
ಪೊಲೀಸ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಂಡಿದ್ದರು.
Bangalore Stampede | ಹಿರಿಯ ಅಧಿಕಾರಿಗಳ ಎದುರೇ ಕಾಲ್ತುಳಿತ ಘಟನೆಗೆ ಪೊಲೀಸ್ ಇಲಾಖೆ ಹೊಣೆ ಎಂದ ಸಿಎಂ..!
ಕಾಲ್ತುಳಿತ ಸಂಭವಿಸಿದ ದಿನ ಮಧ್ಯಾಹ್ನ 3:50 ಕ್ಕೆ ಒಂದಿಬ್ಬರು ಮೃತಪಟ್ಟಿದ್ದರು. ಸಂಜೆ 5:45 ಕ್ಕೆ ನಾನಾಗೇ ಕೇಳಿದಾಗಲೂ ಒಂದೇ ಒಂದು ಸಾವು ಆಗಿದೆ ಎಂಬ ಮಾಹಿತಿ ನೀಡಿದಿರಿ, ಆದರೆ ಅಷ್ಟೊತ್ತಿಗಾಗಲೇ 11 ಮಂದಿ ಮೃತಪಟ್ಟಿದ್ದರು. ಇದು ನಿಮ್ಮ ತಪ್ಪಲ್ಲವೇ ಎಂದು ಪೊಲೀಸರನ್ನು ಸಿದ್ದರಾಮಯ್ಯ ಪ್ರಶ್ನಿಸಿದರು.
ಆರ್ ಸಿಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಘಟನೆಗೆ ಆಡಳಿತ ವೈಫಲ್ಯವೇ ಕಾರಣ ಎಂಬ ಆರೋಪಗಳ ಮಧ್ಯೆಯೂ ಸಿಎಂ ಸಿದ್ದರಾಮಯ್ಯ ಅವರು ಪೊಲೀಸರ ಮೇಲೆಯೇ ಹೊಣೆ ಹೊರಿಸಲು ಪ್ರಯತ್ನಿಸಿದ ಪ್ರಸಂಗ ನಡೆಯಿತುಪ.
ಬೆಂಗಳೂರಿನಲ್ಲಿ ಪೊಲೀಸ್ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಅವರು, ಪೊಲೀಸ್ ನಿರ್ಲಕ್ಷ್ಯದಿಂದಲೇ ಕಾಲ್ತುಳಿತ ಸಂಭವಿಸಿತು ಎಂದು ಹಿರಿಯ ಪೊಲೀಸ್ ಅಧಿಕಾರಿಗಳ ಎದುರೇ ಸಿಎಂ ಅಸಮಾಧಾನ ವ್ಯಕ್ತಪಡಿಸಿದರು.
ನಾನು 1983 ರಿಂದ ಶಾಸಕನಾಗಿ ಸಿಎಂ ಕೂಡ ಆಗಿದ್ದೀನಿ. ಬೆಂಗಳೂರಿನಲ್ಲಿ ನಡೆದ ಇಂತಹ ಕಾಲ್ತುಳಿತ ಪ್ರಕರಣವನ್ನು ಹಿಂದೆಂದೂ ಕಂಡಿರಲಿಲ್ಲ. ವಿಜಯೋತ್ಸವದಲ್ಲಿ ಜನದಟ್ಟಣೆ, ಕಾಲ್ತುಳಿತದ ಬಗ್ಗೆ ಗುಪ್ತಚರ ಇಲಾಖೆ ಏಕೆ ಮಾಹಿತಿ ನೀಡಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಕಾಲ್ತುಳಿತ ಸಂಭವಿಸಿದ ದಿನ ಮಧ್ಯಾಹ್ನ 3:50 ಕ್ಕೆ ಒಂದಿಬ್ಬರು ಮೃತಪಟ್ಟಿದ್ದರು. ಆದರೂ ನೀವು ಸರಿಯಾದ ಮಾಹಿತಿ ನೀಡಲಿಲ್ಲ. ಸಂಜೆ 5:45 ಕ್ಕೆ ನಾನಾಗೇ ಕೇಳಿದಾಗಲೂ ಒಂದೇ ಒಂದು ಸಾವು ಆಗಿದೆ ಎಂಬ ಮಾಹಿತಿ ನೀಡಿದಿರಿ, ಆದರೆ ಅಷ್ಟೊತ್ತಿಗಾಗಲೇ 11 ಮಂದಿ ಮೃತಪಟ್ಟಿದ್ದರು. ಇದು ನಿಮ್ಮ ತಪ್ಪಲ್ಲವೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಹಿರಿಯ ಪೊಲೀಸ್ ಅಧಿಕಾರಿಗಳು ಸರಿಯಾದ ಮಾಹಿತಿ ತಕ್ಷಣ ನೀಡಿದ್ದರೆ ಕ್ರೀಡಾಂಗಣದ ಕಾರ್ಯಕ್ರಮ ರದ್ದುಗೊಳಿಸಲು ಸೂಚನೆ ನೀಡಬಹುದಿತ್ತು ಎಂದರು.
