
ಸಮಾರಂಭದಲ್ಲಿ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ್ ಹಾಗೂ ಡಾ. ಎಂ.ಸಿ. ಸುಧಾಕರ್ ಭಾಗವಹಿಸಿದ್ದರು.
ಜರ್ಮನಿಯಲ್ಲಿ ಉದ್ಯೋಗ ಪಡೆಯಲು ಕೌಶಲ್ಯ ಸೇತು ಸಹಕಾರಿ: ಸಚಿವ ಡಾ. ಶರಣಪ್ರಕಾಶ್ ಪಾಟೀಲ್
ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ತರಬೇತಿ, ಸಂಪೂರ್ಣ ಪಾರದರ್ಶಕತೆ, ಸುರಕ್ಷತೆ ಮತ್ತು ಘನತೆಯೊಂದಿಗೆ ಯುವಕರು ಜರ್ಮನಿಗೆ ವಲಸೆ ಹೋಗಲು ಅನುವು ಮಾಡಿಕೊಡುತ್ತದೆ ಎಂದು ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ತಿಳಿಸಿದರು.
ಕರ್ನಾಟಕದ ಕೌಶಲ್ಯಪೂರ್ಣ ಯುವಕರು ಜರ್ಮನಿಯಲ್ಲಿ ಉದ್ಯೋಗ ಮತ್ತು ಗೌರವಾನ್ವಿತ ನೆಲೆ ಕಂಡುಕೊಳ್ಳಲು ಕೌಶಲ್ಯ ಸೇತುವೆ ಯೋಜನೆ ರೂಪಿಸಲಾಗಿದೆ ಎಂದು ಸಚಿವ ಡಾ. ಶರಣಪ್ರಕಾಶ್ ಆರ್. ಪಾಟೀಲ್ ತಿಳಿಸಿದರು.
ಜರ್ಮನಿ ಪ್ರವಾಸ ಕೈಗೊಂಡಿರುವ ಸಚಿವರಗಳ ನಿಯೋಗದ ನೇತೃತ್ವ ವಹಿಸಿರುವ ಅವರು, ಫ್ರಾಂಕ್ಫರ್ಟ್ನಲ್ಲಿ ಶನಿವಾರ(ಜು.5) ಬೆಂಗಳೂರು - ಜರ್ಮನಿ ಕೌಶಲ್ಯ ಸೇತುವೆ ಯೋಜನೆಗೆ ಚಾಲನೆ ನೀಡಿ ಮಾತನಾಡಿ, ರಾಜ್ಯ ಸರ್ಕಾರವು ಸ್ಕಿಲ್ಸ್ ಬ್ರಿಡ್ಜ್ ನೆಟ್ವರ್ಕ್ ಅನ್ನು ಪ್ರಾರಂಭಿಸಿದೆ. ಇದು ಕರ್ನಾಟಕದ ಪ್ರಮುಖ ಸರ್ಕಾರಿ ಉಪಕರಣ ತರಬೇತಿ ಕೇಂದ್ರ (GTTC) ಹಾಗೂ ಜರ್ಮನ್ ವೃತ್ತಿಪರ ಸಂಸ್ಥೆಗಳು ಮತ್ತು ಉದ್ಯೋಗದಾತರ ನಡುವಿನ ದೀರ್ಘಕಾಲೀನ ದ್ವಿಪಕ್ಷೀಯ ಪಾಲುದಾರಿಕೆಯಾಗಿದೆ. ಇದು ಒಂದು ಬಾರಿಯ ತಾತ್ಕಾಲಿಕ ಅಥವಾ ಪ್ರಾಯೋಗಿಕ ಯೋಜನೆಯಲ್ಲ. ಬದಲಿಗೆ ದೀರ್ಘಾವಧಿಯ ಪಾಲುದಾರಿಕೆಯ ಕ್ರಮವಾಗಿದೆ ಎಂದರು.
ವಿದ್ಯಾರ್ಥಿಗಳಿಗೆ ಕರ್ನಾಟಕದಲ್ಲಿ ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ತರಬೇತಿ, ಸಂಪೂರ್ಣ ಪಾರದರ್ಶಕತೆ, ಸುರಕ್ಷತೆ ಮತ್ತು ಘನತೆಯೊಂದಿಗೆ ಜರ್ಮನಿಗೆ ವಲಸೆ ಹೋಗಲು ಅನುವು ಮಾಡಿಕೊಡುತ್ತದೆ. ನಮ್ಮ ಯುವಕರು ಜರ್ಮನಿಯಲ್ಲಿರುವ ಕಂಪನಿ ಹಾಗೂ ಆಸ್ಪತ್ರೆಗಳಿಗೆ ಆತ್ಮವಿಶ್ವಾಸದಿಂದ ಹೆಜ್ಜೆ ಇರಿಸಬೇಕು ಎಂಬುದು ನಮ್ಮ ಆಶಯವಾಗಿದೆ. ಇದಕ್ಕಾಗಿ ಸರ್ಕಾರ ಮಹತ್ವದ ಯೋಜನೆ ಜಾರಿಗೆ ತಂದಿದೆ ಎಂದು ತಿಳಿಸಿದರು.
