
ಬಂಧಿತ ಮೂರು ಆರೋಪಿಗಳು
ಮ್ಯಾನೇಜರ್ನಿಂದಲೇ ಬ್ಯಾಂಕ್ ದರೋಡೆ ಸ್ಕೆಚ್ ; 10.5 ಕೋಟಿ ರೂ. ಚಿನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು
ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಪ್ರಮುಖ ಆರೋಪಿ, 41 ವರ್ಷದ ವಿಜಯಕುಮಾರ ಮಿರಿಯಾಲ ಸೇರಿ ಹುಬ್ಬಳ್ಳಿ ಮೂಲದ ಮೂವರನ್ನು ಬಂಧಿಸಲಾಗಿದೆ.
ವಿಜಯಪುರ ಜಿಲ್ಲೆಯ ಮನಗೂಳಿ ಪಟ್ಟಣದ ಕೆನರಾ ಬ್ಯಾಂಕ್ನಲ್ಲಿ ನಡೆದ ಬೃಹತ್ ಪ್ರಮಾಣದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಬ್ಯಾಂಕಿನ ಮಾಜಿ ಹಿರಿಯ ವ್ಯವಸ್ಥಾಪಕ ಸೇರಿದಂತೆ ಮೂವರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಸುಮಾರು ಒಂದು ತಿಂಗಳ ಕಾಲ ನಡೆದ ತನಿಖೆಯ ನಂತರ ಪೊಲೀಸರು ಈ ಪ್ರಮುಖ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಜಿಲ್ಲಾ ಕೇಂದ್ರದಿಂದ ಕೇವಲ 25 ಕಿಲೋಮೀಟರ್ ದೂರದಲ್ಲಿರುವ ಮನಗೂಳಿಯ ಕೆನರಾ ಬ್ಯಾಂಕ್ ಶಾಖೆಯಲ್ಲಿ ಮೇ 23ರಿಂದ 25ರ ನಡುವಿನ ಅವಧಿಯಲ್ಲಿ ಕಳ್ಳತನ ನಡೆದಿತ್ತು. ಕಳ್ಳರು ಬ್ಯಾಂಕಿನ ಕಿಟಕಿಯ ಸರಳುಗಳನ್ನು ಕತ್ತರಿಸಿ ಒಳನುಸುಳಿದ್ದರು. ನಂತರ, ಸೇಫ್ ಲಾಕರ್ ರೂಮ್ನ ಸರಳುಗಳನ್ನೂ ಕತ್ತರಿಸಿ, ನಕಲಿ ಕೀಲಿಗಳನ್ನು ಬಳಸಿ ಲಾಕರ್ನಲ್ಲಿದ್ದ 53.26 ಕೋಟಿ ರೂಪಾಯಿ ಮೌಲ್ಯದ 58.97 ಕೆಜಿ ಚಿನ್ನಾಭರಣಗಳು ಹಾಗೂ 5.20 ಲಕ್ಷ ರೂಪಾಯಿ ನಗದು ದೋಚಿ ಪರಾರಿಯಾಗಿದ್ದರು. ಈ ಗಂಭೀರ ಪ್ರಕರಣದ ತನಿಖೆಗಾಗಿ ಪೊಲೀಸ್ ಇಲಾಖೆಯು ಎಂಟು ವಿಶೇಷ ತಂಡಗಳನ್ನು ರಚಿಸಿ, ಹಲವು ಆಯಾಮಗಳಲ್ಲಿ ಬರೋಬ್ಬರಿ ಒಂದು ತಿಂಗಳ ಕಾಲ ತನಿಖೆ ಕೈಗೊಂಡಿತ್ತು. ಇದೀಗ ಮೊದಲ ಹಂತದ ಕಾರ್ಯಾಚರಣೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಎರಡನೇ ಹಂತದ ತನಿಖೆ ಮುಂದುವರಿದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಲಕ್ಷ್ಮಣ್ ನಿಂಬರಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬಂಧಿತ ಆರೋಪಿಗಳು ಮತ್ತು ವಶಪಡಿಸಿಕೊಂಡ ವಸ್ತುಗಳು
ಈ ಪ್ರಕರಣದಲ್ಲಿ ಪ್ರಮುಖ ಆರೋಪಿ, 41 ವರ್ಷದ ವಿಜಯಕುಮಾರ ಮಿರಿಯಾಲ ಸೇರಿ ಹುಬ್ಬಳ್ಳಿ ಮೂಲದ ಮೂವರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ, ವಿಜಯಕುಮಾರ ಮಿರಿಯಾಲ ಇದೇ ಬ್ಯಾಂಕಿನಲ್ಲಿ ಹಿರಿಯ ವ್ಯವಸ್ಥಾಪಕನಾಗಿ ಕೆಲಸ ಮಾಡಿದ್ದ, ಈತ ಹುಬ್ಬಳ್ಳಿಯ ಗದಗ ರಸ್ತೆಯ ಕೋಠಾರಿ ನಗರದ ನಿವಾಸಿ. ಆತನ ಸ್ನೇಹಿತರಾದ ಹುಬ್ಬಳ್ಳಿಯ ಜನತಾ ಕಾಲೋನಿಯ ನಿವಾಸಿ ಚಂದ್ರಶೇಖರ ನೆರೆಲ್ಲಾ ಮತ್ತು ಚಾಲುಕ್ಯ ನಗರದ ನಿವಾಸಿ ಸುನೀಲ ಮೋಕಾ ಕೂಡ ಬಂಧಿತರಾಗಿದ್ದಾರೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಎರಡು ಕಾರುಗಳು ಹಾಗೂ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಅಂದಾಜು 10.75 ಕೋಟಿ ರೂಪಾಯಿ ಮೌಲ್ಯದ 10.5 ಕೆಜಿ ಬಂಗಾರದ ಆಭರಣ ಮತ್ತು ಕರಗಿಸಿದ ಬಂಗಾರದ ಗಟ್ಟಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ.
