
ಕಾಂಬೋಡಿಯಾದ 'ಸೈಬರ್ ಗುಲಾಮಗಿರಿ' ಜಾಲದಿಂದ ಪಾರಾದ ಉತ್ತರ ಪ್ರದೇಶದ ವ್ಯಕ್ತಿ
ಭಾರತೀಯ ಗೃಹ ಸಚಿವಾಲಯದ ಅಧೀನದಲ್ಲಿರುವ ಐ4ಸಿ ಮತ್ತು ಕಾಂಬೋಡಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕ ಸಾಧಿಸಿದ ಪೊಲೀಸರು, ಕಾಂಬೋಡಿಯಾ ಅಧಿಕಾರಿಗಳ ನೆರವಿನೊಂದಿಗೆ ರಾಣಾ ಅವರನ್ನು ಆ ನರಕದಿಂದ ರಕ್ಷಿಸುವಲ್ಲಿ ಯಶಸ್ವಿಯಾದರು.
ವಿದೇಶಿ ಉದ್ಯೋಗದ ಆಮಿಷಕ್ಕೆ ಬಲಿಯಾಗಿ ಕಾಂಬೋಡಿಯಾದಲ್ಲಿ ಸೈಬರ್ ವಂಚಕರ ಜಾಲಕ್ಕೆ ಸಿಲುಕಿ 'ಬಂಧಿ'ಯಾಗಿದ್ದ ಉತ್ತರ ಪ್ರದೇಶದ ಬಾಗ್ಪತ್ ಮೂಲದ ವಿಕಾಸ್ ರಾಣಾ ಎಂಬುವವರನ್ನು ಯಶಸ್ವಿಯಾಗಿ ರಕ್ಷಿಸಿ ಭಾರತಕ್ಕೆ ಕರೆತರಲಾಗಿದೆ.
ಬಾಗ್ಪತ್ನ ಘೇನೌರಾ ಸಿಲ್ವರ್ ನಗರದ ನಿವಾಸಿ ವಿಕಾಸ್ ರಾಣಾ, ಉತ್ತಮ ಉದ್ಯೋಗದ ಆಸೆಯೊಂದಿಗೆ ಕಾಂಬೋಡಿಯಾಕ್ಕೆ ತೆರಳಿದ್ದರು. ಆದರೆ ಅಲ್ಲಿ ಅವರನ್ನು ಅಕ್ರಮವಾಗಿ ಕೂಡಿಹಾಕಿ, ಸೈಬರ್ ವಂಚನೆ ಕೃತ್ಯಗಳಲ್ಲಿ ಬಲವಂತವಾಗಿ ಭಾಗಿಯಾಗುವಂತೆ ಒತ್ತಾಯಿಸಲಾಗಿತ್ತು. ಇದನ್ನು ವಿರೋಧಿಸಿದಾಗ ಅವರನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸಿಸಲಾಗುತ್ತಿತ್ತು ಎನ್ನಲಾಗಿದೆ.
ಪೊಲೀಸರ ಕಾರ್ಯಾಚರಣೆ
ತನ್ನ ಪತಿಯನ್ನು ಬಲವಂತವಾಗಿ ಕೂಡಿಹಾಕಲಾಗಿದೆ ಎಂದು ವಿಕಾಸ್ ಅವರ ಪತ್ನಿ ಡಾಲಿ ನೀಡಿದ ದೂರಿನ ಮೇರೆಗೆ ಬಾಗ್ಪತ್ ಪೊಲೀಸರು ತನಿಖೆ ಆರಂಭಿಸಿದರು. ಮೀರತ್ ವಲಯದ ಎಡಿಜಿಪಿ ಮತ್ತು ಡಿಐಜಿ ಅವರ ನಿರ್ದೇಶನದಂತೆ ಸೈಬರ್ ಸೆಲ್ ಕಾರ್ಯಾಚರಣೆ ಇಳಿಯಿತು.
ಭಾರತೀಯ ಗೃಹ ಸಚಿವಾಲಯದ ಅಧೀನದಲ್ಲಿರುವ ಐ4ಸಿ ಮತ್ತು ಕಾಂಬೋಡಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕ ಸಾಧಿಸಿದ ಪೊಲೀಸರು, ಕಾಂಬೋಡಿಯಾ ಅಧಿಕಾರಿಗಳ ನೆರವಿನೊಂದಿಗೆ ರಾಣಾ ಅವರನ್ನು ಆ ನರಕದಿಂದ ರಕ್ಷಿಸುವಲ್ಲಿ ಯಶಸ್ವಿಯಾದರು.
ಏನಿದು ಸೈಬರ್ ಗುಲಾಮಗಿರಿ?
ಇತ್ತೀಚಿನ ದಿನಗಳಲ್ಲಿ ಕಾಂಬೋಡಿಯಾ, ಮ್ಯಾನ್ಮಾರ್, ಲಾವೋಸ್ನಂತಹ ದೇಶಗಳಲ್ಲಿ "ಸೈಬರ್ ಗುಲಾಮಗಿರಿ" ಎಂಬ ಸಂಘಟಿತ ಅಪರಾಧ ಜಾಲ ಹೆಚ್ಚುತ್ತಿದೆ. ಯುವಕರನ್ನು ಉದ್ಯೋಗದ ನೆಪದಲ್ಲಿ ವಿದೇಶಕ್ಕೆ ಕರೆಸಿಕೊಂಡು, ಅವರ ಪಾಸ್ಪೋರ್ಟ್ ಕಸಿದು, ಆನ್ಲೈನ್ ಮೂಲಕ ಜನರಿಗೆ ವಂಚಿಸುವ ಕೆಲಸವನ್ನು ಬಲವಂತವಾಗಿ ಮಾಡಿಸುವುದೇ ಈ ಜಾಲದ ಕೆಲಸ. ವಿಕಾಸ್ ರಾಣಾ ರಕ್ಷಣೆ ಇಂತಹ ನೂರಾರು ಪ್ರಕರಣಗಳಿಗೆ ಒಂದು ಆಶಕಿರಣವಾಗಿದೆ.

