ಬೆಂಗಳೂರಿನಲ್ಲಿ ಹೃದಯವಿದ್ರಾವಕ ದುರಂತ: ತಂದೆ ಚಲಾಯಿಸುತ್ತಿದ್ದ ಕಾರಿಗೆ ಸಿಲುಕಿ ಕಂದಮ್ಮ ದುರ್ಮರಣ
x

ಬೆಂಗಳೂರಿನಲ್ಲಿ ಹೃದಯವಿದ್ರಾವಕ ದುರಂತ: ತಂದೆ ಚಲಾಯಿಸುತ್ತಿದ್ದ ಕಾರಿಗೆ ಸಿಲುಕಿ ಕಂದಮ್ಮ ದುರ್ಮರಣ


Click the Play button to hear this message in audio format

ರಾಜಧಾನಿ ಬೆಂಗಳೂರಿನಲ್ಲಿ ನಡೆದ ಅತ್ಯಂತ ದುರದೃಷ್ಟಕರ ಮತ್ತು ಹೃದಯ ವಿದ್ರಾವಕ ಘಟನೆಯೊಂದರಲ್ಲಿ, ತಂದೆ ಚಲಾಯಿಸುತ್ತಿದ್ದ ಕಾರಿಗೆ ಸಿಲುಕಿ ಒಂದು ವರ್ಷ ಹತ್ತು ತಿಂಗಳ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ತೋಟದಗುಡ್ಡದಹಳ್ಳಿ ಸಮೀಪದ ಬೆನಕ ಲೇಔಟ್‌ನಲ್ಲಿ ಈ ದುರಂತ ಸಂಭವಿಸಿದ್ದು, ಮಗುವಿನ ಕುಟುಂಬದಲ್ಲಿ ಆಕ್ರಂದನ ಮುಗಿಲುಮುಟ್ಟಿದೆ.

ದೇವಿಕಾ ಮತ್ತು ಮುನೇಶ್ ದಂಪತಿಯ ಪುತ್ರ, ಒಂದು ವರ್ಷ ಹತ್ತು ತಿಂಗಳ ನೂತನ್ ಮೃತಪಟ್ಟ ಕಂದಮ್ಮ. ಈ ಕುಟುಂಬವು ಮೂರು ದಿನಗಳ ಹಿಂದೆಯಷ್ಟೇ ತಮ್ಮ ಸಂಬಂಧಿಕರಾದ ಮೋಹನ್ ಅವರ ಮನೆಗೆ ಬಂದಿತ್ತು. ತಮ್ಮ ಊರಾದ ಮಂಡ್ಯ ಜಿಲ್ಲೆಯ ಬೂವಿನದೊಡ್ಡಿಗೆ ಮರಳಲು ಸಿದ್ಧತೆ ನಡೆಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಮನೆಯ ಮುಂದೆ ನಿಲ್ಲಿಸಿದ್ದ ತಮ್ಮ ಮಾರುತಿ ಇಕೋ ಕಾರನ್ನು (KA17-Z6211) ಮುನೇಶ್ ಅವರು ಚಾಲನೆ ಮಾಡಿದ್ದಾರೆ. ಈ ವೇಳೆ, ಮನೆಯ ಮುಂದೆ ಆಟವಾಡುತ್ತಿದ್ದ ಮಗುವನ್ನು ಗಮನಿಸದ ಕಾರಣ, ಕಾರು ಮಗುವಿನ ಮೇಲೆ ಹರಿದಿದೆ.

ಕ್ಷಣಾರ್ಧದಲ್ಲಿ ನಡೆದ ದುರಂತ

ಕಾರು ಮೈಮೇಲೆ ಹರಿದ ಪರಿಣಾಮ, ಮಗು ನೂತನ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಊರಿಗೆ ಹೊರಡುವ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಈ ಘಟನೆ ಬರಸಿಡಿಲಿನಂತೆ ಬಡಿದಿದೆ. ಕಣ್ಣೆದುರೇ ಮಗುವಿನ ಪ್ರಾಣ ಹೋಗಿರುವುದನ್ನು ಕಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಈ ದುರಂತವು ಇಡೀ ಬಡಾವಣೆಯನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ.

ಪೊಲೀಸ್ ಪ್ರಕರಣ ದಾಖಲು

ಘಟನೆಯ ಬಗ್ಗೆ ಮಾಹಿತಿ ತಿಳಿದ ಕೂಡಲೇ ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಪೋಷಕರ ಅಜಾಗರೂಕತೆಯಿಂದ ಘಟನೆ ನಡೆದಿದ್ದು, ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Read More
Next Story