ಹೆಣ್ಣುಭ್ರೂಣ ಹತ್ಯೆ ಜಾಲದ ಭೀಕರ ಮುಖ ಅನಾವರಣ
x

ಹೆಣ್ಣುಭ್ರೂಣ ಹತ್ಯೆ ಜಾಲದ ಭೀಕರ ಮುಖ ಅನಾವರಣ

ಭ್ರೂಣ ಪತ್ತೆ ಮತ್ತು ಹತ್ಯೆಯಂತಹ ಕೃತ್ಯಗಳನ್ನು ಕಾನೂನು ಬಾಹಿರ ಎಂದು ಘೋಷಿಸಿ ದಶಕಗಳೇ ಕಳೆದರೂ ಕರ್ನಾಟಕದಲ್ಲಿ ಈ ಕರಾಳ ದಂಧೆ ಎಷ್ಟು ರಾಜಾರೋಷವಾಗಿ ಮುಂದುವರಿದಿದೆ ಎಂಬುದನ್ನು ಇತ್ತೀಚಿನ ಈ ಪ್ರಕರಣ ಸಾರಿ ಹೇಳಿದೆ.


ಮೊಲೆಮೂಡಿ ಬಂದರೆ ಹೆಣ್ಣೆಂಬರಯ್ಯ

ಗಡ್ಡಮೀಸೆ ಬಂದರೆ ಗಂಡೆಂಬರಯ್ಯ

ನಡುವೆ ಸುಳಿವಾತ್ಮ ಹೆಣ್ಣೂ ಅಲ್ಲ;

ಗಂಡೂ ಅಲ್ಲ ಕಣಾ ರಾಮನಾಥ

-ಜೇಡರ ದಾಸಿಮಯ್ಯ

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ ೩೩ ಸ್ಥಾನಗಳನ್ನು ನೀಡುವ ಮಹಿಳಾ ಮೀಸಲಾತಿ ಮಸೂದೆ ಸಂಸತ್‌ನ ಉಭಯ ಸದನಗಳಲ್ಲಿ ಅಂಗೀಕಾರವಾಗಿ ಐತಿಹಾಸಿಕ ಮಸೂದೆ ’ನಾರಿ ಶಕ್ತಿ ವಂದನಾ’ ಅಧಿನಿಯಮ ಅಂಗೀಕಾರಗೊಂಡ ಕೆಲವೇ ದಿನಗಳಲ್ಲಿ ಕರ್ನಾಟಕದಲ್ಲಿ ಹೆಣ್ಣುತನಕ್ಕೆ ಆಘಾತಕಾರಿ-ಆತಂಕಕಾರಿ ಎನ್ನುವಂಥ ಭ್ರೂಣ ಲಿಂಗ ಪತ್ತೆ ಹಾಗೂ ಕಳೆದೆರಡು ವರ್ಷಗಳಲ್ಲಿ ೯೦೦ ಭ್ರೂಣಹತ್ಯೆಗಳಿಗೆ ಕಾರಣವಾದ ಪ್ರಕರಣ ವರದಿಯಾಗಿದೆ. ಇದಕ್ಕೆ ಕಾರಣವಾದ ಬೃಹತ್ ಜಾಲವನ್ನು ಬೇಧಿಸಲಾಗಿದ್ದರೂ, ಈ ಪ್ರಕರಣದಿಂದ ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ.

ಪ್ರಕರಣ ಸಿಐಡಿ ತನಿಖೆಗೆ

ಸ್ತ್ರೀಶಕ್ತಿ ಘೋಷಣೆಗಳ ನೆರಳಿನಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಇದರಿಂದ ಒಂದು ರೀತಿಯಲ್ಲಿ ಭಾರೀ ಮುಜುಗರ ಅನುಭವಿಸುವಂತಾಗಿದೆ ಮುಜುಗರ ತಪ್ಪಿಸಿಕೊಳ್ಳುವ ಯತ್ನದಲ್ಲಿ ರಾಜ್ಯ ಸರ್ಕಾರ ಇಡೀ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದೆ. ರಾಮನಗರ, ಮಂಡ್ಯ ಮೈಸೂರು ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ಅವ್ಯಾಹತವಾಗಿ ನಡೆಯುತ್ತಿರುವುದು ಬಹಿರಂಗವಾಗಿದ್ದು, ಇದರಿಂದ ಬೆಚ್ಚಿದ ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿದೆ. ಮಂಡ್ಯ ಜಿಲ್ಲೆಯ ಪ್ರಕರಣದಲ್ಲಿ ಬೆಂಗಳೂರಿನ ಬೈಯಪ್ಪನಹಳ್ಳಿ ಠಾಣೆ ಪೋಲೀಸರು ಇದುವರೆಗೆ ೯ ಮಂದಿಯನ್ನು ಬಂಧಿಸಿದ್ದು, ಈ ಅರೋಪಿಗಳು ಕಳೆದ ಮೂರು ವರ್ಷಗಳಲ್ಲೀ ೯೦೦ಕ್ಕೂ ಹೆಚ್ಚು ಹೆಣ್ಣು ಭ್ರೂಣ ಹತ್ಯೆ ನಡೆಸಿರುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

