
ನಟ ಧ್ರುವ ಸರ್ಜಾ
ನಟ ಧ್ರುವ ಸರ್ಜಾ ವಿರುದ್ಧ ಕೋಟ್ಯಂತರ ರೂ. ವಂಚನೆ ಆರೋಪ: ಮುಂಬೈ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು
ನಿರ್ದೇಶಕ ರಾಘವೇಂದ್ರ ಹೆಗಡೆ ಅವರು ನೀಡಿದ ದೂರಿನ ಪ್ರಕಾರ, 2016ರಲ್ಲಿ ಧ್ರುವ ಸರ್ಜಾ ಅವರೇ ತಮ್ಮನ್ನು ಸಂಪರ್ಕಿಸಿ, ಒಟ್ಟಿಗೆ ಸಿನಿಮಾ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದರು.
ಸ್ಯಾಂಡಲ್ವುಡ್ ನಟ ಧ್ರುವ ಸರ್ಜಾ ಅವರು ಇದೀಗ ಗಂಭೀರ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. 'ದಿ ಸೋಲ್ಜರ್' ಎಂಬ ಶೀರ್ಷಿಕೆಯ ಸಿನಿಮಾದಲ್ಲಿ ನಟಿಸಲು 3.15 ಕೋಟಿ ರೂ. ಮುಂಗಡ ಪಡೆದು, ಚಿತ್ರೀಕರಣದಲ್ಲಿ ಭಾಗಿಯಾಗದೆ ಹಾಗೂ ಹಣವನ್ನು ಹಿಂತಿರುಗಿಸದೆ ವಂಚಿಸಿದ್ದಾರೆ ಎಂದು ಆರೋಪಿಸಿ ನಿರ್ದೇಶಕ ಮತ್ತು ನಿರ್ಮಾಪಕ ರಾಘವೇಂದ್ರ ಹೆಗಡೆ ಅವರು ನೀಡಿದ ದೂರಿನನ್ವಯ, ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ನಿರ್ದೇಶಕ ರಾಘವೇಂದ್ರ ಹೆಗಡೆ ಅವರು ನೀಡಿದ ದೂರಿನ ಪ್ರಕಾರ, 2016ರಲ್ಲಿ ಧ್ರುವ ಸರ್ಜಾ ಅವರೇ ತಮ್ಮನ್ನು ಸಂಪರ್ಕಿಸಿ, ಒಟ್ಟಿಗೆ ಸಿನಿಮಾ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದರು. ಹಲವು ಬಾರಿ ಒತ್ತಾಯಿಸಿದ ನಂತರ, 2018ರಲ್ಲಿ 'ದಿ ಸೋಲ್ಜರ್' ಚಿತ್ರ ಮಾಡಲು ತಾವು ಒಪ್ಪಿಕೊಂಡಿದ್ದಾಗಿ ಹೆಗಡೆ ತಿಳಿಸಿದ್ದಾರೆ.
"ಸಿನಿಮಾ ಒಪ್ಪಂದಕ್ಕೆ ಸಹಿ ಹಾಕುವ ಮುನ್ನ, ಫ್ಲಾಟ್ ಒಂದನ್ನು ಖರೀದಿಸಬೇಕಾಗಿದ್ದು, ಅದಕ್ಕಾಗಿ 3 ಕೋಟಿ ರೂ. ನೀಡುವಂತೆ ಧ್ರುವ ಕೇಳಿಕೊಂಡರು. ಶೀಘ್ರದಲ್ಲೇ ನಮ್ಮ ಸಿನಿಮಾದಲ್ಲಿ ನಟಿಸುವುದಾಗಿ ಭರವಸೆ ನೀಡಿದ್ದರಿಂದ, ಅವರನ್ನು ನಂಬಿ ನಾನು ಹೆಚ್ಚಿನ ಬಡ್ಡಿದರದಲ್ಲಿ ಸಾಲ ಮಾಡಿ ಹಣ ಹೊಂದಿಸಿದೆ. ನನ್ನ ನಿರ್ಮಾಣ ಸಂಸ್ಥೆಗಳು ಹಾಗೂ ವೈಯಕ್ತಿಕ ಖಾತೆಯಿಂದ 2018-2021ರ ಅವಧಿಯಲ್ಲಿ ಒಟ್ಟು 3.15 ಕೋಟಿ ರೂಪಾಯಿ ವರ್ಗಾಯಿಸಿದ್ದೇನೆ," ಎಂದು ಹೆಗಡೆ ತಮ್ಮ ದೂರಿನಲ್ಲಿ ವಿವರಿಸಿದ್ದಾರೆ.
2019ರ ಫೆಬ್ರವರಿ 21 ರಂದು ಇಬ್ಬರ ನಡುವೆ ಔಪಚಾರಿಕ ಒಪ್ಪಂದವಾಗಿದ್ದು, ಅದರ ಪ್ರಕಾರ ಚಿತ್ರೀಕರಣವು ಜನವರಿ 2020 ರಲ್ಲಿ ಪ್ರಾರಂಭವಾಗಿ ಜೂನ್ 2020 ರೊಳಗೆ ಪೂರ್ಣಗೊಳ್ಳಬೇಕಿತ್ತು. ಆದರೆ, ಹಣ ಪಡೆದ ನಂತರ ಧ್ರುವ ಸರ್ಜಾ ಅವರು ಚಿತ್ರೀಕರಣಕ್ಕೆ ಹಾಜರಾಗದೆ ಸತಾಯಿಸಿದರು. ಕೋವಿಡ್ ಲಾಕ್ಡೌನ್ ನಂತರವೂ ಅವರು ಸ್ಪಂದಿಸಲಿಲ್ಲ, ಫೋನ್ ಕರೆಗಳಿಗೂ ಉತ್ತರಿಸಲಿಲ್ಲ ಎಂದು ಹೆಗಡೆ ಆರೋಪಿಸಿದ್ದಾರೆ.
ದೂರಿನ ಆಧಾರದ ಮೇಲೆ ಅಂಬೋಲಿ ಪೊಲೀಸರು, ನಟ ಧ್ರುವ ಸರ್ಜಾ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 316(2) (ಕ್ರಿಮಿನಲ್ ನಂಬಿಕೆ ದ್ರೋಹ) ಮತ್ತು 318(4) (ವಂಚನೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಿರ್ಮಾಪಕರು ಸಲ್ಲಿಸಿರುವ ಬ್ಯಾಂಕ್ ವಹಿವಾಟಿನ ದಾಖಲೆಗಳು, ಒಪ್ಪಂದ ಪತ್ರ ಹಾಗೂ ಇತರ ಸಾಕ್ಷ್ಯಗಳನ್ನು ಆಧರಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.