
ಮೃತಪಟ್ಟಿರುವ ಬಾಲಕಿ ಖುಷಿ
ಬಾಲಕಿ ಖುಷಿ ಮರಣೋತ್ತರ ಪರೀಕ್ಷೆ ವರದಿ| ಅಪಘಾತವೇ ಬಾಲಕಿ ಸಾವಿಗೆ ಕಾರಣ: - ರಾಮನಗರ SP
ಬಾಲಕಿ ಸಾವಿಗೆ ರೈಲು ಅಪಘಾತವೇ ಕಾರಣ. ಆಕೆಯ ಮರಣೋತ್ತರ ಪರೀಕ್ಷೆಯಲ್ಲಿ ತಲೆಗೆ ಗಂಭೀರ ಗಾಯವಾಗಿ ಮೃತಪಟ್ಟಿರುವುದು ದೃಢಪಡಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ ತಿಳಿಸಿದ್ದಾರೆ.
ಬಿಡದಿ ಹೋಬಳಿಯ ಭದ್ರಾಪುರ ಹಕ್ಕಿಪಿಕ್ಕಿ ಕಾಲೊನಿಯಲ್ಲಿ ಮೇ 12 ರಂದು ರೈಲು ಹಳಿ ಬಳಿ ಶವವಾಗಿ ಪತ್ತೆಯಾದ 15 ವರ್ಷದ ಬಾಲಕಿ ರೈಲು ಅಪಘಾತದಿಂದ ಮೃತಪಟ್ಟಿದ್ದು, ಇದು ಕೊಲೆಯಲ್ಲ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಈ ಮೂಲಕ ಬಾಲಕಿಯನ್ನು ಅತ್ಯಾಚಾರಗೈದು ಕೊಲೆ ಮಾಡಲಾಗಿದೆ ಎಂಬ ಆರೋಪಗಳಿಗೆ ತೆರೆ ಬಿದ್ದಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ, ಬಾಲಕಿ ಸಾವಿಗೆ ರೈಲು ಅಪಘಾತವೇ ಕಾರಣ. ಆಕೆಯ ಮರಣೋತ್ತರ ಪರೀಕ್ಷೆಯಲ್ಲಿ ತಲೆಗೆ ಗಂಭೀರ ಗಾಯವಾಗಿ ಮೃತಪಟ್ಟಿರುವುದು ದೃಢಪಡಿಸಿದೆ. ಇದೇ ವೇಳೆ ಎಫ್ಎಸ್ಎಲ್ ವರದಿಯಲ್ಲೂ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ ಎಂಬ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಎಂದು ಅವರು ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯದಿಂದ ದುರಂತದ ದೃಢೀಕರಣ
ಮೇ 12 ರಂದು ಸಂಜೆ 6 ಗಂಟೆ 7 ನಿಮಿಷಕ್ಕೆ ಬಾಲಕಿ ಹಳಿ ಬಳಿ ಹೋಗಿದ್ದಾರೆ. ಅದೇ ಸಮಯದಲ್ಲಿ ಅದೇ ಮಾರ್ಗವಾಗಿ ಬಂದ ರೈಲು ಬಾಲಕಿಗೆ ಡಿಕ್ಕಿ ಹೊಡೆದಿರುವ ದೃಶ್ಯಗಳು ಸಿಸಿಟಿವಿ ಕೆಮರಾದಲ್ಲಿ ಸೆರೆಯಾಗಿವೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ದೃಶ್ಯಗಳು ಘಟನೆಗೆ ಸಂಬಂಧಪಟ್ಟದ್ದೇ ಎಂದು ಪೊಲೀಸರು ದೃಢಪಡಿಸಿದ್ದಾರೆ.
