Bangalore Stampede | ಸಿಎಂಗೆ ಹೈಕಮಾಂಡ್ ಬುಲಾವ್: ವರಿಷ್ಠರಿಗೆ ಕಾಲ್ತುಳಿತದ ವರದಿ ಸಲ್ಲಿಕೆ; ಪಕ್ಷದ ನಾಯಕರ ಪಾತ್ರದ ಬಗ್ಗೆ ವಿವರ?
x

Bangalore Stampede | ಸಿಎಂಗೆ ಹೈಕಮಾಂಡ್ ಬುಲಾವ್: ವರಿಷ್ಠರಿಗೆ ಕಾಲ್ತುಳಿತದ ವರದಿ ಸಲ್ಲಿಕೆ; ಪಕ್ಷದ ನಾಯಕರ ಪಾತ್ರದ ಬಗ್ಗೆ ವಿವರ?

ಆರ್‌ಸಿಬಿ ವಿಜಯೋತ್ಸವ ಆಯೋಜನೆ, ನಿರ್ವಹಣೆಯಲ್ಲಿ ಆಗಿರುವ ಲೋಪಗಳು ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಪಾತ್ರದ ಬಗ್ಗೆಯೂ ಸಿಎಂ ಸಿದ್ದರಾಮಯ್ಯ ಅವರು ವರಿಷ್ಠರಿಗೆ ವರದಿ ನೀಡಲಿದ್ದಾರೆ.


ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ದುರಂತವನ್ನು ಕಾಂಗ್ರೆಸ್‌ ಹೈಕಮಾಂಡ್‌ ಕೂಡ ಗಂಭೀರವಾಗಿ ಪರಿಗಣಿಸಿದೆ. ಯಾವುದೇ ಸಿದ್ಧತೆ ಇಲ್ಲದೇ ಕೈಗೊಂಡ ವಿಜಯೋತ್ಸವದಿಂದಾಗಿ ಕಾಲ್ತುಳಿತ ಸಂಭವಿಸಿದ್ದು, 11 ಜನರ ಸಾವಿಗೆ ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್‌ ಬುಲಾವ್‌ ಬಂದಿದೆ.

ನಾಳೆ(ಜೂ.10) ದೆಹಲಿಗೆ ಪ್ರಯಾಣಿಸಲಿರುವ ಸಿಎಂ ಸಿದ್ದರಾಮಯ್ಯ ಅವರು ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದ ಇಂಚಿಂಚೂ ಮಾಹಿತಿಯನ್ನು ಕಾಂಗ್ರೆಸ್‌ ವರಿಷ್ಠರಿಗೆ ನೀಡಲಿದ್ದಾರೆ. ಆರ್‌ಸಿಬಿ ವಿಜಯೋತ್ಸವ ಆಯೋಜನೆ, ನಿರ್ವಹಣೆಯಲ್ಲಿ ಆಗಿರುವ ಲೋಪಗಳು ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಪಾತ್ರದ ಬಗ್ಗೆಯೂ ಸಿಎಂ ಸಿದ್ದರಾಮಯ್ಯ ಅವರು ವರಿಷ್ಠರಿಗೆ ವರದಿ ನೀಡಲಿದ್ದಾರೆ.

ಘಟನೆಗೆ ಸಂಬಂಧಿಸಿ ನಡೆಯುತ್ತಿರುವ ನ್ಯಾಯಾಂಗ ತನಿಖೆ, ಸಿಐಡಿ ಹಾಗೂ ಮ್ಯಾಜಿಸ್ಟ್ರೇಟ್‌ ತನಿಖೆಯ ಪ್ರಗತಿ ಕುರಿತಂತೆಯೂ ವಿವರಿಸಲಿದ್ದಾರೆ. ಆರ್‌ಸಿಬಿ ವಿಜಯೋತ್ಸವ ನಿರ್ವಹಿಸುವಲ್ಲಿ ಪೊಲೀಸ್‌ ಇಲಾಖೆ ವೈಫಲ್ಯಗಳ ಕುರಿತು ಬೊಟ್ಟು ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪೊಲೀಸ್ ಇಲಾಖೆ ಅನುಮತಿ ನಿರಾಕರಣೆ ನಡುವೆಯೂ ವಿಧಾನಸೌಧದ ಮೆಟ್ಟಿಲು ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸುವ ಮೂಲಕ ರಾಜ್ಯ ಸರ್ಕಾರವೇ ಕಾಲ್ತುಳಿತದ ದುರಂತಕ್ಕೆ ನೇರ ಕಾರಣವಾಯಿತು ಎಂಬ ಪ್ರತಿಪಕ್ಷಗಳ ಆರೋಪ ಹಿನ್ನೆಲೆಯಲ್ಲಿ ಹೈಕಮಾಂಡ್‌ ವರದಿ ಕೇಳಿದೆ.

