ಸಹಜ ಸ್ಥಿತಿಗೆ ಮರಳಿದ  ಬಾಂಗ್ಲಾದೇಶ: ಹಿಂಸೆಯ ದಳ್ಳುರಿಗೆ  200 ಜನರ ಬಲಿ
x

ಸಹಜ ಸ್ಥಿತಿಗೆ ಮರಳಿದ ಬಾಂಗ್ಲಾದೇಶ: ಹಿಂಸೆಯ ದಳ್ಳುರಿಗೆ 200 ಜನರ ಬಲಿ


ಢಾಕಾ, ಜು 24: ಉದ್ಯೋಗ ಕೋಟಾಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಪ್ರತಿಭಟನೆಯಿಂದ ಒಂದು ವಾರಕ್ಕೂ ಹೆಚ್ಚು ಕಾಲ ಗೊಂದಲದ ಗೂಡಾಗಿದ್ದ ಬಾಂಗ್ಲಾ ದೇಶ, ಬುಧವಾರ ಸಹಜ ಸ್ಥಿತಿಗೆ ಮರಳುತ್ತಿದೆ. ಇಂಟರ್ನೆಟ್ ಸೀಮಿತ ಸಂಪರ್ಕ ಏರ್ಪಟ್ಟಿದ್ದು, ಕಚೇರಿಗಳು ಆರಂಭಗೊಂಡಿವೆ. ಒಂದು ವಾರದ ಹಿಂಸಾಚಾರದಲ್ಲಿ ಸುಮಾರು 200 ಸಾವುಗಳು ವರದಿಯಾಗಿವೆ.

ದೇಶದ ಹೆಚ್ಚಿನ ಭಾಗದಲ್ಲಿ ಇಂಟರ್ನೆಟ್ ಸಂಪರ್ಕ ಇರಲಿಲ್ಲ. ಅಧಿಕಾರಿಗಳು ಏಳು ಗಂಟೆಗಳ ಕಾಲ ಕರ್ಫ್ಯೂ ಸಡಿಲಿಸಿದ ನಂತರ, ರಾಜಧಾನಿಯ ಬೀದಿಗಳಲ್ಲಿ ಸಾವಿರಾರು ಕಾರುಗಳು ಕಂಡುಬಂದವು.

ಕಚೇರಿಗಳು ಮತ್ತು ಬ್ಯಾಂಕ್‌ಗಳು ಬುಧವಾರ ಕೆಲವು ಗಂಟೆಗಳ ಕಾಲ ತೆರೆದಿದ್ದವು. ಢಾಕಾ ಮತ್ತು ಎರಡನೇ ದೊಡ್ಡ ನಗರವಾದ ಚಟ್ಟೋಗ್ರಾಮ್‌ನ ಕೆಲವು ಪ್ರದೇಶಗಳಲ್ಲಿ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಮರುಸ್ಥಾಪಿಸಿದರು.

ಜುಲೈ 16 ರಿಂದ ನಡೆದ ಹಿಂಸಾಚಾರದಲ್ಲಿ ಕನಿಷ್ಠ 197 ಜನರು ಸಾವನ್ನಪ್ಪಿದ್ದಾರೆ ಎಂದು ಪ್ರಮುಖ ಬಂಗಾಳಿ ದೈನಿಕ ಪ್ರೋಥೋಮ್ ಅಲೋ ವರದಿ ಮಾಡಿದೆ. ಮುಂದಿನ ಸೂಚನೆ ಬರುವವರೆಗೆ ಶಾಲೆಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗಿದೆ.

1971 ರಲ್ಲಿ ಬಾಂಗ್ಲಾದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ಯೋಧರ ಸಂಬಂಧಿಕರಿಗೆ ಶೇ. 30 ಸರ್ಕಾರಿ ಉದ್ಯೋಗಗಳಲ್ಲಿ ಕೋಟಾ ಕೊನೆಗೊಳಿಸಬೇಕೆಂದು ಪ್ರತಿಭಟನೆ ಆರಂಭವಾಯಿತು. ಜುಲೈ 15 ರಿಂದ ಪೊಲೀಸರು ಮತ್ತು ಮುಖ್ಯವಾಗಿ ವಿದ್ಯಾರ್ಥಿ ಪ್ರತಿಭಟನಾಕಾರರ ನಡುವೆ ಘರ್ಷಣೆಗಳು ಸಂಭವಿಸಿದವು.

