೊ ಸಂಸ್ಥೆಗಳು ಸಲ್ಲಿಸಿರುವ ಮೇಲ್ಮನವಿಗಳ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ ಕಾಮೇಶ್ವರ ರಾವ್‌ ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಬೈಕ್‌ ಟ್ಯಾಕ್ಸಿ ಕಲ್ಯಾಣ ಸಂಸ್ಥೆ ಪ್ರತಿನಿಧಿಸಿದ್ದ ಹಿರಿಯ ವಕೀಲ ಶಶಾಂಕ್‌ ಗರ್ಗ್‌ ಅವರು ಇ-ಬೈಕ್‌ ಯೋಜನೆಯನ್ನು ಕೊನೆಯ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ರೂಪಿಸಲಾಗಿತ್ತು. ಬೆಂಗಳೂರಿನಲ್ಲಿ ಬೈಕ್‌ ಟ್ಯಾಕ್ಸಿ ಸೇವೆಗೆ ಅನುಮತಿಸಬಾರದು ಎಂದಿದ್ದ 2019ರ ತಜ್ಞರ ಸಮಿತಿ ವರದಿಗೆ ವಿರುದ್ಧವಾಗಿ 2021ರಲ್ಲಿ ಇ-ಬೈಕ್‌ ಟ್ಯಾಕ್ಸಿ ನಿಯಮಗಳನ್ನು ಜಾರಿಗೊಳಿಸಿತ್ತು. 2024ರಲ್ಲಿ ಈ ನಿಯಮಗಳನ್ನು ಹಿಂಪಡೆಯಲಾಗಿದ್ದು, ಇದು ರಾಜಕೀಯ ಕಾರಣಗಳಿಗಾಗಿ ಆಗಿರುವ ಬೆಳವಣಿಗೆ ಎನಿಸುತ್ತದೆ ಎಂದು ವಾದ ಮಂಡಿಸಿದರು.

ಈ ವೇಳೆ ನ್ಯಾಯಾಲಯವು ಬೈಕ್‌ ಟ್ಯಾಕ್ಸಿ ಶುಲ್ಕವನ್ನು ಸಾರಿಗೆ ಪ್ರಾಧಿಕಾರ ನಿಯಂತ್ರಿಸುತ್ತದೆಯೇ ಎಂದು ಪ್ರಶ್ನಿಸಿತು. ಇದಕ್ಕೆ ಗರ್ಗ್‌ ಅವರು “ಶುಲ್ಕ ನಿಯಂತ್ರಣಕ್ಕೆ ಸರ್ಕಾರ ಮುಂದಾದರೆ ಅದನ್ನು ಮಾಡಬಹುದು. ಬೈಕ್‌ ಟ್ಯಾಕ್ಸಿಯ ಪ್ರತಿ ಕಿಲೋ ಮೀಟರ್‌ ಸೇವೆಗೆ ಎಂಟು ರೂಪಾಯಿ ವಿಧಿಸಲಾಗುತ್ತದೆ ಎನ್ನಲಾಗಿದೆ. ಸುಮಾರು ಆರು ಲಕ್ಷ ಬೈಕ್‌ ಟ್ಯಾಕ್ಸಿಗಳು ಕಾರ್ಯನಿರ್ವಹಿಸುತ್ತಿದ್ದು, ನಿಷೇಧವು ಅವರ ಬದುಕಿಗೆ ಬರೆ ಹಾಕಲಿದೆ. ಸಂಚಾರ ದಟ್ಟಣೆ ನಿರ್ವಹಿಸಲು ಬೈಕ್‌ ಟ್ಯಾಕ್ಸಿ ಅನುಕೂಲಕರವಾಗಿದೆ. ಆಂಬುಲೆನ್ಸ್‌ ಮತ್ತು ಕಾರುಗಳು ತೆರಳಲಾಗದ ಜಾಗಕ್ಕೆ ನುಸುಳಿ ಬೈಕ್‌ ಸೇವೆ ನೀಡುತ್ತಿವೆ. ಬೈಕ್‌ ಟ್ಯಾಕ್ಸಿಯು ಅಗತ್ಯವೇ ಹೊರತು ಆಡಂಬರವಲ್ಲ ಎಂದರು.

ಅಗ್ರಿಗೇಟರ್ಸ್‌ ವೇದಿಕೆಯಲ್ಲಿ ಬೈಕ್‌ ಮಾಲೀಕರು ನೋಂದಾಯಿಸಿಕೊಂಡು ತಮ್ಮ ಬೈಕ್‌ ಟ್ಯಾಕ್ಸಿ ಸೇವೆ ಮುಂದುವರಿಸಬಹುದಾಗಿದೆ. ಇದನ್ನು ರಾಜ್ಯ ಸರ್ಕಾರ ತಡೆಯಲಾಗದು. ಬೈಕ್‌ ಟ್ಯಾಕ್ಸಿಯಿಂದ ಸಮಸ್ಯೆಯಾಗುತ್ತದೆ ಎಂದು ರಾಜ್ಯ ಸರ್ಕಾರ ದೂರಲಾಗದು. ಬೇರೆಕಡೆಯಿಂದ ಬರುವ ಜನರು ಇಲ್ಲಿ ನೆಲೆಸುವುದರಿಂದ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಇದೆ. ಜನಸಂಖ್ಯೆ ಹೆಚ್ಚಳವು ಆರ್ಥಿಕ ಬೆಳವಣಿಗೆಯ ಸೂಚಿಯಾಗಿದೆ ಎಂದು ವಾದಿಸಿದರು.

ವಾದ ಆಲಿಸಿದ ನ್ಯಾಯಾಲಯವು ವಿಚಾರಣೆಯನ್ನು ಜುಲೈ 2ಕ್ಕೆ ಮುಂದೂಡಿದೆ.

Read More
Next Story