ಮಕ್ಕಳ ಮಾರಾಟ ಕೂಡ ಸಕ್ರಿಯ

ಈ ಹೆಣ್ಣುಭ್ರೂಣ ಹತ್ಯೆ ಪ್ರಕರಣಗಳು ಬಯಲಾದ ಹಿಂದೆಯೇ, ಕರ್ನಾಟಕ ಮತ್ತು ತಮಿಳುನಾಡುಗಳಲ್ಲಿ ಸಕ್ರೀಯ ವಾಗಿರುವ ಹಸುಗೂಸುಗಳ ಮಾರಾಟ ಜಾಲವನ್ನು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬೇಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ವೇಳೆ ೨೦ ದಿನಗಳ ಹಸುಗೂಸೊಂದನ್ನು ರಕ್ಷಿಸಿ, ಮಕ್ಕಳ ಸಾಂತ್ವನ ಕೇಂದ್ರಕ್ಕೆ ಕಳುಹಿಸಿಕೊಟ್ಟಿದ್ದಾರೆ. ಈ ಆರೋಪಿಗಳು ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ ಹಾಗೂ ತೆಲಂಗಣದ ವಿವಿಧೆಡೆ ಮಕ್ಕಳ ಮಾರಾಟ ಜಾಲವನ್ನು ವಿಸ್ತರಿಸಿಕೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಆಸಕ್ತಿಯತ ಸಂಗತಿಯೆಂದರೆ, ಈ ಪ್ರಕರಣ ಬಯಲಿಗೆ ಬಂದದ್ದು ಮದ್ಯವ್ಯಸನಿಯೊಬ್ಬ ನೀಡಿದ ಮಾಹಿತಿಯಿಚಿದ.

ಆಲೆಮನೆಯ ಬಯಲು ಚಿಕಿತ್ಸಾ’ಲಯ’

