ಬೆಂಗಳೂರಿನ ಜನರ ತಲಾದಾಯ ಕುಸಿತ: ಆರ್ಥಿಕ ಎಂಜಿನ್‌ಗೆ ಹಿನ್ನಡೆ?
x

ಬೆಂಗಳೂರಿನ ಜನರ ತಲಾದಾಯ ಕುಸಿತ: ಆರ್ಥಿಕ ಎಂಜಿನ್‌ಗೆ ಹಿನ್ನಡೆ?

ಆರ್ಥಿಕ ಸಮೀಕ್ಷೆಯ ಪ್ರಕಾರ, 2022-23ನೇ ಸಾಲಿನಲ್ಲಿ ಬೆಂಗಳೂರು ನಗರ ಜಿಲ್ಲೆಯ ತಲಾದಾಯವು 7,60,362 ರೂಪಾಯಿರಷ್ಟಿತ್ತು. ಆದರೆ, 2023-24ನೇ ಸಾಲಿಗೆ ಇದು 7,38,910 ರೂಪಾಯಿಗೆ ಇಳಿದಿದೆ.


ಕರ್ನಾಟಕದ ಆರ್ಥಿಕತೆಯ ಪ್ರಗತಿಯ ಸಂಕೇತ, ರಾಜ್ಯದ ಅಭಿವೃದ್ಧಿಯ ನಾಡಿ ಎಂದೇ ಪರಿಗಣಿಸಲಾಗಿರುವ ಬೆಂಗಳೂರು ನಗರದ ಆರ್ಥಿಕ ವೇಗಕ್ಕೆ ಹಿನ್ನಡೆಯುಂಟಾಗಿದೆ. ಇತ್ತೀಚಿನ ಕರ್ನಾಟಕ ಆರ್ಥಿಕ ಸಮೀಕ್ಷೆ 2023-24ರ ಅಂಕಿ-ಅಂಶಗಳು ಆತಂಕಕಾರಿ ಚಿತ್ರಣವನ್ನು ಮುಂದಿಟ್ಟಿದ್ದು, ರಾಜ್ಯದ ಅತ್ಯಂತ ಶ್ರೀಮಂತ ಜಿಲ್ಲೆಯಾದ ಬೆಂಗಳೂರು ನಗರದ ತಲಾದಾಯದಲ್ಲಿ ಕುಸಿತ ಕಂಡುಬಂದಿದೆ. ಇದು ಸರ್ಕಾರದ ಆರ್ಥಿಕ ನೀತಿಗಳ ವೈಫಲ್ಯ ಎಂದು ವಿರೋಧ ಪಕ್ಷಗಳು ತೀವ್ರ ವಾಗ್ದಾಳಿ ನಡೆಸಿವೆ.

ಆರ್ಥಿಕ ಸಮೀಕ್ಷೆಯ ಪ್ರಕಾರ, 2022-23ನೇ ಸಾಲಿನಲ್ಲಿ ಬೆಂಗಳೂರು ನಗರ ಜಿಲ್ಲೆಯ ತಲಾದಾಯವು 7,60,362 ರೂಪಾಯಿರಷ್ಟಿತ್ತು. ಆದರೆ, 2023-24ನೇ ಸಾಲಿಗೆ ಇದು 7,38,910 ರೂಪಾಯಿಗೆ ಇಳಿದಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಕುಸಿತವು ರಾಜ್ಯದ ಆರ್ಥಿಕತೆಯ ಆರೋಗ್ಯದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ರಾಜ್ಯದ ಆರ್ಥಿಕ ಬೆಳವಣಿಗೆಯ "ಕೇಂದ್ರೀಯ ಶಕ್ತಿ" ಎಂದೇ ಬಿಂಬಿತವಾಗಿರುವ ಬೆಂಗಳೂರಿನಲ್ಲೇ ಈ ಸ್ಥಿತಿ ನಿರ್ಮಾಣವಾಗಿರುವುದು, ಉಳಿದ ಜಿಲ್ಲೆಗಳ ಪರಿಸ್ಥಿತಿಯ ಬಗ್ಗೆ ಆತಂಕ ಮೂಡಿಸಿದೆ.

ತಲಾದಾಯ ಕುಸಿತದ ಅರ್ಥವೇನು?

