ಸಕ್ಕರೆ ಕಾರ್ಖಾನೆ ಪುನರಾರಂಭಕ್ಕೆ ಕೆಎಸ್‌ಪಿಸಿಬಿ ಅಡ್ಡಿ: ಶಾಸಕ ಬಸನಗೌಡ ಯತ್ನಾಳ್ ಅಹೋರಾತ್ರಿ ಧರಣಿ
x

ಸಕ್ಕರೆ ಕಾರ್ಖಾನೆ ಪುನರಾರಂಭಕ್ಕೆ ಕೆಎಸ್‌ಪಿಸಿಬಿ ಅಡ್ಡಿ: ಶಾಸಕ ಬಸನಗೌಡ ಯತ್ನಾಳ್ ಅಹೋರಾತ್ರಿ ಧರಣಿ


ಸಕ್ಕರೆ ಕಾರ್ಖಾನೆ ಆರಂಭಕ್ಕೆ ಕೋರ್ಟ್ ಆದೇಶ ನೀಡಿದರೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ(KSPCB) ಅನುಮತಿ ನೀಡದೇ ಇರುವುದನ್ನು ಖಂಡಿಸಿ ಸಕ್ಕರೆ ಕಾರ್ಖಾನೆ ಮಾಲೀಕರೂ ಆಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಂಡಳಿಯ ಬೆಂಗಳೂರು ಕೇಂದ್ರ ಕಚೇರಿಯಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದಾರೆ.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಸಕ್ಕರೆ ಕಾರ್ಖಾನೆ ತೆರೆಯಲು ಅವಕಾಶ ನೀಡಿ ಕೋರ್ಟ್ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಯುತ್ನಾಳ್‌ ಅವರು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಭೇಟಿ ನೀಡಿದ್ದರು. ಮಂಡಳಿ ಧೋರಣೆಗೆ ಅಸಮಾಧಾನಗೊಂಡು ರಾತ್ರಿಯಾದರೂ ನಿರ್ಗಮಿಸದೇ ಕೆಎಸ್‌ಪಿಸಿಬಿ ಕಚೇರಿಯಲ್ಲೇ ಧರಣಿ ನಡೆಸಿದರು.

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆ ಲೈಸನ್ಸ್ ನವೀಕರಣ ಆಗಿಲ್ಲ ಮತ್ತು ಎಥೆನಾಲ್ ಉತ್ಪಾದನೆ ವಿಚಾರದಲ್ಲಿ‌ ನಿಯಮ ಉಲ್ಲಂಘನೆಯಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ, ಕಾರ್ಖಾನೆ ಮುಚ್ಚುವಂತೆ ನೋಟಿಸ್ ನೀಡಿತ್ತು. ಮಂಡಳಿಯ ವಿರುದ್ಧ ಹೈಕೋರ್ಟ್ ಮೊರೆ ಹೋಗಿದ್ದ ಯತ್ನಾಳ್, ಕಾನೂನು ಸಮರ ನಡೆಸಿದ್ದರು. ಕೆಲವು ದಿನಗಳ ಹಿಂದೆ ಕಾರ್ಖಾನೆ ತೆರೆಯಲು ಆದೇಶ ‌ನೀಡಿದ್ದ ಹೈಕೋರ್ಟ್, ಯತ್ನಾಳ್ ಪರ ತೀರ್ಪು ನೀಡಿತ್ತು. ಆದರೆ ಕೋರ್ಟ್ ಆದೇಶ ಪಾಲಿಸದೇ ಮೇಲ್ಮನವಿ ಹೋಗಲು ಕೆಎಸ್‌ಪಿಸಿಬಿ ಸಿದ್ಧತೆ ನಡೆಸಿರುವ ಹಿನ್ನೆಲೆಯಲ್ಲಿ ಮಂಡಳಿಯ ಕಚೇರಿಯಲ್ಲಿ ಕುಳಿತ ಶಾಸಕ ಯತ್ನಾಳ್, ಅನುಮತಿಗಾಗಿ ಪಟ್ಟುಹಿಡಿದರು.

ಸ್ಥಳಕ್ಕೆ ವಿಪಕ್ಷ ನಾಯಕ ಆರ್ ಅಶೋಕ್‌ ಅವರನ್ನು ಕರೆಸಿಕೊಂಡ ಯತ್ನಾಳ್ ಅವರು ಕೆಎಸ್‌ಪಿಸಿಬಿ ವರ್ತನೆ ಬಗ್ಗೆ ವಿವರ ನೀಡಿದರು. ಯತ್ನಾಳ್ ಕರೆಯ ಹಿನ್ನೆಲೆಯಲ್ಲಿ ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿರುವ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಅಶೋಕ್ ತೆರಳಿ ಯತ್ನಾಳ್‌ಗೆ ಬೆಂಬಲ ವ್ಯಕ್ತಪಡಿಸಿದರು. ಜೊತೆಗೆ ಮಂಡಳಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.

