![ಬೆಂಗಳೂರಿನ ಮೊದಲ ವರ್ಚುವಲ್ ಹರ್ಬೇರಿಯಂ ಲಾಲ್ಬಾಗ್ನಲ್ಲಿ ಸದ್ಯದಲ್ಲೇ ಆರಂಭ ಬೆಂಗಳೂರಿನ ಮೊದಲ ವರ್ಚುವಲ್ ಹರ್ಬೇರಿಯಂ ಲಾಲ್ಬಾಗ್ನಲ್ಲಿ ಸದ್ಯದಲ್ಲೇ ಆರಂಭ](https://karnataka.thefederal.com/h-upload/2024/06/26/456372-herbarium.webp)
ಬೆಂಗಳೂರಿನ ಮೊದಲ ವರ್ಚುವಲ್ ಹರ್ಬೇರಿಯಂ ಲಾಲ್ಬಾಗ್ನಲ್ಲಿ ಸದ್ಯದಲ್ಲೇ ಆರಂಭ
ಲಾಲ್ ಬಾಗ್ ಸಸ್ಯಶಾಸ್ತ್ರೀಯ ತೋಟ ವಿಶ್ವದ ಹಲವಾರು ರಾಷ್ಟ್ರಗಳಿಂದ ಪಡೆದುಕೊಳ್ಳಲಾದ ನೂರಾರು ಸಸ್ಯಗಳನ್ನು ಉಳಿಸಿ, ಬೆಳೆಸಿ, ಪೋಷಿಸಿಕೊಂಡು ಬಂದಿದೆ. ಇಂದು ಲಾಲ್ ಬಾಗ್ ನಲ್ಲಿ 673 ಪ್ರಭೇದ ಹಾಗೂ 140 ಕುಟುಂಬಕ್ಕೆ ಸೇರಿದ 2150 ವಿವಿಧ ಪ್ರಭೇದಗಳಿವೆ.
ಬೆಂಗಳೂರಿಗೆ ಬರುವ ಪ್ರವಾಸಿಗರು ಲಾಲ್ ಬಾಗ್ ಸಸ್ಯಶಾಸ್ತ್ರೀಯ ತೋಟ ನೋಡದೆ ಹೋಗಲಾರರು. ಲಾಲ್ ಬಾಗ್ ಸಸ್ಯಶಾಸ್ತ್ರೀಯ ತೋಟ ವಿಶ್ವದ ಹಲವಾರು ರಾಷ್ಟ್ರಗಳಿಂದ ಪಡೆದುಕೊಳ್ಳಲಾದ ನೂರಾರು ಸಸ್ಯಗಳನ್ನು ಉಳಿಸಿ, ಬೆಳೆಸಿ, ಪೋಷಿಸಿಕೊಂಡು ಬಂದಿದೆ. ಇಂದು ಲಾಲ್ ಬಾಗ್ ನಲ್ಲಿ 673 ಪ್ರಭೇದ ಹಾಗೂ 140 ಕುಟುಂಬಕ್ಕೆ ಸೇರಿದ 2150 ವಿವಿಧ ಪ್ರಭೇದಗಳಿವೆ. ಇವೆಲ್ಲವನ್ನೂ ಇನ್ನುಮುಂದೆ ಡಿಜಿಟಲ್ ರೂಪದಲ್ಲಿ ಪ್ರವಾಸಿಗರು ವೀಕ್ಷಿಸಬಹುದು!
ವಿವಿಧ ಸಸ್ಯ ಪ್ರಭೇಧಗಳ ಭೌತಿಕ ಮತ್ತು ದೇಶ ವಿದೇಶಗಳ ಸಾವಿರಾರು ಸಸ್ಯ ಪ್ರಭೇದಗಳ ಮಾಹಿತಿಯನ್ನು ಹೊಂದಿರುವ 'ಪ್ಲಾಂಟ್ ವೆಲ್ತ್ ಆಫ್ ಲಾಲ್ಬಾಗ್' ಎಂಬ ಹೆಸರಿನ ಈ ಡಿಜಿಟಲ್ ಹರ್ಬೇರಿಯಂ ಬೆಂಗಳೂರಿನ ಮೊದಲ ವರ್ಚುವಲ್ ಹರ್ಬೇರಿಯಂ!
'ಸಸ್ಯ ಪ್ರಭೇದಗಳ ವಿವಿಧ ಭಾಗಗಳನ್ನು ಒಣಗಿಸಿ ವ್ಯವಸ್ಥಿತವಾಗಿ ಸಂಗ್ರಹಿಸಿಡುವ ಮಾದರಿಗೆ ಹರ್ಬೇರಿಯಂ ಎಂದು ಕರೆಯಲಾಗುತ್ತದೆ. ಸಸ್ಯಗಳ ಹೂವು ಹಣ್ಣು ಕಾಯಿ ಎಲೆಗಳನ್ನು ಸಂಗ್ರಹಿಸಿ ಅವುಗಳನ್ನು ಒಂದು ಹಾಳೆಯಲ್ಲಿ ಹೊಲಿಗೆ ಹಾಕಿ ಒಣಗಿಸಲಾಗುತ್ತದೆ. ಅದರಲ್ಲಿ ಸಸ್ಯದ ಕುರಿತ ಸಂಕ್ಷಿಪ್ತ ಮಾಹಿತಿ ಸೇರಿಸಲಾಗಿರುತ್ತದೆ.
