
ಹೋಟೆಲ್ ಸಪ್ಲೈಯರ್ ಬಳಿ ಹ್ಯಾಂಡ್ ಗ್ರೆನೇಡ್ ಪತ್ತೆಯಾಗಿದೆ.
ಬೆಂಗಳೂರಿನ ಹೋಟೆಲ್ ಸಪ್ಲೈಯರ್ ಬಳಿ ಹ್ಯಾಂಡ್ ಗ್ರೆನೇಡ್ ಪತ್ತೆ
ಹೋಟೆಲ್ ಸಿಬ್ಬಂದಿಯೊಬ್ಬರು, ಆಧಾರ್ ಕಾರ್ಡ್ಗಾಗಿ ಅಬ್ದುಲ್ ರೆಹಮಾನ್ನ ಬ್ಯಾಗ್ ಪರಿಶೀಲಿಸಿದಾಗ ಗ್ರೆನೇಡ್ ಪತ್ತೆಯಾಗಿದೆ.
ಬೆಂಗಳೂರಿನ ಸಂಪಿಗೆಹಳ್ಳಿ ಠಾಣೆ ವ್ಯಾಪ್ತಿಯ ಹೋಟೆಲ್ವೊಂದರ ಸಪ್ಲೈಯರ್ ಬ್ಯಾಗ್ನಲ್ಲಿ ಹ್ಯಾಂಡ್ ಗ್ರೆನೇಡ್ ಪತ್ತೆಯಾಗಿದೆ.
ಅಬ್ದುಲ್ ರೆಹಮಾನ್ ಎಂಬಾತ ಬೆಳ್ಳಹಳ್ಳಿಯ ನಿವಾಸಿ ಎಂದು ಹೇಳಿಕೊಂಡು ವೈಭವ್ ಹೋಟೆಲ್ನಲ್ಲಿ ಸಪ್ಲೈಯರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ. ಹೋಟೆಲ್ನವರು ಆಧಾರ್ ಕಾರ್ಡ್ ಕೇಳಿದ್ದರು. ಆದರೆ ಆತ ಎರಡು ದಿನ ಕಳೆದರೂ ಸಹ ಆಧಾರ್ ಕಾರ್ಡ್ ಕೊಟ್ಟಿರಲಿಲ್ಲ. ಹೀಗಾಗಿ ಹೋಟೆಲ್ ಸಿಬ್ಬಂದಿಯೊಬ್ಬರು, ಆಧಾರ್ ಕಾರ್ಡ್ಗಾಗಿ ಅಬ್ದುಲ್ ರೆಹಮಾನ್ನ ಬ್ಯಾಗ್ ಪರಿಶೀಲಿಸಿದಾಗ ಗ್ರೆನೇಡ್ ಪತ್ತೆಯಾಗಿದೆ. ಕೂಡಲೇ ಹೋಟೆಲ್ನವರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಸಂಪಿಗೆಹಳ್ಳಿ ಪೊಲೀಸರು ಮೊದಲಿಗೆ ಹೋಟೆಲ್ನವರಿಂದ ಮಾಹಿತಿ ಪಡೆದುಕೊಂಡು ನಂತರ ರೆಹಮಾನ್ ಬ್ಯಾಗ್ ಚೆಕ್ ಮಾಡಿದಾಗ ಹ್ಯಾಂಡ್ ಗ್ರೆನೇಡ್ ಕಂಡುಬಂದಿದೆ.
ತಕ್ಷಣವೇ ಅಬ್ದುಲ್ ರೆಹಮಾನ್ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಎಲ್ಲಿಯೋ ಸಿಕ್ಕಿತ್ತು. ಬಾಂಬ್ ಮಾದರಿಯ ವಸ್ತು ರಸ್ತೆಯಲ್ಲಿ ಸಿಕ್ಕಿತ್ತು ಎಂದು ಹೇಳಿದ್ದಾನೆ ಎಂದು ತಿಳಿದುಬಂದಿದೆ.
ಸಂಪಿಗೆಹಳ್ಳಿ ಪೊಲೀಸರು ಆತನ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದು, ಗ್ರೆನೇಡ್ ಎಲ್ಲಿ ಇತ್ತು? ಅದು ಹೇಗೆ ಸಿಕ್ಕಿತು? ಅದನ್ನು ಏಕೆ ತಗೆದುಕೊಂಡುಬಂದಿದ್ದು? ಸ್ಫೋಟ ನಡೆಸುವ ಉದ್ದೇಶವೇನಾದರೂ ಇತ್ತಾ? ಆತನ ಹಿಂದೆ ಇನ್ನಾರಾದರೂ ಇದ್ದಾರೆಯೇ? ಎಂಬುದೂ ಸೇರಿದಂತೆ ಎಲ್ಲಾ ಆಯಾಮಗಳಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೂರ್ವ ವಿಭಾಗ ಜಂಟಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಟನ್ನಿಸ್ ಬಾಲ್ ಮಾದರಿಯ ವಸ್ತುವಿನಲ್ಲಿ ಕೆಮಿಕಲ್ ತುಂಬಿಸಲಾಗಿತ್ತು. ಅದಕ್ಕೆ ಎರಡು ಬತ್ತಿಗಳನ್ನು ಜೋಡಿಸಲಾಗಿತ್ತು. ಸುರಕ್ಷಿತ ಸ್ಥಳದಲ್ಲಿ ಈ ವಸ್ತುವನ್ನು ಡಿಸ್ಪೋಸ್ ಮಾಡಿದ್ದಾರೆ. ಹಾಗೇ ಆ ವಸ್ತುವಿನಲ್ಲಿದ್ದ ಕೆಮಿಕಲ್ ಸಂಗ್ರಹಿಸಿ ಎಫ್ಎಸ್ಎಲ್ ಗೆ ರವಾನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಆರೋಪಿ ಬಳಿ ಯಾವುದೇ ಮೊಬೈಲ್ ಇಲ್ಲ. ಸ್ಥಳೀಯ ಹುಡುಗನಾಗಿರುವ 23 ವರ್ಷದ ಅಬ್ದುಲ್ ರೆಹಮಾನ್ ಇದುವರೆಗೂ ಯಾವುದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿಲ್ಲ. ಸದ್ಯ ಆರೋಪಿಯ ವಿಚಾರಣೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.