
ಹಿಮನದಿ ಕುಸಿತದ ಬಳಿಕ ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ಒಂಬತ್ತು ದಿನ ಸಿಲುಕಿದ್ದ ಇಬ್ಬರು ಕಾರ್ಮಿಕರು ಪವಾಡಸದೃಶವಾಗಿ ಬದುಕುಳಿದಿದ್ದಾರೆ.
ನೇಪಾಳ ಪ್ರವಾಹ: ಸಾವಿನ ದವಡೆಯಿಂದ 9 ದಿನಗಳ ಬಳಿಕ ಇಬ್ಬರು ಪಾರು
ಸುರಂಗದೊಳಗೆ ಸಿಲುಕಿದ್ದ ಇಬ್ಬರ ಬದುಕುಳಿಯಲು ಪ್ರವಾಹದ ನೀರನ್ನೇ ಕುಡಿಯಬೇಕಾಯಿತು. ಹೊರಗೆ ರಕ್ಷಣಾ ಕಾರ್ಯಾಚರಣೆಗಳು ಪ್ರತಿಕೂಲ ಹವಾಮಾನ ಮತ್ತು ಅಪಾರ ಪ್ರಮಾಣದ ಅವಶೇಷಗಳಿಂದಾಗಿ ನಿಧಾನಗೊಂಡಿದ್ದವು.
ನೇಪಾಳದಲ್ಲಿ ಭೀಕರ ಪ್ರವಾಹ ಹಾಗೂ ಹಿಮನದಿ ಕುಸಿತದ ಬಳಿಕ ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ಒಂಬತ್ತು ದಿನ ಸಿಲುಕಿದ್ದ ಇಬ್ಬರು ಕಾರ್ಮಿಕರು ಪವಾಡಸದೃಶವಾಗಿ ಬದುಕುಳಿದಿದ್ದಾರೆ. ಕಬೀರ್ ಮಹಾರ್ಜನ್ ಮತ್ತು ಸಂಜಯ್ ಸಾಹ್ ಅವರನ್ನು ರಕ್ಷಣಾ ಸಿಬ್ಬಂದಿ ಸುರಕ್ಷಿತವಾಗಿ ಹೊರತೆಗೆದಿದ್ದಾರೆ.
ಆಗಸ್ಟ್ 26ರಂದು ನೇಪಾಳದ ಟ್ರಿಶುಲಿ ಕಣಿವೆಯಲ್ಲಿ ಹಿಮನದಿ ಕುಸಿತದಿಂದ ಭಾರಿ ಪ್ರಮಾಣದ ನೀರು, ಕೆಸರು ಹಾಗೂ ಬಂಡೆಗಳು ಅಪ್ಪಳಿಸಿದ್ದವು. ಇದರಿಂದ ವ್ಯಾಪಕ ಹಾನಿಯಾಗಿದ್ದು, 1,300ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಹಲವು ಜಲವಿದ್ಯುತ್ ಯೋಜನೆಗಳಿಗೂ ಭಾರೀ ಹಾನಿಯಾಗಿದೆ.
ಅಪ್ಪರ್ ತ್ರಿಶೂಲಿ 3Aಜಲವಿದ್ಯುತ್ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಕಬೀರ್ ಮಹಾರ್ಜನ್ ಮತ್ತು ಸಂಜಯ್ ಸಾಹ್ ಪ್ರವಾಹದಿಂದ ತಪ್ಪಿಸಿಕೊಳ್ಳಲು ಇಳಿಜಾರಿನ ಕೇಬಲ್-ಡಕ್ಟ್ ಸುರಂಗದೊಳಗೆ ಆಶ್ರಯ ಪಡೆದಿದ್ದರು. ಸುರಂಗದ ಪ್ರವೇಶದಿಂದ ಸುಮಾರು 160 ಮೀಟರ್ ದೂರದಲ್ಲಿದ್ದ ಅವರು ಅಲ್ಲಿನ ಗಾಳಿಯ ಖಾಲಿ ಜಾಗದಲ್ಲಿ ಸಿಲುಕಿಕೊಂಡಿದ್ದರು.
