
ಜೈಲಿನಲ್ಲಿರುವ ದರೋಡೆಕೋರ ಲಾರೆನ್ಸ್ ಬಿಷ್ಣೋಯ್
ನಿಜ್ಜರ್ ಹತ್ಯೆ ಹಿಂದೆ ಬಿಷ್ಣೋಯ್ ಗ್ಯಾಂಗ್ : 'ಆಪರೇಷನ್ ಹಾರ್ಡ್ಬಾಲ್' ರಹಸ್ಯ ಬಯಲು ಮಾಡಿದ ಅಮೆರಿಕ
ಭಾರತ ಮೂಲದ ಮೂರು ಪ್ರಮುಖ ಅಂತಾರಾಷ್ಟ್ರೀಯ ಅಪರಾಧ ಗುಂಪುಗಳನ್ನು ಗುರಿಯಾಗಿಸಿ ಯುಎಸ್, ಕೆನಡಾ ಮತ್ತು ಯುರೋಪ್ನ ಕಾನೂನು ಜಾರಿ ಸಂಸ್ಥೆಗಳು ಜಂಟಿಯಾಗಿ 'ಆಪರೇಷನ್ ಹಾರ್ಡ್ಬಾಲ್' ಎಂಬ ಬೃಹತ್ ಕಾರ್ಯಾಚರಣೆ ನಡೆಸಿವೆ.
ಕೆನಡಾದಲ್ಲಿ ನಡೆದಿದ್ದ ಖಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಭಾರತದ ಜೈಲಿನಲ್ಲಿರುವ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಮತ್ತು ಆತನ ಸಹಾಯಕ ಸತೀಂದರ್ಜೀತ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್ ಆದೇಶಿಸಿದ್ದರು ಎಂದು ಅಮೆರಿಕ ಗಂಭೀರ ಆರೋಪ ಮಾಡಿದೆ. ಈ ಕುರಿತು ಮಂಗಳವಾರ ಲಾಸ್ ಏಂಜಲೀಸ್ನಲ್ಲಿ ಫೆಡರಲ್ ದೋಷಾರೋಪಣೆಯನ್ನು ಬಹಿರಂಗಪಡಿಸಲಾಗಿದೆ.
ನ್ಯಾಯಾಲಯದ ದಾಖಲೆಗಳಲ್ಲಿ 'ಎಚ್ಎಸ್ಎನ್' ಎಂದು ಉಲ್ಲೇಖಿಸಲಾದ ಹರ್ದೀಪ್ ಸಿಂಗ್ ನಿಜ್ಜರ್ನನ್ನು ಮೂರು ವರ್ಷಗಳ ಹಿಂದೆ (ಜೂ. 18) ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿರುವ ಸಿಖ್ ದೇವಾಲಯದ ಹೊರಗೆ ಗುಂಡಿಕ್ಕಿ ಕೊಲ್ಲಲಾಗಿತ್ತು. ಈ ಹತ್ಯೆಯ ಸಂಚಿನ ಹಿಂದೆ ಬಿಷ್ಣೋಯ್ ಗ್ಯಾಂಗ್ ಕೈವಾಡವಿದೆ ಎಂದು ಅಮೆರಿಕ ಇಂಟರ್ಪೋಲ್ ಹಾಗೂ ಇತರ ಜಾಗತಿಕ ಸಂಸ್ಥೆಗಳ ನೆರವಿನೊಂದಿಗೆ ಪತ್ತೆಹಚ್ಚಿದೆ.
