ಉತ್ತರಾಖಂಡ ಚಾರಣ ದುರಂತ | ರಾಜ್ಯದ 9 ಚಾರಣಿಗರ ಮೃತದೇಹ ಇಂದು ಬೆಂಗಳೂರಿಗೆ
x

ಉತ್ತರಾಖಂಡ ಚಾರಣ ದುರಂತ | ರಾಜ್ಯದ 9 ಚಾರಣಿಗರ ಮೃತದೇಹ ಇಂದು ಬೆಂಗಳೂರಿಗೆ


ಉತ್ತರಾಖಂಡಕ್ಕೆ ಚಾರಣಕ್ಕೆ ತೆರಳಿದ್ದ ಕರ್ನಾಟಕದ 21 ಜನರ ಪೈಕಿ 9 ಜನರು ಸಾವನ್ನಪ್ಪಿದ್ದಾರೆ. ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸಹಸ್ರತಾಲ್ ಟ್ರೆಕ್ಕಿಂಗ್ ವೇಳೆ ವ್ಯತಿರಿಕ್ತ ಹವಾಮಾನದಿಂದಾಗಿ 9 ಪ್ರವಾಸಿಗರು ಮೃತಪಟ್ಟಿದ್ದು ಭಾರತೀಯ ವಾಯುಸೇನೆಯಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಹಲವರ ರಕ್ಷಣಾ ಕಾರ್ಯಾಚರಣೆ ಹಿನ್ನೆಲೆ ಕರ್ನಾಟಕದ ಸಚಿವ ಕೃಷ್ಣಬೈರೇಗೌಡ ಅವರು ಉತ್ತರಾಖಂಡಕ್ಕೆ ತೆರಳಿದ್ದಾರೆ.

ಮೃತ ಒಂಬತ್ತು ಪ್ರವಾಸಿಗರ ದೇಹಗಳನ್ನು ಬೆಂಗಳೂರಿಗೆ ಕರೆತರುವ ಬಗ್ಗೆ ʼಎಕ್ಸ್‌ʼನಲ್ಲಿ ಪೋಸ್ಟ್‌ ಮಾಡಿರುವ ಕೃಷ್ಣಬೈರೇಗೌಡ ಅವರು, ʻʻಉತ್ತರಾಖಂಡದ ಮುಖ್ಯ ಕಾರ್ಯದರ್ಶಿ ರಾಧಾ ರಾತುರಿ ಮತ್ತು ವಿಪತ್ತು ನಿರ್ವಹಣೆಯ ಕಾರ್ಯದರ್ಶಿ ರಂಜಿತ್ ಸಿನ್ಹಾ ಅವರನ್ನು ನಾನು ಇಂದು ಭೇಟಿಯಾಗಿ ಈ ವಿಪತ್ತಿನ ಸಮಯದಲ್ಲಿ ಅವರ ತ್ವರಿತ ಪ್ರತಿಕ್ರಿಯೆಗಾಗಿ ಅವರಿಗೆ ಧನ್ಯವಾದ ಅರ್ಪಿಸಿದ್ದೇನೆ. ಶವಗಳನ್ನು ಬೆಂಗಳೂರಿಗೆ ಸಾಗಿಸಲು ವಿಮಾನದ ವ್ಯವಸ್ಥೆ ಮಾಡುವಂತೆಯೂ ನಾನು ಅವರ ಸಹಾಯವನ್ನು ಕೋರಿದೆ. ಅವರು ಸಹಾಯ ಮಾಡಲು ಒಪ್ಪಿಕೊಂಡಿದ್ದಾರೆ. ಎಲ್ಲಾ 9 ಮೃತದೇಹಗಳು ಮಧ್ಯಾಹ್ನ 12 ಗಂಟೆಗೆ ಡೆಹ್ರಾಡೂನ್ ತಲುಪುವ ಸಾಧ್ಯತೆಯಿದೆ. ಸ್ಥಳೀಯ ಆಸ್ಪತ್ರೆಯಲ್ಲಿ ಎಂಬಾಮ್ ಮಾಡಿದ ನಂತರ ನಾವು ಇಂದು ಎಲ್ಲಾ ಮೃತದೇಹಗಳನ್ನು ವಿಮಾನ ಮೂಲಕ ಬೆಂಗಳೂರಿಗೆ ರವಾನಿಸಲು ಯೋಜಿಸುತ್ತಿದ್ದೇವೆʼʼ ಎಂದು ತಿಳಿಸಿದ್ದಾರೆ.

