
ವಿಜಯಪುರ | ತೆರೆದ ಕೊಳವೆ ಬಾವಿಗೆ ಬಿದ್ದ ಮಗು: ರಕ್ಷಣಾ ಕಾರ್ಯ ಆರಂಭ
500 ಅಡಿ ಕೊಳವೆ ಬಾವಿಗೆ ಎರಡು ವರ್ಷದ ಗಂಡು ಮಗು ಆಯತಪ್ಪಿ ಬಿದ್ದಿರುವ ಆಘಾತಕಾರಿ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.
ತೆರೆದ ಕೊಳವೆ ಬಾವಿಗೆ ೧೪ ತಿ ಂಗಳ ಮಗು ಬಿದ್ದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಎಂಬ ಗ್ರಾಮದಲ್ಲಿ ಬುಧವಾರ ನಡೆದಿದೆ.
ಸಾತ್ವಿಕ್ ಮುಜಗೊಂಡ ತೆರೆದ ಕೊಳವೆ ಬಾವಿಗೆ ಬಿದ್ದಿರುವ ಮಗು. ಸಂಜೆ ಹೊತ್ತು ಆಟವಾಡಲು ಹೋಗಿದ್ದ ವೇಳೆ ಮಗು ಕೊಳವೆ ಬಾವಿಗೆ ಬಿದ್ದಿದೆ.
ಮಗುವಿನ ತಂದೆ ಸತೀಶ್, ತಮ್ಮ ನಾಲ್ಕು ಎಕರೆ ಹೊಲದಲ್ಲಿರುವ ಕಬ್ಬು ಮತ್ತು ನಿಂಬೆ ಬೆಳೆಗೆ ನೀರಿಲ್ಲ ಎಂದು 500 ಅಡಿ ಆಳದ ಕೊಳವೆ ಬಾವಿ ಕೊರೆಸಿದ್ದರು. ಕೊಳವೆ ಬಾವಿಯನ್ನು ಸರಿಯಾಗಿ ಮುಚ್ಚದೆ ಬಿಟ್ಟಿದ್ದರಿಂದ ದುರಂತ ಸಂಭವಿಸಿದೆ.
ಕೊಳವೆ ಬಾವಿಗೆ ಬಿದ್ದಿರುವ ಮಗು ಸುಮಾರು 16 ರಿಂದ 20 ಅಡಿ ಆಳದಲ್ಲಿ ಸಿಲುಕಿದೆ ಎಂದು ಮಾಹಿತಿ ಲಭ್ಯವಾಗಿದೆ. ಮಗುವಿನ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದ್ದು, ವಿಷಯ ತಿಳಿದು ಅಕ್ಕ ಪಕ್ಕದ ಗ್ರಾಮಸ್ಥರು ಸೇರಿದಂತೆ ನೂರಾರು ಮಂದಿ ಸ್ಥಳದಲ್ಲಿ ಜಮಾಯಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಇಂಡಿ ಗ್ರಾಮಾಂತರ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿಗಳೊಂದಿಗೆ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಜನರನ್ನು ನಿಯಂತ್ರಿಸಲು ಹೆಚ್ಚುವರಿ ಪೊಲೀಸರನ್ನೂ ನಿಯೋಜಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.