ಅಮಾನತು ಬಗ್ಗೆ ಬೇಸರವಿದೆ
ಕಾಲ್ತುಳಿತ ಘಟನೆಗೆ ಸಂಬಂಧಿಸಿ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಬೇಕಾದ ಪ್ರಸಂಗ ಎದುರಾಗಿದ್ದಕ್ಕೆ ನನಗೂ ಬೇಸರ ಇದೆ. ಆದರೆ, ತಪ್ಪಾಗಿದ್ದು ನಿಜ ತಾನೇ ಎಂದು ಪೊಲೀಸ್ ವೈಫಲ್ಯದ ಬಗ್ಗೆ ಬೊಟ್ಟು ಮಾಡಿದರು.
ಆದರೆ, ಎಲ್ಲಿಯೂ ಆರ್ ಸಿಬಿ ವಿಜಯೋತ್ಸವಕ್ಕೆ ಅನುಮತಿ ನೀಡದಂತೆ ವಿಧಾನಸೌಧ ಡಿಸಿಪಿ ಅಭಿಪ್ರಾಯ ವ್ಯಕ್ತಪಡಿಸಿ ಪತ್ರ ಬರೆದಿದ್ದನ್ನು ಸಿಎಂ ಉಲ್ಲೇಖಿಸಲಿಲ್ಲ. ಆರ್ ಸಿಬಿ ವಿಜಯೋತ್ಸವ ಆಚರಣೆ ನಿರ್ಧಾರ, ಅನುಮತಿ ಎಲ್ಲವೂ ಆತುರದಲ್ಲೇ ಕೈಗೊಂಡರೂ ಅಂತಿಮವಾಗಿ ಪೊಲೀಸ್ ವೈಫಲ್ಯದಿಂದಲೇ ಕಾಲ್ತುಳಿತ ಸಂಭವಿಸಿತು ಎನ್ನುವ ಸರ್ಕಾರದ ವಾದಕ್ಕೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಆರ್ ಸಿಬಿ ತಂಡದ ಸ್ವಾಗತ, ವಿಜಯೋತ್ಸವದಲ್ಲಿ ಪಾಲ್ಗೊಳ್ಳಲು ಡಿಸಿಎಂ ನೀಡಿದ ಆಹ್ವಾನ, ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಆಯೋಜಕ ನಡುವಿನ ಸಂವಹನ ಸೇರಿದಂತೆ ಹಲವು ಹಂತಗಳಲ್ಲಿ ನಿರ್ಧಾರ ಕೈಗೊಂಡಿದ್ದ ರಾಜ್ಯ ಸರ್ಕಾರ ಕೊನೆ ಕ್ಷಣದಲ್ಲಿ ಪೊಲೀಸ್ ಇಲಾಖೆಯ ಮೇಲೆ ಭದ್ರತಾ ಹೊಣೆ ಹೊರಿಸಿತು. ಜನಸಂದಣಿ ಹೆಚ್ಚಾದ ಹಿನ್ನೆಲೆಯಲ್ಲಿ ಸಮರ್ಪಕ ಬಂದೋಬಸ್ತ್ ಒದಗಿಸಲಾಗದೇ ಕಾಲ್ತುಳಿತಕ್ಕೆ ಕಾರಣವಾಗಿತ್ತು ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಪೊಲೀಸರ ತನಿಖೆಗೂ ಸಿಎಂ ಅಸಮಾಧಾನ
ರಾಜ್ಯದಲ್ಲಿ ಅಪರಾಧಗಳ ಪೊಲೀಸರ ತನಿಖೆಯ ಗುಣಮಟ್ಟ ಕಡಿಮೆಯಾಗಿದೆ ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಪೊಲೀಸರ ಕಾರ್ಯವೈಖರಿಗೆ ಬೇಸರ ವ್ಯಕ್ತಪಡಿಸಿದರು.
