4,000 ಕಿ.ಮೀ ದೂರದ ಇಥಿಯೋಪಿಯಾ ಜ್ವಾಲಾಮುಖಿ ಸ್ಫೋಟ: ಭಾರತದ ವಿಮಾನ ಸಂಚಾರ ಅಸ್ತವ್ಯಸ್ತ
x

4,000 ಕಿ.ಮೀ ದೂರದ ಇಥಿಯೋಪಿಯಾ ಜ್ವಾಲಾಮುಖಿ ಸ್ಫೋಟ: ಭಾರತದ ವಿಮಾನ ಸಂಚಾರ ಅಸ್ತವ್ಯಸ್ತ

ಈಗಾಗಲೇ ವಾಯು ಮಾಲಿನ್ಯದಿಂದ ತತ್ತರಿಸಿರುವ ದೆಹಲಿಯಲ್ಲಿ, ಈ ಜ್ವಾಲಾಮುಖಿ ಬೂದಿ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಬಹುದೇ ಎಂಬ ಆತಂಕ ಎದುರಾಗಿದೆ.


Click the Play button to hear this message in audio format

ಸುಮಾರು 4,000 ಕಿಲೋಮೀಟರ್ ದೂರದ ಆಫ್ರಿಕಾ ಖಂಡದ ಇಥಿಯೋಪಿಯಾದಲ್ಲಿ ಸಂಭವಿಸಿದ ಐತಿಹಾಸಿಕ ಜ್ವಾಲಾಮುಖಿ ಸ್ಫೋಟದ ಬಿಸಿ ಇದೀಗ ಭಾರತಕ್ಕೂ ತಟ್ಟಿದೆ. ಇಥಿಯೋಪಿಯಾದ ಹೈಲಿ ಗುಬ್ಬಿ (Hayli Gubbi) ಜ್ವಾಲಾಮುಖಿ ಸ್ಫೋಟದಿಂದ ಚಿಮ್ಮಿದ ದಟ್ಟವಾದ ಬೂದಿ ಮತ್ತು ಹೊಗೆಯ ಮೋಡಗಳು ಅರೇಬಿಯನ್ ಸಮುದ್ರವನ್ನು ದಾಟಿ ಭಾರತದ ವಾಯುಗಡಿ ಪ್ರವೇಶಿಸಿವೆ.

ಇದರ ಪರಿಣಾಮವಾಗಿ ಮಂಗಳವಾರ ಭಾರತದ ಪ್ರಮುಖ ವಿಮಾನಯಾನ ಸಂಸ್ಥೆಗಳಾದ ಏರ್ ಇಂಡಿಯಾ ಮತ್ತು ಆಕಾಶ ಏರ್ ಸೇರಿದಂತೆ ಹಲವು ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಗುಜರಾತ್, ರಾಜಸ್ಥಾನ ಮತ್ತು ದೆಹಲಿ ಎನ್‌ಸಿಆರ್ ಭಾಗದಲ್ಲಿ ಈ ಬೂದಿ ಮೋಡಗಳು ಆವರಿಸಿದ್ದು, ವಿಮಾನಯಾನ ಸುರಕ್ಷತೆಯ ದೃಷ್ಟಿಯಿಂದ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ಜ್ವಾಲಾಮುಖಿಯ ಬೂದಿ ಮೋಡಗಳು ವಿಮಾನದ ಎಂಜಿನ್‌ಗಳಿಗೆ ಹಾನಿಯುಂಟುಮಾಡುವ ಅಪಾಯವಿರುವುದರಿಂದ, ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ವಿಮಾನಯಾನ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಏರ್ ಇಂಡಿಯಾ ಸಂಸ್ಥೆಯು ಚೆನ್ನೈ-ಮುಂಬೈ, ಹೈದರಾಬಾದ್-ದೆಹಲಿ ಸೇರಿದಂತೆ ಮಂಗಳವಾರದ ಹಲವು ವಿಮಾನಗಳನ್ನು ರದ್ದುಗೊಳಿಸಿದೆ. ಸೋಮವಾರವಷ್ಟೇ ಏರ್ ಇಂಡಿಯಾ ನ್ಯೂಯಾರ್ಕ್ ಮತ್ತು ದುಬೈನಂತಹ ಅಂತಾರಾಷ್ಟ್ರೀಯ ಮಾರ್ಗಗಳ ವಿಮಾನಗಳನ್ನು ರದ್ದುಗೊಳಿಸಿತ್ತು. ಅದೇ ರೀತಿ, ಆಕಾಶ ಏರ್ ಕೂಡ ಮಧ್ಯಪ್ರಾಚ್ಯ ದೇಶಗಳಿಗೆ ತೆರಳಬೇಕಿದ್ದ ತನ್ನ ವಿಮಾನಗಳನ್ನು ಸ್ಥಗಿತಗೊಳಿಸಿದೆ. ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಮತ್ತು ಹೋಟೆಲ್ ಸೌಲಭ್ಯ ಕಲ್ಪಿಸಲು ಸಂಸ್ಥೆಗಳು ಮುಂದಾಗಿವೆ.

ದೆಹಲಿ ವಾಯುಗುಣದ ಮೇಲಾಗುವ ಪರಿಣಾಮವೇನು?