'ಆಪರೇಷನ್ ಹಾರ್ಡ್ಬಾಲ್' ಮೂಲಕ ಜಾಗತಿಕ ಬೇಟೆ
ಭಾರತ ಮೂಲದ ಮೂರು ಪ್ರಮುಖ ಅಂತಾರಾಷ್ಟ್ರೀಯ ಅಪರಾಧ ಗುಂಪುಗಳನ್ನು ಗುರಿಯಾಗಿಸಿ ಯುಎಸ್, ಕೆನಡಾ ಮತ್ತು ಯುರೋಪ್ನ ಕಾನೂನು ಜಾರಿ ಸಂಸ್ಥೆಗಳು ಜಂಟಿಯಾಗಿ 'ಆಪರೇಷನ್ ಹಾರ್ಡ್ಬಾಲ್' ಎಂಬ ಬೃಹತ್ ಕಾರ್ಯಾಚರಣೆ ನಡೆಸಿವೆ. ಈ ಕಾರ್ಯಾಚರಣೆಯಲ್ಲಿ ನಿಜ್ಜರ್ ಹತ್ಯೆ ಸೇರಿದಂತೆ ಹಲವು ಕ್ರಿಮಿನಲ್ ಕೃತ್ಯಗಳಲ್ಲಿ ಭಾಗಿಯಾಗಿದ್ದ 24 ಜಾಗತಿಕ ಅಪರಾಧಿಗಳನ್ನು ಬಂಧಿಸಲಾಗಿದೆ. ಬಂಧಿತರ ಪೈಕಿ 11 ಜನರನ್ನು ಕ್ಯಾಲಿಫೋರ್ನಿಯಾದಲ್ಲಿ ಸೆರೆಹಿಡಿಯಲಾಗಿದೆ.
"ಅಮೆರಿಕ, ಕೆನಡಾ, ಯುರೋಪ್ ಮತ್ತು ಏಷ್ಯಾದ ಕಾನೂನು ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡುತ್ತಿವೆ. ಈ ಕ್ರಿಮಿನಲ್ ಜಾಲಗಳು ಎಲ್ಲೇ ಕಾರ್ಯನಿರ್ವಹಿಸಿದರೂ ಅವುಗಳನ್ನು ಬೇರುಸಹಿತ ನಾಶಮಾಡಲು ನಾವು ದೃಢನಿಶ್ಚಯ ಹೊಂದಿದ್ದೇವೆ. ಈ ಗೂಂಡಾಗಳಿಗೆ ಜಗತ್ತಿನ ಯಾವುದೇ ಮೂಲೆಯಲ್ಲೂ ಸುರಕ್ಷಿತ ನೆಲೆ ಇಲ್ಲ," ಎಂದು ಲಾಸ್ ಏಂಜಲೀಸ್ನ ಪ್ರಥಮ ಸಹಾಯಕ ವಕೀಲ ಬಿಲ್ ಎಸ್ಸೇಲಿ ಎಚ್ಚರಿಸಿದ್ದಾರೆ.
37 ಜನರ ಮೇಲೆ ದೋಷಾರೋಪಣೆ
ಭಾರತೀಯ ವಲಸಿಗರನ್ನು ಗುರಿಯಾಗಿಸಿಕೊಂಡು ದರೋಡೆ, ಸುಲಿಗೆ, ಹತ್ಯೆ, ಗುಂಡಿನ ದಾಳಿ ಮತ್ತು ಅಂತಾರಾಷ್ಟ್ರೀಯ ಗಡಿಗಳಲ್ಲಿ ಬೃಹತ್ ಪ್ರಮಾಣದ ಮಾದಕವಸ್ತು ಕಳ್ಳಸಾಗಣೆಯಲ್ಲಿ ತೊಡಗಿದ್ದ ಈ ಸಿಂಡಿಕೇಟ್ ವಿರುದ್ಧ ಅಮೆರಿಕದ ಫೆಡರಲ್ ಸಂಸ್ಥೆಗಳು ಹಲವು ವರ್ಷಗಳಿಂದ ತನಿಖೆ ನಡೆಸುತ್ತಿದ್ದವು. ಇದರ ಫಲವಾಗಿ ಮಂಗಳವಾರ ಒಟ್ಟು 37 ಆರೋಪಿಗಳ ವಿರುದ್ಧ ಮೂರು ಪ್ರಮುಖ ದೋಷಾರೋಪ ಪಟ್ಟಿಗಳನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಇವರಲ್ಲಿ ಇಬ್ಬರು ಆರೋಪಿಗಳು ಭಾರತದ ಜೈಲಿನಲ್ಲಿದ್ದೇ ತಮ್ಮ ಜಾಗತಿಕ ಕ್ರಿಮಿನಲ್ ಸಾಮ್ರಾಜ್ಯವನ್ನು ನಡೆಸುತ್ತಿದ್ದರು ಎಂಬುದು ಆಘಾತಕಾರಿ ವಿಷಯವಾಗಿದೆ.
