
ವಿಜಯಪುರದಲ್ಲಿ ನಡೆದ ವೃಕ್ಷಥಾನ್ ಪಾರಂಪರಿಕ ಓಟ-2025ರಲ್ಲಿ ಭಾಗವಹಿಸಿದ್ದ ಯುವಕರು.
ಕೋಟಿವೃಕ್ಷ ಅಭಿಯಾನದಿಂದ ವಿಜಯಪುರದಲ್ಲಿ ಶೇ.2 ಅರಣ್ಯ; 2035ರವೇಳೆಗೆ 5ಕೋಟಿ ಸಸಿ ನೆಡುವ ಗುರಿ
ಪರಿಸರ ಹಾಗೂ ಪಾರಂಪರಿಕ ಸ್ಮಾರಕಗಳ ರಕ್ಷಣೆಯ ಜಾಗೃತಿ ಮೂಡಿಸುವುದು ಇಂದಿನ ತುರ್ತು ಕೆಲಸವಾಗಿದೆ. ಪರಿಸರದ ಮಹತ್ವ ತಿಳಿಸಿಕೊಡುವುದು ಇಂದಿನ ಅಗತ್ಯವೂ ಆಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಪರಿಸರ ಕಾಳಜಿ ಹೊಂದಬೇಕು ಎಂದು ಎಂ.ಬಿ. ಪಾಟೀಲ್ ತಿಳಿಸಿದರು.
ಕೋಟಿ ವೃಕ್ಷ ಅಭಿಯಾನದಿಂದ ಜಿಲ್ಲೆಯ ಅರಣ್ಯ ಪ್ರದೇಶ ವಿಸ್ತೀರ್ಣ ಶೇ.0.17 ರಿಂದ ಶೇ.2 ಕ್ಕೆ ತಲುಪಿದೆ. 2035ರ ವೇಳೆಗೆ ಜಿಲ್ಲೆಯಲ್ಲಿ 5 ಕೋಟಿ ಗಿಡ ನೆಡುವ ಗುರಿ ಹೊಂದಲಾಗಿದ್ದು, ಈ ನಿಟ್ಟಿನಲ್ಲಿ ಅರಣ್ಯೀಕರಣದ ಮಹತ್ವದ ಬಗ್ಗೆ ಜಾಗೃತಿ ಅಗತ್ಯವಾಗಿದೆ ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.
ಭಾನುವಾರ (ಡಿ.7) ಜಿಲ್ಲಾಡಳಿತ ಹಾಗೂ ವೃಕ್ಷ ಅಭಿಯಾನ ಪ್ರತಿಷ್ಠಾನದ ಸಂಯುಕ್ತಾಶ್ರಯದಲ್ಲಿ ಪರಿಸರ, ಪ್ರಾಚೀನ ಸ್ಮಾರಕಗಳ ಸಂರಕ್ಷಣೆಗೆ ಆಯೋಜಿಸಿದ್ದ ವೃಕ್ಷಥಾನ್ ಪಾರಂಪರಿಕ ಓಟ-2025 ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭವಿಷ್ಯದಲ್ಲಿ ಪರಿಸರ ಹಾಗೂ ಭವ್ಯ ಸ್ಮಾರಕಗಳ ಸಂರಕ್ಷಣೆ ಈ ಕಾರ್ಯಕ್ರಮದ ಉದ್ಧೇಶವಾಗಿದ್ದು, ನಮ್ಮ ಮುಂದಿನ ಪೀಳಿಗೆಗೆ ಸ್ವಚ್ಚ ಸುಂದರ ಪರಿಸರ ಒದಗಿಸಿಕೊಡುವುದು ಹೊಣೆ ನಮ್ಮದಾಗಿದೆ ಎಂದರು.
