
ತಲೆಗೆ ಗಂಭೀರವಾಗಿ ಗಾಯಗೊಂಡಿರುವ ಅಕ್ಷಯ್
ಬೈಕ್ ಸವಾರನ ಮೇಲೆ ಬಿದ್ದ ಮರದ ಕೊಂಬೆ; ಅಕ್ಷಯ್ ಮಿದುಳು ನಿಷ್ಕ್ರಿಯ, ವೈದ್ಯರ ಘೋಷಣೆ
ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಅಕ್ಷಯ್ ಅವರಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು. ಸರ್ಜರಿ ನಡೆದು 60 ತಾಸು ಕಳೆದರೂ ಅಕ್ಷಯ್ ಮೆದುಳು ಸ್ಪಂದಿಸಿರಲಿಲ್ಲ. ಹೀಗಾಗಿ ಬ್ರೈನ್ ಡೆಡ್ ಆಗಿದೆ ಎಂದು ವೈದ್ಯರು ಘೋಷಿಸಿದ್ದಾರೆ.
ಬೆಂಗಳೂರಿನಲ್ಲಿ ಗಾಳಿ-ಮಳೆಗೆ ಒಣಗಿದ ಮರದ ಕೊಂಬೆಯೊಂದು ಬೈಕ್ ಸವಾರನ ತಲೆಯ ಮೇಲೆ ಬಿದ್ದ ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ದೋಬಿ ಘಾಟ್ ನಿವಾಸಿ ಅಕ್ಷಯ್ ಅವರ ಮಿದುಳು ನಿಷ್ಕ್ರಿಯವಾಗಿದೆ ( ಬ್ರೈನ್ ಡೆಡ್) ಎಂದು ವೈದ್ಯರು ಘೋಷಿಸಿದ್ದಾರೆ.
ಜೂ.15 ರಂದು ಬಸವನಗುಡಿಯ ಬ್ರಹ್ಮ ಚೈತನ್ಯ ಮಂದಿರದ ಬಳಿ ಒಣಗಿದ ಮರದ ಕೊಂಬೆ ಅಕ್ಷಯ್ ತಲೆಯ ಮೇಲೆ ಬಿದ್ದಿತ್ತು. ಇದರಿಂದ ಅಕ್ಷಯ್ ತಲೆಯ ಚಿಪ್ಪು 12 ಹೋಳುಗಳಾಗಿತ್ತು. ಕೂಡಲೇ ಅಕ್ಷಯ್ ಅವರನ್ನು ಆಸ್ಪತ್ರೆಗೆ ದಾಖಲಿಸಿ, ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದರೂ ಮಿದುಳು ಸ್ಪಂದಿಸದಿರುವುದು ಪೋಷಕರನ್ನು ದುಃಖದಲ್ಲಿ ಮುಳುಗಿಸಿದೆ.
ತಂದೆಯ ಹುಟ್ಟುಹಬ್ಬದಂದು ಮಾಂಸ ಖರೀದಿಸಲು ಹೋಗಿದ್ದ ಅಕ್ಷಯ್ಗೆ ಮರದ ಕೊಂಬೆಯೇ ಆತನ ಜೀವನ ಕಿತ್ತುಕೊಂಡಿದ್ದು ವಿಪರ್ಯಾಸ.
60 ಗಂಟೆಗಳಾದರೂ ಸ್ಪಂದಿಸದ ಮಿದುಳು
ಶಸ್ತ್ರಚಿಕಿತ್ಸೆ ನಂತರವೂ ಅಕ್ಷಯ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿಲ್ಲ. ಯಾವುದೇ ವ್ಯಕ್ತಿಗೆ ಮಿದುಳಿನ ಶಸ್ತ್ರಚಿಕಿತ್ಸೆ ನಡೆದು 48 ತಾಸುಗಳ ಬಳಿಕವೂ ಸ್ಪಂದಿಸದಿದ್ದರೆ ಬ್ರೈನ್ ಡೆಡ್ ಎಂದು ಪರಿಗಣಿಸಲಾಗುತ್ತದೆ. ಅಕ್ಷಯ್ಗೆ ಶಸ್ತ್ರಚಿಕಿತ್ಸೆ ನಡೆಸಿ 60 ಗಂಟೆಗಳಾದರೂ ಮಿದುಳು ಸಕ್ರಿಯವಾಗದ ಕಾರಣ ವೈದ್ಯರು ಬ್ರೈನ್ ಡೆಡ್ ಎಂದು ಘೋಷಿಸಿರುವುದು ಪೋಷಕರನ್ನು ಕಂಗಾಲಾಗಿಸಿದೆ.