ಶಾಸಕ ಯತ್ನಾಳ್ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಎನ್ಒಸಿ ನೀಡದಿದ್ದರೆ, ಬಿಜೆಪಿ ಶಾಸಕರೆಲ್ಲ‌ ಸೇರಿ ಹೋರಾಟ ಮಾಡಲಿದ್ದೇವೆ. ಅದಕ್ಕೂ ಬಗ್ಗದಿದ್ದರೆ ಕಬ್ಬು ಬೆಳೆಗಾರರೊಂದಿಗೆ ದೊಡ್ಡಮಟ್ಟದ ಹೋರಾಟ ಮಾಡಬೇಕಾಗುತ್ತದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʻʻಸಕ್ಕರೆ ಕಾರ್ಖಾನೆ ಕಾರ್ಯಾಚರಣೆಗೆ ಸಮ್ಮತಿಸಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಪೀಠ ಆ.21ರಂದು ಆದೇಶಿಸಿದೆ. ಆದರೂ ಮಾಲಿನ್ಯ ನಿಯಂತ್ರಣ ಮಂಡಳಿ ಎನ್​ಒಸಿ ನೀಡದೆ ದ್ವೇಷ ಸಾಧಿಸುತ್ತಿದೆ. ಇದರ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಂಗಳವಾರ ಬೆಳಿಗ್ಗೆಯಿಂದಲೇ ಮಂಡಳಿ ಕಚೇರಿಯಲ್ಲಿ ಕುಳಿತಿದ್ದಾರೆ. ರಾತ್ರಿಯಾದರೂ ಕಚೇರಿಯಲ್ಲೇ ಧರಣಿ ರೂಪದಲ್ಲಿ ಕುಳಿತಿದ್ದಾರೆ. ಅವರ ಹೋರಾಟಕ್ಕೆ ನಾನು ಮತ್ತು ಜಯನಗರ ಶಾಸಕ ಸಿ.ಕೆ.ರಾಮಮೂರ್ತಿ ಜೊತೆಯಾಗಿದ್ದೇವೆʼʼ ಎಂದು ಹೇಳಿದರು.

ʻʻಮಂಡಳಿ ಅಧಿಕಾರಿಗಳು ಕುಂಟು ನೆಪವೊಡ್ಡಿ ಕಾಲಹರಣ ಮಾಡುತ್ತಿದ್ದಾರೆ. ಮಂಡಳಿ ಅಧಿಕಾರಿಗಳು ಅನುಮತಿ ಪತ್ರ ನೀಡದಿದ್ದರೆ ಪಕ್ಷದ ಶಾಸಕರೆಲ್ಲ ಸೇರಿ ಹೋರಾಟ ಮಾಡಲಿದ್ದೇವೆ. ಮಣಿಯದಿದ್ದರೆ ಕಬ್ಬು ಬೆಳೆದ ರೈತರ ನೇತೃತ್ವದಲ್ಲಿ ದೊಡ್ಡ ಹೋರಾಟ ನಡೆಸಬೇಕಾಗುತ್ತದೆʼʼ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಗೆ ಎಚ್ಚರಿಕೆ ನೀಡಿದರು.

ʻʻಮಾಲಿನ್ಯ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ದೂರಿ ನಾಲ್ಕು ತಿಂಗಳ ಹಿಂದೆಯೇ ಸಕ್ಕರೆ ಕಾರ್ಖಾನೆ ಮುಚ್ಚಿಸಿದ್ದಾರೆ. ಇದರ ವಿರುದ್ಧ ಯತ್ನಾಳ್ ಹೈಕೋರ್ಟ್​​ ಮೊರೆ ಹೋಗಿ ಕಾನೂನು ಹೋರಾಟ ನಡೆಸಿ, ಮತ್ತೆ ಕಾರ್ಖಾನೆ ಕಾರ್ಯಾಚರಣೆಗೆ ಅನುಮತಿ ಪಡೆದಿದ್ದಾರೆ. ಈ ಪ್ರಕರಣದ ವಾದ, ಪ್ರತಿವಾದದ ವೇಳೆ ಅಡ್ವೋಕೇಟ್ ಜನರಲ್, ಮಂಡಳಿ ಪರ ವಕೀಲರು ಇದ್ದರು. ಮುಖ್ಯ ನ್ಯಾಯಮೂರ್ತಿ ನೀಡಿದ ಆದೇಶ ಅವರಿಗೂ ಗೊತ್ತಿದೆ. ಆದರೂ ಆದೇಶದ ಪ್ರತಿ ಕೇಳಿದ್ದರು. ಅದನ್ನೂ ಯತ್ನಾಳ್ ಒದಗಿಸಿದ್ದಾರೆ. ಆದರೂ ಎನ್ಒಸಿ ನೀಡಲು ವಿಳಂಬ ಮಾಡಲಾಗುತ್ತಿದೆʼʼ ಎಂದು ದೂರಿದರು.

Read More
Next Story