ಸ್ಮಾರಕಗಳ ರಕ್ಷಣೆ ಇಂದಿನ ತುರ್ತು
ಪರಿಸರ ಹಾಗೂ ಪಾರಂಪರಿಕ ಸ್ಮಾರಕಗಳ ರಕ್ಷಣೆಯ ಜಾಗೃತಿ ಮೂಡಿಸುವುದು ಇಂದಿನ ತುರ್ತು ಕೆಲಸವಾಗಿದೆ. ಪರಿಸರದ ಮಹತ್ವ ತಿಳಿಸಿಕೊಡುವುದು ಇಂದಿನ ಅಗತ್ಯವೂ ಆಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಪರಿಸರ ಕಾಳಜಿ ಹೊಂದಬೇಕು. ಜಿಲ್ಲೆಯಲ್ಲಿರುವ ಐತಿಹಾಸಿಕ ಸ್ಮಾರಕಗಳ ರಕ್ಷಣೆ, ಗಿಡ-ಮರಗಳನ್ನು ಬೆಳೆಸಿ ಸ್ವಚ್ಛ ಸುಂದರ ಪರಿಸರ ನಿರ್ಮಾಣ ಮಾಡುವ ಪ್ರತಿಯೊಬ್ಬರು ಕೈ ಜೋಡಿಸುವಂತೆ ಅವರು ಕರೆ ನೀಡಿದರು.
1.5 ಕೋಟಿ ಗಿಡ ನೆಟ್ಟು ಪೋಷಣೆ
ಜಿಲ್ಲೆಯಲ್ಲಿ ಹಲವಾರು ಐತಿಹಾಸಿಕ ಸ್ಮಾರಕಗಳಿವೆ. ಅವುಗಳನ್ನು ಸಂರಕ್ಷಣೆ ಮಾಡಿ, ಅಭಿವೃದ್ಧಿಪಡಿಸಿ ಸ್ಮಾರಕಗಳ ಬಗ್ಗೆ ವ್ಯಾಪಕ ತಿಳುವಳಿಕೆ ಮೂಡಿಸಬೇಕು. ವೃಕ್ಷಥಾನ ಪಾರಂಪರಿಕ ಓಟ ಇತಿಹಾಸ ನಿರ್ಮಾಣ ಮಾಡಿದೆ. ಜಲಸಂಪನ್ಮೂಲ ಸಚಿವನಾಗಿದ್ದ ಸಂದರ್ಭದಲ್ಲಿ 2016-17ರ ಅವಧಿಯಲ್ಲಿ ಕೋಟಿ ವೃಕ್ಷ ಅಭಿಯಾನ ಆರಂಭಿಸುವ ಮೂಲಕ ಜಿಲ್ಲೆಯ ಅರಣ್ಯೀಕರಣವನ್ನು ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ. ಕೋಟಿ ವೃಕ್ಷ ಅಭಿಯಾನ ಪ್ರಾರಂಭ ಮಾಡಿ, ಜಿಲ್ಲೆಯಲ್ಲಿ 1.5 ಕೋಟಿ ಗಿಡಗಳನ್ನು ನೆಟ್ಟು ಪೋಷಿಸಲಾಗಿದೆ ಎಂದರು.
ಪರಿಸರ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸಸಿಗಳ ನೆಡುವ ಹಾಗೂ ಅರಣ್ಯೀಕರಣದ ಮೂಲಕ ಪರಿಸರ ಉಳಿಸಿ ಬೆಳೆಸಬೇಕು. ಸ್ಮಾರಕಗಳ ರಕ್ಷಣೆ ವೃಕ್ಷಥಾನ ಆಯೋಜನೆಯ ಸಂದೇಶ ಸಾಕಾರಗೊಳ್ಳಲಿ, ಓಟದಲ್ಲಿ ಸೋಲು ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯವಾಗಿದೆ. ಐತಿಹಾಸಿಕ ಸ್ಮಾರಕಗಳ ರಕ್ಷಣೆಯೊಂದಿಗೆ ಪರಿಸರ ಜಾಗೃತಿ ಮೂಡಿಸುವ ಅಂಗವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

