
ಕೊಲೆಯಾದ ರೋಶನಿ
ಗೋವಾದಲ್ಲಿ ಕತ್ತು ಸೀಳಿ ಪ್ರೇಯಸಿಯ ಹತ್ಯೆ; ಹುಬ್ಬಳ್ಳಿಯಲ್ಲಿ ಪ್ರಿಯಕರನ ಬಂಧನ
ಆರೋಪಿ ಪ್ರಿಯಕರ ಸಂಜಯ್ ಕೆವಿನ್ ಬೆಂಗಳೂರು ಮೂಲದವನಾಗಿದ್ದು, ಪ್ರೇಯಸಿಯನ್ನು ಹತ್ಯೆ ಮಾಡಿದ ಬಳಿಕ ಹುಬ್ಬಳ್ಳಿಯಲ್ಲಿ ತಲೆ ಮರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಗೋವಾದಲ್ಲಿ ಪ್ರಿಯತಮೆಯ ಕತ್ತು ಸೀಳಿ ಹತ್ಯೆ ಮಾಡಿದ್ದ ಆರೋಪಿ ಪ್ರಿಯಕರನನ್ನು ಪೊಲೀಸರು ಹುಬ್ಬಳ್ಳಿಯಲ್ಲಿ ಬಂಧಿಸಿದ್ದಾರೆ. ಬೆಂಗಳೂರಿನ ಯುವತಿ ರೋಷನಿಯನ್ನು ಆಕೆಯ ಪ್ರಿಯಕರ ಸಂಜಯ್ ಕೆವಿನ್ ಗೋವಾಗೆ ಕರೆದುಕೊಂಡು ಹೋಗಿ ಈ ಕೃತ್ಯ ಎಸಗಿದ್ದ. ಪ್ರೇಯಸಿಯನ್ನು ಹತ್ಯೆ ಮಾಡಿದ ಬಳಿಕ ಹುಬ್ಬಳ್ಳಿಯಲ್ಲಿ ತಲೆ ಮರೆಸಿಕೊಂಡಿದ್ದ.
ಕೊಲೆ ಪ್ರಕರಣದ ಹಿನ್ನೆಲೆ
ಬೆಂಗಳೂರಿನ ಲಿಂಗರಾಜಪುರ ಬಡಾವಣೆಯ ಡಾನ್ ಬಾಸ್ಕೋ ಶಾಲೆ ಬಳಿ ವಾಸವಾಗಿದ್ದ ರೋಷನಿ (22)ಯನ್ನು ಬೆಂಗಳೂರು ಮೂಲಕ ಸಂಜಯ್ ಕೆವಿನ್ ಎಂಬಾತ ಪ್ರೀತಿಸುತ್ತಿದ್ದ. ಎರಡು ಕುಟುಂಬಗಳ ಮಧ್ಯೆ ಮದುವೆ ಮಾತುಕತೆಯ ನಡೆದಿತ್ತು. ಇತ್ತೀಚೆಗೆ ರೋಷನಿ ಹಾಗೂ ಸಂಜಯ್ ಗೋವಾ ಪ್ರವಾಸಕ್ಕೆ ತೆರಳಿದ್ದಳು. ಈ ವೇಳೆ ಇಬ್ಬರ ಮಧ್ಯೆ ಕ್ಷುಲ್ಲಕ ವಿಚಾರಕ್ಕೆ ಜಗಳ ನಡೆದಿದ್ದು, ರೋಷನಿಯನ್ನು ಪ್ರಿಯಕರ ಸಂಜಯ್ ಕತ್ತು ಸೀಳಿ ಬರ್ಬರವಾಗಿ ಕೊಲೆ ಮಾಡಿದ್ದ.
ಅರಣ್ಯದಲ್ಲಿ ಮೃತದೇಹ ಪತ್ತೆ
ಜೂನ್ 16ರಂದು ಗೋವಾ ರಾಜ್ಯದ ಪೋಂಡಾ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರತಾಪನಗರ ಬಳಿ ಅರಣ್ಯ ಪ್ರದೇಶದಲ್ಲಿ ಯುವತಿಯ ಶವ ಪತ್ತೆಯಾಗಿತ್ತು. ತನಿಖೆ ಆರಂಭಿಸಿದ ಪೋಂಡಾ ಪೊಲೀಸರು ಮೃತಳನ್ನು ಬೆಂಗಳೂರಿನ ರೋಷನಿ ಎಂದು ಪತ್ತೆ ಹಚ್ಚಿದ್ದರು.
ತನಿಖೆ ಆರಂಭಿಸಿದ ಪೊಲೀಸರಿಗೆ ಕೊಲೆಗೂ ಮುನ್ನ ರೋಷನಿ ತನ್ನ ಪ್ರಿಯಕರ ಸಂಜಯ್ ಜೊತೆ ಗೋವಾಕ್ಕೆ ಬಂದಿದ್ದಳು ಎಂಬ ಮಾಹಿತಿ ಸಿಕ್ಕಿತು. ಗೋವಾ ಪೊಲೀಸರು ಈ ಬಗ್ಗೆ ಕರ್ನಾಟಕ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಆರೋಪಿ ಬಲೆಗೆ ಬಿದ್ದಿದ್ದು ಹೇಗೆ?
ಜೂ.16ರಂದು ಸಂಜಯ್ ಕೆವಿನ್ ಹುಬ್ಬಳ್ಳಿ ನಗರದ ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ. ಅನುಮಾನಗೊಂಡ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸಂಜಯ್ ಕೆವಿನ್ ತನ್ನ ವಿಳಾಸ ಹೇಳಿದ್ದ.
ಇನ್ನೊಂದೆಡೆ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದ ಪೋಂಡಾ ಪೊಲೀಸರಿಗೆ ಆರೋಪಿ ಸಂಜಯ್ ಕೆವಿನ್ನ ಮೊಬೈಲ್ ಟವರ್ ಲೊಕೇಶನ್ ಹುಬ್ಬಳ್ಳಿಯಲ್ಲಿ ತೋರಿಸುತ್ತಿತ್ತು. ಹೀಗಾಗಿ, ಆತನ ಬಗ್ಗೆ ಹುಬ್ಬಳ್ಳಿ ಪೊಲೀಸರಿಗೆ ಪೋಂಡಾ ಪೊಲೀಸರು ಮಾಹಿತಿ ನೀಡಿದ್ದಾರೆ. ಬಳಿಕ ಗೋವಾದಿಂದ ಆಗಮಿಸಿದ ಪೋಂಡಾ ಪೊಲೀಸರು ಆತನನ್ನು ಬಂಧಿಸಿ ಗೋವಾಕ್ಕೆ ಕರೆದೊಯ್ದಿದ್ದಾರೆ.
ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಮಾತನಾಡಿ, “ಸಂಜಯ್ ಕೆವಿನ್ನನ್ನು ಬೆಂಡಿಗೇರಿ ಪೊಲೀಸರು ವಶಕ್ಕೆ ಪಡಿದಿದ್ದರು. ಆತ ಕೊಲೆ ಮಾಡಿರುವ ಬಗ್ಗೆ ಗೋವಾ ಪೊಲೀಸರು ಮಾಹಿತಿ ನೀಡಿದ್ದರು. ಆರೋಪಿಯನ್ನು ಬಂಧಿಸಿ ಗೋವಾ ಪೊಲೀಸರಿಗೆ ಒಪ್ಪಿಸಲಾಗಿದೆ" ಎಂದು ಹೇಳಿದರು.