ನೆರೆಹೊರೆಯವರ ದ್ವೇಷ; ಸಾಂಬಾರ್‌ನಲ್ಲಿ ವಿಷ ಬೆರೆಸಿ 8 ಮಂದಿಯ ಕೊಲೆಗೆ ಯತ್ನಿಸಿದ್ದ ಆರೋಪಿ ಬಂಧನ
x

ಸಾಂದರ್ಭಿಕ ಚಿತ್ರ 

ನೆರೆಹೊರೆಯವರ ದ್ವೇಷ; ಸಾಂಬಾರ್‌ನಲ್ಲಿ ವಿಷ ಬೆರೆಸಿ 8 ಮಂದಿಯ ಕೊಲೆಗೆ ಯತ್ನಿಸಿದ್ದ ಆರೋಪಿ ಬಂಧನ

ಅಸ್ವಸ್ಥರನ್ನು ಕೂಡಲೇ ಬಾಗೇಪಲ್ಲಿಯಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಲಾಯಿತು. ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರದ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.


Click the Play button to hear this message in audio format

ನೆರೆಹೊರೆಯವರ ನಡುವಿನ ಹಳೆಯ ದ್ವೇಷದ ಹಿನ್ನೆಲೆಯಲ್ಲಿ, ಕುಟುಂಬವೊಂದನ್ನು ಹತ್ಯೆ ಮಾಡುವ ಉದ್ದೇಶದಿಂದ ಆಹಾರಕ್ಕೆ ವಿಷ ಬೆರೆಸಿದ ಪರಿಣಾಮವಾಗಿ ಒಂದೇ ಕುಟುಂಬದ ಎಂಟು ಮಂದಿ ತೀವ್ರ ಅಸ್ವಸ್ಥರಾಗಿರುವ ಆಘಾತಕಾರಿ ಘಟನೆ ತಾಲೂಕಿನ ದೇವರೆಡ್ಡಿಪಲ್ಲಿ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಗ್ರಾಮದ ನಿವಾಸಿಗಳಾದ ಮಡ್ಡಿರೆಡ್ಡಿ ಮತ್ತು ಪಾಪಿರೆಡ್ಡಿ ಅವರ ಮನೆಗಳು ಅಕ್ಕಪಕ್ಕದಲ್ಲಿವೆ. ಇವರಿಬ್ಬರ ಕುಟುಂಬಗಳ ನಡುವೆ ಒಳಚರಂಡಿ ವಿಚಾರವಾಗಿ ಕಳೆದ ಕೆಲವು ದಿನಗಳಿಂದ ಆಗಾಗ ಜಗಳ ನಡೆಯುತ್ತಿತ್ತು. ಇದರಿಂದಾಗಿ ಮಡ್ಡಿರೆಡ್ಡಿ ಕುಟುಂಬದ ಮೇಲೆ ತೀವ್ರ ದ್ವೇಷ ಬೆಳೆಸಿಕೊಂಡಿದ್ದ ಪಾಪಿರೆಡ್ಡಿ, ಅವರ ಇಡೀ ಕುಟುಂಬವನ್ನು ಮುಗಿಸಲು ಸಂಚು ರೂಪಿಸಿದ್ದಾನೆ. ಈ ಕೃತ್ಯ ಎಸಗಲು ಆತ ಚೌಡರೆಡ್ಡಿ ಎಂಬುವವನಿಗೆ ಪ್ರಚೋದನೆ ನೀಡಿದ್ದಾನೆ ಎಂದು ಹೇಳಲಾಗಿದೆ.

ವಿಷ ಬೆರೆಸಿದ್ದು ಹೇಗೆ?

ಪಾಪಿರೆಡ್ಡಿಯ ಮಾತಿನಂತೆ, ಚೌಡರೆಡ್ಡಿ ಗುರುವಾರ ರಾತ್ರಿ ಕುಡಿಯುವ ನೀರು ಕೇಳುವ ನೆಪದಲ್ಲಿ ಮಡ್ಡಿರೆಡ್ಡಿ ಅವರ ಮನೆಗೆ ಹೋಗಿದ್ದಾನೆ. ಈ ವೇಳೆ, ಮನೆಯಲ್ಲಿದ್ದವರು ಅಡುಗೆ ಮಾಡುತ್ತಿದ್ದು, ಇದನ್ನೇ ಅವಕಾಶವಾಗಿ ಬಳಸಿಕೊಂಡ ಆತ, ಅವರು ಸಿದ್ಧಪಡಿಸಿದ್ದ ಸಾಂಬಾರ್‌ಗೆ ವಿಷಕಾರಿ ರಾಸಾಯನಿಕವನ್ನು ಬೆರೆಸಿ ಪರಾರಿಯಾಗಿದ್ದಾನೆ. ಈ ವಿಷಯ ತಿಳಿಯದ ಮಡ್ಡಿರೆಡ್ಡಿ ಕುಟುಂಬದ ಎಂಟು ಮಂದಿ ಸದಸ್ಯರು ಅದೇ ಸಾಂಬಾರ್ ಸೇವಿಸಿ, ಕೆಲವೇ ಹೊತ್ತಿನಲ್ಲಿ ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ. ವಾಂತಿ ಮತ್ತು ಹೊಟ್ಟೆನೋವಿನಿಂದ ಬಳಲುತ್ತಿದ್ದ ಅವರನ್ನು ತಕ್ಷಣವೇ ಸ್ಥಳೀಯರ ಸಹಾಯದಿಂದ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.

ಚಿಕಿತ್ಸೆ ಮತ್ತು ಪೊಲೀಸ್ ಕ್ರಮ

ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ, ಹೆಚ್ಚಿನ ಚಿಕಿತ್ಸೆಗಾಗಿ ಎಲ್ಲರನ್ನೂ ಚಿಕ್ಕಬಳ್ಳಾಪುರದ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. "ಅಪರಾಧಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ಅವರು ಭರವಸೆ ನೀಡಿದ್ದಾರೆ. ಬಾಗೇಪಲ್ಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೃತ್ಯ ಎಸಗಿದ ಆರೋಪಿ ಚೌಡರೆಡ್ಡಿಯನ್ನು ಪೊಲೀಸರು ಬಂಧಿಸಿದ್ದಾರೆ. ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

Read More
Next Story