
ಬಂಧಿತ ಆರೋಪಿ ಮುಸ್ತಫಾ
ಮೂರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆ ಆರೋಪಿ ಮುಸ್ತಾಫಾ ಮುಲ್ಕಿಯಲ್ಲಿ ಬಂಧನ
ಅಬ್ದುಲ್ ಲತೀಫ್ ಹತ್ಯೆ ಪ್ರಕರಣದ ಆರೋಪಿ ಮೊಹಮ್ಮದ್ ಮುಸ್ತಫಾ ಅಲಿಯಾಸ್ ಮುಸ್ತಾ ಬಂಧಿತ ಆರೋಪಿ. ಈ ಪ್ರಕರಣ ಸಂಬಂಧ ಮುಲ್ಕಿ ಠಾಣೆ ಪೊಲೀಸರು ದಾವೂದ್ ಹಕೀಂ, ಮೊಹಮ್ಮದ್ ಮುಸ್ತಾಫ ಸೆರಿದಂತೆ ಒಟ್ಟು 10 ಜನರ ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು.
ಸುಮಾರು ಮೂರು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕೊಲೆ ಪ್ರಕರಣದ ಆರೋಪಿಯೊಬ್ಬನನ್ನು ಮುಲ್ಕಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಲ್ಕಿ ವಿಜಯ ಸನ್ನಿಧಿ ಸಮೀಪ ಹೆದ್ದಾರಿ ಬಳಿ 2020ರ ಜೂನ್ 5ರಂದು ಹಗಲು ದರೋಡೆಯಲ್ಲಿ ನಡೆದಿದ್ದ ಅಬ್ದುಲ್ ಲತೀಫ್ ಹತ್ಯೆ ಪ್ರಕರಣದ ಆರೋಪಿ ಮೊಹಮ್ಮದ್ ಮುಸ್ತಫಾ ಅಲಿಯಾಸ್ ಮುಸ್ತಾ (ಬಂಧಿತ ಆರೋಪಿ) ಎಂದು ಗುರುತಿಸಲಾಗಿದೆ.
ಈ ಪ್ರಕರಣ ಸಂಬಂಧ ಮುಲ್ಕಿ ಠಾಣೆ ಪೊಲೀಸರು ದಾವೂದ್ ಹಕೀಂ, ಮೊಹಮ್ಮದ್ ಮುಸ್ತಫಾ ಸೇರಿದಂತೆ ಒಟ್ಟು 10 ಜನರ ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಆರೋಪಿಗೆ 2020ರ ಅಕ್ಟೋಬರ್ 10ರಂದು ಹೈಕೋರ್ಟ್ ಜಾಮೀನು ನೀಡಿತ್ತು. ಆದರೆ, ಸುಪ್ರೀಂ ಕೋರ್ಟ್ 2022ರ ಏಪ್ರಿಲ್ 22ರಂದು ಆತನ ಜಾಮೀನನ್ನು ರದ್ದುಪಡಿಸಿತ್ತು. ಇದರ ನಂತರ, ಆರೋಪಿಯು ನಕಲಿ ಪಾಸ್ಪೋರ್ಟ್ ಬಳಸಿಕೊಂಡು ವಿದೇಶಕ್ಕೆ ಪರಾರಿಯಾಗಿದ್ದನು.
ಅಕ್ರಮವಾಗಿ ಭಾರತ ಪ್ರವೇಶ, ಇತರೆ ಪ್ರಕರಣಗಳು
ಆರೋಪಿಯು ಅಕ್ರಮವಾಗಿ ಒಮನ್ ದೇಶದಿಂದ ನೇಪಾಳದ ಮೂಲಕ ಭಾರತಕ್ಕೆ ಪ್ರವೇಶಿಸಿದ್ದನು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಅಕ್ರಮ ಪ್ರವೇಶದ ಬಗ್ಗೆಯೂ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಮೂರು ವರ್ಷಗಳಿಂದ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ಆರೋಪಿ ತಲೆಮರೆಸಿಕೊಂಡಿದ್ದ.
ಪೊಲೀಸರ ವಿಶೇಷ ತಂಡದಿಂದ ಬಂಧನ
ಆರೋಪಿಯ ಬಗ್ಗೆ ಸುಳಿವು ಪಡೆದ ಪೊಲೀಸರ ವಿಶೇಷ ತಂಡವು ಮುಲ್ಕಿಯ ಪಕ್ಷಿಕೆರೆ ಬಳಿ ಸೋಮವಾರ ಆತನನ್ನು ಪತ್ತೆ ಮಾಡಿ ಬಂಧಿಸಿದೆ. ಬಂಧಿತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ತಿಳಿಸಿದ್ದಾರೆ.
ಆರೋಪಿಯ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ನಕಲಿ ಪಾಸ್ಪೋರ್ಟ್ ಹೊಂದಿರುವ ಬಗ್ಗೆ ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಆತನ ವಿರುದ್ಧ ಮುಲ್ಕಿ ಠಾಣೆಯಲ್ಲಿ 4 ಮತ್ತು ಇತರೆ ಜಿಲ್ಲೆಗಳಲ್ಲಿ ಒಟ್ಟು 5 ಪ್ರಕರಣಗಳು ದಾಖಲಾಗಿವೆ. ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲೆಗಳ ಪೊಲೀಸ್ ಠಾಣೆಗಳಲ್ಲಿ ಆತನ ವಿರುದ್ಧ ಎರಡು ಪ್ರಕರಣಗಳಲ್ಲಿ ವಾರಂಟ್ ಸಹ ಜಾರಿಯಲ್ಲಿತ್ತು.