ರಾಜಮಂಡ್ರಿ ಕಲಬೆರಕೆ ಹಾಲು ಪ್ರಕರಣ: ಕಿಡ್ನಿ ವೈಫಲ್ಯದಿಂದ 16 ಮಂದಿ ಸಾವು, ಮುಂದುವರಿದ ಆತಂಕ
x

ರಾಜಮಂಡ್ರಿ ಕಲಬೆರಕೆ ಹಾಲು ಪ್ರಕರಣ: ಕಿಡ್ನಿ ವೈಫಲ್ಯದಿಂದ 16 ಮಂದಿ ಸಾವು, ಮುಂದುವರಿದ ಆತಂಕ

ಫೆಬ್ರವರಿ ತಿಂಗಳ ಮಧ್ಯಭಾಗದಲ್ಲಿ ಲಾಲಾಚೆರುವು, ಚೌಡೇಶ್ವರಿ ನಗರ ಹಾಗೂ ಸ್ವರೂಪನಗರ ಪ್ರದೇಶಗಳಲ್ಲಿ ಸರಬರಾಜು ಮಾಡಲಾಗಿದ್ದ ವಿಷಪೂರಿತ ಹಾಲು ಸೇವಿಸಿದವರಿಗೆ ಏಕಾಏಕಿ ಅನಾರೋಗ್ಯ ಉಂಟಾಗಿತ್ತು.


Click the Play button to hear this message in audio format

ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ರಾಜಮಹೇಂದ್ರವರಂನಲ್ಲಿ (ರಾಜಮಂಡ್ರಿ) ವರದಿಯಾಗಿದ್ದ ವಿಷಪೂರಿತ ಕಲಬೆರಕೆ ಹಾಲು ಸೇವನೆ ಪ್ರಕರಣವು ಇದೀಗ ಭೀಕರ ಸ್ವರೂಪ ಪಡೆದುಕೊಂಡಿದೆ. ಇದುವರೆಗೆ ಸಾವನ್ನಪ್ಪಿದವರ ಸಂಖ್ಯೆ 16ಕ್ಕೆ ಏರಿಕೆಯಾಗಿದ್ದು, ಇನ್ನು ಮೂವರು ತೀವ್ರ ನಿಗಾ ಘಟಕದಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ಸ್ಪಷ್ಟಪಡಿಸಿದ್ದಾರೆ.

ಫೆಬ್ರವರಿ ತಿಂಗಳ ಮಧ್ಯಭಾಗದಲ್ಲಿ ಲಾಲಾಚೆರುವು, ಚೌಡೇಶ್ವರಿ ನಗರ ಹಾಗೂ ಸ್ವರೂಪನಗರ ಪ್ರದೇಶಗಳಲ್ಲಿ ಸರಬರಾಜು ಮಾಡಲಾಗಿದ್ದ ವಿಷಪೂರಿತ ಹಾಲು ಸೇವಿಸಿದವರಿಗೆ ಏಕಾಏಕಿ ವಾಂತಿ, ತೀವ್ರ ಹೊಟ್ಟೆನೋವು ಹಾಗೂ ಕಿಡ್ನಿ ವೈಫಲ್ಯದ ಲಕ್ಷಣಗಳು ಕಾಣಿಸಿಕೊಂಡಿದ್ದವು.

ವಿಷಕಾರಿ 'ಎಥಿಲೀನ್ ಗ್ಲೈಕೋಲ್' ಪತ್ತೆ

ಫೆಬ್ರವರಿ 16 ರಿಂದ ಮಾರ್ಚ್ 21 ರವರೆಗೆ ಒಟ್ಟು 20 ಮಂದಿಯನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು. ಭಾನುವಾರ ಬಿಡುಗಡೆಯಾದ ಅಧಿಕೃತ ಪತ್ರಿಕಾ ಪ್ರಕಟಣೆ ಹಾಗೂ ಪ್ರಯೋಗಾಲಯದ ವರದಿಗಳ ಪ್ರಕಾರ, 'ಎಥಿಲೀನ್ ಗ್ಲೈಕೋಲ್' ಎಂಬ ಅತ್ಯಂತ ವಿಷಕಾರಿ ರಾಸಾಯನಿಕ ಬೆರೆತ ಹಾಲನ್ನು ಸೇವಿಸಿದ್ದೇ ಈ ದುರಂತಕ್ಕೆ ಕಾರಣವಾಗಿದೆ.

ಈ ರಾಸಾಯನಿಕವು ರಕ್ತದಲ್ಲಿನ ಯೂರಿಯಾ ಮತ್ತು ಸೀರಮ್ ಕ್ರಿಯೇಟಿನೈನ್ ಮಟ್ಟವನ್ನು ತೀವ್ರವಾಗಿ ಹೆಚ್ಚಿಸಿದ್ದು, ಇದು ನೇರವಾಗಿ ಮೂತ್ರಪಿಂಡಗಳ (ಕಿಡ್ನಿ) ವೈಫಲ್ಯಕ್ಕೆ ಹಾಗೂ ತರುವಾಯ ಬಹು-ಅಂಗಾಂಗ ವೈಫಲ್ಯಕ್ಕೆ ಕಾರಣವಾಗಿದೆ. ಮೃತಪಟ್ಟವರಲ್ಲಿ ವಯೋವೃದ್ಧರು ಮತ್ತು ಮಕ್ಕಳೂ ಸೇರಿದ್ದು, ಹಲವರಿಗೆ ಡಯಾಲಿಸಿಸ್ ಹಾಗೂ ವೆಂಟಿಲೇಟರ್ ಬೆಂಬಲ ಒದಗಿಸಲಾಗಿತ್ತು. ಸದ್ಯ ಆಸ್ಪತ್ರೆಗೆ ದಾಖಲಾದ 20 ಮಂದಿಯ ಪೈಕಿ 16 ಮಂದಿ ಸಾವನ್ನಪ್ಪಿದ್ದು, ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ ಹಾಗೂ ಕೇವಲ ಒಬ್ಬರು ಮಾತ್ರ ಗುಣಮುಖರಾಗಿ ಮನೆಗೆ ಮರಳಿದ್ದಾರೆ.

