PM Modi Vows to Protect Farmers’ Interests as US Tariffs on India Take Effect
x

ಪ್ರಧಾನಿ ನರೇಂದ್ರ ಮೋದಿ

ರೈತರ ಹಿತಾಸಕ್ತಿ ವಿಚಾರದಲ್ಲಿ ರಾಜಿ ಇಲ್ಲ: ಅಮೆರಿಕ ಸುಂಕದೇಟಿಗೆ ಪ್ರಧಾನಿ ಮೋದಿ ಪ್ರತ್ಯುತ್ತರ

"ರೈತರ ಹಿತಾಸಕ್ತಿಯೇ ನಮ್ಮ ಮೊದಲ ಆದ್ಯತೆ. ಭಾರತವು ತನ್ನ ರೈತರು, ಜಾನುವಾರು ಸಾಕಣೆದಾರರು ಮತ್ತು ಮೀನುಗಾರರ ಹಿತಾಸಕ್ತಿಗಳೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ" ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.


ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತೀಯ ಆಮದುಗಳ ಮೇಲೆ ವಿಧಿಸಿದ ಶೇ. 25ರಷ್ಟು ಸುಂಕವು ಗುರುವಾರದಿಂದ ಅಧಿಕೃತವಾಗಿ ಜಾರಿಗೆ ಬಂದಿದ್ದು, ಅದಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಭಾರತವು ತನ್ನ ರೈತರು ಮತ್ತು ಮೀನುಗಾರರ ಹಿತಾಸಕ್ತಿಗಳೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಗುರುವಾರ ದೆಹಲಿಯಲ್ಲಿ ನಡೆದ ಎಂ.ಎಸ್. ಸ್ವಾಮಿನಾಥನ್ ಶತಮಾನೋತ್ಸವದ ಅಂತರರಾಷ್ಟ್ರೀಯ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, "ರೈತರ ಹಿತಾಸಕ್ತಿಯೇ ನಮ್ಮ ಮೊದಲ ಆದ್ಯತೆ. ಭಾರತವು ತನ್ನ ರೈತರು, ಜಾನುವಾರು ಸಾಕಣೆದಾರರು ಮತ್ತು ಮೀನುಗಾರರ ಹಿತಾಸಕ್ತಿಗಳೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಇದಕ್ಕಾಗಿ ನಾನು ವೈಯಕ್ತಿಕವಾಗಿ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ನನಗೆ ತಿಳಿದಿದೆ, ಆದರೆ ನಾನು ಸಿದ್ಧನಿದ್ದೇನೆ. ದೇಶದ ರೈತರಿಗಾಗಿ ಭಾರತ ಸಿದ್ಧವಾಗಿದೆ," ಎಂದು ಬಲವಾದ ಸಂದೇಶ ರವಾನಿಸಿದರು.

ಪ್ರಧಾನಿ ಈ ಹೇಳಿಕೆ ನೀಡುತ್ತಿದ್ದಂತೆಯೇ ಭಾರತೀಯ ಆಮದುಗಳ ಮೇಲೆ ಸುಂಕವು ಜಾರಿಗೆ ಬಂದಿದೆ. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಟ್ರಂಪ್, "ಅಮೆರಿಕದ ಲಾಭ ಪಡೆದಿದ್ದ ದೇಶಗಳಿಂದ ಇದೀಗ ಶತಕೋಟಿಗಟ್ಟಲೆ ಡಾಲರ್​ಗಳು ಅಮೆರಿಕಕ್ಕೆ ಹರಿದು ಬರಲಿವೆ" ಎಂದು ಘೋಷಿಸಿದ್ದಾರೆ. ಕಳೆದ ವಾರ ಘೋಷಿಸಲಾದ ಶೇ. 25ರಷ್ಟು ಸುಂಕದ ಜೊತೆಗೆ, ರಷ್ಯಾದಿಂದ ತೈಲ ಖರೀದಿಸಿದ್ದಕ್ಕಾಗಿ ಭಾರತದ ಮೇಲೆ ಬುಧವಾರ ಹೆಚ್ಚುವರಿಯಾಗಿ ಶೇ. 25ರಷ್ಟು ಸುಂಕ ವಿಧಿಸಲಾಗಿದೆ. ಈ ಹೆಚ್ಚುವರಿ ಸುಂಕವು ಆಗಸ್ಟ್ 27ರಿಂದ ಜಾರಿಗೆ ಬರಲಿದ್ದು, ಭಾರತದ ಮೇಲಿನ ಒಟ್ಟು ಸುಂಕವನ್ನು ಶೇ. 50ಕ್ಕೆ ಏರಿಸಲಿದೆ.

