ಬಾನು ಮುಷ್ತಾಕ್‌ಗೆ ಬೂಕರ್ ಪ್ರಶಸ್ತಿ; ಸಾಹಿತ್ಯ ಸೇರಿದಂತೆ ನಾನಾ ಕ್ಷೇತ್ರಗಳಿಂದ ಶುಭಾಶಯಗಳ ಮಹಾಪೂರ
x

ಬೂಕರ್‌ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್‌

ಬಾನು ಮುಷ್ತಾಕ್‌ಗೆ ಬೂಕರ್ ಪ್ರಶಸ್ತಿ; ಸಾಹಿತ್ಯ ಸೇರಿದಂತೆ ನಾನಾ ಕ್ಷೇತ್ರಗಳಿಂದ ಶುಭಾಶಯಗಳ ಮಹಾಪೂರ

ಬಾನು ಮುಷ್ತಾಕ್ ಅವರ ‘ಹಸೀನಾ ಮತ್ತು ಇತರ ಕತೆಗಳು’ ಕೃತಿಯ ಇಂಗ್ಲಿಷ್ ಅನುವಾದಿತ ಹಾರ್ಟ್ ಲ್ಯಾಂಪ್‌ಗೆ ಪ್ರಶಸ್ತಿ ಸಿಕ್ಕಿದೆ. ಮಂಗಳವಾರ ಲಂಡನ್‌ನ ಟೇಟ್ ಮಾಡರ್ನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಾನು ಮುಷ್ತಾಕ್ ಮತ್ತು ದೀಪಾ ಭಾಷ್ತಿ ಪ್ರಶಸ್ತಿಯನ್ನು ಪಡೆದರು.


ಕನ್ನಡದ ಪ್ರಸಿದ್ಧ ಸಾಹಿತಿ ಬರಹಗಾರ್ತಿ, ವಕೀಲೆ ಮತ್ತು ಸಾಮಾಜಿಕ ಕಾರ್ಯಕರ್ತೆ ಬಾನು ಮುಷ್ತಾಕ್ ಅವರು ಪ್ರತಿಷ್ಠಿತ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕನ್ನಡದ ಸಾಹಿತ್ಯ ಲೋಕ ಸೇರಿದಂತೆ ಎಲ್ಲ ಕ್ಷೇತ್ರಗಳಿಂದ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಸಿಎಂ ಸಿದ್ದರಾಮಯ್ಯ, ಕೇಂದ್ರ ಸಚಿವ ಎಚ್​ ಡಿ ಕುಮಾರ ಸ್ವಾಮಿ ಹಾಗೂ ಹಲವಾರು ರಾಜಕಾರಣಿಗಳು ಬಾನು ಹಾಗು ದೀಪಾ ಅವರ ಸಾಧನೆಯನ್ನು ಮುಕ್ತ ಕಂಠದಿಂದ ಕೊಂಡಾಡಿದ್ದಾರೆ.

ಬೂಕರ್ ಪ್ರಶಸ್ತಿ 50,000 ಪೌಂಡ್‌ಗಳ (ರೂ. 52.95 ಲಕ್ಷ) ಬಹುಮಾನ ನೀಡುತ್ತದೆ. ಇದನ್ನು ಲೇಖಕ ಮತ್ತು ಅನುವಾದಕರ ನಡುವೆ ಸಮಾನವಾಗಿ ಹಂಚಲಾಗುತ್ತದೆ. ಇದೇ ಮೊದಲ ಬಾರಿಗೆ ಕನ್ನಡದ ಕೃತಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿರುವುದು ವಿಶೇಷ. ಇದೇ ಅನುವಾದಿತ ಕೃತಿಗೆ ‘ಪೆನ್ ಟ್ರಾನ್ಸ್‌ಲೇಟ್ಸ್’ ಪ್ರಶಸ್ತಿಯೂ ಸಿಕ್ಕಿತ್ತು.

ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿರುವ ಮುಷ್ತಾಕ್, ತಮ್ಮ ಗೆಲುವನ್ನು ವೈವಿಧ್ಯತೆಗೆ ದೊರೆತ ಜಯ ಎಂದು ಬಣ್ಣಿಸಿದ್ದಾರೆ. 'ಯಾವ ಕಥೆಯೂ ಸಣ್ಣದಲ್ಲ, ಅನುಭವದಲ್ಲಿ ಪ್ರತಿ ಎಳೆಯೂ ಇಡೀ ಕಥೆಯ ತೂಕವನ್ನು ಹೊಂದಿರುತ್ತದೆ ಎಂಬ ನಂಬಿಕೆಯಿಂದಲೇ ಈ ಪುಸ್ತಕ ರೂಪುಗೊಂಡಿತು' ಎಂದು ಹೇಳಿದ್ದಾರೆ. 'ನನ್ನ ಸುಂದರವಾದ ಭಾಷೆಗೆ ದೊರೆತ ಎಂತಹ ಸೊಗಸಾದ ಗೆಲುವು ಇದು' ಎಂದು ಅನುವಾದಕಿ ಭಸ್ತಿ ಹರ್ಷ ವ್ಯಕ್ತಪಡಿಸಿದ್ದಾರೆ.

"ಹಾರ್ಟ್ ಲ್ಯಾಂಪ್" ಪುಸ್ತಕದೊಂದಿಗೆ ಬಾನು ಮುಷ್ತಾಕ್ (ಎಡ) ಮತ್ತು ದೀಪಾ ಭಾಷ್ತಿ (ಬಲ).

ಫ್ರೆಂಚ್‌ನಿಂದ ಅನುವಾದವಾದ ಎರಡು ಕೃತಿಗಳು, ಜಪಾನ್‌, ಇಟಾಲಿಯನ್‌ ಹಾಗೂ ಡ್ಯಾನಿಷ್‌ ಭಾಷೆಯ ತಲಾ ಒಂದು ಕೃತಿ 'ಶಾರ್ಟ್‌ ಲಿಸ್ಟ್‌'ನಲ್ಲಿದ್ದವು. ಶಾರ್ಟ್ ಲಿಸ್ಟ್‌ನಲ್ಲಿ ಆಯ್ಕೆಯಾಗಿದ್ದ ಎಲ್ಲರನ್ನೂ ಲಂಡನ್‌ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು.

ದಕ್ಷಿಣ ಭಾರತದ ಪಿತೃಪ್ರಧಾನ ಸಮಾಜದಲ್ಲಿ ವಾಸಿಸುವ ಮುಸ್ಲಿಂ ಮಹಿಳೆಯರು ಎದುರಿಸುತ್ತಿರುವ ಕಷ್ಟಗಳನ್ನು ಮುಷ್ತಾಕ್ 'ಹಾರ್ಟ್ ಲ್ಯಾಂಪ್' ಪುಸ್ತಕದಲ್ಲಿ ಮನಮುಟ್ಟುವಂತೆ ಚಿತ್ರಿಸಿದ್ದಾರೆ. 1990 ರಿಂದ 2023 ರವರೆಗಿನ ಮೂರು ದಶಕಗಳ ಅವಧಿಯಲ್ಲಿ ಅವರು ಅಂತಹ 50 ಕಥೆಗಳನ್ನು ಬರೆದಿದ್ದಾರೆ. ದೀಪಾ ಭಾಷ್ತಿ ಈ ಕಥೆಗಳಲ್ಲಿ 12 ಕಥೆಗಳನ್ನು ಆಯ್ಕೆ ಮಾಡಿ ಅನುವಾದಿಸಿದ್ದಾರೆ.

ಶುಭಾಶಯ ಕೋರಿದ ಸಿ.ಎಂ ಸಿದ್ದರಾಮಯ್ಯ

ಬೂಕರ್ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾಗಿರುವ ಲೇಖಕಿ ಬಾನು ಮುಸ್ತಾಕ್ ಅವರಿಗೆ ಸಿ.ಎಂ ಸಿದ್ದರಾಮಯ್ಯ ಅವರು ಶುಭಾಶಯ ಕೋರಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿರುವ ಅವರು, ಅಂತಾರಾಷ್ಟ್ರೀಯ ಬೂಕರ್ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾಗಿರುವ ಕನ್ನಡದ ಹೆಮ್ಮೆಯ ಲೇಖಕಿ ಬಾನು ಮುಸ್ತಾಕ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಇದು ಕನ್ನಡ, ಕನ್ನಡಿಗ ಮತ್ತು ಕರ್ನಾಟಕ ಸಂಭ್ರಮಿಸುವ ಹೊತ್ತು.

