ದುಬೈನಲ್ಲಿ ಭೀಕರ ಅಗ್ನಿ ಆಕಸ್ಮಿಕ: 67 ಅಂತಸ್ತಿನ ಟವರ್‌ನಿಂದ 3,800ಕ್ಕೂ ಹೆಚ್ಚು ನಿವಾಸಿಗಳ ಸುರಕ್ಷಿತ ಸ್ಥಳಾಂತರ
x

ದುಬೈನಲ್ಲಿ ಭೀಕರ ಅಗ್ನಿ ಆಕಸ್ಮಿಕ: 67 ಅಂತಸ್ತಿನ ಟವರ್‌ನಿಂದ 3,800ಕ್ಕೂ ಹೆಚ್ಚು ನಿವಾಸಿಗಳ ಸುರಕ್ಷಿತ ಸ್ಥಳಾಂತರ

ಬೆಂಕಿ ನಂದಿಸುವ ಕಾರ್ಯಾಚರಣೆ ಮುಗಿದ ನಂತರ, ಸ್ಥಳಾಂತರಗೊಂಡ ನಿವಾಸಿಗಳಿಗೆ ತಾತ್ಕಾಲಿಕ ವಸತಿ ಮತ್ತು ಅಗತ್ಯ ಆರೈಕೆಯನ್ನು ಒದಗಿಸುವ ನಿಟ್ಟಿನಲ್ಲಿ ಕಟ್ಟಡದ ಡೆವಲಪರ್‌ಗಳೊಂದಿಗೆ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ. ಇ


ದುಬೈನಲ್ಲಿ ಮುಗಿಲೆತ್ತರಕ್ಕೆ ಚಾಚಿಕೊಂಡಿರುವ 67 ಅಂತಸ್ತಿನ ಐಷಾರಾಮಿ ಮರಿನಾ ಪಿನಾಕಲ್‌ (ಟೈಗರ್‌ ಟವರ್‌) ಕಟ್ಟಡದಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ ಭೀಕರ ಅಗ್ನಿ ಆಕಸ್ಮಿಕ, ಕ್ಷಣಕಾಲ ಆತಂಕ ಸೃಷ್ಟಿಸಿತು. ಆದರೆ, ದುಬೈ ನಾಗರಿಕ ಸೇನೆಯ ತ್ವರಿತ ಕಾರ್ಯಾಚರಣೆಯಿಂದಾಗಿ ಕಟ್ಟಡದಲ್ಲಿದ್ದ ಸುಮಾರು 3,820 ನಿವಾಸಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸುವಲ್ಲಿ ಯಶಸ್ವಿಯಾಗಿದೆ. ಬೆಂಕಿ ಸಂಪೂರ್ಣವಾಗಿ ನಂದಿಸಲು ಆರು ಗಂಟೆಗಳಿಗೂ ಹೆಚ್ಚು ಕಾಲ ಶ್ರಮಿಸಬೇಕಾಯಿತು ಎಂದು ದುಬೈ ಮಾಧ್ಯಮ ಕಚೇರಿ ಶನಿವಾರ ತಿಳಿಸಿದೆ.