ಮಂಡ್ಯ ತಾಲ್ಲೂಕಿನ ಹಾಡ್ಯ ಮತ್ತು ಹುಳ್ಳೇನಹಳ್ಳಿ ನಡುವಿನ ಆಲೆಮನೆಯಲ್ಲಿ ಭ್ರೂಣಲಿಂಗ ಪರೀಕ್ಷೆ ನಡೆಯುತ್ತಿದ್ದು, ಮೈಸೂರಿನ ಆಸ್ಪತ್ರೆಯೊಂದರಲ್ಲಿ ಹೆಣ್ಣು ಭ್ರೂಣ ಹತ್ಯೆ ನಡೆಸುತ್ತಿದ್ದುದಾಗಿ ಆರೋಪಿಗಳು ಒಪ್ಪಿಕೊಂಡಿರುವುದು ಆಘಾತಕಾರಿಯಾಗಿದೆ. ವೈದ್ಯೋ ನಾರಾಯಣ ಹರೀಃ ಎಂದು ನಂಬಿರುವ ಮಹಾನ್ ಸಂಸ್ಸೃತಿಗೆ ಸೇರಿದ ವೈದ್ಯರ ತಂಡವೇ ಈ ಸ್ತ್ರೀದ್ರೋಹ ಕೃತ್ಯದಲ್ಲಿ ತೊಡಗಿದ್ದು, ಇದರಿಂದ ಕೊಟ್ಯಾಂತರ ರೂಪಾಯಿ ಸಂಗ್ರಹಿಸಲಾಗಿದೆ ಎನ್ನುವ ಸಂಗತಿ ತನಿಖೆಯಲ್ಲಿ ಪತ್ತೆಯಾಗಿದೆ. ಮೈಸೂರಿನ ಆಯುರ್ವೇದಿಕ್ ವೈದ್ಯ ಹಾಗೂ ಅವರ ತಂಡ ಮೂರು ತಿಂಗಳಲ್ಲಿ ೨೪೨ ಹೆಣ್ಣು ಭ್ರೂಣ ಹತ್ಯೆ ಮಾಡಿರುವ ಬಗ್ಗೆ ಪೊಲೀಸರಿಗೆ ಸಾಕ್ಷ್ಯಾಧಾರಗಳು ಲಭ್ಯವಾಗಿವೆ. ಈ ಎಲ್ಲಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಇಬ್ಬರು ವೈದ್ಯಾಧಿಕಾರಿಗಳನ್ನೂ ಕರ್ತವ್ಯದಿಂದ ಅಮಾನತುಗೊಳಿಸಿದೆ. ಮಂಡ್ಯ ಜಿಲ್ಲೆಯಲ್ಲಿ ದಶಕಗಳಿಂದಲೂ ಹೆಣ್ಣುಭ್ರೂಣ ಹತ್ಯೆ ಅವ್ಯಾಹತವಾಗಿದೆ. ಕೆಲವು ಖಾಸಗಿ ನರ್ಸಿಂಗ್ ಹೋಮ್ ಗಳು ಹಾಗೂ ಔಷಧಿ ಅಂಗಡಿಗಳಲ್ಲಿ ಶಸ್ತ್ರ ಚಿಕಿತ್ಸೆ ಕಿಟ್‌ಗಳು ಅಕ್ರಮವಾಗಿ ಮಾರಾಟವಾಗುತ್ತಿವೆ. ಆದರೆ ಆಡಳಿತ ನಡೆಸುತ್ತಿರುವ ಸರ್ಕಾರಗಳು ಕಣ್ಣುಮುಚ್ಚಿ ಕುಳಿತಿರುವಂತೆ ತೋರುತ್ತದೆ.

ಇದು ರಾಜ್ಯಾದ್ಯಂತ ಇರುವ ಜಾಲ ನಮ್ಮ ಇಲಾಖೆಯಲ್ಲಿ ಆಗಿರುವ ಲೋಪಗಳಿಗೆ ಸಾಕ್ಷಿ. ಇದರಲ್ಲಿ ಮುಚ್ಚುಮರೆ ಇಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರೆ ಒಪ್ಪಿಕೊಂಡಿದ್ದಾರೆ. ಬಡತನ, ಅನಕ್ಷರತೆ, ವರದಕ್ಷಿಣೆಯ ಪಿಡುಗು, ಸಾಮಾಜಿಕ ಸ್ಥಿತಿ ಇತ್ಯಾದಿ ಸಂಗತಿಗಳು ಹೆಣ್ಣು ಭ್ರೂಣಲಿಂಗ ಹತ್ಯೆಗೆ ಕಾರಣ ಎನ್ನುವುದು ಸಮಾಜ ವಿಜ್ಞಾನಿಗಳ ವಾದ.

