
ನುವಾಕೋಟ್ ಜಿಲ್ಲೆಯ ಬೆಟ್ರಾವತಿಯಲ್ಲಿ ಮಣ್ಣಿನಲ್ಲಿ ಹೂತುಹೋಗಿದ್ದ ನಾಲ್ಕು ಅಂತಸ್ತಿನ ಮನೆಯ ಮೇಲ್ಭಾಗದಲ್ಲಿ 64 ವರ್ಷದ ಚಂಡಿಕಾ ಕುಮಾರಿ ಶ್ರೇಷ್ಠಾ ಜೀವಂತವಾಗಿ ಪತ್ತೆಯಾಗಿದ್ದಾರೆ.
ನೇಪಾಳ ಪ್ರವಾಹ| ಸತ್ತಿದ್ದಾಳೆಂದು ಭಾವಿಸಿದ್ದ ಮಹಿಳೆ ಮಣ್ಣಿನಡಿ ಜೀವಂತ ಪತ್ತೆ
ನುವಾಕೋಟ್ ಜಿಲ್ಲೆಯ ಬೆಟ್ರಾವತಿಯಲ್ಲಿ ನಾಲ್ಕು ಅಂತಸ್ತಿನ ಮನೆಯೊಂದು ಮಣ್ಣಿನಲ್ಲಿ ಹೂತುಹೋಗಿತ್ತು. ಅಲ್ಲಿ ಸಿಲುಕಿಕೊಂಡಿದ್ದ 64 ವರ್ಷದ ಚಂಡಿಕಾ ಕುಮಾರಿ ಶ್ರೇಷ್ಠಾ ಜೀವಂತವಾಗಿ ಪತ್ತೆಯಾಗಿದ್ದಾರೆ.
ನೇಪಾಳದಲ್ಲಿ ಆಗಸ್ಟ್ 26ರಂದು ಸಂಭವಿಸಿದ ಹಿಮನದಿ ಕುಸಿತದ ಬಳಿಕ ಉಂಟಾದ ಭೀಕರ ಪ್ರವಾಹ ಮತ್ತು ಭೂಕುಸಿತದ ನಡುವೆ ಪವಾಡ ಸದೃಶ ರಕ್ಷಣಾ ಕಾರ್ಯಗಳು ಮುಂದುವರಿದಿವೆ. ನುವಾಕೋಟ್ ಜಿಲ್ಲೆಯ ಬೆಟ್ರಾವತಿಯಲ್ಲಿ ಮಣ್ಣಿನಲ್ಲಿ ಹೂತುಹೋಗಿದ್ದ ನಾಲ್ಕು ಅಂತಸ್ತಿನ ಮನೆಯ ಮೇಲ್ಭಾಗದಲ್ಲಿ 64 ವರ್ಷದ ಚಂಡಿಕಾ ಕುಮಾರಿ ಶ್ರೇಷ್ಠಾ ಜೀವಂತವಾಗಿ ಪತ್ತೆಯಾಗಿದ್ದಾರೆ. ಕುಟುಂಬಸ್ಥರು ಅವರು ಮೃತಪಟ್ಟಿದ್ದಾರೆಂದು ಭಾವಿಸಿ ಅಂತ್ಯಕ್ರಿಯೆ ವಿಧಿಗಳನ್ನು ಆರಂಭಿಸಿದ್ದರೂ, ರಕ್ಷಣಾ ಸಿಬ್ಬಂದಿಗೆ ಅವರ ಧ್ವನಿ ಕೇಳಿಬಂದಿದ್ದು, ಬಳಿಕ ಅವರನ್ನು ಸುರಕ್ಷಿತವಾಗಿ ಹೊರತೆಗೆದು ಕಠ್ಮಂಡುವಿನ ಆಸ್ಪತ್ರೆಗೆ ಏರ್ಲಿಫ್ಟ್ ಮಾಡಲಾಗಿದೆ.
9 ದಿನ ಸುರಂಗದಲ್ಲಿದ್ದ ಇಬ್ಬರು ಕಾರ್ಮಿಕರು ಪಾರು
ಮತ್ತೊಂದೆಡೆ, ಅಪ್ಪರ್ ತ್ರಿಶೂಲಿ-3A ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ಸುಮಾರು 170 ಮೀಟರ್ ಆಳದಲ್ಲಿ ಒಂಬತ್ತು ದಿನ ಸಿಲುಕಿದ್ದ ಸ೦ಜಯ್ ಶಾ ಮತ್ತು ಕಬೀರ್ ಮಹಾರ್ಜನ್ ಅವರನ್ನು ರಕ್ಷಣಾ ಸಿಬ್ಬಂದಿ ಜೀವಂತವಾಗಿ ಹೊರತೆಗೆದಿದ್ದಾರೆ. ಪ್ರವಾಹದ ನೀರು ಮತ್ತು ಮಣ್ಣಿನಿಂದ ತುಂಬಿದ್ದ ಸುರಂಗದಲ್ಲಿ ದಿನಗಟ್ಟಲೆ ಸಿಲುಕಿದ್ದ ಅವರು ಬದುಕುಳಿದಿರುವುದು ರಕ್ಷಣಾ ಕಾರ್ಯಾಚರಣೆಯ ದೊಡ್ಡ ಯಶಸ್ಸು ಎಂದು ಹೇಳಲಾಗಿದೆ.
225 ಮೀಟರ್ ಆಳದಿಂದ ಚೀನಿ ಪ್ರಜೆಯ ರಕ್ಷಣೆ
ಇದೇ ವೇಳೆ ಮತ್ತೊಂದು ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ಸುಮಾರು 225 ಮೀಟರ್ ಆಳದಲ್ಲಿ ಸಿಲುಕಿದ್ದ ಚೀನಾದ ಪ್ರಜೆ ಲು ಹೈತಾವೊ ಅವರನ್ನು ಕೂಡ ರಕ್ಷಿಸಲಾಗಿದೆ. ಸೀಮಿತ ಸಂಪರ್ಕ ಮತ್ತು ಕಠಿಣ ಪರಿಸ್ಥಿತಿಯ ನಡುವೆಯೂ ಅವರು ಸುರಂಗದ ಎತ್ತರದ ಭಾಗದಲ್ಲಿ ಆಶ್ರಯ ಪಡೆದು ಬದುಕುಳಿದಿದ್ದರು.
ಭೀಕರ ದುರಂತದ ನಡುವೆ ಬದುಕಿನ ನಿರೀಕ್ಷೆ
ಆಗಸ್ಟ್ 26ರಂದು ಸಂಭವಿಸಿದ ಹಿಮನದಿ ಕುಸಿತದ ಬಳಿಕ ನೇಪಾಳದ ಹಲವು ಪ್ರದೇಶಗಳಲ್ಲಿ ಭೀಕರ ಪ್ರವಾಹ ಮತ್ತು ಮಣ್ಣಿನ ಕುಸಿತ ಉಂಟಾಗಿದ್ದು, 1,300ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಸಾವಿರಾರು ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. ಈ ನಡುವೆ ಅವಶೇಷಗಳು ಮತ್ತು ಸುರಂಗಗಳೊಳಗಿಂದ ಜೀವಂತವಾಗಿ ಜನರು ಪತ್ತೆಯಾಗುತ್ತಿರುವುದು ರಕ್ಷಣಾ ತಂಡಗಳು ಹಾಗೂ ಕುಟುಂಬಗಳಲ್ಲಿ ಹೊಸ ಭರವಸೆ ಮೂಡಿಸಿದೆ.

