
ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿದರು.
Belagavi Session|ವಾರಕ್ಕೆ ಎರಡು ದಿನ ಉತ್ತರ ಕರ್ನಾಟಕದ ಸಮಸ್ಯೆ ಚರ್ಚೆಗೆ ಮೀಸಲು
ಪ್ರತಿ ಬುಧವಾರ ಮತ್ತು ಗುರುವಾರ ನಡೆಯುವ ಇಡೀ ದಿನದ ಕಲಾಪದಲ್ಲಿ ಪ್ರಶ್ನೋತ್ತರ, ಗಮನ ಸೆಳೆಯುವ ಸೂಚನೆ, ಶೂನ್ಯ ವೇಳೆ ಇದ್ಯಾವುದಕ್ಕು ಅವಕಾಶ ನೀಡದೇ, ಕೃಷ್ಣಮೇಲ್ದಂಡೆ ಯೋಜನೆ, ಮಹಾದಾಯಿ ಸೇರಿದಂತೆ ಇತರೆ ಸಮಸ್ಯೆ ಬಗ್ಗೆ ಚರ್ಚಿಸಲಾಗುವುದು ಎಂದರು.
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ 157ನೇ ಅಧಿವೇಶನದಲ್ಲಿ ಪ್ರತಿ ಬುಧವಾರ ಮತ್ತು ಗುರುವಾರ ಪೂರ್ತಿ ದಿನದ ಕಲಾಪವನ್ನು ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಚರ್ಚೆಗೆ ಮೀಸಲಿಡಲಾಗುವುದು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.
ಸೋಮವಾರ(ಡಿ.8) ಸುವರ್ಣಸೌಧದ ತಮ್ಮ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಬಗ್ಗೆ 145ನೇ ಅಧಿವೇಶನದಲ್ಲಿ 6 ಗಂಟೆ 35 ನಿಮಿಷ ಚರ್ಚೆಯಾಗಿದ್ದು, 19 ಜನ ಪರಿಷತ್ ಶಾಸಕರು ಮಾತನಾಡಿದ್ದಾರೆ. 151ನೇ ಅಧಿವೇಶನದಲ್ಲಿ 1 ಗಂಟೆ 40 ನಿಮಿಷ ಚರ್ಚೆಯಾಗಿದ್ದು, 6 ಜನ ವಿಧಾನ ಪರಿಷತ್ ಶಾಸಕರು ಮಾತನಾಡಿದ್ದಾರೆ. 154ನೇ ಅಧಿವೇಶನದಲ್ಲಿ 5 ಗಂಟೆ 12 ನಿಮಿಷ ಚರ್ಚೆಯಾಗಿದ್ದು, 11 ಜನ ವಿಧಾನ ಪರಿಷತ್ ಶಾಸಕರು ಮಾತನಾಡಿದ್ದಾರೆ. ಅದೇ ರೀತಿ ಈ ಬಾರಿಯ ಅಧಿವೇಶನದಲ್ಲಿ ಈ ಭಾಗದ ಜ್ವಲಂತ ಸಮಸ್ಯೆಗಳ ಚರ್ಚೆಗೆ ವಿಶೇಷ ಅವಕಾಶ ಕಲ್ಪಿಸಲಾಗುವುದು ಎಂದರು.
ಉ.ಕ. ಸಮಸ್ಯೆ ಬಗ್ಗೆ ಇಡೀ ದಿನ ಚರ್ಚೆ
ಪ್ರತಿ ಬುಧವಾರ ಮತ್ತು ಗುರುವಾರ ನಡೆಯುವ ಇಡೀ ದಿನದ ಕಲಾಪದಲ್ಲಿ ಪ್ರಶ್ನೋತ್ತರ, ಗಮನ ಸೆಳೆಯುವ ಸೂಚನೆ, ಶೂನ್ಯ ವೇಳೆ ಇದ್ಯಾವುದಕ್ಕು ಅವಕಾಶ ನೀಡದೇ, ಕೃಷ್ಣಮೇಲ್ದಂಡೆ ಯೋಜನೆ, ಮಹಾದಾಯಿ, ಕಳಸಾ ಬಂಡೂರಿ ಯೋಜನೆಗಳ ಅನುಷ್ಠಾನದ ಬಗ್ಗೆ, ಅರಣ್ಯಭೂಮಿ ಅತೀಕ್ರಮಣ, ಸಂತ್ರಸ್ತರ ಸಮಸ್ಯೆ ಹಾಗೂ ಪರಿಹಾರೋಪಾಯಗಳು, ಉತ್ತರ ಕರ್ನಾಟಕ ಭಾಗದ ರೈತರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಪರಿಹಾರಗಳು ಮತ್ತು ಉದ್ಯೋಗ ಸೃಷ್ಟಿಗೆ ಕ್ರಿಯಾಯೋಜನೆ ವಿಷಯಗಳ ಮೇಲೆ ಇಡೀ ದಿನ ಚರ್ಚೆಗೆ ಅವಕಾಶ ನೀಡಲಾಗುವುದು. ಚರ್ಚೆ ಪೂರ್ಣವಾಗುವವರೆಗೆ ಸದನವನ್ನು ಮುಂದೂಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
1,649 ಪ್ರಶ್ನೆಗಳ ಸ್ವೀಕಾರ
157ನೇ ಪರಿಷತ್ ಅಧಿವೇಶನದಲ್ಲಿ 10 ದಿನಗಳನ್ನು ಉಪವೇಶನದ ದಿನಗಳೆಂದು ನಿಗದಿಪಡಿಸಲಾಗಿದೆ. ಪ್ರಸಕ್ತ ಅಧಿವೇಶನಕ್ಕೆ ಇದುವರೆಗೆ ಒಟ್ಟು 1,649 ಪ್ರಶ್ನೆಗಳನ್ನು ಸ್ವೀಕರಿಸಿದ್ದು, ಅವುಗಳಲ್ಲಿ 965 ಚುಕ್ಕೆ ಗುರುತಿನ ಹಾಗೂ 684 ಚುಕ್ಕೆ ರಹಿತ ಪ್ರಶ್ನೆಗಳಾಗಿವೆ. ನಿಯಮ 72ರಡಿ 112 ಸೂಚನೆಗಳನ್ನು ಸ್ವೀಕರಿಸಲಾಗಿದೆ. ನಿಯಮ 330 ರಡಿ ಬಂದಂತಹ 84 ಸೂಚನೆಗಳನ್ನು ಸ್ವೀಕರಿಸಲಾಗಿದೆ. ಕಾರ್ಯಕಲಾಪಗಳ ಸಲಹಾ ಸಮಿತಿ ತೀರ್ಮಾನದಂತೆ ಇನ್ನಿತರ ವಿಷಯಗಳ ಮೇಲೆ ಚರ್ಚೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