ಉತ್ತರ ಪ್ರದೇಶದ ಕುಂಭಮೇಳದಲ್ಲಿ ನಡೆದ ಕಾಲ್ತುಳಿತ ಘಟನೆಯನ್ನು ಟೀಕಿಸಿದ್ದ ಕಾಂಗ್ರೆಸ್‌ ವರಿಷ್ಠರು ಈಗ ಬೆಂಗಳೂರು ಕಾಲ್ತುಳಿತ ದುರಂತದ ಬಗ್ಗೆ ಸೊಲ್ಲೆತ್ತುತ್ತಿಲ್ಲ ಎಂದು ಬಿಜೆಪಿ ನಾಯಕರು ಟೀಕಿಸಿದ್ದರು. ಅಲ್ಲದೇ ಕಾಂಗ್ರೆಸ್‌ ನಾಯಕರ ಪ್ರಚಾರ ಗೀಳಿನಿಂದ 11 ಮಂದಿ ಆರ್‌ಸಿಬಿ ಅಭಿಮಾನಿಗಳು ಮೃತಪಟ್ಟಿದ್ದಾರೆ ಎಂದು ದೂರಿದ್ದರು. ಇದು ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಹಾಗೂ ಕೇಂದ್ರದ ಕಾಂಗ್ರೆಸ್‌ ನಾಯಕರಿಗೆ ಮುಜುಗರ ತಂದಿತ್ತು.

ಕಾಲ್ತುಳಿತ ಘಟನೆ ಕುರಿತಂತೆ ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ದೂರವಾಣಿ ಮೂಲಕ ವರಿಷ್ಠರಿಗೆ ಮಾಹಿತಿ ಒದಗಿಸಿದ್ದು, ಸಮಗ್ರ ವರದಿಯೊಂದಿಗೆ ನಾಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿ, ಘಟನೆ ಕುರಿತು ವಿವರಿಸಲಿದ್ದಾರೆ ಎಂದು ತಿಳಿದುಬಂದಿದೆ.

ಪ್ರಮುಖವಾಗಿ ಕಾಲ್ತುಳಿತ ಪ್ರಕರಣ, ಸರ್ಕಾರದಿಂದ ಆಗಿರುವ ಲೋಪಗಳು, ಕಾರ್ಯಕ್ರಮ ಆಯೋಜನೆಗೆ ಕಾರಣರಾದವರು ಹಾಗೂ ಆರ್‌ಸಿಬಿ ತಂಡವನ್ನು ಖುದ್ದು ಸ್ವಾಗತಿಸಿ ಕರೆತರುವ ಮೂಲಕ ಪ್ರತಿಪಕ್ಷಗಳ ಟೀಕೆಗೆ ಗುರಿಯಾದ ಡಿ.ಕೆ. ಶಿವಕುಮಾರ್‌ ಅವರ ಪಾತ್ರದ ಬಗ್ಗೆಯೂ ವರದಿ ನೀಡಲಿದ್ದಾರೆ ಎನ್ನಲಾಗಿದೆ.

ಕಳೆದ ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಡಿ.ಕೆ. ಶಿವಕುಮಾರ್‌ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಎಚ್‌ಎಲ್‌ ವಿಮಾನ ನಿಲ್ದಾಣಕ್ಕೆ ಹೋಗಿ ಆಟಗಾರರನ್ನು ಸ್ವಾಗತಿಸಿದ್ದಲ್ಲದೇ ಅವರಿಗೆ ಬೆಂಗಾವಲಾಗಿ ಮೆರವಣಿಗೆ ಮೂಲಕ ಬಂದ ಶಿವಕುಮಾರ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.


Read More
Next Story