ರಷ್ಯಾದಲ್ಲಿ ನಾಲ್ವರು ಭಾರತೀಯ ವಿದ್ಯಾರ್ಥಿಗಳ ಮೇಲೆ ಭೀಕರ ಹಲ್ಲೆ: 15 ವರ್ಷದ ಬಾಲಕನಿಂದ ಕೃತ್ಯ
x

ರಷ್ಯಾದಲ್ಲಿ ನಾಲ್ವರು ಭಾರತೀಯ ವಿದ್ಯಾರ್ಥಿಗಳ ಮೇಲೆ ಭೀಕರ ಹಲ್ಲೆ: 15 ವರ್ಷದ ಬಾಲಕನಿಂದ ಕೃತ್ಯ

ದಾಳಿ ನಡೆಸಿದ ಬಾಲಕನಿಗೆ ಕೇವಲ 15 ವರ್ಷ ವಯಸ್ಸಾಗಿದ್ದು, ಆತ ನಿಷೇಧಿತ 'ನಿಯೋ-ನಾಜಿ' (NS/WP) ಸಂಘಟನೆಯ ಸದಸ್ಯ ಎಂದು ಬಜಾ ಟೆಲಿಗ್ರಾಮ್ ಚಾನೆಲ್ ವರದಿ ಮಾಡಿದೆ.


Click the Play button to hear this message in audio format

ರಷ್ಯಾದಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳಿಗೆ ಆಘಾತಕಾರಿ ಸುದ್ದಿಯೊಂದು ವರದಿಯಾಗಿದೆ. ರಷ್ಯಾದ ಬಶ್ಕೋರ್‌ತೊಸ್ತಾನ್ (Bashkortostan) ಗಣರಾಜ್ಯದ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಶನಿವಾರ (ಫೆಬ್ರವರಿ 7) ಹದಿಹರೆಯದ ಬಾಲಕನೊಬ್ಬ ಭಾರತೀಯ ವಿದ್ಯಾರ್ಥಿಗಳ ಮೇಲೆ ಚಾಕುವಿನಿಂದ ಮನಬಂದಂತೆ ದಾಳಿ ನಡೆಸಿದ್ದಾನೆ. ನಿಷೇಧಿತ ನಿಯೋ-ನಾಜಿ ಸಂಘಟನೆಗೆ ಸೇರಿದವನು ಎನ್ನಲಾದ ಈತ ನಡೆಸಿದ ಭೀಕರ ದಾಳಿಯಲ್ಲಿ ನಾಲ್ವರು ಭಾರತೀಯ ವಿದ್ಯಾರ್ಥಿಗಳು ಗಾಯಗೊಂಡಿದ್ದು, ಒಬ್ಬ ವಿದ್ಯಾರ್ಥಿಯ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

ಘಟನೆ ನಡೆದಿದ್ದು ಹೇಗೆ?

ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿ ನೀಡಿದ ಮಾಹಿತಿಯ ಪ್ರಕಾರ, ಮಾಸ್ಕೋದಿಂದ ಸುಮಾರು 1,200 ಕಿ.ಮೀ ಪೂರ್ವದಲ್ಲಿರುವ ಬಶ್ಕೋರ್‌ತೊಸ್ತಾನ್ ರಾಜಧಾನಿ ಉಫಾದಲ್ಲಿರುವ ಸ್ಟೇಟ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ಈ ಘಟನೆ ನಡೆದಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಕೈಯಲ್ಲಿ ಚಾಕು ಹಿಡಿದುಕೊಂಡು ಬಂದ ಆರೋಪಿ ಬಾಲಕ, ವಿಶ್ವವಿದ್ಯಾಲಯದ ಹಾಸ್ಟೆಲ್ (ಡಾರ್ಮಿಟರಿ) ಪ್ರವೇಶಿಸಿ ಅಲ್ಲಿ ವಾಸಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾನೆ. ಗಲಾಟೆ ಕೇಳಿ ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಯನ್ನು ಬಂಧಿಸಲು ಯತ್ನಿಸಿದಾಗ, ಆತ ಪ್ರತಿರೋಧ ಒಡ್ಡಿದ್ದಲ್ಲದೆ ಇಬ್ಬರು ಪೊಲೀಸ್ ಅಧಿಕಾರಿಗಳ ಮೇಲೂ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಅಂತಿಮವಾಗಿ ಆರೋಪಿ ತಾನೇ ತನ್ನ ದೇಹಕ್ಕೆ ಹಾನಿ ಮಾಡಿಕೊಂಡಿದ್ದಾನೆ ಎಂದು ರಷ್ಯಾದ ಆಂತರಿಕ ಸಚಿವಾಲಯದ ವಕ್ತಾರರಾದ ಮೇಜರ್ ಜನರಲ್ ಐರಿನಾ ವೋಲ್ಕ್ ತಿಳಿಸಿದ್ದಾರೆ.

