
ಹೈಕೋರ್ಟ್ ಮತ್ತು ಬೆಂಗಳೂರು ಕಾಲ್ತುಳಿತ ಘಟನೆ
Bangalore Stampede| ಹೈಕೋರ್ಟ್ನಲ್ಲಿ ಕಾಲ್ತುಳಿತ ದುರಂತದ ಅರ್ಜಿ ವಿಚಾರಣೆ ನಾಳೆ; 'ಅಮಿಕಸ್ ಕ್ಯೂರಿ' ನೇಮಕ ಸಾಧ್ಯತೆ
ಕಾಲ್ತುಳಿತ ಘಟನೆಯ ತನಿಖೆ ಬಗ್ಗೆಅನುಮಾನ ವ್ಯಕ್ತವಾದರೆ ನ್ಯಾಯಾಲಯವು ʼಅಮಿಕಸ್ ಕ್ಯೂರಿʼ ನೇಮಕ ಮಾಡುವ ಸಾಧ್ಯತೆ ಇರುತ್ತದೆ. ಅಮಿಕಸ್ ಕ್ಯೂರಿಯನ್ನಾಗಿ ನೇಮಿಸುವ ವಕೀಲರು ನ್ಯಾಯಾಂಗ ತನಿಖೆಗೆ ನೆರವು ನೀಡಲಿದ್ದಾರೆ.
ಎಂ.ಚಿನ್ನಸ್ವಾಮಿ ಕ್ರೀಡಾಂಗಣ ಸಮೀಪ ಸಂಭವಿಸಿದ ಭೀಕರ ಕಾಲ್ತುಳಿತ ದುರಂತದಲ್ಲಿ11 ಜನರ ಸಾವಿನ ಹೊಣೆ ಹೊರುವ ವಿಚಾರದಲ್ಲಿ ಸರ್ಕಾರ, ಪೊಲೀಸ್ ಇಲಾಖೆ, ಕೆಎಸ್ಸಿಎ ಹಾಗೂ ಆರ್ಸಿಬಿ ನಡುವೆ ತಿಕ್ಕಾಟ ಆರಂಭವಾಗಿರುವ ಬೆನ್ನಲ್ಲೇ ನಾಳೆ ಹೈಕೋರ್ಟ್ನಲ್ಲಿ ನಡೆಯುವ ಸ್ವಯಂಪ್ರೇರಿತ ಪಿಐಎಲ್ ಅರ್ಜಿ ವಿಚಾರಣೆ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ಆರ್ಸಿಬಿ ವಿಜಯೋತ್ಸವಕ್ಕೆ ಪೂರ್ವ ತಯಾರಿ ನಡೆಸದ ಕಾರಣ ಕಾಲ್ತುಳಿತ ಸಂಭವಿಸಿತ್ತು. ಆಡಳಿತ ವೈಫಲ್ಯದಿಂದಾಗಿ ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರವಾಗಿತ್ತು. ಘಟನೆಯ ಗಂಭೀರತೆ ಅರಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೂರ್ವಾಪರ ಯೋಚಿಸದೇ ಐವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದರು. ಆರ್ಸಿಬಿ ಹಾಗೂ ಕೆಎಸ್ಸಿಎ ಅಧಿಕಾರಿಗಳ ಬಂಧನಕ್ಕೆ ಸೂಚನೆ ನೀಡಿದ್ದರು.
ಆತುರದಲ್ಲಿ ಕಾರ್ಯಕ್ರಮ ಆಯೋಜಿಸಿ ಅವಘಡಕ್ಕೆ ಕಾರಣವಾಗಿದ್ದ ಸರ್ಕಾರದ ಕ್ರಮಕ್ಕೆ ಸಾರ್ವಜನಿಕರು, ಪ್ರತಿಪಕ್ಷಗಳ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. "ಒಂದು ತಪ್ಪು ಸರಿಪಡಿಸಲು ಹೋಗಿ ತಪ್ಪುಗಳ ಮೇಲೆ ತಪ್ಪು ಮಾಡುತ್ತಲೇ ಇದೆ" ಎಂದು ಪ್ರತಿಪಕ್ಷಗಳ ನಾಯಕರು ಆರೋಪಿಸಿದ್ದರು.
ಹೈಕೋರ್ಟ್ನತ್ತ ಎಲ್ಲರ ಚಿತ್ತ
ಕಾಲ್ತುಳಿತ ದುರಂತವನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್ ಜೂ.10 ರಂದು ಪಿಐಎಲ್ ಅರ್ಜಿಯ ವಿಚಾರಣೆ ನಡೆಸಲಿದೆ.