ಇದಕ್ಕೂ ಮುನ್ನ, ರಕ್ಷಿಸಲ್ಪಟ್ಟ 8 ಚಾರಣಿಗರನ್ನು ಸಚಿವರು ಡೆಹ್ರಾಡೂನ್‌ನ ಬಿಜಾಪುರ ಅತಿಥಿ ಗೃಹದಲ್ಲಿ ಭೇಟಿ ನೀಡಿದ್ದು, ಘಟನೆ ವೇಳೆ ನಿಜಕ್ಕೂ ಆಗಿದ್ದೇನು ಎಂಬುದನ್ನು ಸಚಿವರು ಮಾಹಿತಿ ಪಡೆದಿದ್ದಾರೆ. ಜೂ.3 ರಂದು ಇಬ್ಬರು ಚಾರಣಿಗರು ಮುಖ್ಯ ತಂಡದಿಂದ ಬೇರ್ಪಟ್ಟು ಚಾರಣದಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಅವರು ಅಪಾಯದಿಂದ ಪಾರಾಗಿದ್ದಾರೆ. ಆದರೆ, ಅದೇ ದಿನ ಬೆಳಿಗ್ಗೆ 20 ಚಾರಣಿಗರು ಮತ್ತು ಆ ತಂಡದ ಮಾರ್ಗದರ್ಶಿಯನ್ನೊಳಗೊಂಡ ತಂಡ ಲ್ಯಾಂಬ್ಟಾಲ್ ಕ್ಯಾಂಪ್ ಸೈಟ್‌ನಿಂದ ಸಹಸ್ರತಾಲ್‌ಗೆ ತೆರಳಿದೆ.

ಚಾರಣದ ಗುರಿ ತಲುಪಿ ವಾಪಸ್‌ ಶಿಬಿರಕ್ಕೆ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ, ಅವರು ಶಿಬಿರದಿಂದ ಸುಮಾರು ಒಂದೂವರೆ ಅಥವಾ ಎರಡು ಗಂಟೆಗಳ ದೂರದಲ್ಲಿದ್ದಾಗ, ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಹಿಮಪಾತ ಪ್ರಾರಂಭವಾಗಿದೆ. ಸಂಜೆ 4 ಗಂಟೆಯ ಹೊತ್ತಿಗೆ ಹಿಮಪಾತವು ತೀವ್ರಗೊಂಡಿದೆ. ಸಂಜೆ 6 ಗಂಟೆ ವೇಳೆಗೆ ಇಬ್ಬರು ಚಾರಣಿಗರು ಹವಾಮಾನ ವೈಪರೀತ್ಯಕ್ಕೆ ಬಲಿಯಾಗಿದ್ದಾರೆ. ಹಿಮ ಮತ್ತು ಹಿಮಗಾಳಿಯು ಚಾರಣಿಗರು ವಾಪಸ್‌ ಶಿಬಿರಕ್ಕೆ ಹಿಂದಿರುಗುವುದನ್ನು ಅಸಾಧ್ಯಗೊಳಿಸಿದೆ. ಗೋಚರತೆಯೂ ಶೂನ್ಯಕ್ಕೆ ಇಳಿದಿದೆ.

ಆ ರಾತ್ರಿ ಎಲ್ಲರೂ ಒಟ್ಟಿಗೆ ಕಳೆದಿದ್ದಾರೆ. ಆದರೆ, ಈ ವೇಳೆ ಹಿಮಗಾಳಿಯ ತೀವ್ರತೆಗೆ ಕೆಲವರು ಅದೇ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಜೂನ್ 4 ರ ಬೆಳಿಗ್ಗೆ, ಮೊಬೈಲ್ ಸಂಪರ್ಕ ಸಿಗಬಹುದಾದ ಸ್ಥಳಕ್ಕೆ ತಂಡದ ಮಾರ್ಗದರ್ಶಕ ತಲುಪಿದ್ದಾರೆ. ಈ ನಡುವೆ ಶಿಬಿರಕ್ಕೆ ಹಿಂತಿರುಗುವ ಸ್ಥಿತಿಯಲ್ಲಿದ್ದ ಕೆಲವು ಚಾರಣಿಗರು ಬೆಳಗ್ಗೆ 11 ಗಂಟೆ ಸುಮಾರಿಗೆ ಶಿಬಿರದ ಕಡೆಗೆ ಹೊರಟಿದ್ದಾರೆ. ಮಾರ್ಗದರ್ಶಕ ಶಿಬಿರಕ್ಕೆ ಬಂದು ಸಿಕ್ಕಿಬಿದ್ದ ಚಾರಣಿಗರನ್ನು ಕಾಪಾಡಲು ಬೇಕಾದ ಸಾಮಗ್ರಿಗಳೊಂದಿಗೆ ಮತ್ತೆ ಹಿಂತಿರುಗಿದ್ದಾರೆ.