ಬಾಲಕಿಗೆ ಡಿಕ್ಕಿ ಹೊಡೆದ ರೈಲನ್ನು ಸಹ ಪರಿಶೀಲಿಸಿ, ಡಿಕ್ಕಿ ಹೊಡೆದ ಭಾಗದ ಮಾದರಿ ಹಾಗೂ ಬಾಲಕಿಯ ದೇಹದ ಮಾದರಿಯನ್ನು ಸಂಗ್ರಹಿಸಿ ಎಫ್ಎಸ್ಎಲ್ಗೆ ಕಳಿಸಲಾಗಿತ್ತು. ವರದಿಯಲ್ಲಿ ಎರಡಕ್ಕೂ ಹೋಲಿಕೆಯಾಗಿದೆ. ಕೊಲೆ ಸಾಧ್ಯತೆ ಆಯಾಮದಲ್ಲೂ ತನಿಖೆ ನಡೆಸಲಾಗಿದೆ. ಬಾಲಕಿ ಶವವಿದ್ದ ಸ್ಥಳದ ಮಣ್ಣನ್ನು ಸಹ ಪರಿಶೀಲನೆಗೆ ಒಳಪಡಿಸಲಾಗಿದ್ದು, ದೇಹದಲ್ಲಿ ಘಟನಾ ಸ್ಥಳದ್ದು ಬಿಟ್ಟರೆ ಬೇರೆ ಕಡೆಯ ಮಣ್ಣು ಆಕೆಯ ದೇಹಕ್ಕೆ ಮೆತ್ತಿಕೊಂಡಿಲ್ಲ. ಇದರಿಂದಾಗಿ ಬೇರೆ ಕಡೆ ಕೊಲೆ ಮಾಡಿ ತಂದು ಇಲ್ಲಿಗೆ ಎಸೆದಿದ್ದಾರೆ ಎಂಬ ಆರೋಪವೂ ಸುಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸಮಾಜಿಕ ಮಾಧ್ಯಮಗಳ ವದಂತಿಗಳಿಗೆ ತೆರೆ
ಪೊಲೀಸರು ಘಟನೆಯಿಂದ ಎರಡು ತಾಸುಗಳ ಮುಂಚೆ ಮತ್ತು ನಂತರದ ಸಮಯದ ಸಿಸಿಟಿವಿ ದೃಶ್ಯಾವಳಿಯನ್ನೂ ಪರಿಶೀಲಿಸಿದ್ದು, ಬಾಲಕಿ ಶವದ ಬಳಿ ಯಾವುದೇ ಮನುಷ್ಯರ ಚಲನವಲನ ಪತ್ತೆಯಾಗಿಲ್ಲ. ಎಲ್ಲಾ ಆಯಾಮಗಳಿಂದ ನಡೆದ ತನಿಖೆಯಲ್ಲಿ ಬಾಲಕಿ ಸಾವು ರೈಲು ಅಪಘಾತದಿಂದ ಸಂಭವಿಸಿದೆ ಎಂಬುದು ಖಚಿತವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳು ಹಾಗೂ ಜಾಲತಾಣಗಳಲ್ಲಿನ ಆರೋಪ ಮತ್ತು ವದಂತಿಗಳು ಸುಳ್ಳೆಂದು ಸಾಬೀತಾಗಿದೆ' ಎಂದರು.
ಏನಿದು ಘಟನೆ
ಹಕ್ಕಿಪಿಕ್ಕಿ ಸಮುದಾಯದ 14 ವರ್ಷದ ಬಾಲಕಿ ಮೇ 11ರಂದು ರಾತ್ರಿ ನಾಪತ್ತೆಯಾಗಿದ್ದಳು. ಬೆಳಿಗ್ಗೆ 8 ಗಂಟೆಗೆ ರೈಲು ಹಳಿ ಪಕ್ಕ ಬಾಲಕಿಯ ಶವ ಅರೆ ನಗ್ನಾವಸ್ಥೆಯಲ್ಲಿ ಪತ್ತೆಯಾಗಿತ್ತು. ಮಾತು ಬಾರದ ಹಾಗೂ ಕಿವಿಯೂ ಕೇಳದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ. ಆರೋಪಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳು ಅಗ್ರಹಿಸಿದ್ದವು. ಖುಷಿ ಸಾವಿಗೆ ನ್ಯಾಯ ಒದಗಿಸಿ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಯಾನ ಆರಂಭಿಸಲಾಗಿತ್ತು. ತಮ್ಮ ಮಗಳ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಲಾಗಿದೆ ಎಂದು ಪೋಷಕರು ಆರೋಪಿಸಿದ್ದರು. ಈ ಸಂಬಂಧ ಮೃತ ಬಾಲಕಿಯ ದೇಹದ 32 ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಇದೀಗ ವರದಿ ಬಂದಿದ್ದು, ಬಾಲಕಿ ರೈಲು ಅಪಘಾತದಿಂದ ಮೃತಪಟ್ಟಿರುವುದು ದೃಢವಾಗಿದೆ.