ಪ್ರಮುಖ ವಿರೋಧ ಪಕ್ಷವಾದ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ ಮತ್ತು ಬಲಪಂಥೀಯ ಜಮಾತ್ ಎ ಇಸ್ಲಾಮಿ ಪ್ರತಿಭಟನೆಗೆ ಬೆಂಬಲ ನೀಡಿದ ನಂತರ ಹಿಂಸಾಚಾರ ದೇಶಾದ್ಯಂತ ಹರಡಿತು. ಢಾಕಾದಲ್ಲಿ ಅನೇಕ ಸರ್ಕಾರಿ ಕಚೇರಿಗಳ ಮೇಲೆ ದಾಳಿ ನಡೆಯಿತು.

ಸುಪ್ರೀಂ ಕೋರ್ಟ್ 1971ರ ಕೋಟಾವನ್ನು ಶೇ. 5ಕ್ಕೆ ಕಡಿತಗೊಳಿಸುವಂತೆ ಭಾನುವಾರ ಆದೇಶಿಸಿದೆ. ಇದರಿಂದ ಶೇ. 93 ರಷ್ಟು ನಾಗರಿಕ ಸೇವಾ ಉದ್ಯೋಗಗಳು ಅರ್ಹತೆಯನ್ನು ಮತ್ತು ಉಳಿದ ಶೇ. 2 ಜನಾಂಗೀಯ ಅಲ್ಪಸಂಖ್ಯಾತರು, ಟ್ರಾನ್ಸ್‌ಜೆಂಡರ್ ಮತ್ತು ವಿಕಲಚೇತನರಿಗೆ ಮೀಸಲಿಡಲಾಗಿದೆ.

ಸುಪ್ರೀಂ ಕೋರ್ಟ್ ತೀರ್ಪು ಅಂಗೀಕರಿಸಿದ ಸರ್ಕಾರ, ಸುತ್ತೋಲೆ ಹೊರಡಿಸಿತು. ಪ್ರಧಾನಿ ಶೇಖ್ ಹಸೀನಾ ಸರ್ಕಾರ ತೀರ್ಪನ್ನು ಸ್ವಾಗತಿಸಿದ್ದು, ತೀರ್ಪನ್ನು ಜಾರಿಗೆ ತರಲು ಸಿದ್ಧ ಎಂದು ಹೇಳಿದೆ. ಪ್ರತಿಭಟನಾಕಾರರು ಭಾನುವಾರದ ತೀರ್ಪಿಗೆ ಮಂಗಳವಾರ ಪ್ರತಿಕ್ರಿಯಿಸಿದ್ದು, ಸುಪ್ರೀಂ ಕೋರ್ಟ್ ತೀರ್ಪು ಮತ್ತು ಆನಂತರದ ಸರ್ಕಾರದ ಸುತ್ತೋಲೆ ಪ್ರತಿಭಟನಾಕಾರರ ಪರವಾಗಿವೆ ಎಂದು ಹೇಳಿದ್ದಾರೆ. ಆದರೆ, ಪ್ರತಿಭಟನೆಯಲ್ಲಿ ರಕ್ತಪಾತ ಮತ್ತು ಸಾವುಗಳಿಗೆ ಸರ್ಕಾರ ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.

(ಶೀರ್ಷಿಕೆಯನ್ನು ಹೊರತುಪಡಿಸಿ, ಈ ಕಥೆಯನ್ನು ಫೆಡರಲ್ ಸಿಬ್ಬಂದಿ ಸಂಪಾದಿಸಿಲ್ಲ ಮತ್ತು ಸಿಂಡಿಕೇಟೆಡ್ ಫೀಡ್‌ನಿಂದ ಸ್ವಯಂ-ಪ್ರಕಟಿಸಲಾಗಿದೆ.)

Read More
Next Story