ಯುವ ಸಮುದಾಯಕ್ಕೆ ಬೆಂಬಲ ನೀಡಿ
ಕರ್ನಾಟಕದಿಂದ ಬರುವ ಯುವ ಸಮುದಾಯಕ್ಕೆ ಇಲ್ಲಿನ ಕನ್ನಡಿಗರು ಭಾವನಾತ್ಮಕ ಮತ್ತು ಸಾಂಸ್ಕೃತಿಕ ಬೆಂಬಲವನ್ನು ನೀಡಬೇಕು ಎಂದು ಮನವಿ ಮಾಡಿದರು. ಆರೋಗ್ಯ ರಕ್ಷಣೆ, ಸಾರಿಗೆ, ಉತ್ಪಾದನೆ ಸೇರಿದಂತೆ ಕೈಗಾರಿಕೆ ಕ್ಷೇತ್ರಗಳಲ್ಲಿ ಕೌಶಲ್ಯಪೂರ್ಣ ಕೆಲಸಗಾರರಿಗೆ ಜರ್ಮನಿಯಲ್ಲಿ ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ನಾವು ಸೌಲಭ್ಯಗಳನ್ನು ಒದಗಿಸುತ್ತಿದ್ದೇವೆ. ರಾಜ್ಯದಲ್ಲಿ ಪ್ರತಿ ವರ್ಷ ತರಬೇತಿ ಪಡೆದ ಲಕ್ಷಾಂತರ ಯುವಕರು ಕ್ಯಾಂಪಸ್ಗಳಿಂದ ಹೊರ ಬರುತ್ತಿದ್ದಾರೆ. ಉತ್ತಮ ಅವಕಾಶಗಳನ್ನು ಬಳಸಿಕೊಳ್ಳಬೇಕಾದ ಸಮಯ ಇದಾಗಿದೆ ಎಂದರು.
ಕೌಶಲ್ಯ ಕೇಂದ್ರಗಳ ಆರಂಭ
2026 ರ ವೇಳೆಗೆ ವಾರ್ಷಿಕವಾಗಿ 500 ಯುವಕರನ್ನು ಜರ್ಮನ್ ಸಂಸ್ಥೆಗಳಿಗೆ ಕಳುಹಿಸಲಾಗುವುದು. 2030 ರ ವೇಳೆಗೆ ಇದನ್ನು 1,000 ಕ್ಕೆ ಹೆಚ್ಚಿಸಲು ಸರ್ಕಾರ ಗುರಿ ಹೊಂದಿದೆ. ಇದಕ್ಕಾಗಿ ಬೆಂಗಳೂರು, ಮೈಸೂರು, ಕಲಬುರಗಿ ಮತ್ತು ಇತರ ಜಿಲ್ಲೆಗಳಲ್ಲಿ ಕೌಶಲ್ಯ ಕೇಂದ್ರಗಳನ್ನು ಆರಂಭಿಸಲಾಗಿದೆ. ಇವು ಜರ್ಮನ್ ಭಾಷಾ ಪ್ರಯೋಗಾಲಯಗಳು, ಅಂತಾರಾಷ್ಟ್ರೀಯ ಪಠ್ಯಕ್ರಮ ಮತ್ತು ಪೂರ್ವ- ನಿರ್ಗಮನ ತರಬೇತಿ ಮಾಡ್ಯೂಲ್ಗಳನ್ನು ಹೊಂದಿವೆ ಎಂದು ಮಾಹಿತಿ ನೀಡಿದರು.
ಶೀಘ್ರವೇ ಡಿಜಿಟಲ್ ಟ್ರಾಕಿಂಗ್ ವ್ಯವಸ್ಥೆ
ಪ್ರತಿಯೊಬ್ಬ ವಿದ್ಯಾರ್ಥಿಯ ಮೇಲ್ವಿಚಾರಣೆ ಮಾಡಲು ಡಿಜಿಟಲ್ ಟ್ರ್ಯಾಕಿಂಗ್ ವ್ಯವಸ್ಥೆ ಪರಿಚಯಿಸಲಾಗುವುದು. ಕೌಶಲ್ಯ, ಸುರಕ್ಷತೆ ಮತ್ತು ಸಾಮಾಜಿಕ ಘನತೆಗೆ ಆದ್ಯತೆ ನೀಡುವ ಸರ್ಕಾರಿ ನಿಯಂತ್ರಿತ ಜಾಗತಿಕ ಚಲನಶೀಲತೆ ಟ್ರ್ಯಾಕ್ ಅನ್ನು ಆರಂಭಿಸಿರುವ ಮೊದಲ ರಾಜ್ಯ ಎಂಬ ಹೆಗ್ಗಳಿಕೆ ಕರ್ನಾಟಕದ್ದಾಗಲಿದೆ. ಇದು ಪರಸ್ಪರ ಗೌರವ ಮತ್ತು ಹಂಚಿಕೆಯ ಸಮೃದ್ಧಿಯ ಭವಿಷ್ಯವನ್ನು ನಿರ್ಮಿಸುವ ವಿಶೇಷ ಉಪ ಕ್ರಮವಾಗಿದೆ ಎಂದರು.