
ಸಾಂದರ್ಭಿಕ ಚಿತ್ರ
ಬೆಂಗಳೂರಿನಲ್ಲಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ; ಪ್ರಮುಖ ಆರೋಪಿ ಜಾನ್ ರಿಚರ್ಡ್ ಬಂಧನ!
ರೇಣುಕಾ ಯಲ್ಲಮ್ಮ ಬಡಾವಣೆ ನಿವಾಸಿ ಯುವತಿಯು ಭಾನುವಾರ (ಜೂ. 22) ಸಂಜೆ 4 ಗಂಟೆ ಸುಮಾರಿಗೆ ದಿನಸಿ ತರಲು ಅಂಗಡಿಗೆ ಹೊರಟಿದ್ದಾಗ ಐದಾರು ಯುವಕರ ತಂಡ ನಡುರಸ್ತೆಯಲ್ಲಿ ಯುವತಿಯನ್ನು ಅಡ್ಡಗಟ್ಟಿದ್ದರು.
ಬೆಂಗಳೂರಿನ ಆನೇಕಲ್ನ ರೇಣುಕಾ ಬಡಾವಣೆಯಲ್ಲಿ ಯುವತಿಯೊಬ್ಬರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಜಾನ್ ರಿಚರ್ಡ್ (26) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬೆಂಗಳೂರು ಗ್ರಾಮಾಂತರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಭಾನುವಾರ (ಜೂನ್ 22) ಸಂಜೆ 4 ಗಂಟೆ ಸುಮಾರಿಗೆ ರೇಣುಕಾ ಯಲ್ಲಮ್ಮ ಬಡಾವಣೆಯ ನಿವಾಸಿಯಾದ ಯುವತಿಯೊಬ್ಬಳು ದಿನಸಿ ತರಲು ಅಂಗಡಿಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಐದಾರು ಯುವಕರ ತಂಡವೊಂದು ನಡುರಸ್ತೆಯಲ್ಲಿ ಯುವತಿಯನ್ನು ಅಡ್ಡಗಟ್ಟಿದೆ. ಆ ತಂಡದಲ್ಲಿದ್ದ ಒಬ್ಬಾತ ಯುವತಿಯ ಮೈ-ಕೈ ಮುಟ್ಟಿ ಎಳೆದಾಡಲು ಪ್ರಾರಂಭಿಸಿದ್ದಾನೆ. ಇದಕ್ಕೆ ಯುವತಿ ಪ್ರತಿರೋಧ ತೋರಿದಾಗ, ಮತ್ತೊಬ್ಬ ಯುವಕ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ. ಬಳಿಕ ಯುವತಿ ಬನ್ನೇರುಘಟ್ಟ ಠಾಣೆಗೆ ದೂರು ನೀಡಿದ್ದರು.
ಪೊಲೀಸ್ ಕ್ರಮ ಮತ್ತು ತನಿಖೆ
ಘಟನೆ ಸಂಬಂಧ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಪ್ರಮುಖ ಆರೋಪಿ ಜಾನ್ ರಿಚರ್ಡ್ನನ್ನು ಬಂಧಿಸಿ ಬನ್ನೇರುಘಟ್ಟ ಠಾಣೆಗೆ ಕರೆತಂದಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಅವರು ಈ ಕುರಿತು ಮಾಹಿತಿ ನೀಡಿ, "ಶಾಂತಿ ಎಂಬ ಯುವತಿ ಭಾನುವಾರ ಸಂಜೆ ಅಂಗಡಿಗೆ ಹೋಗುತ್ತಿದ್ದಾಗ ಯುವಕರು ಅಡ್ಡಹಾಕಿದ್ದಾರೆ. ಬಲವಂತವಾಗಿ ತಳ್ಳಾಡಿ 'ಬರುತ್ತೀರಾ' ಎಂದು ಕೇಳಿದ್ದಾರೆ. ಈ ಸಂದರ್ಭದಲ್ಲಿ ಮೂರರಿಂದ ನಾಲ್ಕು ಜನ ಸ್ಥಳದಲ್ಲಿದ್ದರು. ಒಬ್ಬಾತ ಮಾತ್ರ ಕಿರುಕುಳ ನೀಡಿ ಹಲ್ಲೆ ಮಾಡಲು ಬಂದಿದ್ದನು. ಇನ್ನಿಬ್ಬರು ಮೂವರು ಆತನನ್ನು ತಡೆದಿದ್ದಾರೆ. ಹಲ್ಲೆ ಮಾಡಲು ಬಂದಿದ್ದವನು ಈಗ ನಮ್ಮ ವಶದಲ್ಲಿದ್ದಾನೆ," ಎಂದು ತಿಳಿಸಿದ್ದಾರೆ. ಯುವತಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದೂ ಬಾಬಾ ಸ್ಪಷ್ಟಪಡಿಸಿದ್ದಾರೆ.