೨೭ ವರ್ಷದಲ್ಲಿ ಕೇವಲ ೮೯ ಪ್ರಕರಣ ದಾಖಲು

ಆಶ್ಚರ್ಯಕರ ಸಂಗತಿಯೆಂದರೆ, ಭ್ರೂಣಲಿಂಗ ಪತ್ತೆ ಪರೀಕ್ಷೆಯನ್ನು ನಿಷೇಧಿಸುವ ಕಾಯ್ದೆ ಜಾರಿಗೆ ಬಂದು ೨೭ ವರ್ಷಗಳಾಗಿವೆ. ಲಿಂಗಾನುಪಾತದಲ್ಲಿ ಸಮತೋಲನ ಸಾಧಿಸುವುದು ಭ್ರೂಣಲಿಂಗ ಪತ್ತೆ ಕಾಯ್ದೆಯ ಮೂಲ ಉದ್ದೇಶ. ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಸ್ವರೂಪದ ಲಿಂಗಾನುಪಾತವು ೧೦೦೦ ಗಂಡು ಮಕ್ಕಳಿಗೆ ೭೨೪ ಹೆಣ್ಣು ಮಕ್ಕಳಷ್ಟಿದೆ. ಮಂಡ್ಯದ ಆಲೆಮನೆಯಲ್ಲಿ ಭ್ರೂಣಲಿಂಗ ಪತ್ತೆ ಪರೀಕ್ಷೆ ನಡೆಸುತ್ತಿದ್ದ ಕೃತ್ಯವು ಬೆಳಕಿಗೆ ಬಂದ ನಚಿತರ ಈ ಅಂಕಿ-ಅಂಶಗಳು ಬೇರೆ ಕಥೆಯನ್ನು ಹೇಳುತ್ತವೆ. ೨೦೧೯-೨೦ರಲ್ಲಿ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಕರ್ನಾಟಕ್ಕೆ ಸಂಬಂಧಿಸಿ ಲಿಂಗಾನುಪಾತ ಕುರಿತು ಹಲವು ಗಂಭೀರ ಸಂಗತಿಗಳನ್ನು ಮುಂದಿಡುತ್ತದೆ. ಕರ್ನಾಟಕದಲ್ಲಿ ೧೬ ಜಿಲ್ಲೆಗಳಲ್ಲಿನ ಲಿಂಗಾನುಪಾತದ ಅಂಕಿ-ಅಂಶಗಳು ಕಳವಳಕಾರಿಯಾಗಿದೆ.

ಮಿಸ್ಸಿಂಗ್ ವುಮನ್

೧೯೯೦ರಲ್ಲಿ ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮಾರ್ತ್ಯಸೇನ್ ಅವರು; ಅಭಿವೃದ್ಧಿಶೀಲ ರಾಷ್ರಗಳ ಜನಸಂಖ್ಯೆಯಲ್ಲಿ ಮಹಿಳೆಯ ಮತ್ತು ಪುರುಷರ ನಡುವಿನ ಅನುಪಾತವು ’ಅನುಮಾನಾಸ್ಪದ’ವಾಗಿ ಕಡಿಮೆ ಆಗುತ್ತಿದೆ ಎನ್ನುವ ಮೂಲಕ ’ಮಿಸ್ಸಿಂಗ್ ವುಮೆನ್’ ಎಂಬ ಹೊಸ ಪದಗುಚ್ಛವನ್ನೇ ಸೃಷ್ಟಿಮಾಡಿದ್ದರು.

೧೯೯೪ರಿಂದ ೨೦೨೧ರ ನಡುವಣ ೨೭ ವರ್ಷಗಳಲ್ಲಿ ರಾಜ್ಯದಲ್ಲಿ ಈ ಕಾಯ್ದೆಯಡಿ ದಾಖಲಾದ ಪ್ರಕರಣಗಳ ಸಂಖ್ಯೆ ಕೇವಲ ೮೯ ಮಾತ್ರ. ಈ ಪೈಕಿ ಕೇವಲ ೩೮ ಪ್ರಕರಣಗಳಲ್ಲಿ ಮಾತ್ರ ಶಿPಯಾಗಿದೆ. ೩ ಪ್ರಕರಣಗಳು ಖುಲಾಸೆ ಆಗಿವೆ. ಇನ್ನು ೪೮ ಪ್ರಕರಣಗಳ ತನಿಖೆ ವಿZರಣೆ ಹಂತದಲ್ಲಿದೆ. ಆದರೆ ರಾಜ್ಯದಲ್ಲಿ ಭ್ರೂಣಲಿಂಗ ಪರೀಕ್ಷೆ ಮತ್ತು ಹೆಣ್ಣು ಭ್ರೂಣಗಳ ಹತ್ಯೆ ನಿರಂತರವಾಗಿ ನಡೆಯುತ್ತಿರುವುದಕ್ಕೆ ಮಂಡ್ಯದ ಆಲೆಮನೆಯಲ್ಲಿ ನಡೆಯುತ್ತಿರುವ ಭ್ರೂಣಲಿಂಗ ಪತ್ತೆ ಪರೀಕ್ಷೆ ಪ್ರಕರಣವೇ ಸಾಕ್ಷಿ.