ಪೂರೈಕೆ ಸ್ಥಗಿತ, ವ್ಯಾಪಾರಿ ಬಂಧನ

ಕೊರುಕೊಂಡ ಮಂಡಲದ ನರಸಾಪುರಂ ಗ್ರಾಮದಲ್ಲಿರುವ ಡೈರಿ ಘಟಕದಿಂದ ಈ ಪ್ರದೇಶದ ಸುಮಾರು 100 ಕ್ಕೂ ಹೆಚ್ಚು ಕುಟುಂಬಗಳಿಗೆ ಈ ಮಾರಣಾಂತಿಕ ಹಾಲನ್ನು ಪೂರೈಸಲಾಗುತ್ತಿತ್ತು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಆ ಘಟಕದಿಂದ ಹಾಲಿನ ಪೂರೈಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.

ಮೃತರೊಬ್ಬರ ಪುತ್ರ ತಾಡಿ ಸೀತಾರಾಮಯ್ಯ ಅವರು ನೀಡಿದ ದೂರಿನ ಮೇರೆಗೆ, ಪೊಲೀಸರು ಬಿಎನ್‌ಎಸ್‌ಎಸ್ ಕಾಯ್ದೆಯ ಸೆಕ್ಷನ್ 194ರ (ಅಸ್ವಾಭಾವಿಕ ಸಾವು) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಹಾಲು ಮಾರಾಟಗಾರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವಿಧಿವಿಜ್ಞಾನ ತಜ್ಞರು (ಫೋರೆನ್ಸಿಕ್) ಡೈರಿ ಘಟಕದ ಆವರಣವನ್ನು ಪರಿಶೀಲಿಸಿ ಮಹತ್ವದ ಸಾಕ್ಷ್ಯಗಳನ್ನು ಕಲೆಹಾಕಿದ್ದಾರೆ.

ಮನೆ-ಮನೆ ಸಮೀಕ್ಷೆ ಹಾಗೂ ವೈದ್ಯಕೀಯ ತಂಡಗಳ ಕಟ್ಟೆಚ್ಚರ

ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಆರೋಗ್ಯ ಇಲಾಖೆಯು ತಜ್ಞ ವೈದ್ಯರು ಹಾಗೂ ಸಾಂಕ್ರಾಮಿಕ ರೋಗಶಾಸ್ತ್ರಜ್ಞರನ್ನು ಒಳಗೊಂಡ ತ್ವರಿತ ಸ್ಪಂದನಾ ತಂಡಗಳನ್ನು (RRT) ರಚಿಸಿದೆ. ಈ ಪ್ರದೇಶದಲ್ಲಿ ಮನೆ-ಮನೆ ಸಮೀಕ್ಷೆ ನಡೆಸಿ 300 ಕ್ಕೂ ಹೆಚ್ಚು ಜನರ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗಿದ್ದು, ಹೆಚ್ಚಿನವರ ವರದಿಗಳು ಸಹಜವಾಗಿವೆ ಎಂದು ಅಧಿಕಾರಿಗಳು ಅಭಯ ನೀಡಿದ್ದಾರೆ. ಇದರ ಜೊತೆಗೆ ಆಹಾರ ಸುರಕ್ಷತಾ ಇಲಾಖೆ ಹಾಗೂ ಪಶುಸಂಗೋಪನಾ ಇಲಾಖೆಯು ಹಾಲು, ಮೊಸರು, ತುಪ್ಪ, ಪನೀರ್, ಜಾನುವಾರುಗಳ ಮೇವು ಹಾಗೂ ನೀರಿನ ಮಾದರಿಗಳನ್ನು ಸಂಗ್ರಹಿಸಿ ಸೂಕ್ಷ್ಮಜೀವಿ ಮತ್ತು ರಾಸಾಯನಿಕ ವಿಶ್ಲೇಷಣೆಗಾಗಿ ಪ್ರಯೋಗಾಲಯಗಳಿಗೆ ರವಾನಿಸಿದೆ. ಹೈದರಾಬಾದ್‌ನಿಂದ ಆಗಮಿಸಿರುವ ಹಿರಿಯ ಆರೋಗ್ಯಾಧಿಕಾರಿಗಳು ಚಿಕಿತ್ಸಾ ಪ್ರೋಟೋಕಾಲ್‌ನ ಉಸ್ತುವಾರಿ ವಹಿಸಿಕೊಂಡಿದ್ದು, ಸದ್ಯ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಜಿಲ್ಲಾಡಳಿತ ಭರವಸೆ ನೀಡಿದೆ.

Read More
Next Story