ಪೂರ್ವ ಯೋಜಿತ ಕಳ್ಳತನದ ರಹಸ್ಯ ಭೇದಿಸಿದ ಪೊಲೀಸ್
ಇದೇ ಬ್ಯಾಂಕಿನ ಮಾಜಿ ವ್ಯವಸ್ಥಾಪಕನಾಗಿದ್ದ ವಿಜಯಕುಮಾರ, ತನ್ನ ವರ್ಗಾವಣೆಗೆ ಮೊದಲೇ ಕಳ್ಳತನಕ್ಕಾಗಿ ಸಂಪೂರ್ಣ ಯೋಜನೆ ರೂಪಿಸಿದ್ದ. ಹೀಗಾಗಿ, ಅಲ್ಲಿಂದ ಬೇರೆ ಶಾಖೆಗೆ ವರ್ಗಾವಣೆಯಾಗುವ ಮುನ್ನ, ಅಂದರೆ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲೇ, ಬ್ಯಾಂಕಿನ ಅಸಲಿ ಕೀಲಿಗಳನ್ನು ಉಳಿದ ಆರೋಪಿಗಳಿಗೆ ಹಸ್ತಾಂತರಿಸಿದ್ದ. ಆ ಸಮಯದಲ್ಲಿಯೇ ನಕಲಿ ಕೀಲಿಗಳನ್ನು ತಯಾರಿಸಲಾಗಿತ್ತು. ಅಲ್ಲದೆ, ಈ ನಕಲಿ ಕೀಲಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತವೆಯೇ ಎಂದು ಪರೀಕ್ಷಿಸಲು ಹಲವು ಬಾರಿ ಬಳಸಿ ನೋಡಿದ್ದರು ಎಂದು ಎಸ್ಪಿ ಮಾಹಿತಿ ನೀಡಿದರು.
ಕಳ್ಳತನ ಮಾಡಲು ಇಡೀ ಬ್ಯಾಂಕಿನ ಸುತ್ತಮುತ್ತಲಿನ ಪ್ರದೇಶವನ್ನು ಅಧ್ಯಯನ ಮಾಡಿ, ಮೂರು ತಿಂಗಳಿಂದಲೂ ಯೋಜನೆ ಸಿದ್ಧಪಡಿಸಿದ್ದರು. ಮೇ 9ರವರೆಗೂ ಮನಗೂಳಿಯಲ್ಲಿ ಕೆಲಸ ಮಾಡಿ ಬೇರೆ ಶಾಖೆಯ ಕರ್ತವ್ಯಕ್ಕೆ ವಿಜಯಕುಮಾರ ಸೇರಿಕೊಂಡ ನಂತರ, ಮೇ 23ರಂದು ಶುಕ್ರವಾರ ಬ್ಯಾಂಕ್ ಮುಚ್ಚಿದ ನಂತರ, ನಾಲ್ಕನೇ ಶನಿವಾರ ಮತ್ತು ಭಾನುವಾರ ಎರಡು ದಿನಗಳ ರಜೆಯನ್ನು ದುರ್ಬಳಕೆ ಮಾಡಿಕೊಂಡು ಈ ಕೃತ್ಯ ಎಸಗಿದ್ದಾರೆ ಎಂದು ಎಸ್ಪಿ ವಿವರಿಸಿದ್ದಾರೆ.
ಸಿನಿಮಾಗಳಿಂದ ಸ್ಫೂರ್ತಿ ಪಡೆದಿದ್ದ ಆರೋಪಿಗಳು
ಬಾಲಿವುಡ್, ಹಾಲಿವುಡ್ ಸಿನಿಮಾಗಳು ಹಾಗೂ ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್ನಲ್ಲಿ ಬರುವ ಕ್ರೈಮ್ ಸ್ಟೋರಿಗಳನ್ನು ನೋಡಿ ಅವುಗಳನ್ನು ಅಧ್ಯಯನ ಮಾಡಿ, ಪೊಲೀಸರಿಂದ ತಪ್ಪಿಸಿಕೊಳ್ಳುವ ಯೋಜನೆ ಮತ್ತು ಸಿದ್ಧತೆಗಳನ್ನು ಆರೋಪಿಗಳು ರೂಪಿಸಿಕೊಂಡಿದ್ದರು. ಅಲ್ಲದೆ, ತಮ್ಮ ವೇಷಭೂಷಣಗಳನ್ನೂ ಸಿನಿಮಾಗಳನ್ನೇ ನೋಡಿ ನಿರ್ಧರಿಸಿದ್ದರು. ತಮ್ಮ ವಾಹನಗಳ ಬಳಕೆಯನ್ನು ಹೇಗೆ ಮಾಡಬೇಕು ಎಂದೂ ಮೊದಲೇ ಯೋಜನೆ ರೂಪಿಸಿದ್ದರು. ಇದಕ್ಕಾಗಿ ಟ್ರಕ್ವೊಂದನ್ನು ಬಳಸಿ, ತಮ್ಮ ಬೈಕ್ಗಳ ಸಂಚಾರವನ್ನು ಪತ್ತೆ ಹಚ್ಚದಂತೆ ಮಾಡಲು ಟ್ರಕ್ನಲ್ಲಿ ಅವುಗಳನ್ನು ಸಾಗಿಸಿದ್ದರು ಎಂದು ಎಸ್ಪಿ ಬಹಿರಂಗಪಡಿಸಿದ್ದಾರೆ.