ಜೂ.4ರಂದು ಕಾಲ್ತುಳಿತ ಸಂಭವಿಸಿದ ನಂತರ ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿಕೊಂಡಿದ್ದ ಹೈಕೋರ್ಟ್, ಕಾಲ್ತುಳಿತ ಸಂಭವಿಸಲು ಕಾರಣಗಳೇನು, ವಿಜಯೋತ್ಸವ ಆಚರಣೆಗೆ ಸರ್ಕಾರ ಕೈಗೊಂಡಿದ್ದ ಸಿದ್ದತೆಗಳೇನು, ಜನದಟ್ಟಣೆ ಹೆಚ್ಚಿದ ಸಂದರ್ಭದಲ್ಲಿ ಅನುಸರಿಸಿದ ಮಾರ್ಗಸೂಚಿಗಳೇನು ಎಂಬುದರ ಸಂಪೂರ್ಣ ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಮುಂದಿನ ವಿಚಾರಣೆಯನ್ನು ಜೂ.10ಕ್ಕೆ ನಿಗದಿಪಡಿಸಿತ್ತು.
ಸಾಧ್ಯತೆಗಳೇನು?
ನಾಳೆ ನಡೆಯುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಸರ್ಕಾರ ನೀಡುವ ವರದಿಯ ಆಧಾರದ ಮೇಲೆ ನಿರ್ದೇಶನ ನೀಡುವ ಸಾಧ್ಯತೆಗಳಿವೆ.
ಈ ಕುರಿತು ʼದ ಫೆಡರಲ್ ಕರ್ನಾಟಕʼದ ಜೊತೆ ಅಭಿಪ್ರಾಯ ಹಂಚಿಕೊಂಡ ಹೈಕೋರ್ಟ್ ವಕೀಲ ಉಮಾಪತಿ ಎಸ್. ಅವರು, ಪ್ರಕರಣ ಕುರಿತಂತೆ ಈಗಾಗಲೇ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಡಿ.ಕುನ್ಹಾ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಯುತ್ತಿದೆ. ನಗರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮ್ಯಾಜಿಸ್ಟ್ರೇಟ್ ತನಿಖೆ, ಸಿಐಡಿ ಹಾಗೂ ಪೊಲೀಸರು ಕೂಡ ತನಿಖೆ ನಡೆಸುತ್ತಿದ್ದಾರೆ. ಮಾನವ ಹಕ್ಕುಗಳ ಆಯೋಗ ಕೂಡ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸಿದೆ. ಈ ಎಲ್ಲಾ ವಿಚಾರಗಳನ್ನು ಅಡ್ವೊಕೇಟ್ ಜನರಲ್ ಅವರು ನ್ಯಾಯಾಲಯದ ಗಮನಕ್ಕೆ ತರಬಹುದು ಎಂದು ಹೇಳಿದರು.
ಆಡಳಿತ ವೈಫಲ್ಯದ ಕುರಿತಂತೆ ಅಡ್ವೊಕೇಟ್ ಜನರಲ್ ಯಾವೆಲ್ಲಾ ಮಾಹಿತಿ ಒದಗಿಸಲಿದ್ದಾರೆ ಎಂಬುದರ ಮೇಲೆ ಕಠಿಣ ಕ್ರಮದ ಸೂಚನೆಗಳು ಇರಲಿವೆ. ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕೆಂಬ ಬೇಡಿಕೆಗೆ ಸ್ಪಂದಿಸುವುದು ಅನುಮಾನ. ಏಕೆಂದರೆ, ಈಗಾಗಲೇ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿದೆ. ಸುಮೊಟೋ ಪ್ರಕರಣಗಳಲ್ಲಿ ಹಾಲಿ ನ್ಯಾಯಮೂರ್ತಿಯಿಂದ ತನಿಖೆಗೆ ಆದೇಶಿಸುವ ಸಾಧ್ಯತೆಗಳು ಕಡಿಮೆ ಎಂದು ಹೇಳಿದರು.