ಬಂಧನ ಮತ್ತು ಪರಾರಿಯಾದವರ ವಿವರ
ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ 11, ಇಂಡಿಯಾನಾದಲ್ಲಿ ಒಬ್ಬ ಹಾಗೂ ಜಾರ್ಜಿಯಾದಲ್ಲಿ ಒಬ್ಬನನ್ನು ಬಂಧಿಸಲಾಗಿದ್ದು, ಇವರನ್ನು ಫೆಡರಲ್ ನ್ಯಾಯಾಲಯದ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಕೆನಡಾದಲ್ಲಿ ಮೂವರು ಮತ್ತು ಸ್ಪೇನ್ನಲ್ಲಿ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಇನ್ನುಳಿದ ಏಳು ಆರೋಪಿಗಳು ಈಗಾಗಲೇ ಬೇರೆ ಪ್ರಕರಣಗಳಲ್ಲಿ ಜೈಲಿನಲ್ಲಿದ್ದಾರೆ. ಪ್ರಸ್ತುತ ಹತ್ತು ಮಂದಿ ತಲೆಮರೆಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ಮುಂದುವರಿದಿದೆ. ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಈಗಾಗಲೇ ಭಾರತದಲ್ಲಿ ಜೈಲಿನಲ್ಲಿದ್ದರೆ, ಆತನ ಆಪ್ತ ಗೋಲ್ಡಿ ಬ್ರಾರ್ ಇನ್ನೂ ತಲೆಮರೆಸಿಕೊಂಡಿದ್ದಾನೆ.
ಭಾರತ-ಕೆನಡಾ ಸಂಬಂಧದ ಮೇಲಾದ ಪರಿಣಾಮ
ನಿಜ್ಜರ್ ಹತ್ಯೆಯ ಬೆನ್ನಲ್ಲೇ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಈ ಕೊಲೆಯಲ್ಲಿ ಭಾರತ ಸರ್ಕಾರದ ಕೈವಾಡವಿದೆ ಎಂದು ಲಿಂಕ್ ಮಾಡಲು ಪ್ರಯತ್ನಿಸಿದ್ದರು. ಇದು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ತೀವ್ರವಾಗಿ ಹದಗೆಡಿಸಿತ್ತು. ಭಾರತವು ಕೆನಡಾದ ಈ ಆರೋಪಗಳನ್ನು "ಅಸಂಬದ್ಧ ಮತ್ತು ರಾಜಕೀಯ ಪ್ರೇರಿತ" ಎಂದು ಸಂಪೂರ್ಣವಾಗಿ ತಿರಸ್ಕರಿಸಿತ್ತು. ಆದರೆ ಈಗ ಅಮೆರಿಕದ ತನಿಖೆಯು ಇದು ಜಾಗತಿಕ ಅಪರಾಧ ಜಾಲದ ಕೃತ್ಯ ಎಂದು ಬಿಂಬಿಸಿದೆ.
"ಕೊಲೆ, ಕ್ರೌರ್ಯ ಮತ್ತು ಭಯವನ್ನು ಬಳಸಿ ಕೆನಡಾ ಹಾಗೂ ಅಮೆರಿಕದಲ್ಲಿ ಜನರನ್ನು ಸುಲಿಗೆ ಮಾಡುತ್ತಿದ್ದ ಈ ಗ್ಯಾಂಗ್ಗಳ ಕಾರ್ಯಾಚರಣೆಯನ್ನು ನಾವು ಯಶಸ್ವಿಯಾಗಿ ಧ್ವಂಸಗೊಳಿಸಿದ್ದೇವೆ" ಎಂದು ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ ಆಯುಕ್ತ ಮೈಕ್ ಡುಹೇಮ್ ತಿಳಿಸಿದ್ದಾರೆ.