ಜೂನ್ 4 ರ ಸಂಜೆ ವೇಳೆಗೆ ಮಾರ್ಗದರ್ಶಿಯು ಫೋನ್ ಸಿಗ್ನಲ್ ಲಭ್ಯವಿರುವ ಸ್ಥಳವನ್ನು ತಲುಪಿಕೊಂಡಿದ್ದು, ಪರಿಸ್ಥಿತಿಯ ಬಗ್ಗೆ ಕರ್ನಾಟಕ ಪರ್ವತಾರೋಹಣ ಸಂಸ್ಥೆ ಮತ್ತು ಭಾರತೀಯ ಪರ್ವತಾರೋಹಣ ಒಕ್ಕೂಟ ಸಂಸ್ಥೆಗಳಿಗೆ ದುರ್ಘಟನೆಯ ಬಗ್ಗೆ ಮಾಹಿತಿ ನೀಡಿ ಎಚ್ಚರಿಸಿದ್ದಾರೆ.

ಕರ್ನಾಟಕ ಮತ್ತು ಉತ್ತರಾಖಂಡ ಸರ್ಕಾರಗಳು ಜೂನ್ 4 ರ ರಾತ್ರಿ ವೇಳೆಗೆ ರಕ್ಷಣಾ ಕಾರ್ಯಾಚರಣೆಗಳ ಸಿದ್ಧತೆಗಳನ್ನು ಪ್ರಾರಂಭಿಸಿತ್ತು. ಭೂ ಸೇನೆ, ವಾಯುಪಡೆ, ಎಸ್‌ಡಿಆರ್‌ಎಫ್ ಮತ್ತು ವಿವಿಧ ಸರ್ಕಾರಿ-ಸರ್ಕಾರೇತರ ಸಂಸ್ಥೆಗಳು ಜೂನ್ 5 ರ ಬೆಳಿಗ್ಗೆ 5 ಗಂಟೆ ವೇಳೆಗೆ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ ಎಂದು ಸಚಿವರು ವಿವರಿಸಿದ್ದಾರೆ.

ರಕ್ಷಣೆಗೊಳಗಾಗಿ ಡೆಹ್ರಾಡೂನ್​ಗೆ ಸ್ಥಳಾಂತರಗೊಂಡ ಪ್ರವಾಸಿಗರ ವಿವರ

ಸೌಮ್ಯ ಕನಾಳೆ

ಸ್ಮೃತಿ ಡೊಲಾಸ್

ಸೀನಾ ಲಕ್ಷ್ಮಿ

ಎಸ್ ಶಿವಜ್ಯೋತಿ

ಅನೀಲ್ ಭಟ್

ಭರತ್ ಬೊಮ್ಮ‌ನಗೌಡರ್

ಮಧು ಕಿರಣ್ ರೆಡ್ಡಿ

ಜಯಪ್ರಕಾಶ್ ಬಿ ಎಸ್

ರಕ್ಷಣೆಗೊಳಗಾಗಿ ಬಟ್ವಾಡಿ ಪ್ರದೇಶದಲ್ಲಿ ತಂಗಿರುವ ಪ್ರವಾಸಿಗರ ವಿವರ

ಎಸ್ ಸುಧಾಕರ್

ವಿನಾಯಕ್ ಎಂಕೆ

ವಿವೇಕ್ ಶ್ರೀಧರ್

ಸಿಲ್ಲಾ ಹಳ್ಳಿಗೆ ಮರಳಿದ ಪ್ರವಾಸಿಗರ ವಿವರ

ನವೀನ್ ಎ

ರಿತಿಕಾ ಜಿಂದಾಲ್

ಮೃತ ದೇಹಗಳ ಸ್ಥಳಾಂತರಗೊಂಡವರ ವಿವರ

ಸಿಂದು ವೆಕೆಕಲಂ

ಆಶಾ ಸುಧಾಕರ್

ಸುಜಾತ ಮುನ್ಗೂರ್ವಾಡಿ

ವಿನಾಯಕ್ ಮುನ್ಗೂರ್ವಾಡಿ

ಚೈತ್ರಾ ಪ್ರಣೀತ್

ಇವರೆಗೆ ಸಿಗದ ಮೃತದೇಹಗಳು

ಅನಿತಾ ರಂಗಪ್ಪ

ಪದ್ಮಿನಿ ಹೆಗ್ಡೆ

ವೆಂಕಟೇಶ್ ಪ್ರಸಾದ್ ಕೆ.ಎನ್

Read More
Next Story