ರಾಜ್ಯದಲ್ಲಿ ಸಹಾಯವಾಣಿಯೇ ಇಲ್ಲ

ಭ್ರೂಣಲಿಂಗ ಪತ್ತೆ ಪರೀಕ್ಷೆ ಮಾಡಿಸಲು ಬಯಸುವವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕು-ಎಂದು ಭ್ರೂಣಲಿಂಗ ಪತ್ತೆ ಕಾಯ್ದೆ ಹೇಳುತ್ತದೆ. ಹಾಗೆಯೇ ಪತ್ತೆ ಪರೀಕ್ಷೆ ನಡೆಸುವ ವೈದ್ಯರು ಮತ್ತು ತಂತ್ರಜ್ಞರ ವಿರದ್ಧವೂ ಪ್ರಕರಣ ದಾಖಲಿಸಿಕೊಳ್ಳಬೇಕು. ಅಚಿಥ ಪರೀಕ್ಷೆ ಮತ್ತು ಭ್ರೂಣಹತ್ಯೆ ನಡೆಸುವ ಪ್ರಯೋಗಾಲಯ, ಅಸ್ಪತ್ರೆ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಕಾಯ್ದೆ ಕಡ್ಡಾಯ ಪಡಿಸಿದೆ. ಆದರೆ ರಾಜ್ಯದಲ್ಲಿ ಇಂಥ ಪ್ರಕರಣಗಳು ದಾಖಲಾಗುತ್ತಲೇ ಇಲ್ಲ, ಎಂದು ಕೇಂದ್ರ ಸರ್ಕಾರವೇ ಒಪ್ಪಿಕೊಂಡಿದೆ. ಭ್ರೂಣಲಿಂಗ ಪತ್ತೆ ಪರೀಕ್ಷೆ ತಡೆಗೆ ಘಟಕಗಳನ್ನು ತೆರೆಯಬೇಕು. ಇದಕ್ಕಾಗಿ ಒಂದು ಉಚಿತ ಸಹಾಯವಾಣಿ ನಿಗದಿಪಡಿಸಬೇಕು ಎನ್ನುವುದು ನಿಯಮ. ಆದರೆ ಕರ್ನಾಟಕದಲ್ಲಿ ಇಂಥ ಉಚಿತ ಸಹಾಯವಾಣಿಯೇ ಇಲ್ಲ ಎಂದು ಮಹಿಳಾ ಸಬಲೀಕರಣ ಸಂಸದೀಯ ಸಮಿತಿ ನಡೆಸಿದ ಅಧ್ಯಯನದಿಂದ ತಿಳಿದುಬರುತ್ತದೆ.

ಒಡಲ ತುಡಿತಕ್ಕೆ ಕೇಡು

ಹೆಣ್ಣುಭ್ರೂಣ ಹತ್ಯೆ ಪ್ರಕರಣ ಹೊರಬಂದಾಗ ನೆನೆಪಾದದ್ದು, ೨೦೦೮ರಲ್ಲಿ ಪ್ರಕಟವಾದ ’ಒಡಲ ತುಡಿತಕ್ಕೆ ಕೇಡು ಎಂಬ ಸ್ತ್ರೀಲೇಖ ಪ್ರಕಟಿಸಿದ ಪುಸ್ತಕ. ಈ ಪುಸ್ತಕ ಹೆಣ್ಣುಭ್ರೂಣ ಹತ್ಯೆ ಕುರಿತಾದ ಅಧ್ಯಯನ. ಈ ಅಧ್ಯಯನ ಕೈಗೊಂಡವರು ಪತ್ರಕರ್ತ-ಲೇಖಕ ಮಂಜುನಾಥ ಅದ್ದೆ. ಅವರು ಈ ಅಧ್ಯಯನ ವರದಿಯನ್ನು ಅರ್ಪಿಸಿರುವುದು. ಮಳೆಹನಿ ಮೋಡದಲ್ಲಿ ಹಿಂvದಂತೆ ಬಸಿರಲ್ಲೇ ಹಿಂಗಿ ಹೋದ ಜಗತ್ತಿನ ಹಸುಗೂಸುಗಳಿಗೆ.

