ಜೆನ್-ಜಿ ಹೋರಾಟದಲ್ಲಿ ಮಡಿದವರು ಹುತಾತ್ಮರು: ನೇಪಾಳದ ನೂತನ ಪ್ರಧಾನಿ ಸುಶೀಲಾ ಕಾರ್ಕಿ ಘೋಷಣೆ
x

'ಜೆನ್-ಜಿ' ಹೋರಾಟದಲ್ಲಿ ಮಡಿದವರು "ಹುತಾತ್ಮರು": ನೇಪಾಳದ ನೂತನ ಪ್ರಧಾನಿ ಸುಶೀಲಾ ಕಾರ್ಕಿ ಘೋಷಣೆ

ಓಲಿ ಸರ್ಕಾರದ ಭ್ರಷ್ಟಾಚಾರ ಮತ್ತು ಸಾಮಾಜಿಕ ಮಾಧ್ಯಮ ನಿಷೇಧವನ್ನು ವಿರೋಧಿಸಿ ಆರಂಭವಾದ 'ಜೆನ್-ಜಿ' ಪ್ರತಿಭಟನೆಯು, ದೇಶದಲ್ಲಿ ದಶಕಗಳಿಂದ ಬೇರೂರಿದ್ದ ಭ್ರಷ್ಟಾಚಾರ ಮತ್ತು ಅಸಮಾನತೆಯ ವಿರುದ್ಧದ ಜನಾಕ್ರೋಶವಾಗಿ ಮಾರ್ಪಟ್ಟಿತ್ತು.


Click the Play button to hear this message in audio format

ಕೆ.ಪಿ. ಶರ್ಮಾ ಓಲಿ ಸರ್ಕಾರದ ಪತನಕ್ಕೆ ಕಾರಣವಾದ 'ಜೆನ್-ಜಿ' ನೇತೃತ್ವದ ಐತಿಹಾಸಿಕ ಪ್ರತಿಭಟನೆಗಳ ನಂತರ, ನೇಪಾಳದ ನೂತನ ಮಧ್ಯಂತರ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿರುವ ಸುಶೀಲಾ ಕಾರ್ಕಿ ಅವರು, ದೇಶವನ್ನುದ್ದೇಶಿಸಿ ತಮ್ಮ ಮೊದಲ ಭಾಷಣದಲ್ಲಿ ಮಹತ್ವದ ಘೋಷಣೆ ಮಾಡಿದ್ದಾರೆ. ಇತ್ತೀಚೆಗೆ ನಡೆದ ಭ್ರಷ್ಟಾಚಾರ-ವಿರೋಧಿ ಹೋರಾಟದಲ್ಲಿ ಪ್ರಾಣ ಕಳೆದುಕೊಂಡ ಯುವಜನರನ್ನು "ಹುತಾತ್ಮರು" ಎಂದು ಅಧಿಕೃತವಾಗಿ ಗೌರವಿಸಲಾಗುವುದು ಎಂದು ಅವರು ಪ್ರಕಟಿಸಿದ್ದಾರೆ.

ಸುಪ್ರೀಂ ಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿಯಾಗಿರುವ ಸುಶೀಲಾ ಕಾರ್ಕಿ ಅವರು, ತಾವು ಅಧಿಕಾರದ ಆಸೆಗಾಗಿ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. "ನನ್ನ ತಂಡ ಮತ್ತು ನಾನು ಆರು ತಿಂಗಳಿಗಿಂತ ಹೆಚ್ಚು ಕಾಲ ಅಧಿಕಾರದಲ್ಲಿ ಉಳಿಯುವುದಿಲ್ಲ. ಜನರ ಸೇವೆ ಮಾಡುವುದೇ ನಮ್ಮ ಗುರಿ. ಈ ಅವಧಿಯಲ್ಲಿ ದೇಶದಲ್ಲಿ ಸ್ಥಿರತೆ ತಂದು, ಹೊಸದಾಗಿ ಚುನಾಯಿತರಾಗುವ ಸಂಸತ್ತಿಗೆ ಅಧಿಕಾರ ಹಸ್ತಾಂತರಿಸಲಾಗುವುದು. ಪ್ರತಿಭಟನೆ ವೇಳೆ ನಡೆದ ವಿಧ್ವಂಸಕ ಕೃತ್ಯಗಳ ಬಗ್ಗೆಯೂ ತನಿಖೆ ನಡೆಸಲಾಗುವುದು" ಎಂದು ಅವರು ಭರವಸೆ ನೀಡಿದರು.

ರಾಷ್ಟ್ರ ಪುನರ್ನಿರ್ಮಾಣಕ್ಕೆ ಕರೆ

ನೇಪಾಳವು ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ರಾಷ್ಟ್ರವನ್ನು ಪುನರ್ನಿರ್ಮಿಸಲು ಎಲ್ಲರೂ ಒಟ್ಟಾಗಿ ಶ್ರಮಿಸಬೇಕು ಎಂದು ಕಾರ್ಕಿ ಕರೆ ನೀಡಿದ್ದಾರೆ. "ಎಲ್ಲರೂ ಒಂದಾಗಿ ನೇಪಾಳವನ್ನು ಪುನರ್ನಿರ್ಮಿಸೋಣ. ನಮ್ಮ ರಾಷ್ಟ್ರವನ್ನು ಮತ್ತೆ ಸದೃಢಗೊಳಿಸಲು ನಾವು ಶ್ರಮಿಸುತ್ತೇವೆ," ಎಂದು ಅವರು ದೇಶದ ಜನತೆಗೆ ಆತ್ಮವಿಶ್ವಾಸ ತುಂಬಿದರು.

ಪ್ರತಿಭಟನೆಯ ಹಿನ್ನೆಲೆ

ಓಲಿ ಸರ್ಕಾರದ ಭ್ರಷ್ಟಾಚಾರ ಮತ್ತು ಸಾಮಾಜಿಕ ಮಾಧ್ಯಮ ನಿಷೇಧವನ್ನು ವಿರೋಧಿಸಿ ಆರಂಭವಾದ 'ಜೆನ್-ಜಿ' ಪ್ರತಿಭಟನೆಯು, ದೇಶದಲ್ಲಿ ದಶಕಗಳಿಂದ ಬೇರೂರಿದ್ದ ಭ್ರಷ್ಟಾಚಾರ ಮತ್ತು ಅಸಮಾನತೆಯ ವಿರುದ್ಧದ ಜನಾಕ್ರೋಶವಾಗಿ ಮಾರ್ಪಟ್ಟಿತ್ತು. ಸೆಪ್ಟೆಂಬರ್ 8ರಂದು ಕಠ್ಮಂಡುವಿನಲ್ಲಿ ನಡೆದ ಬೃಹತ್ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿ, ಪೊಲೀಸರೊಂದಿಗಿನ ಘರ್ಷಣೆಯಲ್ಲಿ ಕನಿಷ್ಠ 51 ಜನರು ಸಾವನ್ನಪ್ಪಿ, 1,300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಬೆಳವಣಿಗೆಗಳ ತೀವ್ರತೆಗೆ ಮಣಿದ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. "ಹೋರಾಟದಲ್ಲಿ ಮಡಿದವರನ್ನು ಹುತಾತ್ಮರೆಂದು ಘೋಷಿಸಬೇಕು" ಎಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿತ್ತು, ಅದನ್ನು ಈಡೇರಿಸುವ ಮೂಲಕ ಸುಶೀಲಾ ಕಾರ್ಕಿ ಅವರು ತಮ್ಮ ಆಡಳಿತವನ್ನು ಆರಂಭಿಸಿದ್ದಾರೆ.

Read More
Next Story