ಅಕ್ಷಯ್ ಆರೋಗ್ಯದ ಬಗ್ಗೆ ಯಾವುದೇ ಭರವಸೆ ಇಲ್ಲ. ಸಣ್ಣ ವಯಸ್ಸಿನವರಾದ ಕಾರಣ ಮಿದುಳು ಸಕ್ರಿಯವಾಗುವ ಸಾಧ್ಯತೆ ಕೇವಲ ಶೇ 0.1 ರಷ್ಟಿದೆ ಎಂದು ವೈದ್ಯರು ತಿಳಿಸಿರುವುದಾಗಿ ಪೋಷಕರು ದುಃಖ ತೋಡಿಕೊಂಡಿದ್ದಾರೆ.
ಬಿಲ್ ಪಾವತಿಗೆ ಪರದಾಟ
ಅಕ್ಷಯ್ ಶಸ್ತ್ರಚಿಕಿತ್ಸೆಯ ಬಿಲ್ ಮೊತ್ತ 4 ಲಕ್ಷ ರೂ. ದಾಟಿದೆ. ಸಾಲ ಮಾಡಿ ಒಂದು ಲಕ್ಷ ರೂ. ಪಾವತಿಸಿದ ಬಳಿಕ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಮರದ ಕೊಂಬೆ ಬಿದ್ದು ಗಾಯಗೊಂಡ ಮಗನ ಚಿಕಿತ್ಸಾ ವೆಚ್ಚವನ್ನು ಪಾವತಿಸುವುದಾಗಿ ಬಿಬಿಎಂಪಿ ಅಧಿಕಾರಿಗಳು ಹೇಳಿದ್ದರು. ಆದರೆ, ಈವರೆಗೂ ಅಧಿಕಾರಿಗಳು ನೆರವಿಗೆ ಧಾವಿಸಿಲ್ಲ. ಬಿಬಿಎಂಪಿ ನಿರ್ಲಕ್ಷ್ಯದಿಂದ ಮಗನ ಬದುಕು ಅಸಹನೀಯವಾಗಿದೆ. ಮಿದುಳು ನಿಷ್ಕ್ರಿಯವಾಗಿರುವುದರಿಂದ ಏನೂ ಮಾಡಬೇಕು ಎಂದು ತೋಚದಾಗಿದೆ. ಆಸ್ಪತ್ರೆಯ ಬಿಲ್ ಕಟ್ಟುವ ಶಕ್ತಿಯೂ ನಮಗಿಲ್ಲ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ.
ಶಿಥಿಲ ಮರಗಳ ತೆರವಿಗೆ ಮುಂದಾಗದ ಬಿಬಿಎಂಪಿ
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮಳೆ ಅಬ್ಬರ ಜೋರಾಗಿದೆ. ನಗರದ ಹಲವು ರಸ್ತೆಗಳಲ್ಲಿ ಶಿಥಿಲಾವಸ್ಥೆಯಲ್ಲಿರುವ ಹಾಗೂ ಒಣಗಿದ ಮರಗಳಿವೆ. ಬಿಬಿಎಂಪಿ ಅಧಿಕಾರಿಗಳು ಒಣ ಮರಗಳನ್ನು ತೆರವು ಮಾಡದ ಕಾರಣ ಅಕ್ಷಯ್ಗೆ ಇಂತಹ ಸ್ಥಿತಿ ಬಂದಿದೆ.
ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣವಾಗಿದೆ. ಮಳೆಗಾಲ ಹಾಗೂ ಆಷಾಢ ಮಾಸದಲ್ಲಿ ಗಾಳಿಯ ವೇಗ ಹೆಚ್ಚಿರುವುದರಿಂದ ಕೂಡಲೇ ಶಿಥಿಲ ಮರಗಳನ್ನು ತೆರವು ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.