ಈ ೧೧೨ ಪುಟದ ಪುಸ್ತಿಕೆಯಲ್ಲಿ ೯ ಅಧ್ಯಾಯಗಳಿವೆ. ಈ ಪುಸ್ತಿಕೆಯಲ್ಲಿ ಅದ್ದೆ ಹೆಣ್ಣುಭ್ರೂಣ ಹತ್ಯೆಯ ಜಾಗತಿಕ ನೋಟ, ದಕ್ಷಿಣ ಭಾರತದಲ್ಲಿ. ಕರ್ನಾಟಕದಲ್ಲಿ ಹೆಣ್ಣುಭ್ರೂಣ ಹತ್ಯೆ ಕುರಿತು ವಿವರವಾದ ದಾಖಲೆಗಳಿವೆ. ಈ ಪುಸ್ತಕದ ವೈಶಿಷ್ಟ್ಯವೆಂದರೆ ಮಂಡ್ಯ ಜಿಲ್ಲೆಯ ಪಾಂಡವ ಪುರ, ಮದ್ದೂರು, ಮಂಡ್ಯ ತಾಲ್ಲೂಕು, ಶ್ರೀರಂಗಪಟ್ಟಣ, ನಾಗಮಂಗಲ, ಮಳವಳ್ಳಿ ಹಾಗೂ ಕೆ. ಆರ್ ಪೇಟೆ ತಾಲ್ಲೂಕುಗಳಲ್ಲಿನ ಸಾಮಾಜಿಕ ಪರಿಸ್ಥಿತಿ ಹಾಗೂ ಹೆಣ್ಣು ಭ್ರೂಣ ಹತ್ಯೆ ಕುರಿತಾದ ವಿವರವಾದ ವಿಶ್ಲೇಷಣೆ ಇದೆ. ಸರ್ಕಾರದ ನೀತಿಯ ಪರಾಮರ್ಶೆಯೂ ಇದೆ. ಕೊನೆಯಲ್ಲಿ ಈ ಸಾಮಾಜಿಕ ಪಿಡುಗನ್ನು ತೊಡೆದುಹಾಕಲು ವಿಮೋಚನಾ ಮಹಿಳಾ ಸಂಘಟನೆ ನಡೆಸಿದ ಆಂದೋಲನದ ಚಿತ್ರಣವೂ ಇದೆ. ಈ ಪುಸ್ತಕ ಮಹಿಳಾ ಚರಿತ್ರೆಗೊಂದು ಶ್ರೀಕಾರ ಎನ್ನುತ್ತಾರೆ ಖ್ಯಾತ ಲೇಖಕಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ. ಮಲ್ಲಿಕಾ ಘಂಟಿ.

ಅದ್ದೆ ಅವರ ಪ್ರಕಾರ ದಕ್ಷಿಣ ಭಾರತದ ಭ್ರೂಣ ಹತ್ಯೆ ನಕ್ಷೆಯಲ್ಲಿ ಕರ್ನಾಟಕದ್ದು ಅಗ್ರಸ್ಥಾನ ೧೯೯೦ರಿಂದೀಚೆಗೆ ಕರ್ನಾಟಕದಲ್ಲಿ ಭ್ರೂಣ ಹತ್ಯೆ ಎಂಬ ಅಮಾನುಷ ಕ್ರಿಯೆ ದೂರದ ಗುಜರಾತ್, ರಾಜಸ್ಥಾನ, ಬಿಹಾರ, ಪಂಜಾಬ್ ರಾಜ್ಯಗಳನ್ನು ಮೀರಿಸುತ್ತದೆ. ಈ ಪುಸ್ತಕ ಪ್ರಕಟವಾಗಿ ಹದಿನೈದು ವರ್ಷವಾದರೂ, ಪರಿಸ್ಥಿತಿಯಲ್ಲಿ ಸ್ವಲ್ಪವೂ ಬದಲಾವಣೆಯಾಗದಿರುವುದು ಸಮಾಜದ ದುರಂತ.

ಹೆಣ್ಣು ಭ್ರೂಣ ಹಂತಕರಿಗೆ ಶಿಕ್ಷೆಯಾಗಬೇಕು. ಸ್ತ್ರೀ ಭಾಗ್ಯದ ಸರ್ಕಾರ ಸ್ತ್ರೀ ಕುಲದ ಉಳಿವಿಗಾಗಿ ಪ್ರಯತ್ನಿಸಬೇಕು. ಈ ಸಾಮಾಜಿಕ ಪಿಡುಗಿನ ವಿರುದ್ಧ ಜನಜಾಗೃತಿ ಮೂಡಬೇಕೆನ್ನುವುದು ಹಕ್ಕೊತ್ತಾಯವಾಗಬೇಕು.

Read More
Next Story