ಲಾಲ್ಬಾಗ್ ಉದ್ಯಾನದಲ್ಲಿರುವ ಸಸ್ಯ ಪ್ರಭೇದಗಳ ಸಂರಕ್ಷಿತ ಸಸ್ಯ ಮಾದರಿ ಸಂಗ್ರಹ ಮತ್ತು ವೈಜ್ಞಾನಿಕ ಅಧ್ಯಯನ ನಡೆಸಲು ಸಹಕಾರಿಯಾಗುವಂತೆ ಸಸ್ಯ ಪ್ರಭೇದಗಳ ಪರ್ಣ ಸಂಗ್ರಹ(ಹರ್ಬೇರಿಯಂ)' ಯೋಜನೆಯನ್ಕೈನು ತೋಟಗಾರಿಕಾ ಇಲಾಖೆ ಕೈಗೆತ್ತಿಕೊಂಡಿದೆ. ಅದಕ್ಕಾಗಿ ಉದ್ಯಾನದಲ್ಲಿನ ಎಲ್ಲ ಸಸ್ಯ ಪ್ರಬೇಧಗಳನ್ನು ಸಂಗ್ರಹಿಸುವ ಕೆಲಸ ನಡೆಯುತ್ತಿದೆ. ಈ ಹರ್ಬೇರಿಯಂಗಳನ್ನು ಕ್ರಮ ಸಂಖ್ಯೆ ಆಧಾರಿತವಾಗಿ ಡಿಜಿಟಲೀಕರಣ ನಡೆಯುತ್ತಿದೆ.
ಇದುವರೆಗೆ 900ಸಸ್ಯಗಳ ಹರ್ಬೇರಿಯಂ ಇದ್ದು, ಇನ್ನೂ 3000 ಗಿಡಗಳ ಹರ್ಬೇರಿಯಂ ಕೆಲಸ ಬಾಕಿ ಇದೆ. ಹರ್ಬೇರಿಯಂ ಸಂಪೂರ್ಣ ಕೆಲಸ ಮುಗಿಯಲು ಇನ್ನೂ ಒಂದು ತಿಂಗಳು ಬೇಕು. ಸಸ್ಯದ ಮೂಲ ಹೆಸರು, ಉಗಮ ಸ್ಥಾನ, ದೇಶ, ಬೆಳವಣಿಗೆ, ಬೆಳೆಯುವ ಹವಾಗುಣ, ಹೂ-ಹಣ್ಣು ಮತ್ತು ಎಲೆಗಳು ಬಿಡುವ ಕಾಲ, ಅದರ ವೈಜ್ಞಾನಿಕ ಹೆಸರು ಸಹಿತ ಎಲ್ಲ ಮಾಹಿತಿಗಳು ಈ ಹರ್ಬೇರಿಯಂ ಒಳಗೊಂಡಿರುತ್ತದೆ. ಆ ಸಸ್ಯಗಳ ಜಿಪಿಎಸ್ ಆಧಾರಿತ ಛಾಯಾಚಿತ್ರಗಳನ್ನು ತೆಗೆದು ಸಂಗ್ರಹಿಸಿಡುವ ಕಾರ್ಯವೂ ನಡೆಯುತ್ತಿದೆ. ಇದು ಸಸ್ಯಗಳನ್ನು ಗುರುತಿಸಲು ಸಹಾಯಕವಾಗಲಿದೆ ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಎಂ. ಜಗದೀಶ್ ದ ಫೆಡರಲ್ಗೆ ತಿಳಿಸಿದ್ದಾರೆ.
'ಜೀವವೈವಿಧ್ಯ ಶಾಸ್ತ್ರಜ್ಞ ಕೇಶವಮೂರ್ತಿ ಅವರ ನೇತೃತ್ವದ ವಿಜ್ಞಾನಿಗಳ ತಂಡವು ಕಳೆದ ಒಂದು ವರ್ಷದಿಂದ ದಾಖಲಾತಿ ಕಾರ್ಯ ನಡೆಯುತ್ತಿದೆ. ಇದು ಪೂರ್ಣಗೊಂಡ ಬಳಿಕ ಸಸ್ಯವಿಜ್ಞಾನ ವಿದ್ಯಾರ್ಥಿಗಳಿಗೆ, ಗಿಡ-ಮರಗಳ ಬಗ್ಗೆ ಕುತೂಹಲ ಇರುವವರಿಗೆ, ಜೀವ ವೈವಿಧ್ಯ ಅಧ್ಯಯನಕಾರರಿಗೆ ಇದರಿಂದ ಅನುಕೂಲವಾಗಲಿದೆ. ಅಳಿವಿನಂಚಿನಲ್ಲಿರುವ ಸಸ್ಯ ಪ್ರಬೇಧಗಳನ್ನು ಸಂರಕ್ಷಿಸಲೂ ಈ ದಾಖಲಾತಿ ನೆರವಾಗಲಿದೆ ಎಂದು ಜಗದೀಶ್ ಹೇಳಿದ್ದಾರೆ.