ಶುಕ್ರವಾರ ತಡರಾತ್ರಿ ಹೊತ್ತಿಕೊಂಡ ಬೆಂಕಿಯು, 764 ಮನೆಗಳಿರುವ ಈ ಬೃಹತ್ ವಸತಿ ಕಟ್ಟಡದ ಹಲವು ಅಂತಸ್ತುಗಳಿಗೆ ವ್ಯಾಪಿಸಿತ್ತು. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ದುಬೈ ನಾಗರಿಕ ಸೇನೆಯ ಅಗ್ನಿ ಶಾಮಕ ದಳ, ಯಾವುದೇ ಪ್ರಾಣಾಪಾಯ ಅಥವಾ ಗಂಭೀರ ಗಾಯಗಳು ಸಂಭವಿಸದಂತೆ ನಿವಾಸಿಗಳನ್ನು ಹೊರತರಲು ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತವಾಯಿತು. ದುಬೈ ಮಾಧ್ಯಮ ಕಚೇರಿ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಘಟನೆಯ ಬಗ್ಗೆ ಸತತವಾಗಿ ಮಾಹಿತಿ ಹಂಚಿಕೊಳ್ಳುತ್ತಿತ್ತು. ನಸುಕಿನ 1:44ಕ್ಕೆ ಮೊದಲ ಮಾಹಿತಿ ಪ್ರಕಟಿಸಿ, ಜನರನ್ನು ಸುರಕ್ಷಿತವಾಗಿ ಹೊರತರಲಾಗುತ್ತಿದೆ ಮತ್ತು ವೈದ್ಯಕೀಯ ತಂಡಗಳು ಸಿದ್ಧವಾಗಿವೆ ಎಂದು ತಿಳಿಸಿತ್ತು. ನಂತರ 2:21ಕ್ಕೆ ಅಂತಿಮವಾಗಿ ಎಲ್ಲ 3,820 ನಿವಾಸಿಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ದೃಢಪಡಿಸಿತು.

ಬೆಂಕಿ ನಂದಿಸುವ ಕಾರ್ಯಾಚರಣೆ ಮುಗಿದ ನಂತರ, ಸ್ಥಳಾಂತರಗೊಂಡ ನಿವಾಸಿಗಳಿಗೆ ತಾತ್ಕಾಲಿಕ ವಸತಿ ಮತ್ತು ಅಗತ್ಯ ಆರೈಕೆಯನ್ನು ಒದಗಿಸುವ ನಿಟ್ಟಿನಲ್ಲಿ ಕಟ್ಟಡದ ಡೆವಲಪರ್‌ಗಳೊಂದಿಗೆ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ. ಇದು ಇಂತಹ ಸಂದರ್ಭಗಳಲ್ಲಿ ನಾಗರಿಕರ ಸುರಕ್ಷತೆ ಮತ್ತು ನೆಮ್ಮದಿಗೆ ದುಬೈ ಸರ್ಕಾರ ನೀಡುವ ಆದ್ಯತೆಯನ್ನು ತೋರಿಸುತ್ತದೆ.

'ಟೈಗರ್ ಟವರ್' ಎಂದೇ ಜನಪ್ರಿಯವಾಗಿರುವ ಮರಿನಾ ಪಿನಾಕಲ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಇದೇ ಮೊದಲಲ್ಲ. 2015ರಲ್ಲೂ ಈ ಕಟ್ಟಡದ 47ನೇ ಅಂತಸ್ತಿನಲ್ಲಿ ಬೆಂಕಿ ಹೊತ್ತಿಕೊಂಡು ಅದು 48ನೇ ಅಂತಸ್ತಿಗೂ ವ್ಯಾಪಿಸಿತ್ತು. ಪುನರಾವರ್ತಿತ ಘಟನೆಗಳು ಇಂತಹ ಎತ್ತರದ ಕಟ್ಟಡಗಳಲ್ಲಿ ಅಗ್ನಿ ಸುರಕ್ಷತಾ ಮಾನದಂಡಗಳು ಮತ್ತು ಅವುಗಳ ಅನುಷ್ಠಾನದ ಬಗ್ಗೆ ಮತ್ತೊಮ್ಮೆ ಗಂಭೀರ ಚರ್ಚೆಗೆ ಕಾರಣವಾಗಿವೆ. ದುಬೈನಲ್ಲಿ ವಿಶ್ವದ ಅತಿ ಎತ್ತರದ ಕಟ್ಟಡಗಳು ಮತ್ತು ಆಧುನಿಕ ವಸತಿ ಸಂಕೀರ್ಣಗಳು ಹೆಚ್ಚುತ್ತಿದ್ದು, ಅಗ್ನಿ ಸುರಕ್ಷತೆಗೆ ಸಂಬಂಧಿಸಿದಂತೆ ಇನ್ನಷ್ಟು ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳುವ ಅವಶ್ಯಕತೆಯನ್ನು ಈ ಘಟನೆ ಎತ್ತಿ ತೋರಿಸಿದೆ.

Read More
Next Story