
ನಟಿ ರಮ್ಯಾ
Pahalgam Attack |ಯುದ್ಧವಾದರೆ ಸಾಯೋದು ನಮ್ಮ ಸೈನಿಕರೇ; ನಟಿ ರಮ್ಯಾ
‘ನಾವು ನಮ್ಮ ನಾಯಕರನ್ನು ಆಯ್ಕೆ ಮಾಡಿ ಕಳಿಸುವುದು ನಮ್ಮ ರಕ್ಷಣೆ ಮಾಡಲಿ ಅಂತ ಅಲ್ವಾ? ಹೀಗಿರುವಾಗ ರಕ್ಷಣೆ ನೀಡದೆ ಯುದ್ಧ ಅಂದರೆ ಬಲಿಯಾಗುವುದು ಅಮಾಯಕರಲ್ಲವೇ ಎಂದು ನಟಿ ರಮ್ಯಾ ಪ್ರಶ್ನಿಸಿದ್ದಾರೆ.
ಪಹಲ್ಗಾಮ್ ದಾಳಿ ಕುರಿತು ಯಾರೂ ಕೂಡ ಬಹಿರಂಗ ಹೇಳಿಕೆ ನೀಡಬಾರದು ಎಂದು ಕಾಂಗ್ರೆಸ್ ಹೈಕಮಾಂಡ್ ಎಚ್ಚರಿಕೆ ನೀಡಿದ್ದರೂ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಅವರು ಯುದ್ಧವೇ ಉತ್ತರ ಅಲ್ಲ. ಯುದ್ದವಾದರೆ ಸಾಯೋದು ನಮ್ಮ ಸೈನಿಕರೇ ಎಂದು ಹೇಳುವ ಮೂಲಕ ಪರೋಕ್ಷವಾಗಿ ಯುದ್ಧ ಬೇಡ ಎಂದಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ವೈಯುಕ್ತಿಕವಾಗಿ ನಾನು ಹಿಂಸೆ ಬೆಂಬಲಿಸುವುದಿಲ್ಲ. ಯುದ್ಧ ಮಾಡುವುದರಿಂದ ಯಾರಿಗೂ ಒಳಿತಾಗುವುದಿಲ್ಲ. ಇದರಿಂದ ಯಾರೂ ಉದ್ಧಾರ ಆಗಲ್ಲ. ಎಲ್ಲದ್ದಕ್ಕೂ ಯುದ್ಧವೇ ಉತ್ತರ ಅಲ್ಲ, ಯುದ್ಧ ಶುರುವಾದರೆ ನಮ್ಮ ಸೈನಿಕರೇ ಸಾಯೋದು’ ಎಂದು ಹೇಳಿದ್ದಾರೆ.
‘ನಾವು ನಮ್ಮ ನಾಯಕರನ್ನು ಆಯ್ಕೆ ಮಾಡಿ ಕಳಿಸುವುದು ನಮ್ಮ ರಕ್ಷಣೆ ಮಾಡಲಿ ಅಂತ. ಹೀಗಿರುವಾಗ ರಕ್ಷಣೆ ನೀಡದೆ ಯುದ್ಧಕ್ಕೆ ಪ್ರಚೋದಿಸಿದರೆ ಬಲಿಯಾಗುವುದು ಅಮಾಯಕರಲ್ಲವೇ ಎಂದು ರಮ್ಯಾ ಪ್ರಶ್ನಿಸಿದ್ದಾರೆ.
ಪಹಲ್ಗಾಮ್ ಘಟನೆಗೆ ಸಂಬಂಧಿಸಿ ಗುಪ್ತಚರ ವೈಫಲ್ಯ, ರಕ್ಷಣಾ ಲೋಪವನ್ನು ಪ್ರಶ್ನೆ ಮಾಡಲೇಬೇಕು. ಗಡಿಭಾಗದಂತಹ ಸೂಕ್ಷ್ಮ ಪ್ರದೇಶದಲ್ಲಿ ಬಿಗಿ ಭದ್ರತೆ ಇರಬೇಕಿತ್ತು. ಈ ಲೋಪ ಏಕೆ ಆಯ್ತು ಎನ್ನುವುದನ್ನು ಅವಲೋಕಿಸಬೇಕು ಎಂದು ತಿಳಿಸಿದ್ದಾರೆ.
ಈ ಹಿಂದೆ ಉಪೇಂದ್ರ ಜೊತೆಗಿನ ಸಿನಿಮಾವೊಂದರ ಶೂಟಿಂಗ್ಗಾಗಿ ಪಹಲ್ಗಾಮ್ಗೆ ಹೋಗಿ ಬಂದಿದ್ದೇನೆ. ಆಗ ಸಂಪೂರ್ಣ ಭದ್ರತೆ ಕೊಟ್ಟಿದ್ದರು. ಆದರೆ, ಜನಸಾಮಾನ್ಯರಿಗೂ ರಕ್ಷಣೆ ಬೇಕು. ರಕ್ಷಣೆ ಬಗ್ಗೆ ಚಿಂತಿಸಬೇಕೇ ಹೊರತು ಯುದ್ಧದ ಬಗ್ಗೆ ಅಲ್ಲ ಎಂದು ತಿಳಿಸಿದ್ದಾರೆ.