ಕಾಲ್ತುಳಿತ ಘಟನೆಯ ತನಿಖೆಯ ಬಗ್ಗೆಅನುಮಾನ ವ್ಯಕ್ತವಾದರೆ ನ್ಯಾಯಾಲಯವು ʼಅಮಿಕಸ್ ಕ್ಯೂರಿʼ ನೇಮಕ ಮಾಡುವ ಸಾಧ್ಯತೆ ಇರುತ್ತದೆ. ಅಮಿಕಸ್ ಕ್ಯೂರಿಯನ್ನಾಗಿ ನೇಮಿಸುವ ವಕೀಲರು ನ್ಯಾಯಾಂಗ ತನಿಖೆಗೆ ನೆರವು ನೀಡಲಿದ್ದಾರೆ. ಈ ಸಂಬಂಧ ಸಾರ್ವಜನಿಕರು ದೂರು ಸಲ್ಲಿಸದ ಹಿನ್ನೆಲೆಯಲ್ಲಿ ಕಠಿಣ ಆದೇಶ ಅಥವಾ ಸೂಚನೆ ನೀಡುವುದು ವಿರಳ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರವು ಘಟನೆಗೆ ಸಂಬಂಧಿಸಿದಂತೆ ಶೇ 100 ರಷ್ಟು ವಾಸ್ತವಾಂಶಗಳನ್ನು ತಿಳಿಸುವುದು ಅನುಮಾನ. ಒಂದು ವೇಳೆ ನ್ಯಾಯಾಲಯವು ಮಾಧ್ಯಮ ವರದಿಗಳನ್ನು ಪರಿಶೀಲಿಸಿದರೆ ಮಾತ್ರ ಕಠಿಣ ಕ್ರಮಗಳಿಗೆ ಸೂಚಿಸಬಹುದು. ಆದರೆ, ಸರ್ಕಾರ ಈಗಾಗಲೇ ಪೊಲೀಸ್ ಅಧಿಕಾರಿಗಳ ಅಮಾನತು, ಕೆಎಸ್ಸಿಎ, ಆರ್ಸಿಬಿ ಅಧಿಕಾರಿಗಳ ಬಂಧನಕ್ಕೆ ಕ್ರಮ ವಹಿಸಿರುವುದನ್ನು ಗಮನಕ್ಕೆ ತರಬಹುದು. ಹಾಗಾಗಿ ಘಟನೆಯ ಕುರಿತಂತೆ ಯಾವುದೇ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಕಡಿಮೆ ಇದೆ ಎಂಬುದು ವಕೀಲ ಉಮಾಪತಿ ಎಸ್ ಅವರ ಅಭಿಪ್ರಾಯವಾಗಿದೆ.
ಎದ್ದು ಕಾಣುವ ವೈಫಲ್ಯಗಳು
ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟ ನಂತರ ಸರ್ಕಾರದ ವೈಫಲ್ಯಗಳು ಎಳೆ ಎಳೆಯಾಗಿ ಬಿಚ್ಚಿಕೊಳ್ಳುತ್ತಿವೆ.
ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕಾರ್ಯಕ್ರಮಕ್ಕೆ ಅವಕಾಶ ನೀಡುವಂತೆ ವಿಧಾನಸೌಧ ಡಿಸಿಪಿ ಪತ್ರ ಬರೆದಿದ್ದರೂ ಅದನ್ನು ಲೆಕ್ಕಿಸದೇ ಸನ್ಮಾನ ಕಾರ್ಯಕ್ರಮ ನಡೆಸಿತ್ತು. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ವೇದಿಕೆ ಮೇಲೆ 30 ಮಂದಿ ಇರಬೇಕು ಎಂದು ಫಿಟ್ನೆಸ್ ಪ್ರಮಾಣಪತ್ರ ನೀಡಿದ್ದರು. ಆದರೆ, ಕಾರ್ಯಕ್ರಮದ ವೇಳೆ ನೂರಾರು ಜನರು ವೇದಿಕೆ ಮೇಲಿದ್ದರು. ಇದನ್ನು ಕೂಡ ಭದ್ರತಾ ವೈಫಲ್ಯ ಎಂದೇ ಪರಿಗಣಿಸಲಾಗಿದೆ.
ಡಿಸಿಎಂ ಡಿ.ಕೆ. ಶಿವಕುಮಾರ್ ಅವರೇ ಆರ್ಸಿಬಿ ತಂಡವನ್ನು ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಹೋಗಿ ಸ್ವಾಗತಿಸಿ, ಬೆಂಗಾವಲಿನಲ್ಲಿ ತಂಡದ ಆಟಗಾರರನ್ನು ಕರೆತಂದಿದ್ದರು. ಅಲ್ಲದೇ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬರುವಂತೆ ಅಭಿಮಾನಿಗಳಿಗೆ ಆಹ್ವಾನ ನೀಡಿದ್ದರು. ಇದು ಶಿಷ್ಟಾಚಾರ ಉಲ್ಲಂಘನೆ ಎನ್ನಲಾಗಿದೆ.
