ಶೂಟಿಂಗ್ ನೆಪದಲ್ಲಿ ಚಿತ್ರನಟಿಯನ್ನು ಅಪಹರಿಸಿದ ಸಿನಿಮಾ ನಿರ್ಮಾಪಕ!
x

ಶೂಟಿಂಗ್ ನೆಪದಲ್ಲಿ ಚಿತ್ರನಟಿಯನ್ನು ಅಪಹರಿಸಿದ ಸಿನಿಮಾ ನಿರ್ಮಾಪಕ!

ಒಂದು ವರ್ಷದ ಮಗುವನ್ನು ವಶಕ್ಕೆ ಪಡೆಯುವ ಉದ್ದೇಶದಿಂದ ನಟಿಯ ಪತಿಯಾಗಿರುವ ಸಿನಿಮಾ ನಿರ್ಮಾಪಕ ಈ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ನಟಿಯ ಸಹೋದರಿ ಬ್ಯಾಟರಾಯನಪುರ ಪೊಲೀಸರಿಗೆದೂರು ನೀಡಿದ್ದಾರೆ.


Click the Play button to hear this message in audio format

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಚಿತ್ರನಟಿಯನ್ನು ಆಕೆ ಚಿತ್ರ ನಿರ್ಮಾಪಕನಾಗಿರುವ ಪತಿಯೇ ಸಿನಿಮೀಯ ಶೈಲಿಯಲ್ಲಿ ಅಪಹರಿಸಿದ್ದಾನೆ.

ನಟಿ ಚೈತ್ರಾ ಆರ್. ಅಪಹರಣಕ್ಕೊಳಗಾಗಿದ್ದು, ತಮ್ಮ ಒಂದು ವರ್ಷದ ಹಸುಗೂಸನ್ನು ತನ್ನ ವಶಕ್ಕೆ ಪಡೆಯುವ ಉದ್ದೇಶದಿಂದ ನಟಿಯ ಪತಿ, ಚಿತ್ರ ನಿರ್ಮಾಪಕ ಹರ್ಷವರ್ಧನ್ ಈ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ನಟಿಯ ಸಹೋದರಿ ಲೀಲಾ ಆರ್. ಅವರು ಬ್ಯಾಟರಾಯನಪುರ ಪೊಲೀಸ್‌ ಠಾಣೆ ದೂರು ನೀಡಿದ್ದಾರೆ.

ನಟಿ ಚೈತ್ರಾ ಮತ್ತು ಹರ್ಷವರ್ಧನ್ 2023ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆರಂಭದಲ್ಲಿ ಸುಖವಾಗಿದ್ದ ಸಂಸಾರದಲ್ಲಿ ನಂತರದ ದಿನಗಳಲ್ಲಿ ಮನಸ್ತಾಪಗಳು ಉಂಟಾಗಿದ್ದವು. ಕಳೆದ ಏಳೆಂಟು ತಿಂಗಳುಗಳಿಂದ ಪತಿ-ಪತ್ನಿ ಬೇರೆ ಬೇರೆಯಾಗಿ ವಾಸಿಸುತ್ತಿದ್ದರು. ಪತಿ ಹರ್ಷವರ್ಧನ್ ಹಾಸನದಲ್ಲಿ ವಾಸವಿದ್ದರೆ, ನಟಿ ಚೈತ್ರಾ ತಮ್ಮ ಒಂದು ವರ್ಷದ ಮಗುವಿನೊಂದಿಗೆ ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಜೀವನ ನಿರ್ವಹಣೆಗಾಗಿ ಚೈತ್ರಾ ಮತ್ತೆ ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಶೂಟಿಂಗ್ ನೆಪದಲ್ಲಿ ಅಪಹರಣದ ಸ್ಕೆಚ್

ಆರೋಪಿ ಹರ್ಷವರ್ಧನ್ 'ವರ್ಧನ್ ಎಂಟರ್‌ಪ್ರೈಸಸ್' ಮಾಲೀಕನಾಗಿದ್ದು, ಸಿನಿಮಾ ನಿರ್ಮಾಪಕನಾಗಿದ್ದಾನೆ. ಪತ್ನಿಯನ್ನು ಅಪಹರಿಸಲು ಆತ ಚಿತ್ರೀಕರಣವನ್ನೇ ಅಸ್ತ್ರವನ್ನಾಗಿ ಬಳಸಿಕೊಂಡಿದ್ದಾನೆ. ಡಿ.7ರಂದು ಮೈಸೂರಿನಲ್ಲಿ ಶೂಟಿಂಗ್ ಇದೆ ಎಂದು ನಂಬಿಸಿ ಚೈತ್ರಾ ಅವರನ್ನು ಮನೆಯಿಂದ ಹೊರಬರುವಂತೆ ಮಾಡಲಾಗಿತ್ತು. ಇದು ಪತಿ ಹರ್ಷವರ್ಧನ್ ರೂಪಿಸಿದ್ದ ಸಂಚು ಎಂಬುದು ತಡವಾಗಿ ಬೆಳಕಿಗೆ ಬಂದಿದೆ.