ಕತ್ತಲೆ, ಕೆಸರಿನ ನಡುವೆ ಒಂಬತ್ತು ದಿನಗಳ ಹೋರಾಟ
ಸುರಂಗದೊಳಗೆ ಸಿಲುಕಿದ್ದ ಇಬ್ಬರ ಬಳಿ ಆಹಾರ ಅಥವಾ ಕುಡಿಯುವ ನೀರಿನ ವ್ಯವಸ್ಥೆ ಇರಲಿಲ್ಲ. ಬದುಕುಳಿಯಲು ಮಹಾರ್ಜನ್ ಪ್ರವಾಹದ ನೀರನ್ನೇ ಕುಡಿಯಬೇಕಾಯಿತು. ಹೊರಗೆ ರಕ್ಷಣಾ ಕಾರ್ಯಾಚರಣೆಗಳು ಪ್ರತಿಕೂಲ ಹವಾಮಾನ ಮತ್ತು ಅಪಾರ ಪ್ರಮಾಣದ ಅವಶೇಷಗಳಿಂದಾಗಿ ನಿಧಾನಗೊಂಡಿದ್ದವು.
ರಕ್ಷಣಾ ತಂಡಗಳು ಬೋರ್ಹೋಲ್ಗಳನ್ನು ಕೊರೆದು ಹಾಗೂ ಸುರಂಗದೊಳಗಿನ ಶಬ್ದಗಳನ್ನು ಪತ್ತೆಹಚ್ಚುವ ಮೂಲಕ ಇಬ್ಬರೂ ಜೀವಂತವಾಗಿರುವುದನ್ನು ಖಚಿತಪಡಿಸಿಕೊಂಡವು. ಬಳಿಕ ಕೆಸರು ಮತ್ತು ಅವಶೇಷಗಳನ್ನು ತೆರವುಗೊಳಿಸಿ ಸುರಂಗದೊಳಗೆ ದಾರಿ ನಿರ್ಮಿಸಿ, ವಿಪರೀತ ದುರ್ಬಲ ಸ್ಥಿತಿಯಲ್ಲಿದ್ದ ಇಬ್ಬರನ್ನೂ ಒಂಬತ್ತನೇ ದಿನದ ಬಳಿಕ ರಕ್ಷಿಸಲಾಯಿತು.
ಇನ್ನೂ ನೂರಾರು ಕಾರ್ಮಿಕರಿಗಾಗಿ ಶೋಧ
ಈ ಇಬ್ಬರ ರಕ್ಷಣೆಯಿಂದ ನೇಪಾಳದಲ್ಲಿ ಇನ್ನೂ ಸುರಂಗಗಳೊಳಗೆ ಸಿಲುಕಿರುವವರನ್ನು ಬದುಕುಳಿಸುವ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಸುಮಾರು 900 ಜಲವಿದ್ಯುತ್ ಕಾರ್ಮಿಕರು ನಾಪತ್ತೆಯಾಗಿದ್ದು, ಅವರಲ್ಲಿ 121 ಮಂದಿ ಸುರಂಗಗಳೊಳಗೆ ಸಿಲುಕಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರವಾಹದಿಂದ ಭಾರಿ ಪ್ರಮಾಣದ ಪ್ರದೇಶ ನಾಶವಾಗಿದ್ದರೂ ರಕ್ಷಣಾ ಸಿಬ್ಬಂದಿ ಸುರಂಗಗಳು ಮತ್ತು ಅವಶೇಷಗಳಡಿ ಸಿಲುಕಿರುವವರಿಗಾಗಿ ಶೋಧ ಮುಂದುವರಿಸಿದ್ದಾರೆ.