ಬೀದರ್ ನಲ್ಲಿ ನಡೆದ ದರೋಡೆ ಪ್ರಕರಣದ ಆರೋಪಿ ಯಾರು ಎಂದು ಗೊತ್ತಾಗಿದ್ದರೂ 5 ತಿಂಗಳಿಂದ ಆತನನ್ನು ಬಂಧಿಸದೇ ಇರುವುದನ್ನು ಉಲ್ಲೇಖಿಸಿದರು. ಬಿಡಿ ಪ್ರಕರಣಗಳಲ್ಲಿ ತನಿಖೆಯ ಗುಣಮಟ್ಟ ಹೆಚ್ಚಿದ್ದರೂ ಒಟ್ಟಾರೆಯಾಗಿ ಗಮನಿಸಿದಾಗ ತನಿಖೆಯ ಗುಣಮಟ್ಟ ಕುಸಿದಿರುವುದು ಸ್ಪಷ್ಟವಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.
ಪರಿಣಾಮಕಾರಿ ಆರೋಪ ಪಟ್ಟಿ ಸಲ್ಲಿಸಲು ಸೂಚನೆ
ಅಪರಾಧ ಪ್ರಕರಣಗಳಲ್ಲಿ ಆರೋಪ ಪಟ್ಟಿಯನ್ನು ಸೂಕ್ತ, ಪರಿಣಾಮಕಾರಿ ಹಾಗೂ ಸರಿಯಾದ ಸಮಯಕ್ಕೆ ಸಲ್ಲಿಸದಿರುವುದೂ ದೊಡ್ಡ ವೈಫಲ್ಯ. ಇಂತಹ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಸಿಎಂ ಖಾರವಾಗಿ ಹೇಳಿದರು.
ಮಂಗಳೂರು ಮಾತ್ರ ಹದಗೆಟ್ಟಿದ್ದೇಕೆ?ದ್ವೇಷ ಭಾಷಣ ಮಾಡುವವರ ವಿರುದ್ಧ, ಜನರ ನೆಮ್ಮದಿ ಕೆಡಿಸುವವರ ವಿರುದ್ಧ ಸ್ವಯಂಪ್ರೇರಿತ ಕ್ರಮ ಏಕೆ ತೆಗೆದುಕೊಳ್ಳುತ್ತಿಲ್ಲ, ನೀವು ಕ್ರಮ ತೆಗೆದುಕೊಳ್ಳದಿದ್ದರೆ ನಾವು ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಕೋಮು ಘರ್ಷಣೆ ಮತ್ತು ಕೊಲೆಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಹೆಚ್ಚಾಗಿ ಆಗುತ್ತಿದೆ. ಇತರೆ ಜಿಲ್ಲೆಗಳಲ್ಲಿ ಯಾಕೆ ಆಗುತ್ತಿಲ್ಲ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು, ನೆಮ್ಮದಿ ಕೆಡಿಸುವವರನ್ನು ಮೂಲದಿಂದಲೇ ಪತ್ತೆ ಹಚ್ಚಿ ಅವರು ಯಾರೇ ಇದ್ದರೂ ಕಠಿಣ ಕಾನೂನು ಕ್ರಮ ಕೈಗೊಳ್ಳಿ ಎಂದು ಸ್ಪಷ್ಟ ಸೂಚನೆ ನೀಡಿದರು.
ಪೊಲೀಸ್ ಠಾಣೆಗಳು ಜನಸ್ನೇಹಿ ಆಗುವ ಜೊತೆಗೆ ಅಪರಾಧ ಮನಸ್ಥಿತಿಯವರಿಗೆ ಕಾನೂನಿನ ಬಗ್ಗೆ ಭಯ ಇರುವ ವಾತಾವರಣ ಸೃಷ್ಟಿಸಬೇಕು ಎಂದು ಸಲಹೆ ನೀಡಿದರು.