
ಒಂದು ವರ್ಷದಲ್ಲಿ ರಾಜ್ಯದ ಎಂಟು ಮಂದಿ ಸೇರಿ ದೇಶದಲ್ಲಿ 191 ಪೊಲೀಸ್ ಅಧಿಕಾರಿ, ಸಿಬ್ಬಂದಿ ಮೃತ
ಕರ್ತವ್ಯ ನಿರತ ಅವಧಿಯಲ್ಲಿ ಪ್ರಾಣ ತ್ಯಾಗ ಮಾಡಿದ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಗೌರವ ಪೂರಕವಾಗಿ ಸ್ಮರಿಸುವ ಸಲುವಾಗಿ ರಾಷ್ಟ್ರಾದ್ಯಂತ ಪ್ರತಿ ವರ್ಷ ಅ. 21ರಂದು ಪೊಲೀಸ್ ಸಂಸ್ಮರಣಾ ದಿನಾಚರಣೆ ಆಚರಿಸಲಾಗುವುದು ಎಂದು ತಿಳಿಸಿದೆ.
ಕಳೆದೊಂದು ವರ್ಷದಲ್ಲಿ ದೇಶಾದ್ಯಂತ ಒಟ್ಟು 191 ವಿವಿಧ ದರ್ಜೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಕಾರ್ಯನಿರ್ವಹಣೆಯ ಅವಧಿಯಲ್ಲಿ ಮೃತಪಟ್ಟಿದ್ದು, ಕರ್ನಾಟಕದಲ್ಲಿ ಎಂಟು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಮರಣ ಹೊಂದಿದ್ದಾರೆ ಎಂದು ರಾಜ್ಯ ಗೃಹ ಇಲಾಖೆ ತಿಳಿಸಿದೆ.
2024 ನೇ ಸೆ. 2 ರಿಂದ 2025ನೇ ಆ. 31ರ ನಡುವಿನ ಅವಧಿಯಲ್ಲಿ ರಾಷ್ಟ್ರದ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಾಗ ಕರ್ತವ್ಯ ನಿರತ ಅವಧಿಯಲ್ಲಿ ಪ್ರಾಣ ತ್ಯಾಗ ಮಾಡಿದ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಗೌರವ ಪೂರಕವಾಗಿ ಸ್ಮರಿಸುವ ಸಲುವಾಗಿ ರಾಷ್ಟ್ರಾದ್ಯಂತ ಪ್ರತಿ ವರ್ಷ ಅ. 21ರಂದು ಪೊಲೀಸ್ ಸಂಸ್ಮರಣಾ ದಿನಾಚರಣೆ ಆಚರಿಸಲಾಗುವುದು ಎಂದು ತಿಳಿಸಿದೆ.
ಪೊಲೀಸ್ ಸಂಸ್ಮರಣಾ ದಿನಾಚರಣೆ ಇತಿಹಾಸ
1959 ಅ. 21 ರಂದು ಕೇಂದ್ರ ಮೀಸಲು ಪೊಲೀಸ್ ಪಡೆಯ ಎಸ್ಐ ಕರಂ ಸಿಂಗ್ ನೇತೃತ್ವದ 20 ಜನರ ತಂಡ ಭಾರತ ಮತ್ತು ಚೀನಾ ದೇಶದ ಗಡಿ ಪ್ರದೇಶದ ಲಡಾಕ್ ಹಾಟ್ಸ್ಟಿಂಗ್ ಎಂಬ ಸ್ಥಳದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ ನೆರೆಯ ಚೀನಾ ದೇಶದ ಸೈನಿಕರು ಹಠಾತ್ತನೆ ಆಕ್ರಮಣ ಮಾಡಿ ಕರಂ ಸಿಂಗ್ ಮತ್ತು ಇತರೆ ಒಂಬತ್ತು ಸಿಬ್ಬಂದಿಯನ್ನು ಹತ್ಯೆ ಮಾಡಿದ್ದು, ಹುತಾತ್ಮರ ದೇಹಗಳನ್ನು 1959 ಅ. 28 ರಂದು ಭಾರತಕ್ಕೆ ಹಸ್ತಾಂತರಿಸಿದ್ದರು. ಈ ವೇಳೆ ಅವರಿಗೆ ಸಕಲ ಪೊಲೀಸ್ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ಮಾಡಲಾಗಿತ್ತು. ಈ ಘಟನೆಯಲ್ಲಿ ಪ್ರಾಣ ತ್ಯಾಗ ಮಾಡಿದವರ ನೆನಪಿನಲ್ಲಿ ಪ್ರತಿವರ್ಷ ಅ.21ರಂದು ಮೃತರ ಗೌರವಾರ್ಥ ಪೊಲೀಸ್ ಸಂಸ್ಮರಣಾ ದಿನಾಚರಣೆ ಆಚರಿಸಲಾಗುತ್ತದೆ.