ಈ ನೆಲದ ಸೌಹಾರ್ದತೆ, ಜಾತ್ಯತೀತತೆ ಮತ್ತು ಸೋದರತ್ವದ ನಿಜ ಮೌಲ್ಯಗಳನ್ನು ಮೈಗೂಡಿಸಿಕೊಂಡು ಬರೆಯುತ್ತಿರುವ ಬಾನು ಮುಸ್ತಾಕ್ ಅವರು ಕನ್ನಡದ ಹಿರಿಮೆಯ ಬಾವುಟವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿ ನಮಗೆಲ್ಲ ಗೌರವ ತಂದುಕೊಟ್ಟಿದ್ದಾರೆ.

ಅವರು ಇನ್ನಷ್ಟು ಕಾಲ ಸತ್ವಯುತವಾಗಿ ಬರೆಯುತ್ತಾ ಕನ್ನಡದ ಕಂಪನ್ನು ಜಗದಗಲಕ್ಕೆ ಪಸರಿಸುತ್ತಾ ಇರಲಿ ಎಂದು ಹಾರೈಸುತ್ತೇನೆ. ಬೂಕರ್ ಪ್ರಶಸ್ತಿಗೆ ಭಾಜನವಾಗಿರುವ ಅವರ ಕೃತಿ 'ಹೃದಯ ದೀಪ'ವನ್ನು ಇಂಗ್ಲೀಷ್ ಗೆ ಅನುವಾದಿಸಿರುವ ಪ್ರತಿಭಾವಂತ ಲೇಖಕಿ ದೀಪಾ ಭಸ್ತಿ ಅವರಿಗೂ ಕನ್ನಡಿಗರೆಲ್ಲರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಶುಭಾಶಯ ಕೋರಿದ್ದಾರೆ.

2022 ರಲ್ಲಿ ಮೊದಲ ಬಾರಿಗೆ ಹಿಂದಿ ಕಾದಂಬರಿಗೆ ಬೂಕರ್ ಪ್ರಶಸ್ತಿ

2022 ರಲ್ಲಿ ಮೊದಲ ಬಾರಿಗೆ ಹಿಂದಿ ಕಾದಂಬರಿ ಬೂಕರ್ ಪ್ರಶಸ್ತಿಯನ್ನು ಪಡೆದುಕೊಂಡಿತ್ತು. 2022 ರಲ್ಲಿ ಭಾರತೀಯ ಬರಹಗಾರ್ತಿ ಗೀತಾಂಜಲಿ ಶ್ರೀ ಅವರ "ಟೂಂಬ್ ಆಫ್ ಸ್ಯಾಂಡ್" ಕಾದಂಬರಿಗಾಗಿ ಪ್ರತಿಷ್ಠಿತ ಬೂಕರ್ ಪ್ರಶಸ್ತಿಯನ್ನು ಗೆದ್ದರು. ಟೂಂಬ್ ಆಫ್ ಸ್ಯಾಂಡ್ ಬೂಕರ್ ಪ್ರಶಸ್ತಿ ಗೆದ್ದ ಮೊದಲ ಹಿಂದಿ ಪುಸ್ತಕ. ಇದನ್ನು ಡೈಸಿ ರಾಕ್‌ವೆಲ್ ಇಂಗ್ಲಿಷ್‌ಗೆ ಅನುವಾದಿಸಿದ್ದರು.

2022 ರಲ್ಲಿ ಗೀತಾಂಜಲಿ ಶ್ರೀ ಅವರ ಕಾದಂಬರಿ ರೀತ್ ಸಮಾಧಿ (ಮರಳಿನ ಸಮಾಧಿ) ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಪಡೆಯಿತು.

ಭಾರತೀಯ ಮೂಲದ 6 ಬರಹಗಾರರಿಗೆ ಲಭಿಸಿತ್ತು ಬೂಕರ್ ಪ್ರಶಸ್ತಿ

ಬಾನು ಮುಷ್ತಾಕ್ ಗಿಂತ ಮೊದಲು, ಇಲ್ಲಿಯವರೆಗೆ 6 ಭಾರತೀಯ ಮೂಲದ ಬರಹಗಾರರು ಬೂಕರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಇವರಲ್ಲಿ ವಿ.ಎಸ್. ನೈಪಾಲ್, ಸಲ್ಮಾನ್ ರಶ್ದಿ, ಅರುಂಧತಿ ರಾಯ್, ಕಿರಣ್ ದೇಸಾಯಿ, ಅರವಿಂದ್ ಅಡಿಗ ಮತ್ತು ಗೀತಾಂಜಲಿ ಶ್ರೀ. ಅರುಂಧತಿ ರಾಯ್ ಬೂಕರ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಮಹಿಳೆ.