ತಲಾದಾಯ (Per Capita Income) ಎನ್ನುವುದು ಕೇವಲ ಅಂಕಿ-ಅಂಶವಲ್ಲ, ಅದು ಒಂದು ಪ್ರದೇಶದ ಜನರ ಸರಾಸರಿ ಆದಾಯ, ಜೀವನಮಟ್ಟ, ಮತ್ತು ಆರ್ಥಿಕ ಶಕ್ತಿಯ ಪ್ರತೀಕವಾಗಿದೆ. ಬೆಂಗಳೂರಿನಂತಹ ಮಹಾನಗರದಲ್ಲಿ ತಲಾದಾಯ ಕುಸಿತವು ಹಲವಾರು ಗಂಭೀರ ಸಮಸ್ಯೆಗಳ ಸೂಚಕವಾಗಿದೆ ಎಂದು ತಜ್ಞರು ವಿಶ್ಲೇಷಿಸುತ್ತಾರೆ. ಇದು ಉದ್ಯೋಗ ಸೃಷ್ಟಿಯ ಕುಂಠಿತ, ಹೊಸ ಹೂಡಿಕೆಗಳ ಕೊರತೆ, ಅಸ್ಪಷ್ಟ ಕೈಗಾರಿಕಾ ನೀತಿಗಳು ಮತ್ತು ಆಡಳಿತಾತ್ಮಕ ನಿರ್ಲಕ್ಷ್ಯದ ಪರಿಣಾಮವಾಗಿರಬಹುದು ಎಂದು ಹೇಳಲಾಗುತ್ತಿದೆ.

ವಿಪಕ್ಷಗಳ ಟೀಕೆ ಮತ್ತು ಆಗ್ರಹ

ಈ ಕುಸಿತವನ್ನು ಸರ್ಕಾರದ ಆಡಳಿತ ವೈಫಲ್ಯ ಎಂದು ಬಣ್ಣಿಸಿರುವ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಯೋಜನೆಗಳ ರಾಜಕೀಯ ಗುಂಗಿನಲ್ಲಿ ರಾಜ್ಯದ ಆರ್ಥಿಕ ಅಭಿವೃದ್ಧಿಯನ್ನು ಕಡೆಗಣಿಸಿದೆ ಎಂದು ಆರೋಪಿಸಿದ್ದಾರೆ.

"ನೀತಿ ಆಯೋಗದಂತಹ ಮಹತ್ವದ ಸಭೆಗಳಿಗೆ ಮುಖ್ಯಮಂತ್ರಿಗಳೇ ಗೈರುಹಾಜರಾಗುವುದು, ರಾಜ್ಯದ ಅಭಿವೃದ್ಧಿಯ ಬಗ್ಗೆ ಅವರಿಗಿರುವ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಇದರಿಂದ ಕರ್ನಾಟಕವು ತನ್ನ ಹಕ್ಕಿನ ಯೋಜನೆಗಳು ಮತ್ತು ಕೇಂದ್ರದ ನಿಧಿಗಳಿಂದ ವಂಚಿತವಾಗುತ್ತಿದೆ. ಇದು ಕೇವಲ ಆಡಳಿತದ ವಿಫಲತೆಯಲ್ಲ, ರಾಜ್ಯದ ಹಿತದ ವಿರುದ್ಧವಾದ ರಾಜಕೀಯ ಅಲಕ್ಷ್ಯ," ಎಂದು ಅವರು ಟೀಕಿಸಿದ್ದಾರೆ.

ತಕ್ಷಣವೇ ದ್ವೇಷದ ರಾಜಕಾರಣವನ್ನು ಬದಿಗಿಟ್ಟು, ಜನರ ಆದಾಯ ಹೆಚ್ಚಿಸುವ ಮತ್ತು ಉದ್ಯೋಗ ಸೃಷ್ಟಿಸುವ ಕಡೆಗೆ ಗಮನ ಹರಿಸಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ. ಜಿಲ್ಲಾ ಯೋಜನಾ ಸಮಿತಿಗಳಿಗೆ ಹೆಚ್ಚಿನ ಅಧಿಕಾರ ನೀಡುವುದು, ಕೈಗಾರಿಕಾ ಹೂಡಿಕೆಗಳನ್ನು ಆಕರ್ಷಿಸಲು ಸ್ಪಷ್ಟ ನೀತಿ ರೂಪಿಸುವುದು ಮತ್ತು ಕೇಂದ್ರ-ರಾಜ್ಯ ಸಹಯೋಗದ ವೇದಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಅತ್ಯಗತ್ಯ ಎಂದು ಅವರು ಒತ್ತಾಯಿಸಿದ್ದಾರೆ.

"ರಾಜ್ಯದ ಅತ್ಯಂತ ಅಭಿವೃದ್ಧಿ ಹೊಂದಿದ ಜಿಲ್ಲೆಯ ತಲಾದಾಯವೇ ಕುಸಿದರೆ, ಉಳಿದ ಜಿಲ್ಲೆಗಳ ಜನರ ಬದುಕು ಹೇಗೆ ಸುಧಾರಿಸಲು ಸಾಧ್ಯ? ಈ ಪ್ರಶ್ನೆಗೆ ರಾಜ್ಯದ ಆರ್ಥಿಕ ದಿಕ್ಕು ತಪ್ಪಿಸಿದ ಕಾಂಗ್ರೆಸ್ ಸರ್ಕಾರವೇ ಉತ್ತರ ನೀಡಬೇಕು," ಛಲವಾದಿ ಅವರು ಸವಾಲು ಹಾಕಿದ್ದಾರೆ.

Read More
Next Story