ವಿಭಿನ್ನ ಪ್ರತಿಕ್ರಿಯೆ

ಅಮೆರಿಕದ ಈ ಕ್ರಮಕ್ಕೆ ಭಾರತೀಯ-ಅಮೆರಿಕನ್ ಸಮುದಾಯದಿಂದ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಇದನ್ನು "ತಾತ್ಕಾಲಿಕ ಹಿನ್ನಡೆ" ಎಂದು ಬಣ್ಣಿಸಿ, ಉಭಯ ರಾಷ್ಟ್ರಗಳ ಮಾತುಕತೆಗಳು ಶೀಘ್ರದಲ್ಲೇ ಯಶಸ್ವಿಯಾಗಲಿವೆ ಎಂದು ಆಶಾವಾದ ವ್ಯಕ್ತಪಡಿಸಿದೆ. ಆದರೆ, ಭಾರತೀಯ-ಅಮೆರಿಕನ್ ಸಮುದಾಯದ ಮುಖಂಡ ಮತ್ತು ಅಧ್ಯಕ್ಷ ಬೈಡನ್ ಅವರ ಮಾಜಿ ಸಲಹೆಗಾರರಾದ ಅಜಯ್ ಭೂಟೋರಿಯಾ, ಟ್ರಂಪ್ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿದ್ದಾರೆ. "ಈ ಸುಂಕಗಳಿಂದ ಅಮೆರಿಕದಲ್ಲಿ ಜನಸಾಮಾನ್ಯರಿಗೆ ಅಗತ್ಯವಿರುವ ಜೆನೆರಿಕ್ ಔಷಧಗಳು, ಬಟ್ಟೆ ಮತ್ತು ದಿನಸಿ ಪದಾರ್ಥಗಳ ಬೆಲೆ ಗಗನಕ್ಕೇರಲಿದೆ. ಚೀನಾಗೆ ಸುಂಕ ವಿರಾಮ ನೀಡಿ, ಪ್ರಜಾಪ್ರಭುತ್ವದ ಮಿತ್ರರಾಷ್ಟ್ರವಾದ ಭಾರತವನ್ನು ಗುರಿಯಾಗಿಸುವುದು ದ್ವಂದ್ವ ನೀತಿಯಾಗಿದೆ," ಎಂದು ಅವರು ಆಕ್ಷೇಪಿಸಿದ್ದಾರೆ.

ಈ ಹೊಸ ಬೆಳವಣಿಗೆಯು, ಕೃಷಿ ಮತ್ತು ಹೈನುಗಾರಿಕೆಯಂತಹ ನಿರ್ಣಾಯಕ ಕ್ಷೇತ್ರಗಳಲ್ಲಿನ ಭಿನ್ನಾಭಿಪ್ರಾಯಗಳಿಂದಾಗಿ ಈ ಹಿಂದೆ ಸ್ಥಗಿತಗೊಂಡಿದ್ದ ಭಾರತ-ಅಮೆರಿಕ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮಾತುಕತೆಗಳ ಮೇಲೆ ಮತ್ತಷ್ಟು ಪರಿಣಾಮ ಬೀರುವ ಸಾಧ್ಯತೆಯಿದೆ.

Read More
Next Story