ರಾಜ್ಯದಲ್ಲಿ ಮೃತಪಟ್ಟ ಅಧಿಕಾರಿ ಮತ್ತು ಸಿಬ್ಬಂದಿ
ಬೆಂಗಳೂರು ನಗರ ತಲಘಟ್ಟಪುರ ಪೊಲೀಸ್ ಠಾಣೆಯ ಪಿಎಸ್ಐ ಮೆಬೂಬು ಗುಡ್ಡಲಿಲ್, ಕೆಜಿಎಫ್ನ ಬಿಇಎಂಎಲ್ ನಗರ ಪೊಲೀಸ್ ಠಾಣೆಯ ಎಎಸ್ಐ ವೆಂಕಟಾಚಲಪತಿ, ತುಮಕೂರು ಜಿಲ್ಲೆಯ ಡಿಎಆರ್ನ ಎಆರ್ಎಸ್ಐ ಗಿರೀಶ್ ಎಸ್. ಎಹೆಚ್ಸಿ ನಿಂಗರಾಜ್ ಟಿ.ಎಸ್, ಬೆಂಗಳೂರು ಜಿಲ್ಲೆಯ ದಾಬಸ್ಪೇಟೆ ಪೊಲೀಸ್ ಠಾಣೆಯ ಸಿಹೆಚ್ಸಿ ಬಸವರಾಜ ಎಂ. ಹಾಸನ ಕೆಎಸ್ಆರ್ಪಿ 11 ನೇ ಪಡೆಯ ಆರ್ಹೆಚ್ಸಿ ಪ್ರಕಾಶ್ ಬಿ.ಯು, ಮಾಗಡಿ ರಸ್ತೆ ಸಂಚಾರ ಪೊಲೀಸ್ ಠಾಣೆಯ ಹೆಚ್ಸಿ ಮಹೇಶ್ ಎನ್.ಆರ್. ಮತ್ತು ದಾವಣಗೆರೆ ಜಿಲ್ಲೆಯ ಡಿಎಆರ್ನ ಎಪಿಸಿ ರಾಮಪ್ಪ ಪೂಜಾರಿ ಕಳೆದ ಒಂದು ವರ್ಷದಲ್ಲಿ ಕರ್ತವ್ಯದಲ್ಲಿದ್ದಾಗ ವಿವಿಧ ಘಟನೆಗಳಲ್ಲಿ ಮೃತರಾಗಿದ್ದರು.
ಸಿಎಂ, ಗೃಹ ಸಚಿವರಿಂದ ಗೌರವ ನಮನ
ನಗರದ ಮೈಸೂರು ರಸ್ತೆ ಸಿಎಆರ್ ಕೇಂದ್ರದಲ್ಲಿ ಮಂಗಳವಾರ (ಅ.21) ಪೊಲೀಸ್ ಸಂಸ್ಮರಣಾ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹುತಾತ್ಮರಿಗೆ ಗೌರವ ನಮನಗಳನ್ನು ಸಲ್ಲಿಸಲಿದ್ದಾರೆ ಎಂದು ಗೃಹ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.