ಮುಡಾ ಪಾದಯಾತ್ರ ಸಮಾರೋಪ | ಯಡಿಯೂರಪ್ಪ, ನನ್ನ ನಡುವೆ ಬಿರುಕು ತರುವ ಯತ್ನ: ಎಚ್ ಡಿ ಕುಮಾರಸ್ವಾಮಿ
x

ಮುಡಾ ಪಾದಯಾತ್ರ ಸಮಾರೋಪ | ಯಡಿಯೂರಪ್ಪ, ನನ್ನ ನಡುವೆ ಬಿರುಕು ತರುವ ಯತ್ನ: ಎಚ್ ಡಿ ಕುಮಾರಸ್ವಾಮಿ


ನನ್ನ ಮತ್ತು ಯಡಿಯೂರಪ್ಪ ನಡುವೆ ಬಿರುಕು ಉಂಟು ಮಾಡಲು ಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಎಚ್​.ಡಿ.ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಬಿಜೆಪಿ, ಜೆಡಿಎಸ್​ ಮುಡಾ ಪಾದಯಾತ್ರೆ ಸಮಾರೋಪ ಸಮಾವೇಶದಲ್ಲಿ ಮಾತನಾಡಿದ ಅವರು, ʻʻನನ್ನ ಮತ್ತು ಬಿಎಸ್​ವೈ ನಡುವಿನ ಟಾಕ್​ವಾರ್​ ರಾಜಕೀಯವಾದದ್ದು, ಬಿಜೆಪಿ, ಜೆಡಿಎಸ್ ಒಂದಾಗಿ ಉತ್ತಮ ಆಡಳಿತ ನೀಡಿದ್ದೇವೆ. ಆದರೆ, ವೈಯಕ್ತಿಕವಾಗಿ ಟೀಕೆ ಮಾಡಿಲ್ಲʼʼ ಎಂದರು.

ʻʻಇನ್ನು ತಮ್ಮ ನೇತೃತ್ವದಲ್ಲಿ 136 ಸ್ಥಾನ ಗೆದ್ದಿದ್ದೇವೆ. ಸಿದ್ದರಾಮಯ್ಯಗೆ ಕಲ್ಲುಬಂಡೆಯಾಗಿ ನಿಂತಿದ್ದೇನೆ ಎಂದು ಡಿಕೆಶಿ ಹೇಳಿದ್ದಾರೆ. ಈ ಹಿಂದೆ ನನಗೂ ಇದೇ ರೀತಿ ಡಿಕೆಶಿ ಹೇಳಿದ್ದರು. ಲೋಕಸಭೆಯಲ್ಲಿ ಕಾಂಗ್ರೆಸ್‌ನವರು 9 ಸ್ಥಾನಗಳನ್ನು ಹೇಗೆ ಗೆದ್ದಿದ್ದಾರೆ ಗೊತ್ತಿದೆ. ಅದಕ್ಕೆ ನಾನು 8 ಸ್ಥಾನ ಎಂದು ಹೇಳುತ್ತೇನೆ. ನನ್ನ ಕಂಡರೆ ಹೊಟ್ಟೆಉರಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಒಳ್ಳೆಯ ಆಡಳಿತ ನೀಡಿದರೆ ನಮಗೆ ಯಾಕೆ ಹೊಟ್ಟೆಉರಿ? ನನ್ನ ಮೇಲೆ ಒಂದು ಕಪ್ಪುಚುಕ್ಕೆ ಇಲ್ಲ ಎಂದು ಸಿಎಂ ಹೇಳಿದ್ದಾರೆ. ಸಿದ್ದರಾಮಯ್ಯ ಹಿಂದುಳಿದ ವರ್ಗದ ಮುಖ್ಯಮಂತ್ರಿ ಅಲ್ಲ, ಆರೂವರೆ ಕೋಟಿ ಜನರ ಮುಖ್ಯಮಂತ್ರಿʼʼ ಎಂದು ಹೇಳಿದರು.

ʻʻಖಾಕಿ ಚಡ್ಡಿ ಹಾಕಿದ್ದಾರೆಂದು ಎಂದು ನನ್ನ ಬಗ್ಗೆ ಹೇಳಿದ್ದಾರೆ. ಆದರೆ, ಸಿದ್ದರಾಮಯ್ಯ ಚಡ್ಡಿಯೆಲ್ಲ ಕಪ್ಪು ಮಾಡಿಕೊಂಡಿದ್ದಾರೆ. ಕಾನೂನು ಬಾಹಿರವಾಗಿ ಸೈಟ್​ ಪಡೆದ ಬಗ್ಗೆ ಪ್ರಶ್ನೆ ಮಾಡುತ್ತಿದ್ದೇವೆ. ಅರಿಶಿಣ ಕುಂಕುಮ ರೀತಿ ಭೂಮಿ ದಾನ ಮಾಡಿದ್ದು ತಪ್ಪಾ ಎಂದಿದ್ದಾರೆ. ಆದರೆ ಕಾನೂನು ಬದ್ಧವಾಗಿ ಭೂಮಿ ಕೊಟ್ಟಿದ್ದರೆ ಪ್ರಶ್ನೆ ಮಾಡುತ್ತಿರಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕೊಟ್ಟಿರುವುದು ಸರ್ಕಾರದ ಭೂಮಿ. ಸಿಎಂ ಮೂಗಿನ ಕೆಳಗೇ ಕಾನೂನು ಬಾಹಿರ ಚಟುವಟಿಕೆ ನಡೆದಿದೆ. ಈಗಲೂ ನಾನು 14 ಸೈಟ್​ ವಾಪಸ್​ ಕೊಡಲು ಸಿದ್ಧ ಎಂದಿದ್ದಾರಂತೆ. ಸೈಟ್ ವಾಪಸ್​ ಕೊಟ್ಟರೆ ಕಾನೂನುಬಾಹಿರ ಚಟುವಟಿಕೆ ಮುಚ್ಚಲು ಸಾಧ್ಯವಾ?" ಎಂದು ಸಿಎಂ ವಿರುದ್ಧ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

Read More
Next Story