ಹರ್ಷವರ್ಧನ್ ತನ್ನ ಸಹಚರನಾದ ಕೌಶಿಕ್ ಎಂಬಾತನಿಗೆ 20 ಸಾವಿರ ರೂ. ಮುಂಗಡ ಹಣ ನೀಡಿ ಕೃತ್ಯಕ್ಕೆ ಬಳಸಿಕೊಂಡಿದ್ದಾನೆ. ಕೌಶಿಕ್ ಮತ್ತು ಆತನ ತಂಡದವರು ಶೂಟಿಂಗ್ ಇದೆ ಎಂದು ಹೇಳಿ ಚೈತ್ರಾ ಅವರನ್ನು ಅದೇ ದಿನ ಬೆಳಗ್ಗೆ 8 ಗಂಟೆ ಸುಮಾರಿಗೆ ಮೈಸೂರು ರಸ್ತೆ ಮೆಟ್ರೋ ನಿಲ್ದಾಣಕ್ಕೆ ಕರೆಸಿಕೊಂಡಿದ್ದಾರೆ. ಅಲ್ಲಿಂದ ಅವರನ್ನು ಕಾರಿನಲ್ಲಿ ಹತ್ತಿಸಿಕೊಂಡು ನೈಸ್ ರಸ್ತೆ ಹಾಗೂ ಬಿಡದಿ ಮಾರ್ಗವಾಗಿ ಬಲವಂತವಾಗಿ ಅಪಹರಿಸಿಕೊಂಡು ಹೋಗಲಾಗಿದೆ ಎಂದು ತಿಳಿಸಿದ್ದಾರೆ.

ಸ್ನೇಹಿತನಿಗೆ ಕರೆ ಮತ್ತು ಪತಿಯ ಬೆದರಿಕೆ

ಅಪಹರಣಕಾರರ ಕಣ್ತಪ್ಪಿಸಿ ಬೆಳಗ್ಗೆ ಸುಮಾರು 10.30ರ ವೇಳೆಗೆ ಚೈತ್ರಾ ಅವರು ತಮ್ಮ ಸ್ನೇಹಿತ ಗಿರೀಶ್ ಎಂಬುವವರಿಗೆ ಕರೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ತಾನು ಸಂಕಷ್ಟದಲ್ಲಿರುವುದನ್ನು ತಿಳಿಸಿದ್ದಾರೆ. ಗಿರೀಶ್ ತಕ್ಷಣವೇ ಚೈತ್ರಾ ಅವರ ಕುಟುಂಬಸ್ಥರಿಗೆ ವಿಷಯ ಮುಟ್ಟಿಸಿದ್ದಾರೆ.

ಅದೇ ದಿನ ಸಂಜೆ ವೇಳೆಗೆ ಸ್ವತಃ ಪತಿ ಹರ್ಷವರ್ಧನ್, ಚೈತ್ರಾ ಅವರ ತಾಯಿ ಸಿದ್ದಮ್ಮ ಅವರಿಗೆ ಕರೆ ಮಾಡಿದ್ದಾನೆ. ನಿಮ್ಮ ಮಗಳನ್ನು ನಾನೇ ಅಪಹರಿಸಿದ್ದೇನೆ. ಆಕೆಯನ್ನು ಬಿಡಬೇಕಾದರೆ ನನ್ನ ಮಗುವನ್ನು ನನ್ನ ಬಳಿಗೆ ಕಳುಹಿಸಬೇಕು. ಮಗು ಸಿಕ್ಕರೆ ಮಾತ್ರ ಚೈತ್ರಾಳನ್ನು ಬಿಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಅಲ್ಲದೆ, ಮತ್ತೊಬ್ಬ ಸಂಬಂಧಿಕರಿಗೆ ಕರೆ ಮಾಡಿ, ಮಗುವನ್ನು ಅರಸೀಕೆರೆಗೆ ಕರೆತರುವಂತೆ ಮತ್ತು ಅಲ್ಲಿ ಚೈತ್ರಾಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾನೆ.

ಆರಂಭದಲ್ಲಿ ವಿಷಯ ತಿಳಿದು ಕಂಗಾಲಾದ ಕುಟುಂಬಸ್ಥರು ತಿಪಟೂರು ಮತ್ತು ಬೆಂಗಳೂರಿನಲ್ಲಿದ್ದರು. ನಂತರ ಎಲ್ಲರೂ ಒಗ್ಗೂಡಿ ಜ್ಞಾನಭಾರತಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಮಗುವಿನ ಮೇಲಿನ ಹಕ್ಕಿಗಾಗಿ ಪತಿಯೇ ಈ ರೀತಿ ಕಾನೂನುಬಾಹಿರ ಕೃತ್ಯಕ್ಕೆ ಇಳಿದಿರುವುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಬ್ಯಾಟರಾಯನಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Read More
Next Story