ಈಗಾಗಲೇ ವಾಯು ಮಾಲಿನ್ಯದಿಂದ ತತ್ತರಿಸಿರುವ ದೆಹಲಿಯಲ್ಲಿ, ಈ ಜ್ವಾಲಾಮುಖಿ ಬೂದಿ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಬಹುದೇ ಎಂಬ ಆತಂಕ ಎದುರಾಗಿದೆ. ಆದರೆ, ಭಾರತೀಯ ಹವಾಮಾನ ಇಲಾಖೆಯ (IMD) ಪ್ರಕಾರ, ಈ ಬೂದಿ ಮೋಡಗಳು ಸಮುದ್ರ ಮಟ್ಟದಿಂದ ಸುಮಾರು 25,000 ದಿಂದ 45,000 ಅಡಿ ಎತ್ತರದಲ್ಲಿ ಚಲಿಸುತ್ತಿವೆ. ಹೀಗಾಗಿ ಇದು ನೇರವಾಗಿ ದೆಹಲಿಯ ಜನರ ಉಸಿರಾಟದ ಗಾಳಿಯ (Ground Level Air) ಮೇಲೆ ಅಥವಾ ವಾಯು ಗುಣಮಟ್ಟ ಸೂಚ್ಯಂಕದ (AQI) ಮೇಲೆ ತಕ್ಷಣಕ್ಕೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಕಡಿಮೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಆಕಾಶದಲ್ಲಿ ಮಬ್ಬು ಕವಿದ ವಾತಾವರಣ ಮತ್ತು ಸೂರ್ಯೋದಯದ ಸಮಯದಲ್ಲಿ ಆಕಾಶ ವಿಭಿನ್ನ ಬಣ್ಣಗಳಲ್ಲಿ ಗೋಚರಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಚೀನಾದತ್ತ ಮುಖಮಾಡಿದ ಬೂದಿ ಮೋಡ

ಬಲವಾದ ಗಾಳಿಯ ಪ್ರಭಾವದಿಂದಾಗಿ ಈ ಬೂದಿ ಮೋಡಗಳು ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರ ಮತ್ತು ಪಂಜಾಬ್ ಮಾರ್ಗವಾಗಿ ಚಲಿಸಿ ಈಗ ಪೂರ್ವದ ಕಡೆಗೆ, ಅಂದರೆ ಚೀನಾದತ್ತ ಸಾಗುತ್ತಿವೆ ಎಂದು ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ತಿಳಿಸಿದ್ದಾರೆ. ಮಂಗಳವಾರ ಸಂಜೆಯ ವೇಳೆಗೆ ಭಾರತದ ಆಕಾಶದಿಂದ ಈ ಮೋಡಗಳು ತೆರವುಗೊಳ್ಳುವ ನಿರೀಕ್ಷೆಯಿದೆ. ಆದರೂ, ಈ ಬೂದಿಯಲ್ಲಿ ಸಲ್ಫರ್ ಡೈಆಕ್ಸೈಡ್ (SO2) ಅಂಶವಿರುವುದರಿಂದ ಹಿಮಾಲಯದ ತಪ್ಪಲು ಪ್ರದೇಶಗಳು ಮತ್ತು ನೇಪಾಳದ ಬೆಟ್ಟಗಳಲ್ಲಿ ಇದರ ಪ್ರಭಾವ ಬೀರುವ ಸಾಧ್ಯತೆಯನ್ನು ತಜ್ಞರು ತಳ್ಳಿಹಾಕಿಲ್ಲ. ಪರಿಸರವಾದಿಗಳ ಪ್ರಕಾರ, ಮೇಲ್ಮಟ್ಟದ ವಾತಾವರಣದಲ್ಲಿ ಈ ಕಣಗಳಿರುವುದರಿಂದ ನಿರಂತರ ಕಣ್ಗಾವಲು ಅಗತ್ಯವಾಗಿದೆ.

12,000 ವರ್ಷಗಳ ಬಳಿಕ ಜ್ವಾಲಾಮುಖಿ

ಇಥಿಯೋಪಿಯಾದ ಅಫಾರ್ ಪ್ರದೇಶದಲ್ಲಿರುವ ಹೈಲಿ ಗುಬ್ಬಿ ಜ್ವಾಲಾಮುಖಿಯು ಭಾನುವಾರ ಹಠಾತ್ ಸ್ಫೋಟಗೊಂಡಿದ್ದು, ಇದು ಇತಿಹಾಸದಲ್ಲೇ ಮೊದಲ ಬಾರಿ ಎಂದು ಹೇಳಲಾಗುತ್ತಿದೆ. ಕಳೆದ 12,000 ವರ್ಷಗಳಿಂದ ಸುಪ್ತವಾಗಿದ್ದ (Dormant) ಈ ಜ್ವಾಲಾಮುಖಿ ಈಗ ಸ್ಫೋಟಗೊಂಡು, ಸುಮಾರು 14 ಕಿಲೋಮೀಟರ್ ಎತ್ತರಕ್ಕೆ ಬೂದಿಯನ್ನು ಉಗುಳಿದೆ. ಟೆಕ್ಟೋನಿಕ್ ಪ್ಲೇಟ್‌ಗಳ ಚಲನೆಯಿಂದಾಗಿ ಈ ಪ್ರದೇಶದಲ್ಲಿ ಭೂಕಂಪನದ ಅನುಭವವಾಗಿದ್ದು, ಬಾಂಬ್ ಸ್ಫೋಟದಂತೆ ಶಬ್ದ ಕೇಳಿಸಿತು ಎಂದು ಸ್ಥಳೀಯರು ವರದಿ ಮಾಡಿದ್ದಾರೆ.

Read More
Next Story