ನಿಯೋ-ನಾಜಿ ನಂಟು ಮತ್ತು ಗಂಭೀರ ಆರೋಪ

ದಾಳಿ ನಡೆಸಿದ ಬಾಲಕನಿಗೆ ಕೇವಲ 15 ವರ್ಷ ವಯಸ್ಸಾಗಿದ್ದು, ಆತ ನಿಷೇಧಿತ 'ನಿಯೋ-ನಾಜಿ' (NS/WP) ಸಂಘಟನೆಯ ಸದಸ್ಯ ಎಂದು ಬಜಾ ಟೆಲಿಗ್ರಾಮ್ ಚಾನೆಲ್ ವರದಿ ಮಾಡಿದೆ. ದಾಳಿಯ ಸಮಯದಲ್ಲಿ ಆತ ಉನ್ಮಾದದ ಸ್ಥಿತಿಯಲ್ಲಿದ್ದನು ಮತ್ತು ಹತ್ಯಾಕಾಂಡದ (Holocaust) ಬಗ್ಗೆ ರಾಷ್ಟ್ರೀಯತಾವಾದಿ ಘೋಷಣೆಗಳನ್ನು ಕೂಗುತ್ತಿದ್ದನು ಎನ್ನಲಾಗಿದೆ. ಅಷ್ಟೇ ಅಲ್ಲದೆ, ಸಂತ್ರಸ್ತರ ರಕ್ತದಲ್ಲಿ ಗೋಡೆಯ ಮೇಲೆ ನಾಜಿ ಚಿಹ್ನೆಯಾದ 'ಸ್ವಸ್ತಿಕ'ವನ್ನು ಬಿಡಿಸಿದ್ದನು ಎಂದು ಸ್ಥಳೀಯ ಮಾಧ್ಯಮಗಳು ಗಂಭೀರ ಆರೋಪ ಮಾಡಿವೆ. ಪ್ರಸ್ತುತ ಆರೋಪಿಯ ಸ್ಥಿತಿಯೂ ಗಂಭೀರವಾಗಿದ್ದು, ಸ್ಥಳೀಯ ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಘಟನಾ ಸ್ಥಳದಲ್ಲಿ ರಕ್ತದ ಮಡುವೇ ಹರಿಯುತ್ತಿತ್ತು ಎಂದು ರಷ್ಯಾದ ಟಿವಿ ವಾಹಿನಿಗಳು ವರದಿ ಮಾಡಿವೆ.

ರಾಯಭಾರ ಕಚೇರಿಯ ಸ್ಪಂದನೆ ಮತ್ತು ತನಿಖೆ

ಈ ಘಟನೆಯನ್ನು ಅತ್ಯಂತ "ದುರದೃಷ್ಟಕರ" ಎಂದು ಬಣ್ಣಿಸಿರುವ ಭಾರತೀಯ ರಾಯಭಾರ ಕಚೇರಿ, ಗಾಯಾಳುಗಳಿಗೆ ಅಗತ್ಯ ನೆರವು ನೀಡಲು ಕಜಾನ್‌ನಲ್ಲಿರುವ (Kazan) ಕಾನ್ಸುಲೇಟ್‌ನಿಂದ ಅಧಿಕಾರಿಗಳನ್ನು ಉಫಾಗೆ ಕಳುಹಿಸಿಕೊಟ್ಟಿದೆ. ರಷ್ಯಾದ ಫೆಡರಲ್ ಆರೋಗ್ಯ ಸಚಿವಾಲಯದ ಪ್ರಕಾರ, ಗಾಯಗೊಂಡ ನಾಲ್ವರು ವಿದ್ಯಾರ್ಥಿಗಳಲ್ಲಿ ಮೂವರ ಸ್ಥಿತಿ ಸಾಧಾರಣವಾಗಿದ್ದು, ಒಬ್ಬ ವಿದ್ಯಾರ್ಥಿ ಗಂಭೀರ ಸ್ಥಿತಿಯಲ್ಲಿದ್ದಾನೆ. ಉಫಾ ಅಧಿಕಾರಿಗಳು ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಇದೇ ವೇಳೆ, ರಷ್ಯಾದಲ್ಲಿರುವ ಸಾವಿರಾರು ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ರಾಜತಾಂತ್ರಿಕವಾಗಿ ಮಧ್ಯಪ್ರವೇಶಿಸಲು ಅಖಿಲ ಭಾರತ ವೈದ್ಯಕೀಯ ವಿದ್ಯಾರ್ಥಿಗಳ ಸಂಘ (AIMSA) ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಒತ್ತಾಯಿಸಿದೆ.

Read More
Next Story