ಬೆಂಗಳೂರಿನಲ್ಲಿ ಅಮಾನವೀಯ ಘಟನೆ : ಸೀರೆ ಕದ್ದಳೆಂಬ ಆರೋಪ, ಮಗನ ಮುಂದೆಯೇ ಮಹಿಳೆಗೆ ಬೂಟುಗಾಲಿನಿಂದ ಒದೆ!
x

ಬೆಂಗಳೂರಿನಲ್ಲಿ ಅಮಾನವೀಯ ಘಟನೆ : ಸೀರೆ ಕದ್ದಳೆಂಬ ಆರೋಪ, ಮಗನ ಮುಂದೆಯೇ ಮಹಿಳೆಗೆ ಬೂಟುಗಾಲಿನಿಂದ ಒದೆ!

ಅಂಗಡಿಯ ಮಾಲೀಕ ಉಮೇದ್ ರಾಮ್ ಮತ್ತು ಆತನ ಸಹಚರ ಮಹೇಂದ್ರ ಶರ್ಮಾ ಮಹಿಳೆಯನ್ನು ಅಂಗಡಿಯಿಂದ ಹೊರಗೆಳೆದು ತಂದು, ನಡುರಸ್ತೆಯಲ್ಲೇ ಆಕೆಯ ಮಗನ ಎದುರು ಬೂಟುಗಾಲಿನಿಂದ ಒದ್ದು ಕ್ರೌರ್ಯ ಮೆರೆದಿದ್ದಾರೆ.


ರಾಜಧಾನಿ ಬೆಂಗಳೂರಿನ ಹೃದಯ ಭಾಗವಾದ ಅವೆನ್ಯೂ ರಸ್ತೆಯಲ್ಲಿ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಆಘಾತಕಾರಿ ಘಟನೆಯೊಂದು ನಡೆದಿದೆ. ಸೀರೆ ಕಳವು ಮಾಡಿದ್ದಾಳೆಂಬ ಕ್ಷುಲ್ಲಕ ಆರೋಪದ ಮೇಲೆ, ಮಹಿಳೆಯೊಬ್ಬರನ್ನು ಆಕೆಯ ಮಗನ ಕಣ್ಣೆದುರೇ ನಡುರಸ್ತೆಯಲ್ಲಿ ಬೂಟುಗಾಲಿನಿಂದ ಒದ್ದು, ಅಮಾನುಷವಾಗಿ ಹಲ್ಲೆ ನಡೆಸಲಾಗಿದೆ. ಈ ಪೈಶಾಚಿಕ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಏನಿದು ಘಟನೆ?

ಅವೆನ್ಯೂ ರಸ್ತೆಯಲ್ಲಿರುವ ಬಟ್ಟೆ ಅಂಗಡಿಯೊಂದಕ್ಕೆ ಮಹಿಳೆಯೊಬ್ಬರು ತಮ್ಮ ಮಗನೊಂದಿಗೆ ಖರೀದಿಗೆ ತೆರಳಿದ್ದರು. ಈ ವೇಳೆ, ಅವರು ಸೀರೆ ಕಳವು ಮಾಡಿದ್ದಾರೆ ಎಂದು ಅಂಗಡಿಯ ಮಾಲೀಕ ಉಮೇದ್ ರಾಮ್ ಮತ್ತು ಆತನ ಸಹಚರ ಮಹೇಂದ್ರ ಶರ್ಮಾ ಆರೋಪಿಸಿದ್ದಾರೆ. ಬಳಿಕ, ಮಹಿಳೆಯನ್ನು ಅಂಗಡಿಯಿಂದ ಹೊರಗೆಳೆದು ತಂದು, ನಡುರಸ್ತೆಯಲ್ಲೇ ಆಕೆಯ ಮಗನ ಎದುರು ಮನಬಂದಂತೆ ನಿಂದಿಸಿ, ಬೂಟುಗಾಲಿನಿಂದ ಒದ್ದು ಕ್ರೌರ್ಯ ಮೆರೆದಿದ್ದಾರೆ.

ವೈರಲ್ ವಿಡಿಯೋದಿಂದ ಬಯಲಾದ ಕ್ರೌರ್ಯ

ಈ ಅಮಾನುಷ ಘಟನೆಯನ್ನು ಅಲ್ಲೇ ಇದ್ದ ಯಾರೋ ಒಬ್ಬರು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ. ಮೊದಲು ಈ ವಿಡಿಯೋ ಅವೆನ್ಯೂ ರಸ್ತೆಯ ವ್ಯಾಪಾರಿಗಳ ವಾಟ್ಸಾಪ್ ಗ್ರೂಪ್‌ನಲ್ಲಿ ಹಂಚಿಕೆಯಾಗಿತ್ತು. ನಂತರ, ಇದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ಆರೋಪಿಗಳ ಪೈಶಾಚಿಕ ಕೃತ್ಯಕ್ಕೆ ಸಾರ್ವಜನಿಕರಿಂದ ತೀವ್ರ ಖಂಡನೆ ವ್ಯಕ್ತವಾಯಿತು. ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು, ತಕ್ಷಣವೇ ಕ್ರಮಕ್ಕೆ ಮುಂದಾದರು.

ಆರೋಪಿಗಳಿಗೆ ತಕ್ಕ ಶಾಸ್ತಿ

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು, ತಕ್ಷಣವೇ ಪ್ರಕರಣ ದಾಖಲಿಸಲು ಸೂಚನೆ ನೀಡಿದರು. ಸಿಟಿ ಮಾರ್ಕೆಟ್ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಅಂಗಡಿ ಮಾಲೀಕ ಉಮೇದ್ ರಾಮ್ ಮತ್ತು ಮಹೇಂದ್ರ ಶರ್ಮಾ ಎಂಬಿಬ್ಬರನ್ನು ಬಂಧಿಸಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ, ಆರೋಪಿಗಳು ಮೊದಲು ಮಹಿಳೆಯ ವಿರುದ್ಧವೇ ಕಳ್ಳತನದ ದೂರು ನೀಡಿದ್ದರು. ಆದರೆ, ವೈರಲ್ ವಿಡಿಯೋ ಅವರ ಬಣ್ಣ ಬಯಲು ಮಾಡಿತ್ತು. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

Read More
Next Story