
ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವಿಕುಮಾರ್
ಭೋವಿ ಅಭಿವೃದ್ಧಿ ನಿಗಮದಲ್ಲಿ ಲಂಚ ಆರೋಪ: ಅಧ್ಯಕ್ಷ ಸ್ಥಾನಕ್ಕೆ ರವಿಕುಮಾರ್ ರಾಜೀನಾಮೆ
ಭೋವಿ ಅಭಿವೃದ್ಧಿ ನಿಗಮದ ವತಿಯಿಂದ ನೀಡಲಾಗುವ ಸೌಲಭ್ಯಗಳನ್ನು ಫಲಾನುಭವಿಯೊಬ್ಬರಿಗೆ ಬಿಡುಗಡೆ ಮಾಡಲು, ಅಧ್ಯಕ್ಷ ರವಿಕುಮಾರ್ ಅವರು ಶೇ. 60 ರಷ್ಟು ಕಮಿಷನ್ ನೀಡಬೇಕೆಂದು ಬೇಡಿಕೆಯಿಡುತ್ತಿರುವ ದೃಶ್ಯಗಳು ಹರಿದಾಡಿದ್ದವು.
ರಾಜ್ಯ ಸರ್ಕಾರದ ಭೋವಿ ಅಭಿವೃದ್ಧಿ ನಿಗಮವು ಭ್ರಷ್ಟಾಚಾರದ ಆರೋಪದಿಂದಾಗಿ ತೀವ್ರ ವಿವಾದಕ್ಕೆ ಸಿಲುಕಿದ್ದು, ನಿಗಮದ ಅಧ್ಯಕ್ಷರಾಗಿದ್ದ ರವಿಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ನಿಗಮದ ಯೋಜನೆಗಳಡಿ ಫಲಾನುಭವಿಗಳಿಗೆ ಸೌಲಭ್ಯ ಒದಗಿಸಲು ಶೇ.60 ನಷ್ಟು ಭಾರೀ ಮೊತ್ತದ ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಮಾಹಿತಿ ಪ್ರಕಾರ, ಭೋವಿ ಅಭಿವೃದ್ಧಿ ನಿಗಮದ ವತಿಯಿಂದ ನೀಡಲಾಗುವ ಸೌಲಭ್ಯಗಳನ್ನು ಫಲಾನುಭವಿಯೊಬ್ಬರಿಗೆ ಬಿಡುಗಡೆ ಮಾಡಲು, ಅಧ್ಯಕ್ಷ ರವಿಕುಮಾರ್ ಅವರು ಶೇ. 60 ರಷ್ಟು ಕಮಿಷನ್ ನೀಡಬೇಕೆಂದು ಬೇಡಿಕೆಯಿಡುತ್ತಿರುವ ದೃಶ್ಯಗಳು ಹರಿದಾಡಿದ್ದವು. ಈ ವಿಡಿಯೋ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿ, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ವಿವಾದಾತ್ಮಕ ವಿಡಿಯೋ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ಬರುತ್ತಿದ್ದಂತೆ, ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ತಿಳಿದುಬಂದಿದೆ. ತಮ್ಮ ಸರ್ಕಾರದ ಪಾರದರ್ಶಕ ಆಡಳಿತಕ್ಕೆ ಮಸಿ ಬಳಿಯುವ ಇಂತಹ ಘಟನೆಗಳನ್ನು ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಮುಖ್ಯಮಂತ್ರಿಗಳು, ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ರವಿಕುಮಾರ್ ಅವರಿಗೆ ಸೂಚನೆ ನೀಡಿದ್ದರು.