
ವಯೋಮಿತಿ ವಿನಾಯಿತಿ ಕುರಿತು ಪೊಲೀಸ್ ಇಲಾಖೆ ಹೊರಡಿಸಿರುವ ಆದೇಶ
Age Relaxation for Police|ಸ್ಪರ್ಧಾರ್ಥಿಗಳಿಗೆ ಸಿಹಿಸುದ್ದಿ, ಪೊಲೀಸ್ ನೇಮಕಾತಿಗೆ 5 ವರ್ಷ ವಯೋಮಿತಿ ವಿನಾಯ್ತಿ!
ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 27 ವರ್ಷಗಳು, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ 30 ವರ್ಷ ನಿಗದಿಪಡಿಸಿದೆ.
ರಾಜ್ಯ ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರವು ಸಿಹಿ ಸುದ್ದಿಯೊಂದನ್ನು ನೀಡಿದೆ. ವಿವಿಧ ಇಲಾಖೆಗಳ ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಕಾಲ ಸಡಿಲಿಕೆ ಆದೇಶವನ್ನು ಪೊಲೀಸ್ ಇಲಾಖೆ ತನ್ನ ನೇಮಕಗಳಲ್ಲಿ ಅಳವಡಿಸಿಕೊಂಡಿದೆ.
ಈ ಕುರಿತು ಮಂಗಳವಾರ (ಮಾ.24) ಆದೇಶ ಹೊರಡಿಸಿರುವ ಆಡಳಿತ ವಿಭಾಗದ ಡಿಐಜಿಪಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಸರ್ಕಾರದ ಆದೇಶದನ್ವಯ ವಯೋಮಿತಿ ಸಡಿಲಿಕೆಯು ಒಂದು ಬಾರಿಯ ವಿಶೇಷ ಕ್ರಮವಾಗಿದೆ. 2027ರ ಡಿಸೆಂಬರ್ 31ರೊಳಗೆ ಹೊರಡಿಸಲಾಗುವ ಎಲ್ಲಾ ನೇರ ನೇಮಕಾತಿ ಅಧಿಸೂಚನೆಗಳಿಗೆ ಈ ನಿಯಮ ಅನ್ವಯವಾಗಲಿದೆ. ಚಾಲ್ತಿಯಲ್ಲಿರುವ ನೇಮಕಾತಿ ನಿಯಮಗಳಿಗಿಂತ ಹೆಚ್ಚುವರಿಯಾಗಿ 5 ವರ್ಷಗಳ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ವಯೋಮಿತಿ ವಿನಾಯ್ತಿ ಆದೇಶ ಪ್ರತಿ
ಈಗಿರುವ ವಯೋಮಿತಿ ಎಷ್ಟು ?
ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 27 ವರ್ಷಗಳು, ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ 30 ವರ್ಷಗಳು ನಿಗದಿಪಡಿಸಿದೆ. ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಲು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 30 ವರ್ಷಗಳು, ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ 32 ವರ್ಷಗಳು ನಿಗದಿಪಡಿಸಲಾಗಿದೆ. ಇದೀಗ ಐದು ವರ್ಷ ವಯೋಮಿತಿ ವಯೋಮಿತಿ ನೀಡಿರುವುದರಿಂದ ಸ್ಪರ್ಧಾರ್ಥಿಗಳಿಗೆ ಮತ್ತಷ್ಟು ಅವಕಾಶ ನೀಡಿದಂತಾಗಿದೆ. ಈ ಆದೇಶ ಕೆಎಸ್ಆರ್ಪಿ, ನಾಗರಿಕ, ಸಶಸ್ತ್ರ ಮೀಸಲುಪಡೆ ಸೇರಿ ಎಲ್ಲ ವಿಭಾಗಕ್ಕೂ ಅನ್ವಯವಾಗಲಿದೆ.
ಅಧಿಸೂಚನೆಗೆ ಸಿದ್ಧವಾಗಿರುವ ಹುದ್ದೆಗಳೆಷ್ಟು ?
ಪೊಲೀಸ್ ಇಲಾಖೆಯ ಡಿಟೆಕ್ಟಿವ್ ಸಬ್ ಇನ್ಸ್ಪೆಕ್ಟರ್ 20, ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ 1,650, ನಾಗರಿಕ ಪೊಲೀಸ್ ಕಾನ್ಸ್ಟೇಬಲ್ 4,110, ಮೀಸಲು ಪೊಲೀಸ್ ಪಡೆ(ಕೆಎಸ್ಆರ್ಪಿ) 2,032 ಹಾಗೂ ಕೆಎಸ್ಐಎಸ್ಎಫ್ನ ಕಾನ್ಸ್ಟೇಬಲ್ 364 ಸೇರಿ ಒಟ್ಟು 8,176 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲು ಸಿದ್ಧತೆ ನಡೆಸಿದೆ.
ಉದ್ಯೋಗಾಕಾಂಕ್ಷಿಗಳಲ್ಲಿ ಹರ್ಷ
ಕಳೆದ ಕೆಲವು ವರ್ಷಗಳಿಂದ ನೇಮಕಾತಿ ವಿಳಂಬ ಮತ್ತು ಕೋವಿಡ್ ಸೇರಿದಂತೆ ವಿವಿಧ ಕಾರಣಗಳಿಂದಾಗಿ ವಯೋಮಿತಿ ಮೀರಿ ಅವಕಾಶ ವಂಚಿತರಾಗಿದ್ದ ಸಾವಿರಾರು ಅಭ್ಯರ್ಥಿಗಳಿಗೆ ಈ ನಿರ್ಧಾರವು ಹೊಸ ಭರವಸೆ ನೀಡಿದೆ. ಇದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನ ಪೈಪೋಟಿ ಮತ್ತು ಪಾರದರ್ಶಕತೆಗೆ ದಾರಿಯಾಗಲಿದ್ದು, ರಾಜ್ಯದ ನಿರುದ್ಯೋಗ ಸಮಸ್ಯೆಯನ್ನು ತಗ್ಗಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ನಿರೀಕ್ಷಿಸಲಾಗಿದೆ.