ಈ ಮಧ್ಯೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ವಿಜಯೋತ್ಸವಕ್ಕೆ ಉಚಿತ ಪ್ರವೇಶ ಕಲ್ಪಿಸುವ ಕುರಿತು ಆರ್ಸಿಬಿ ಹಾಗೂ ಕೆಎಸ್ಸಿಎ ಮಾಡಿದ್ದ ಟ್ವೀಟ್ಗಳು ಕೂಡ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಲು ಕಾರಣವಾಗಿ ಕಾಲ್ತುಳಿತ ಸಂಭವಿಸಿತು.
ಎರಡೂವರೆ ಲಕ್ಷ ಜನರ ಭದ್ರತೆಗೆ 1,643 ಪೊಲೀಸರು
ಆರ್ಸಿಬಿ ವಿಜಯೋತ್ಸವ ಆಚರಣೆಯಲ್ಲಿ ಭಾಗವಹಿಸಲು ಸುಮಾರು ಎರಡೂವರೆ ಲಕ್ಷ ಅಭಿಮಾನಿಗಳು ಆಗಮಿಸಿದ್ದರು. ಆದರೆ, ಪೂರ್ವ ಸಿದ್ಧತೆ ಇಲ್ಲದ ಕಾರಣ ಕೇವಲ 1,643 ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು.
ಜೂ.3 ರಂದು ರಾತ್ರಿ ಆರ್ಸಿಬಿ ಗೆಲುವು ಸಾಧಿಸಿದ ಬಳಿಕ ಇಡೀ ರಾತ್ರಿ ಬೆಂಗಳೂರಿನಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ನೋಡಿಕೊಂಡಿದ್ದರು. ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿದ್ದ ಪೊಲೀಸರು ಬೆಳಿಗ್ಗೆ ವಿಶ್ರಾಂತಿಗೆ ತೆರಳಿದ್ದಾಗಲೇ ಸರ್ಕಾರ ದಿಢೀರನೇ ಕಾರ್ಯಕ್ರಮ ಆಯೋಜಿಸಿತ್ತು. ಹಾಗಾಗಿ ಹೆಚ್ಚಿನ ಪೊಲೀಸರನ್ನು ಕರೆಸಿಕೊಳ್ಳುವಷ್ಟು ಸಮಯವೂ ಇರಲಿಲ್ಲ ಎಂಬುದು ಪೊಲೀಸ್ ಅಧಿಕಾರಿಗಳ ಅಳಲು. ಆದರೆ, ಭದ್ರತೆ ವೈಫಲ್ಯದ ಕಾರಣ ನೀಡಿ ಸಿಎಂ ಸಿದ್ದರಾಮಯ್ಯ ಅವರನ್ನು ಐವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದರು. ಸರ್ಕಾರದ ಈ ಕ್ರಮ ತೀವ್ರ ಟೀಕೆಗೆ ಗುರಿಯಾಗಿತ್ತು.
ʼಅಮಿಕಸ್ ಕ್ಯೂರಿʼ ಎಂದರೆ ಯಾರು?
ʼಅಮಿಕಸ್ ಕ್ಯೂರಿʼ ಎಂಬುದು ಲ್ಯಾಟಿನ್ ಪದ. ಯಾವುದೇ ಪ್ರಕರಣದಲ್ಲಿ ಪಕ್ಷಕಾರನಲ್ಲದ ವ್ಯಕ್ತಿ ಅಥವಾ ಸಂಸ್ಥೆಯನ್ನು ಅಮಿಕಸ್ ಕ್ಯೂರಿಯಾಗಿ ನೇಮಕ ಮಾಡಲಾಗುತ್ತದೆ. ಇವರು ಪ್ರಕರಣದ ಸಮಸ್ಯೆಗಳ ಮೇಲೆ ಪ್ರಭಾವ ಬೀರುವ ಮಾಹಿತಿ, ಪರಿಣತಿ ಅಥವಾ ಒಳನೋಟ ನೀಡುವ ಮೂಲಕ ನ್ಯಾಯಾಲಯಕ್ಕೆ ಸಹಾಯ ಮಾಡಲಿದ್ದಾರೆ. ಅಮಿಕಸ್ ಕ್ಯೂರಿಯನ್ನು ಸಾಮಾನ್ಯವಾಗಿ ಸಾರ್ವಜನಿಕ ಹಿತಾಸಕ್ತಿ ಒಳಗೊಂಡಿರುವ ಮತ್ತು ನಾಗರಿಕ ಹಕ್ಕುಗಳ ಕಾಳಜಿಯು ಪ್ರಶ್ನಾರ್ಹವಾಗಿರುವ ಪ್ರಕರಣಗಳಲ್ಲಿ ನೇಮಕ ಮಾಡಲಾಗುತ್ತದೆ.