ಏನಿದು ಬೂಕರ್‌ ಪ್ರಶಸ್ತಿ

ʻಬೂಕರ್ ಪ್ರಶಸ್ತಿʼಯ ಪೂರ್ಣ ಹೆಸರು ʻಮ್ಯಾನ್ ಬೂಕರ್ ಪ್ರೈಜ್‌ ಫಾರ್‌ ಫಿಕ್ಷನ್‌. ಇದನ್ನು 1969 ರಲ್ಲಿ ಇಂಗ್ಲೆಂಡ್‌ನ ʻಬುಕರ್ ಮೆಕ್‌ಕಾನ್ನೆಲ್ʼ ಕಂಪನಿ ಪರಿಚಯಿಸಿತು. ಈ ಪ್ರಶಸ್ತಿ ವಿಜೇತರು 50,000 ಪೌಂಡ್‌ಗಳನ್ನು ಬಹುಮಾನದ ಹಣವಾಗಿ ಪಡೆಯುತ್ತಾರೆ. ಇದನ್ನು ಲೇಖಕ ಮತ್ತು ಅನುವಾದಕರ ನಡುವೆ ಸಮಾನವಾಗಿ ಹಂಚಲಾಗುತ್ತದೆ. ಈ ಮೊತ್ತ ಭಾರತೀಯ ರೂಪಾಯಿಗಳಲ್ಲಿ ಸರಿಸುಮಾರು 52.95 ಲಕ್ಷ ರೂ.ಗಳಾಗಿರುತ್ತದೆ.

ಈ ಶೀರ್ಷಿಕೆಯನ್ನು ಪ್ರತಿ ವರ್ಷ ಬ್ರಿಟನ್ ಅಥವಾ ಐರ್ಲೆಂಡ್‌ನಲ್ಲಿ ಪ್ರಕಟವಾದ ಅಥವಾ ಇಂಗ್ಲಿಷ್‌ಗೆ ಅನುವಾದಿಸಲಾದ ಪುಸ್ತಕಕ್ಕೆ ನೀಡಲಾಗುತ್ತದೆ. ಮೊದಲ ಬೂಕರ್ ಪ್ರಶಸ್ತಿಯನ್ನು ಅಲ್ಬೇನಿಯನ್ ಕಾದಂಬರಿಕಾರ ಇಸ್ಮಾಯಿಲ್ ಕಡರೆ ಅವರಿಗೆ ನೀಡಲಾಗಿತ್ತು.

ಎಚ್​​ ಡಿ ಕುಮಾರಸ್ವಾಮಿ ಅಭಿನಂದನೆ

ಸಮಸ್ತ ಕನ್ನಡಿಗರಿಗೆ ಇದು ಹೆಮ್ಮೆಯ ಕ್ಷಣ. ಜಾಗತಿಕ ಬೂಕರ್ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾಗಿರುವ ನಮ್ಮ ನಾಡಿನ ಹೆಮ್ಮೆಯ ಲೇಖಕಿ ಶ್ರೀಮತಿ ಬಾನು ಮುಷ್ತಾಕ್ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು. ಹಾಗೆಯೇ; ಬೂಕರ್ ಪ್ರಶಸ್ತಿ ಪುರಸ್ಕೃತವಾಗಿರುವ ಅವರ ಹೃದಯ ದೀಪ ಕೃತಿಯನ್ನು ಇಂಗ್ಲೀಷ್ ಭಾಷೆಗೆ ಅನುವಾದಿಸಿರುವ ಲೇಖಕಿ ದೀಪಾ ಭಸ್ತಿ ಅವರಿಗೂ ಅಭಿನಂದನೆಗಳು ಎಂದು ಕೇಂದ್ರ ಸಚಿವ ಎಚ್​ ಡಿ ಕುಮಾರಸ್ವಾಮಿ ಅಭಿನಂದನೆ ಸಲ್ಲಿಸಿದ್ದಾರೆ.

Read More
Next Story