ಸೋಮವಾರ (ಜೂನ್ 23) ಬೆಳಿಗ್ಗೆ 11 ಗಂಟೆಗೆ ಯುವತಿ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿಗಳ ಪ್ರಕಾರ, "ಮೊದಲ ಆರೋಪಿ ನಮ್ಮ ವಶದಲ್ಲಿಯೇ ಇದ್ದಾನೆ. ಜಿಮ್ ತರಬೇತುದಾರನೊಬ್ಬ ಕೂಡ ಹಲ್ಲೆ ಮಾಡಿದ್ದಾನೆ. ಜಿಮ್ ತರಬೇತುದಾರನ ಮೇಲೆಯೂ ದೂರು ದಾಖಲಾಗಿದ್ದು, ಆತನನ್ನು ವಶಕ್ಕೆ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ," ಎಂದು ಹೇಳಿದ್ದಾರೆ.
ಸಂತ್ರಸ್ತ ಯುವತಿಯ ಹೇಳಿಕೆ
ಸಂತ್ರಸ್ತ ಯುವತಿ ಘಟನೆಯ ಬಗ್ಗೆ ವಿವರಿಸಿದ್ದು, "ನಾನು ಅಂಗಡಿಗೆ ಹೋಗುವ ಸಂದರ್ಭದಲ್ಲಿ ಯುವಕರು ರಸ್ತೆಯಲ್ಲಿ ಗಲಾಟೆ ಮಾಡುತ್ತಿದ್ದರು. ಅವರೆಲ್ಲರೂ ಕುಡಿದಿದ್ದರು ಮತ್ತು ಗಾಂಜಾ ಸೇವಿಸಿದ್ದರು. ಆಗ ಅವರು ನನ್ನನ್ನು ಅಡ್ಡಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ನನ್ನನ್ನು ಹೊಡೆಯಲು ಮತ್ತು ಮುಟ್ಟಲು ಬಂದರು. ಈ ವೇಳೆ ಸ್ಥಳೀಯರು ನನ್ನನ್ನು ರಕ್ಷಿಸಿದರು," ಎಂದಿದ್ದಾರೆ. ಅಲ್ಲದೆ, "ಯುವಕರು ನನ್ನ ಮನೆಯ ಗೇಟ್ ಹಾರಿ ಒಳನುಗ್ಗಿದರು. ಹಲ್ಲೆ ಮತ್ತು ದೌರ್ಜನ್ಯ ನಡೆಸಿದ ಯುವಕರು ಯಾರೆಂದು ನನಗೆ ಗೊತ್ತಿಲ್ಲ. ಈ ಸಂಬಂಧ ಬನ್ನೇರುಘಟ್ಟ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ. ನಾನು ನೀಡಿದ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಾಗಿದೆ," ಎಂದು ಅವರು ತಿಳಿಸಿದ್ದಾರೆ. ಪೊಲೀಸರು ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದು, ಇತರ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.