ಕಾಲ್ತುಳಿತ ಪ್ರಕರಣದ ವರದಿ ಸಲ್ಲಿಕೆ ನಾಳೆ; ಎಚ್.ಕೆ.ಪಾಟೀಲ
ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದ ವರದಿಯನ್ನು ಜೂ.10 ರಂದು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಘಟನೆಗೂ ಸರ್ಕಾರಕ್ಕೂ ಸಂಬಂಧ ಇಲ್ಲ. ಈ ಬಗ್ಗೆ ಮುಖ್ಯಮಂತ್ರಿ ಹೇಳಿರುವುದು ಸರಿಯಾಗೇ ಇದೆ. ಕೆಎಸ್ಸಿಎ ಅವರು ಕಾರ್ಯಕ್ರಮ ಮಾಡಿದ್ದಾರೆ. ಅಲ್ಲಿ ನಡೆದಿರುವ ಘಟನೆಯನ್ನು ಸರ್ಕಾರದೊಂದಿಗೆ ಥಳುಕು ಹಾಕುವುದು ಸರಿಯಲ್ಲ. ಘಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದ್ದಾರೆ.
ಪ್ರಕರಣದ ತನಿಖೆ ನಡೆಯುತ್ತಿದೆ. ನಾಳೆಯೊಳಗೆ ಹೈಕೋರ್ಟ್ಗೆ ವರದಿ ಸಲ್ಲಿಸುತ್ತೇವೆ. ಕೋರ್ಟ್ ಯಾವೆಲ್ಲಾ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕೋ ಪರಿಗಣಿಸಲಿದೆ. ವಿಧಾನಸೌಧದ ಡಿಸಿಪಿ ಬರೆದ ಪತ್ರದ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.
ಹೈಕೋರ್ಟ್ಗೆ ಡಿಎನ್ಎ, ಸಿಎಟಿಗೆ ಡಿಸಿಪಿ ಮೊರೆ
ಕಾಲ್ತುಳಿತ ಘಟನೆಗೆ ಪೊಲೀಸ್ ಇಲಾಖೆ ಹಾಗೂ ಕಾರ್ಯಕ್ರಮ ಆಯೋಜಿಸಿದ್ದ ಡಿಎನ್ಎ ಇವೆಂಟ್ ಸಂಸ್ಥೆಯನ್ನು ರಾಜ್ಯ ಸರ್ಕಾರ ಹೊಣೆ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿ, ಕಾರ್ಯಕ್ರಮದ ಆಯೋಜಕರಾದ ಆರ್ಸಿಬಿ, ಕೆಎಸ್ಸಿಎ, ಡಿಎನ್ಎ ಇವೆಂಟ್ ಸಂಸ್ಥೆಯ ಮೇಲೆ ಪ್ರಕರಣ ದಾಖಲಿಸಿದೆ.
ರಾಜ್ಯ ಸರ್ಕಾರದ ಅಮಾನತು ಕ್ರಮ ಸಹಜ ನ್ಯಾಯದಿಂದ ಕೂಡಿಲ್ಲ ಎಂದು ಆರೋಪಿಸಿ ಡಿಸಿಪಿ ವಿಕಾಸ್ ಕುಮಾರ್ ವಿಕಾಸ್ ಅವರು ಸಿಎಟಿ ಮೊರೆ ಹೋಗಿದ್ದಾರೆ. ಇನ್ನು ಕಾರ್ಯಕ್ರಮ ಆಯೋಜಕರಾದ ಡಿಎನ್ಎ ಇವೆಂಟ್ ತಮ್ಮ ಮೇಲಿನ ಪ್ರಕರಣ ರದ್ದು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ಈ ಮಧ್ಯೆ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಅಮಾನತಿಗೆ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದು, ತನ್ನ ತಪ್ಪು ಮುಚ್ಚಿಕೊಳ್ಳಲು ನಿಷ್ಠಾವಂತ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದೆ ಎಂದು ಟೀಕಿಸಿದ್ದಾರೆ.